ಬಾಲಿವುಡ್ಗೆ ಹೆಚ್ಚುತ್ತಿದೆ ಪೌರಾಣಿಕ, ಐತಿಹಾಸಿಕ ಕತೆಗಳ ಮೇಲೆ ಪ್ರೀತಿ!
ಕುಸಿಯುತ್ತಿರುವ ಬಾಲಿವುಡ್ಗೆ ಇದೀಗ ಹಠಾತ್ತನೆ ಪೌರಾಣಿಕ ಹಾಗೂ ಐತಿಹಾಸಿಕ ಕತೆಗಳ ಮೇಲೆ ಪ್ರೀತಿ ಹುಟ್ಟಿದೆ.
ಕಾರ್ಪೊರೇಟ್ ಜೀವನ ಶೈಲಿ ಹೊಂದಿರುವ ಸಿನಿಮಾಗಳನ್ನೇ ಮಾಡುತ್ತಿದ್ದ ಬಾಲಿವುಡ್ಗೆ ಇದೀಗ ಪ್ರೇಕ್ಷಕರು ಬುದ್ಧಿ ಕಲಿಸಿದ್ದು, ನಾವು ನೋಡುವ ಸಿನಿಮಾ ಕೊಡಿ ಎಂದು ಸಾರಿ ಹೇಳಿದ್ದಾರೆ. ಹಾಗಾಗಿ ಬಾಲಿವುಡ್ ತನ್ನ ಕತೆ ಹೇಳುವ ಪದ್ಧತಿಯನ್ನೇ ಬದಲಾಯಿಸಿಕೊಳ್ಳಲು ಮುಂದಾಗಿದ್ದು, ಆಕ್ಷನ್ ಡ್ರಾಮಾಗಳು, ಪೌರಾಣಿಕ, ಐತಿಹಾಸಿಕ ಸಿನಿಮಾಗಳತ್ತ ಮುಖ ಮಾಡಿದೆ.
ಐತಿಹಾಸಿಕ ಸಿನಿಮಾಗಳಾದರೂ ಆಗೊಮ್ಮೆ ಈಗೊಮ್ಮೆ ಬಾಲಿವುಡ್ನಲ್ಲಿ ಬರುತ್ತಿತ್ತು ಆದರೆ ಪೌರಾಣಿಕ ಕತೆಗಳನ್ನು ಬಿಟ್ಟೇ ಬಿಟ್ಟಿತ್ತು ಬಾಲಿವುಡ್ ಆದರೀಗ ಹಠಾತ್ತನೆ ಪೌರಾಣಿಕ ಕತೆಗಳ ಮೇಲೆ ಬಾಲಿವುಡ್ಗೆ ಪ್ರೀತಿ ಹೆಚ್ಚಾಗಿದೆ. ಸಾಲು-ಸಾಲು ಪೌರಾಣಿಕ ಕತೆಗಳನ್ನು ಸಿನಿಮಾ ಮಾಡಲಾಗುತ್ತಿದೆ.

'ಆದಿಪುರುಷ್' ಸಿನಿಮಾ ಶೀಘ್ರ ಬಿಡುಗಡೆ
ಪೂರ್ಣವಾಗಿ 'ರಾಮಾಯಣ' ಕತೆಯನ್ನು ಆಧರಿಸಿ ಮಾಡಲಾದ 'ಆದಿಪುರುಷ್' ಸಿನಿಮಾ ಕೆಲವೇ ದಿನಗಳಲ್ಲಿ ತೆರೆಗೆ ಬರಲಿದೆ. ಸಿನಿಮಾದ ನಾಯಕ ನಟ ಪ್ರಭಾಸ್ ಆಗಿದ್ದರೂ ಸಹ ಇದು ಬಾಲಿವುಡ್ ಸಿನಿಮಾ ಎಂದೇ ಪರಿಗಣಿತವಾಗಿದೆ. ಓಂ ರಾವತ್ ನಿರ್ದೇಶನದ ಈ ಸಿನಿಮಾದಲ್ಲಿ ಪ್ರಭಾಸ್ ರಾಮನಾಗಿ ನಟಿಸಿದ್ದಾರೆ. ಕೃತಿ ಸೆನನ್ ಸೀತೆಯಾಗಿ ಕಾಣಿಸಿಕೊಂಡಿದ್ದಾರೆ. ಮುಂದಿನ ಸಂಕ್ರಾಂತಿ ವೇಳೆಗೆ ಸಿನಿಮಾ ತೆರೆಗೆ ಬರಲಿದೆ.

ಸೆಟ್ಟೇರಲಿದೆ 'ಸೀತಾ' ಸಿನಿಮಾ
ಸೀತಾ ಮಾತೆಯ ಪಾತ್ರವೊಂದನ್ನೇ ಆಧರಿಸಿ 'ಸೀತಾ' ಹೆಸರಿನ ಸಿನಿಮಾ ಹಿಂದಿಯಲ್ಲಿ ಬರಲಿದೆ. ಸಿನಿಮಾಕ್ಕಾಗಿ ಕರೀನಾ ಕಪೂರ್ ಅನ್ನು ಕೇಳಲಾಗಿತ್ತಂತೆ ಆದರೆ ಆಕೆಯ ಸಂಭಾವನೆ ಸಿನಿಮಾ ಬಜೆಟ್ಗೆ ಹೊಂದಾಣಿಕೆ ಆಗದ ಕಾರಣ ಈಗ ಕಂಗನಾರನ್ನು ಆಯ್ಕೆ ಮಾಡಲಾಗಿದೆ ಎನ್ನಲಾಗಿದೆ. ಆದರೆ ಈ ಸಿನಿಮಾವನ್ನು ನಿರ್ದೇಶನ ಮಾಡಲಿರುವುದು ದಕ್ಷಿಣ ಭಾರತದ ಖ್ಯಾತ ಕತೆಗಾರ ವಿಜಯೇಂದ್ರ ಪ್ರಸಾದ್. ಇವರು ರಾಜಮೌಳಿಯ ತಂದೆ.

ಮಹಾಭಾರತ ಸಿನಿಮಾ ಸೆಟ್ಟೇರುವುದು ಯಾವಾಗ?
ಮಹಾಭಾರತ ಸಿನಿಮಾವನ್ನು ಬಾಲಿವುಡ್ನಲ್ಲಿ ನಿರ್ಮಾಣ ಮಾಡಬೇಕು ಎಂಬ ಚರ್ಚೆ ಬಹು ದಿನಗಳಿಂದಲೂ ನಡೆಯುತ್ತಲೇ ಇದೆ. ಆಮಿರ್ ಖಾನ್ ಕೃಷ್ಣ, ಹೃತಿಕ್ ರೋಷನ್ ಅರ್ಜುನ, ದೀಪಿಕಾ ಪಡುಕೋಣೆ ದ್ರೌಪದಿ ಹೀಗೆ ಹಲವು ಪಾತ್ರಗಳಿಗೆ ನಟರನ್ನು ಸಹ ಗುರುತು ಮಾಡಲಾಗಿತ್ತು. ಆದರೆ ಈ ವರೆಗೆ ಸಿನಿಮಾ ಸೆಟ್ಟೇರಿಲ್ಲ. ಆದರೆ ಸಿನಿಮಾ ಮಾಡುವ ಚರ್ಚೆ ಬಾಲಿವುಡ್ನಲ್ಲಿ ಇನ್ನೂ ತಣ್ಣಗಾಗಿಲ್ಲ.

'ಅಶ್ವತ್ಥಾಮ'ನ ಕುರಿತಾದ ಸಿನಿಮಾ
ಪೌರಾಣಿಕ ಕತೆಗಳ ಅದ್ಭುತ ಯೋಧ 'ಅಶ್ವತ್ಥಾಮ'ನ ಕುರಿತಾದ ಕತೆಯನ್ನು ಸಿನಿಮಾ ಮಾಡಲು ಸಹ ಬಾಲಿವುಡ್ನಲ್ಲಿ ಯತ್ನಿಸಲಾಗುತ್ತಿದೆ. ಧರ್ಮಾ ಪ್ರೊಡಕ್ಷನ್ ನವರು ಅಶ್ವತ್ಥಾಮ ಕತೆಯನ್ನು ಸಿನಿಮಾ ಮಾಡಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಟೈಗರ್ ಶ್ರಾಫ್ ಅಶ್ವತ್ಥಾಮನಾಗಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಮಾತುಗಳೂ ಸಹ ಇವೆ. ಆದರೆ ಈ ಬಗ್ಗೆ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.

ಅಕ್ಷಯ್ ಕುಮಾರ್ ನಟನೆಯ 'ರಾಮ್ ಸೇತು'
ರಾಮಾಯಣದ ರಾಮ ಸೇತು ಬಗೆಗಿನ ಸಿನಿಮಾ ಕೆಲವೇ ದಿನಗಳಲ್ಲಿ ತೆರೆಗೆ ಬರಲಿದೆ. ಈ ಸಿನಿಮಾ ರಾಮ್ ಸೇತು ಬಗೆಗಿನ ಕತೆ ಒಳಗೊಂಡಿದೆಯಾದರೂ ಕತೆ ಸ್ಥಿತವಾಗಿರುವುದು ಆಧುನಿಕ ಸಮಾಜದಲ್ಲಿ. ಸಿನಿಮಾದಲ್ಲಿ ನಟ ಅಕ್ಷಯ್ ಕುಮಾರ್ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಜಾಕ್ವೆಲಿನ್ ಫರ್ನಾಂಡೀಸ್, ನುಸ್ರತ್ ಬರೂಚಾ, ಸತ್ಯದೇವ್ ಕಂಚನಾರ ಸಹ ಇದ್ದಾರೆ. ಸಿನಿಮಾವನ್ನು ಅಭಿಷೇಕ್ ಶರ್ಮಾ ನಿರ್ದೇಶನ ಮಾಡಿದ್ದಾರೆ. ಆದರೆ ಸಿನಿಮಾ ಮೇಲೆ ಬಿಜೆಪಿ ರಾಜ್ಯಸಭಾ ಸದಸ್ಯ ಸುಬ್ರಹ್ಮಣ್ಯಸ್ವಾಮಿ ಪ್ರಕರಣ ದಾಖಲಿಸಿದ್ದು, ಸಿನಿಮಾ ಬಿಡುಗಡೆ ಮಾಡದಂತೆ ತಡೆಯಲು ಒತ್ತಾಯಿಸಿದ್ದಾರೆ.

ಛತ್ರಪತಿ ಶಿವಾಜಿ ಕುರಿತ ಸಿನಿಮಾ
ಐತಿಹಾಸಿಕ ಕತೆಯನ್ನು ಒಳಗೊಂಡ 'ಛತ್ರಪತಿ ಶಿವಾಜಿ' ಸಿನಿಮಾ ಹಿಂದಿ ಹಾಗೂ ಮರಾಠಿಯಲ್ಲಿ ತೆರೆಗೆ ಬರಲಿದೆ. ರಿತೇಶ್ ದೇಶ್ಮುಖ್, 'ಛತ್ರಪತಿ ಶಿವಾಜಿ' ಪಾತ್ರದಲ್ಲಿ ನಟಿಸಲಿದ್ದಾರೆ. ಛತ್ರಪತಿ ಶಿವಾಜಿಯ ಜೀವನ ಸಾಧನೆಗಳ ಕುರಿತ ಕತೆಯನ್ನು ಈ ಸಿನಿಮಾ ಒಳಗೊಂಡಿರಲಿದೆ. ಮಹಾರಾಷ್ಟ್ರದಲ್ಲಿ ಶಿವಾಜಿ ರಾಜಕೀಯ ಅಸ್ತ್ರವೂ ಆಗಿರುವ ಕಾರಣ ಸಿನಿಮಾವನ್ನು ಹಿಂದಿ ಹಾಗೂ ಮರಾಠಿ ಭಾಷೆಗಳಲ್ಲಿ ನಿರ್ಮಾಣ ಮಾಡುವ ಯೋಜನೆ ಇದೆ. ಸಿನಿಮಾದ ಚಿತ್ರೀಕರಣ ಇನ್ನೂ ಆರಂಭವಾಗಿಲ್ಲ.


Click it and Unblock the Notifications











