ಯಶ್ ಜೊತೆ ನಟಿಸಿದ್ದೆ, ನನ್ನ ಅದೃಷ್ಟ ಬದಲಾಗುತ್ತೆ ಅಂದ್ಕೊಂಡೆ, ಆದ್ರೆ..; ಶ್ವೇತಾ ಕೊರಗು
ಕನ್ನಡ ನಟಿ ನಂದಿತಾ ಶ್ವೇತಾ ತಮಿಳು ಸಿನಿಮಾಗಳಲ್ಲಿ ನಟಿಸಿದ್ದೆ ಹೆಚ್ಚು. ಕನ್ನಡಲ್ಲಿ 'ನಂದ ಲವ್ಸ್ ನಂದಿತಾ' ಚಿತ್ರದಲ್ಲಿ ಆಕೆ ಮೊದಲು ನಟಿದ್ದರು. ಆ ಚಿತ್ರದ ಪಾತ್ರದ ಹೆಸರು ಆಕೆಯ ಹೆಸರಿನೊಂದಿಗೆ ಸೇರಿಕೊಂಡಿತ್ತು. 'ಜಿಂಕೆ ಮರೀನಾ' ಎಂದು ಹಾಡಿ ಕುಣಿದಿದ್ದ ಚೆಲುವೆ ಬಳಿಕ ಕಾಲಿವುಡ್ಗೆ ಜಿಗಿದುಬಿಟ್ಟರು.
ತಮಿಳಿನಲ್ಲಿ ಸ್ಟಾರ್ ನಟರ ಜೊತೆ ನಟಿಸುವ ಅವಕಾಶ ಶ್ವೇತಾರನ್ನು ಅರಸಿ ಬಂತು. ಒಳ್ಳೆ ಒಳ್ಳೆ ಪಾತ್ರಗಳು ಸಿಕ್ಕಿದ್ದವು. ಆದರೆ ಕರ್ನಾಟಕದಲ್ಲಿ ಹುಟ್ಟಿ ಬೆಳೆದ ಚೆಲುವೆ ಕನ್ನಡ ಸಿನಿಮಾಗಳಿಂದಲೇ ದೂರಾವಾಗಿಬಿಟ್ಟರು. ನಡುವೆ ಒಂದಷ್ಟು ಕಥೆಗಳನ್ನು ಕೇಳಿ ಕನ್ನಡ ಚಿತ್ರಗಳಲ್ಲಿ ನಟಿಸುವ ಪ್ರಯತ್ನ ಮಾಡಿದರೂ ಸಾಧ್ಯವಾಗಲಿಲ್ಲ.

ವಿಪರ್ಯಾಸ ಅಂದ್ರೆ ಯಶ್ ಜೊತೆ 'ಕಿರಾತಕ'-2 ಚಿತ್ರಕ್ಕೆ ನಾಯಕಿಯಾಗಿ ಶ್ವೇತಾ ಆಯ್ಕೆ ಆಗಿದ್ದರು. ಒಂದು ವಾರದ ಕಾಲ ಚಿತ್ರೀಕರಣದಲ್ಲಿ ಕೂಡ ಭಾಗಿ ಆಗಿದ್ದರು. ಆದರೆ ದಿಢೀರನೆ 'ಕಿರಾತಕ'-2 ಸಿನಿಮಾ ನಿಂತು ಹೋಯಿತು. ಆ ಚಿತ್ರದಿಂದ ಸ್ಯಾಂಡಲ್ವುಡ್ಗೆ ಕಂಬ್ಯಾಕ್ ಮಾಡುವ ಆಕೆಯ ಕನಸು ನುಚ್ಚು ನೂರಾಯಿತು. ಆ ಬಗ್ಗೆ ಈಗಲೂ ಶ್ವೇತಾಗೆ ಬೇಸರವಿದೆ. ರಾಜೇಶ್ ಗೌಡ ಯೂಟ್ಯೂಬ್ ಚಾನಲ್ನಲ್ಲಿ ಈ ಬಗ್ಗೆ ಮೌನ ಮುರಿದಿದ್ದಾರೆ.
'KGF' ಚಾಪ್ಟರ್-1 ಚಿತ್ರೀಕರಣ ಮುಗಿದ ಬಳಿಕ ಯಶ್ 'ಕಿರಾತಕ-2' ಸಿನಿಮಾ ಕೈಗೆತ್ತಿಕೊಂಡಿದ್ದರು. ರಾಕಿಂಗ್ ಸ್ಟಾರ್ಗೆ ದೊಡ್ಡ ಬ್ರೇಕ್ ಕೊಟ್ಟಿದ್ದ ಚಿತ್ರ 'ಕಿರಾತಕ'. ಹಾಗಾಗಿ ಅದರ ಮುಂದುವರೆದ ಭಾಗ ಮಾಡುವ ಮನಸ್ಸು ಮಾಡಿದ್ದರು. 'ದಿಲ್ವಾಲಾ' ಖ್ಯಾತಿಯ ಅನಿಲ್ ಕುಮಾರ್ ನಿರ್ದೇಶನದಲ್ಲಿ ಸಿನಿಮಾ ಶುರುವಾಗಿತ್ತು. ಜಯಣ್ಣ-ಭೋಗೇಂದ್ರ ಚಿತ್ರಕ್ಕೆ ಬಂಡವಾಳ ಹಾಕಿದ್ದರು.

ರಾಕಿ ಭಾಯ್ ಆಗಲು ಉದ್ದನೆಯ ಗಡ್ಡ ಕೂದಲು ಬಿಟ್ಟಿದ್ದ ಯಶ್ ಅದಕ್ಕೆ ಕತ್ತರಿ ಹಾಕಿ 'ಕಿರಾತಕ'ನ ಅವತಾರ ತಾಳಿದ್ದರು. 15 ದಿನಗಳ ಕಾಲ ಚಿತ್ರೀಕರಣ ನಡೆಯಿತು. ನಡುವೆ 'KGF' ಚಾಪ್ಟರ್-1 ಟ್ರೈಲರ್ ಬಂದು ಸೂಪರ್ ಹಿಟ್ ಆಯಿತು. ಬಳಿಕ ಆ ಚಿತ್ರದ ಪ್ರಚಾರಕ್ಕೆ ಯಶ್ ಮುಂದಾಗಿದ್ದರು. 'KGF' ನಮ್ಮೆಲ್ಲರ ನಿರೀಕ್ಷೆ ಮೀರಿದ ಸಿನಿಮಾ ಆಗುತ್ತಿದೆ ಎಂದು ಗೊತ್ತಾಗುತ್ತಿದ್ದಂತೆ ಸೀಕ್ವೆಲ್ ಕೂಡ ಮಾಡಿದರು. ಹಾಗಾಗಿ 'ಕಿರಾತಕ-2' ಚಿತ್ರ ನಿಂತು ಹೋಗಿತ್ತು.
'KGF' ಸರಣಿ ಬಳಿಕ ಯಶ್ 'ಟಾಕ್ಸಿಕ್' ಸಿನಿಮಾ ಕೈಗೆತ್ತಿಕೊಂಡರು. ಇನ್ನು 'ಕಿರಾತಕ-2' ಚಿತ್ರೀಕರಣಕ್ಕಾಗಿ ವ್ಯಯಿಸಿದ ಅಷ್ಟೂ ಹಣವನ್ನು ಬಡ್ಡಿ ಸಮೇತ ಯಶ್ ಹಿಂದಿರುಗಿಸಿದರು ಎನ್ನುವ ಮಾತುಗಳು ಕೇಳಿಬಂದಿತ್ತು. ಆದರೆ ನಾಯಕಿಯಾಗಿ ಆಯ್ಕೆ ಆಗಿದ್ದ ನಟಿ ಶ್ವೇತಾ ಈಗ ಆ ಸಿನಿಮಾ ಬಗ್ಗೆ ಮಾತನಾಡಿದ್ದಾರೆ. ಆ ಕೊರಗು ಹಾಗೆ ಇದೆ ಎಂದಿದ್ದಾರೆ.
"ನಿರ್ದೇಶಕ ಅನಿಲ್ ಕರೆ ಮಾಡಿ ನನಗೆ ಕಥೆ ಹೇಳಿದರು. ನಟಿಸೋಕೆ ಒಪ್ಪಿದ್ದೆ. ಚಿತ್ರೀಕರಣ ಶುರುವಾಯಿತು. ಮಂಡ್ಯದಲ್ಲಿ ಒಂದು ಶೆಡ್ಯೂಲ್ ಚಿತ್ರೀಕರಣ ನಡೆಯಿತು. 'ಕಿರಾತಕ' ಪಾರ್ಟ್-1 ಮುಂದುವರೆದ ಭಾಗ ಹಳ್ಳಿಯ ಸನ್ನಿವೇಶಗಳನ್ನು ಸೆರೆಹಿಡಿಯಲಾಯಿತು. ಯಶ್, ನಾಗಾಭರಣ ಸರ್, ತಾರಾ ಮೇಡಂ ಎಲ್ಲರೂ ಚಿತ್ರೀಕರಣದಲ್ಲಿ ಭಾಗಿ ಆಗಿದ್ದೆವು."
"ಬಳಿಕ ಒಂದು ಜಾತ್ರೆ ಸಾಂಗ್ ಶೂಟಿಂಗ್ ಇತ್ತು. ಅದಕ್ಕಾಗಿ ಸಿದ್ಧತೆ ನಡೆದಿತ್ತು. ಯಾವಾಗ? ಎಲ್ಲಿ? ಎನ್ನುವ ಬಗ್ಗೆಯೂ ಮಾತುಕತೆ ಆಗಿತ್ತು. ಅಷ್ಟರಲ್ಲಿ ನಾನು ತಮಿಳಿನ 'ದೇವಿ-2' ಚಿತ್ರೀಕರಣಕ್ಕಾಗಿ ಮಾರಿಶಸ್ಗೆ ಹೋಗಬೇಕಿತ್ತು. 'ಕಿರಾತಕ'-2 ಚಿತ್ರದ 15 ದಿನಗಳ ಚಿತ್ರೀಕರಣದ ಬಳಿಕ 'KGF' ಸಿನಿಮಾ ರಿಲೀಸ್ ಡೇಟ್ ಅನೌನ್ಸ್ ಆಗಿತ್ತು. ಯಶ್ ಅವರು ಪ್ರಚಾರಕ್ಕೆ ಹೋದರು" ಎಂದು ಶ್ವೇತಾ ನೆನಪಿಸಿಕೊಂಡಿದ್ದಾರೆ.
"ನಾನು ಮಾರಿಶಸ್ಗೆ ಹೋದೆ, ಯಶ್ 'KGF' ಸಿನಿಮಾ ಪ್ರಚಾರಕ್ಕೆ ಹೋದರು. ಬಳಿಕ ಏನಾಯ್ತು ಗೊತ್ತಿಲ್ಲ" ಎಂದು ಶ್ವೇತಾ ನಕ್ಕಿದ್ದಾರೆ. ಬಹಳ ದಿನಗಳ ಬಳಿಕ ಕನ್ನಡ ಸಿನಿಮಾ ಚಿತ್ರೀಕರಣ, ಕನ್ನಡದಲ್ಲಿ ಸಂಭಾಷಣೆ ಹೇಳಲು ಬಹಳ ಖುಷಿಪಟ್ಟಿದ್ದೆ. ಆದರೆ ಯಾರ ಕಣ್ಣುಬಿತ್ತೋ ಏನೋ, ಆ ಸಿನಿಮಾ ಚಿತ್ರೀಕರಣ ಮರೆಯೋಕೆ ಸಾಧ್ಯವಿಲ್ಲ. 'ಕಿರಾತಕ'-2 ಬಳಿಕ ಒಂದಷ್ಟು ಸಿನಿಮಾಗಳಲ್ಲಿ ನಟಿಸ್ತೀನಿ ಎಂದುಕೊಂಡೆ. ಆದರೆ ಅದು ಸಾಧ್ಯವಾಗಲಿಲ್ಲ ಎಂದು ವಿವರಿಸಿದ್ದಾರೆ.
ನಾನು ಬಳಿಕ ಕೇಳಿದಾಗ ಅದು ಯಶ್ ಬಹಳ ಇಷ್ಟಪಟ್ಟಿದ್ದ ಕಥೆ. ಸಿನಿಮಾ ಮಾಡೇ ಮಾಡ್ತಾರೆ ಅಂದ್ರು. ನಾನು ಕಾದೆ. ಕೊನೆಗೆ 'KGF-2', ಲಾಕ್ಡೌನ್ ಹೀಗೆ ನಾಲ್ಕೈದು ವರ್ಷ ಕಳೆದುಬಿಡ್ತು. ಈಗ ಯಶ್ ಯಾವ ಹಂತಕ್ಕೆ ಏರಿದ್ದಾರೆ ಎನ್ನುವುದು ಗೊತ್ತೇಯಿದೆ ಎಂದು ಶ್ವೇತಾ ಹೇಳಿದ್ದಾರೆ.


Click it and Unblock the Notifications











