ವಿಚಿತ್ರ ಕಾಯಿಲೆಯಿಂದ ಬಳಲಿದ್ದ ಮುಸುರಿ; ಅಂತಿಮ ದರ್ಶನಕ್ಕೆ ಹರಿದುಬಂದಿತ್ತು ಜನಸಾಗರ
ಕನ್ನಡ ಚಿತ್ರರಂಗ ಕಂಡ ಅದ್ಭುತ ಹಾಸ್ಯ ಕಲಾವಿದ ಮುಸುರಿ ಕೃಷ್ಣಮೂರ್ತಿ. ಬಡ ಕುಟುಂಬದಲ್ಲಿ ಹುಟ್ಟಿ ಬೆಳೆದ ಕೃಷ್ಣಮೂರ್ತಿ ಬಾಲ್ಯದಲ್ಲೇ ತನ್ನ ಗಾಯನದಿಂದ ಮೈಸೂರು ಮಹಾರಾಜರಿಂದಲೇ ಭೇಷ್ ಎನಿಸಿಕೊಂಡಿದ್ದರು. ಮುಂದೆ ರಂಗಭೂಮಿ ಹಾಗೂ ಚಿತ್ರರಂದದಲ್ಲಿ ತಮ್ಮ ಪ್ರತಿಭೆಯಿಂದ ಮುಸುರಿ ಕೃಷ್ಣಮೂರ್ತಿ ಪ್ರೇಕ್ಷಕರನ್ನು ರಂಜಿಸಿದರು.
250ಕ್ಕೂ ಅಧಿಕ ಸಿನಿಮಾಗಳಲ್ಲಿ ಮುಸುರಿ ಕೃಷ್ಣಮೂರ್ತಿ ನಟಿಸಿ ಮೋಡಿ ಮಾಡಿದ್ದರು. ತಮ್ಮ ವಿಭಿನ್ನ ಮೌಕಿಕ ಹಾಗೂ ಆಂಗಿಕ ಅಭಿನಯದಿಂದ ನೋಡುಗರನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿದ್ದರು. ಹಾಸ್ಯ ಪಾತ್ರಗಳಲ್ಲಿ ತಮ್ಮ ಸಹಜ ನಟನೆಯಿಂದ ಪ್ರೇಕ್ಷಕರನ್ನು ಹೊಟ್ಟೆ ಹುಣ್ಣಾಗುವಂತೆ ನಗಿಸುತ್ತಿದ್ದರು. ಹಿರಣಯ್ಯ ಮಿತ್ರ ಮಂಡಳಿ ಸೇರಿದಂತೆ ಕೆಲ ನಾಟಕ ಕಂಪನಿಗಳಲ್ಲಿ ನಟಿಸಿದ್ದರು. ರಂಗದ ಮೇಲೆ ತಮ್ಮ ನಟನೆ ಮಾತ್ರವಲ್ಲದೇ ಗಾಯನದಿಂದಲೂ ಚಪ್ಪಾಳೆ ಗಿಟ್ಟಿಸುತ್ತಿದ್ದರು.

'ವಾಣಿ' ಎನ್ನುವ ಚಿತ್ರದಲ್ಲಿ ಬಾಲನಟನಾಗಿ ಕೃಷ್ಣಮೂರ್ತಿ ಚಿತ್ರರಂಗಕ್ಕೆ ಬಂದರು. ನಾಟಕ- ಸಿನಿಮಾಗಳಲ್ಲಿ ಜೊತೆ ಜೊತೆಗೆ ನಟಿಸುತ್ತಾ ಜನಪ್ರಿಯತೆ ಸಾಧಿಸಿದರು. ಅಂದಹಾಗೆ ಮುಸುರಿ ಎನ್ನುವುದು ಅವರ ಹೆಸರಲ್ಲ, ಮನೆತನದ ಹೆಸರು ಅಲ್ಲ. ಅದು ಗಣೇಶ ಚತುರ್ಥಿ ಸಮಯ. ಕರ್ನಾಟಕ ಶಾಸ್ತ್ರೀಯ ಸಂಗೀತದ ದಿಗ್ಗಜ ಮುಸುರಿ ಸುಬ್ರಮಣ್ಯ ಅಯ್ಯರ್ ಹಾಗೂ ನಾಲ್ವಡಿ ಕೃಷ್ಣರಾಜ ಒಡೆಯರ್ ಎದುರು 10 ವರ್ಷ ಹುಡುಗ ಕೃಷ್ಣಮೂರ್ತಿ ಹಾಡು ಹಾಡಿದ್ದ. ಆತನ ಗಾಯನ ಕಂಡು ಮಹಾರಾಜರು ಇನ್ನು ಮುಂದೆ ನಿನ್ನ ಹೆಸರು ಮುಸುರಿ ಕೃಷ್ಣಮೂರ್ತಿ ಎಂದು ಹೇಳಿದ್ದರು. ಅಂದಿನಿಂದ ಅವರ ಹೆಸರಿನೊಟ್ಟಿಗೆ ಸಂಗೀತ ದಿಗ್ಗಜರ ಹೆಸರು ಸೇರಿಕೊಂಡಿತ್ತು.
1962ರಲ್ಲಿ ಮುಸುರಿ ಕೃಷ್ಣಮೂರ್ತಿ ಅವರು ಅಂಬಾ ಪ್ರಸಾದ ನಾಟಕ ಮಂಡಳಿ ಎಂಬ ನಾಟಕ ಕಂಪನಿ ಆರಂಭಿಸಿದರು. ಆದರೆ ಆರ್ಥಿಕ ಸಂಕಷ್ಟದಿಂದ ಅದನ್ನು ನಿರ್ವಹಿಸಲು ಸಾಧ್ಯವಾಗಲಿಲ್ಲ. ಬಳಿಕ ಮತ್ತೆ ಸಿನಿಮಾಗಳಲ್ಲಿ ನಟಿಸಲು ಆರಂಭಿಸಿದರು. 'ಪಡುವಾರಳ್ಳಿ ಪಾಂಡವರು' ಚಿತ್ರದ ಕನೆಕ್ಷನ್ ಕಾಳಪ್ಪ ಪಾತ್ರ ದೊಡ್ಡ ಹೆಸರು ತಂದುಕೊಟ್ಟಿತ್ತು. 'ಧರ್ಮಸೆರೆ', 'ರಂಗನಾಯಕಿ', 'ಗುರುಶಿಷ್ಯರು', 'ಅಂತ', 'ಹಾಲುಜೇನು' ಹೀಗೆ ಕೆಲ ಸಿನಿಮಾಗಳಲ್ಲಿ ಮುಸುರಿ ನಟನೆ ಮರೆಯೋಕೆ ಸಾಧ್ಯವಿಲ್ಲ.

1981ರಲ್ಲಿ ಮುಸುರಿ ಕೃಷ್ಣಮೂರ್ತಿ ಯಶಸ್ವಿನಿ ಎಂಟರ್ಪ್ರೈಸಸ್ ಎಂದ ಚಿತ್ರನಿರ್ಮಾಣ ಸಂಸ್ಥೆ ಕಟ್ಟಿದರು. ಇದೇ ಬ್ಯಾನರ್ ಅಡಿಯಲ್ಲಿ 'ನಂಬರ್ 5 ಎಕ್' ಎಂಬ ಚಿತ್ರ ನಿರ್ಮಿಸಿದ್ದರು. ಮೈಸೂರಿನ ಹುಣಸೂರು ಬಳಿಕ ಬೆಟ್ಟದಪುರ ಎನ್ನುವ ಊರಿನಲ್ಲಿ ಕೃಷ್ಣಮೂರ್ತಿ ಹುಟ್ಟಿದ್ದರು. ಬಳಿಕ ಮೈಸೂರಿಗೆ ಕುಟುಂಬ ಬಂದು ನೆಲೆಸಿತ್ತು. ಕೊನೆಗೆ ಬೆಂಗಳೂರಿನ ಶ್ರೀರಾಮಪುರದಲ್ಲಿ ಅವರು ಮನೆ ಮಾಡಿ ವಾಸಿಸುತ್ತಿದ್ದರು. 1885 ಮಾರ್ಚ್ 16ರಂದು ತಮ್ಮ 55ನೇ ವಯಸ್ಸಿಗೆ ಅವರು ಇಹಲೋಹ ತ್ಯಜಿಸಿದ್ದರು.
ಮುಸುರಿ ಅವರಿಗೆ ನಟನೆಯ ವ್ಯಾಮೋಹ ಹೇಗಿತ್ತು ಅಂದ್ರೆ ತಂದೆ ಅಗಲಿದ ದಿನವೂ ಬಣ್ಣ ಹಚ್ಚಿ ನಾಟಕದಲ್ಲಿ ನಟಿಸಿದ್ದರು.'ಶ್ವೇತ ಗುಲಾಬಿ' ಚಿತ್ರದ ಚಿತ್ರೀಕರಣದ ವೇಳೆ ಐ ಸ್ಟ್ರೋಕ್ ಆಗಿ ದಿಢೀರ್ ಕುಸಿದು ಬಿದ್ದು ಮುಸುರಿ ಕೃಷ್ಣಮೂರ್ತಿ ಹಣೆಗೆ ಪೆಟ್ಟಾಗಿತ್ತು. ಆಗ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಮಧುಮೇಹ ಇರುವುದು ಗೊತ್ತಾಗಿತ್ತು. ಕೊನೆ ಕೊನೆಗೆ ಆರೋಗ್ಯ ಸಮಸ್ಯೆ ಹೆಚ್ಚಾದಾಗ ಸಿನಿಮಾಗಳಲ್ಲಿ ನಟಿಸುವುದು ಕಮ್ಮಿ ಮಾಡಿದ್ದರು. ಆದರೆ ಅವರ ಜನಪ್ರಿಯತೆ ಎಷ್ಟಿತ್ತು ಅಂದರೆ ನಿರ್ಮಾಪಕರು ನಟಿಸುವಂತೆ ಒತ್ತಾಯ ಮಾಡುತ್ತಿದ್ದರು.
ಶುಗರ್ ಕಂಟ್ರೋಲ್ಗೆ ಬಂದು ಚೆನ್ನಾಗಿದ್ದರು. ಬಳಿಕ ಇದ್ದಕ್ಕಿದ್ದಂತೆ ಚಳಿಯಿಂದ ಕೆಲ ನಿಮಿಷ ನಡುಗುತ್ತಿದ್ದರು, ಬಳಿಕ ಇದ್ದಕ್ಕಿದ್ದಂತೆ ಬೆವತುಬಿಡುತ್ತಿದ್ದರು. ಒಂದೇ ದಿನಕ್ಕೆ ನಾಲ್ಕೈದು ಬಾರಿ ಹೀಗೆ ಆಗುತ್ತಿತ್ತು. ಹೀಗೆ ಅನಾರೋಗ್ಯದಿಂದ ತೆಳ್ಳಗಾಗಿಬಿಟ್ಟರು. ಮುಂದೆ ಆರೋಗ್ಯ ಕ್ಷೀಣಿಸುತ್ತಾ ಹೋಗಿತ್ತು. 'ವೀರಾಧಿ ವೀರ' ಮುಸುರಿ ನಟಿಸಿದ ಕೊನೆಯ ಸಿನಿಮಾ. ಆದರೆ ಆ ಸಿನಿಮಾ ಬಿಡುಗಡೆ ಆಗಲಿಲ್ಲ. 'ಬೆಟ್ಟದ ಕಳ್ಳ' ಚಿತ್ರದಲ್ಲಿ ಕೊನೆಯದಾಗಿ ತೆರೆಮೇಲೆ ಕಾಣಿಸಿಕೊಂಡಿದ್ದರು.
ತಂದೆಗೆ ಏನು ಕಾಯಿಲೆ ಎನ್ನುವುದು ಗೊತ್ತಾಗಲಿಲ್ಲ. ಆಗ ವೈದಕೀಯ ಕ್ಷೇತ್ರದಲ್ಲಿ ಇಷ್ಟು ಬೆಳವಣಿಗೆ ಆಗಿರಲಿಲ್ಲ. ಇನ್ನು ಕೊನೆ ದಿನಗಳವರೆಗೆ ಚೆನ್ನಾಗಿಯೇ ಇದ್ದರು ಎಂದು ಪುತ್ರ ಜಯಸಿಂಹ ಮುಸುರಿ ಕೆಲ ಸಂದರ್ಶನಗಳಲ್ಲಿ ಹೇಳಿಕೊಂಡಿದ್ದಾರೆ. ಅದು ಯುಗಾದಿ ಹಬ್ಬದ ಸಮಯ. ಎಲ್ಲರಿಗೂ ಹೊಸ ಬಟ್ಟೆ ತರಲು ಹೇಳಿದ್ದರು. ಹಬ್ಬಕ್ಕೂ ಮುನ್ನ ಒಂದು ದಿನ ಬಟ್ಟೆ ಹಾಕಿಕೊಳ್ಳುವಂತೆ ಹೇಳಿದ್ದರು. ನಾವು ಹಾಕಿಕೊಂಡಿದ್ದೆವು. ಅವತ್ತು ತಂದೆ ಬೇಡ ಎಂದರೂ ಕೇಳದೇ ಡಿಸ್ಟ್ರಿಬ್ಯೂಷನ್ ಆಫೀಸ್ಗೆ ಹೋಗಿದ್ದೆ. ಸಂಜೆ ಅಮ್ಮ ಫೋನ್ ಮಾಡಿ ತಂದೆ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿರುವುದಾಗಿ ಹೇಳಿದ್ದರು.
ಮನೆಗೆ ಹೋದಾಗ ತಂದೆಗೆ ಉಸಿರಾಟ ಸಮಸ್ಯೆ ಶುರುವಾಗಿತ್ತು. ಕೂಡಲೇ ಕೆಸಿ ಜನರಲ್ ಆಸ್ಪತ್ರೆಗೆ ಕರೆದುಕೊಂಡು ಹೋದೆವು. ನಾನು ತಂದೆಯವರನ್ನು ಒಳಗೆ ಕಳುಹಿಸಿಕೊಟ್ಟು ಕಾರ್ ಪಾರ್ಕ್ ಮಾಡಿ ಬರುವಷ್ಟರಲ್ಲಿ ಅವರ ಪ್ರಾಣಪಕ್ಷಿ ಹಾರಿ ಹೋಗಿತ್ತು. ಅವರ ಅಂತಿಮ ದರ್ಶನಕ್ಕೆ ಸಾವಿರಾರು ಜನ ಸೇರಿದ್ದರು. ಅಂತ್ಯ ಸಂಸ್ಕಾರಕ್ಕೂ ಕಷ್ಟಪಡುವಂತಾಯಿತು. ಅದು ಅವರು ಗಳಿಸಿದ್ದ ಜನಪ್ರಿಯತೆಗೆ ಸಾಕ್ಷಿ ಎಂದು ಮುಸುರಿ ಜಯಸಿಂಹ ನೆನಪಿಸಿಕೊಂಡಿದ್ದಾರೆ.
ಇನ್ನು ಮುಸುರಿ ಕೃಷ್ಣಮೂರ್ತಿ ಅಗಲಿಕೆಯ ಬಳಿಕ 'ನಟ ಚಾಣಕ್ಯ ಮುಸುರಿ' ಎನ್ನುವ ಸಿನಿಮಾ ಮೂಡಿ ಬಂದಿತ್ತು. ಮುಸುರಿ ಅವರು ನಟಿಸಿದ ಸಿನಿಮಾಗಳ ದೃಶ್ಯಗಳನ್ನು ಬಳಸಿಕೊಂಡು ಈ ಚಿತ್ರ ನಿರ್ಮಾಣವಾಗಿತ್ತು. ಸಿನಿಮಾ ಕೂಡ ಉತ್ತಮ ರೀತಿಯ ಪ್ರದರ್ಶನ ಕಂಡಿತ್ತು.


Click it and Unblock the Notifications










