ನಿಜವಾಗಿ ಕೋಲು ಮುರಿಯುವಂತೆ ರಾಮಾಚಾರಿಗೆ ಹೊಡೆದುಬಿಟ್ಟಿದ್ರು ಚಾಮಯ್ಯ ಮೇಷ್ಟ್ರು!
'ನಾಗರಹಾವು' ಚಿತ್ರದ ರಾಮಾಚಾರಿ ಹಾಗೂ ಚಾಮಯ್ಯ ಮೇಷ್ಟ್ರು ನಡುವಿನ ಒಡನಾಟ, ಗುರು-ಶಿಷ್ಯರ ಸಂಬಂಧ ಮರೆಯೋಕೆ ಸಾಧ್ಯವಿಲ್ಲ. ರಾಮಚಾರಿಯಾಗಿ ವಿಷ್ಣುವರ್ಧನ್ ಮತ್ತು ಚಾಮಯ್ಯ ಮೇಷ್ಟ್ರು ಪಾತ್ರದಲ್ಲಿ ಅಶ್ವಥ್ ಪರಕಾಯ ಪ್ರವೇಶ ಮಾಡಿಬಿಟ್ಟಿದ್ದರು. ಜಲೀಲ(ಅಂಬರೀಶ್), ಅಲಮೇಲು(ಆರತಿ), ಮಾರ್ಗರೇಟ್(ಶುಭ), ಪೈಲ್ವಾನ್ ಬಸಣ್ಣ(ಎಂಪಿ, ಶಂಕರ್), ವರದಾ(ಶಿವರಾಂ) ಹೀಗೆ ಚಿತ್ರದ ಪ್ರತಿ ಪಾತ್ರವೂ ಪ್ರೇಕ್ಷಕರ ಮನಸ್ಸಿನಲ್ಲಿ ಉಳಿದುಬಿಟ್ಟಿದೆ.
ನಾಗರಹಾವು, ಒಂದು ಗಂಡು ಎರಡು ಹೆಣ್ಣು ಮತ್ತು ಸರ್ಪ ಮತ್ಸರ ಹೀಗೆ ತಾರಾಸು ಬರೆದ 3 ಕಾದಂಬರಿಗಳನ್ನು ಸೇರಿಸಿ ಪುಟ್ಟಣ್ಣ ಕಣಗಾಲ್ 'ನಾಗರಹಾವು' ಸಿನಿಮಾ ಕಥೆ ಕಟ್ಟಿಕೊಟ್ಟಿದ್ದರು. 50 ವರ್ಷಗಳ ಹಿಂದೆ ಬಂದಿದ್ದ ಸಿನಿಮಾ ಇವತ್ತಿಗೂ ಕ್ಲಾಸಿಕ್ ಸಿನಿಮಾಗಳ ಲಿಸ್ಟ್ ಸೇರಿದೆ. ಚಿತ್ರದ ಪ್ರತಿದೃಶ್ಯ, ಪ್ರತಿ ಹಾಡು, ಪ್ರತಿ ಪಾತ್ರ ಜನಜನಿತ. 'ನಾಗರಹಾವು' ಸಿನಿಮಾ ಮೇಕಿಂಗ್ ಬಗ್ಗೆ ಸಹ ನಿರ್ದೇಶಕರಾಗಿ ಕೆಲಸ ಮಾಡಿದ್ದ ರಮಣ ಕಣಗಾಲ್ ನೆನಪು ಮಾಡಿಕೊಂಡಿದ್ದಾರೆ. Beyond Limits ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ಅವರು ಮಾತನಾಡಿದ್ದಾರೆ. ಪುಟ್ಟಣ್ಣ ಕಣಗಾಲ್ ಅವರ ಸೋದರ ಸಂಬಂಧಿ ಕೂಡ ಆಗಿರುವ ರಮಣ ಕಣಗಾಲ್ ಸಾಕಷ್ಟು ವಿಚಾರಗಳನ್ನು ಮೆಲುಕು ಹಾಕಿದ್ದಾರೆ.

ಪುಟ್ಟಣ್ಣ ಸಿನಿಮಾ ಮೇಕಿಂಗ್ ಸ್ಟೈಲ್ ಬಗ್ಗೆ ರಮಣ ಕಣಗಾಲ್ ಮಾತನಾಡಿದ್ದಾರೆ. ಮೊದಲ ನೋಟದಲ್ಲೇ ವಿಷ್ಣುವರ್ಧನ್ ದೊಡ್ಡ ಹೀರೊ ಆಗ್ತಾರೆ ಎಂದು ಪುಟ್ಟಣ್ಣ ಭವಿಷ್ಯ ನುಡಿದಿದ್ದಾಗಿ ರಮಣ ಕಣಗಾಲ್ ಹೇಳಿದ್ದಾರೆ. ಅದಗಾಲೇ 'ನಾಗರಹಾವು' ಚಿತ್ರದ ರಾಮಾಚಾರಿ ಪಾತ್ರಕ್ಕೆ ಸಂಪತ್ ಕುಮಾರ್ ಆಯ್ಕೆ ಆಗಿದ್ದರು. ಚಿತ್ರದುರ್ಗದ ಐಬಿಯಲ್ಲಿ ಇದ್ದಾಗ ನನ್ನ ಪಕ್ಕ ವಿಷ್ಣು ಇದ್ದರು. ಹಿಂದೆ ಇದ್ದ ಪುಟ್ಟಣ್ಣ "ನೋಡಣ್ಣ, ಇವ್ನು ಮುಂದೆ ದೊಡ್ಡ ಹೀರೊ ಆಗ್ತಾನೆ. ವ್ಯಾಯಾಮ ಮಾಡ್ಸು, ಹಾಲು ಕುಡ್ಸು ಅಂದ್ರು. ಅವತ್ತೇ ವಿಷ್ಣು ಭವಿಷ್ಯು ನುಡಿದಿದ್ರು ಪುಟ್ಟಣ್ಣ" ಎಂದು ರಮಣ ಕಣಗಾಲ್ ಮೆಲುಕು ಹಾಕಿದ್ದಾರೆ.
ರಾಮಾಚಾರಿ ಹಾಗೂ ಚಾಮಯ್ಯ ಮೇಷ್ಟ್ರ ನಡುವೆ ಮನಸ್ತಾಪ ಬರುವ ದೃಶ್ಯದ ಚಿತ್ರೀಕರಣ ನಡೀತಿತ್ತು ಎಂದು ಆ ಘಟನೆಯನ್ನು ರಮಣ ಕಣಗಾಲ್ ವಿವರಿಸಿದ್ದಾರೆ. "ಬಹಳ ಎಮೋಷನಲ್ ಸನ್ನಿವೇಶ ಅದು. ವಿಷ್ಣು ಕೈಗೆ ಜೋರಾಗಿ ಪೆಟ್ಟು ಬಿದ್ದಿದ್ದು ನಮಗೆ ಟೇಕ್ ವೇಳೆ ಗೊತ್ತಾಗಿಬಿಡ್ತು. ಶಾಟ್ ಮುಗಿದ ಬಳಿಕ ಶರ್ಟ್ ತೆಗೆದು ನೋಡಿದ್ರೆ, ಅವರ ಕೈಗೆ ಬಾಸುಂಡೆ ಬಂದಿತ್ತು. ಚಾಮಯ್ಯ ಮೇಷ್ಟ್ರ ಪಾತ್ರಕ್ಕೆ ವಾಕಿಂಗ್ ಸ್ಟಿಕ್ ಕಂಟಿನ್ಯೂಟಿ ಅಲ್ವಾ.. ಕೋಲು ಮುರಿದು ಹೋಗಿತ್ತು. ಹಾಗಾಗಿ ಸ್ಪಾಟ್ನಲ್ಲೇ ಮೇಷ್ಟ್ರೇ ಬೆತ್ತ ಮುರಿದು ಹೋಗಿದೆ, ರಿಪೇರಿ ಮಾಡಿಸಿಕೊಂಡು ಬಂದು ಕೊಡ್ತೀನಿ ಎಂದು ರಾಮಾಚಾರಿ ಹೇಳುವಂತೆ ಮುಂದಿನ ಸನ್ನಿವೇಶ ಚಿತ್ರೀಕರಣ ನಡೆಸಿದೆವು" ಎಂದು ತಿಳಿಸಿದ್ದಾರೆ.

ಬೆತ್ತ ಮುರಿದು ಹೋಗಿತ್ತು. ಆದರೆ ಮುಂದಿನ ಸನ್ನಿವೇಶಕ್ಕೆ ಕಂಟಿನ್ಯುಟಿ ಬೇಕು ಎನ್ನುವ ಕಾರಣಕ್ಕೆ ಆ ರೀತಿ ಡೈಲಾಗ್ ಇಟ್ಟು ಸನ್ನಿವೇಶ ಮುಂದುವರೆಸಿದರು. ಅದು ಪುಟ್ಟಣ್ಣನ ಜಾಣ್ಮೆ ಎಂದು ರಮಣ ಕಣಗಾಲ್ ಹೇಳಿದ್ದಾರೆ. ದುರ್ಗದ ಕೋಟೆಗೆ ಚಿತ್ರೀಕರಣ ನೋಡಲು ಸಾಕಷ್ಟು ಜನ ಬರ್ತಿದ್ರು. ಅವರನ್ನೆಲ್ಲಾ ನಿಯಂತ್ರಿಸಿಕೊಂಡು ಚಿತ್ರೀಕರಣ ನಡೆಸುವುದು ಬಹಳ ಕಷ್ಟವಾಯಿತು ಎಂದಿದ್ದಾರೆ.
ಒನಕೆ ಓಬವ್ವನ ಪಾತ್ರವನ್ನು ಕಲ್ಪನಾ ಅವರು ಮಾಡಬೇಕಿತ್ತು. ನಾಯಕಿ ಪಾತ್ರ ಅಲ್ಲ, ಒಂದು ಹಾಡಿನಲ್ಲಿ ಬರುವ ಪಾತ್ರ ಅಂತ ಆಕೆ ಒಪ್ಪಲಿಲ್ಲ. ಬಳಿಕ ಜಯಂತಿ ಅವರು ಓಬವ್ವನಾಗಿ ನಟಿಸೋಕೆ ಒಪ್ಪಿದ್ರು. ಆಕೆ ಸೀರೆ ಉಟ್ಟು, ಒನಕೆ ಹಿಡಿದು ಬಂದು ಕಣ್ಣು ಬಿಟ್ಟು ಪೋಸ್ ಕೊಟ್ಟಿದ್ದು ನೋಡಿ ನಾವೆಲ್ಲಾ ಶಾಕ್ ಆಗಿದ್ದೆವು. ಆ ಪಾತ್ರ ಬಹಳ ಚೆನ್ನಾಗಿ ಬರುತ್ತದೆ ಎನ್ನುವುದು ಗೊತ್ತಾಗಿತ್ತು ಎಂದು 'ನಾಗರಹಾವು' ಮೇಕಿಂಗ್ ಬಗ್ಗೆ ರಮಣ ಕಣಗಾಲ್ ಬಣ್ಣಿಸಿದ್ದಾರೆ.


Click it and Unblock the Notifications