'ಪುಷ್ಪ' ಪಾತ್ರಕ್ಕೆ ಮೊದಲ ಆಯ್ಕೆ ಅಲ್ಲು ಅರ್ಜುನ್ ಅಲ್ಲ: ಛೇ.. ರಾಷ್ಟ್ರಪ್ರಶಸ್ತಿ ಮಿಸ್ ಮಾಡಿಕೊಂಡ ನಟ ಯಾರು?
ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ನಟನೆಯ 'ಪುಷ್ಪ' ಸಿನಿಮಾ 3 ವಿಭಾಗಗಳಲ್ಲಿ ರಾಷ್ಟ್ರಪ್ರಶಸ್ತಿ ಮುಡಿಗೇರಿಸಿಕೊಂಡಿದೆ. ಮುಖ್ಯವಾಗಿ ಅಲ್ಲು ಅರ್ಜುನ್ ಅತ್ಯುತ್ತಮ ನಟ ಪ್ರಶಸ್ತಿ ಪಡೆದುಕೊಂಡಿದ್ದಾರೆ. 68 ವರ್ಷಗಳಲ್ಲಿ ಈ ವಿಭಾಗದಲ್ಲಿ ಪ್ರಶಸ್ತಿ ಪಡೆದ ಮೊದಲ ತೆಲುಗು ನಟ ಎನಿಸಿಕೊಂಡಿದ್ದಾರೆ. ಅಚ್ಚರಿ ಅಂದರೆ 'ಪುಷ್ಪ' ಚಿತ್ರಕ್ಕೆ ಮೊದಲ ಆಯ್ಕೆ ಬನ್ನಿ ಅಲ್ಲ ಎನ್ನಲಾಗ್ತಿದೆ.
ನಿರ್ದೇಶಕ ಸುಕುಮಾರ್ ಮೊದಲಿಗೆ ರಕ್ತಚಂದನ ಸ್ಮಗ್ಲಿಂಗ್ ಕಥೆಯನ್ನು ವೆಬ್ ಸೀರಿಸ್ ರೂಪದಲ್ಲಿ ತೆರೆಗೆ ತರಲು ಮನಸ್ಸು ಮಾಡಿದ್ದರು. ಸೀಕ್ವೆಲ್ ಸಿನಿಮಾಗಳ ಟ್ರೆಂಡ್ ಶುರುವಾದ ಬಳಿಕ 2 ಭಾಗಗಳಾಗಿ ಸಿನಿಮಾ ಮಾಡಲು ಮುಂದಾಗಿದ್ದರು. ಸುಕುಮಾರ್ ನಿರ್ದೇಶನದ 'ರಂಗಸ್ಥಳಂ' ಸಿನಿಮಾ ಬ್ಲಾಕ್ಬಸ್ಟರ್ ಹಿಟ್ ಆಗಿತ್ತು. ಚಿತ್ರದಲ್ಲಿ ಚಿಟ್ಟಿಬಾಬು ಆಗಿ ರಾಮ್ಚರಣ್ ಮೋಡಿ ಮಾಡಿದ್ದರು. ಆ ಪಾತ್ರವನ್ನು ತಿದ್ದಿ ತೀಡಿದ್ದ ಬಗೆ ಚೆನ್ನಾಗಿತ್ತು. ಅದರ ಬೆನ್ನಲ್ಲೇ 'ಪುಷ್ಪ' ಎನ್ನುವ ಮತ್ತೊಂದು ಪಾತ್ರವನ್ನು ಡಿಸೈನ್ ಮಾಡಿದ್ದರು.

ಶೇಷಾಚಲಂ ಭಾಗದಲ್ಲಿ ರಕ್ತಚಂದನ ಸ್ಮಗ್ಲಿಂಗ್ ಹೆಚ್ಚು ನಡೆಯುತ್ತದೆ. ಹಾಗಾಗಿ ಅದರ ಹಿನ್ನೆಲೆಯಲ್ಲೇ ಸುಕುಮಾರ್ ಸಿನಿಮಾ ಕಥೆ ಸಿದ್ಧಪಡಿಸಿಕೊಂಡಿದ್ದರು. 'ರಂಗಸ್ಥಳಂ'ಗೂ ಮುನ್ನ ನಿರ್ದೇಶಕರು ಮಹೇಶ್ ಬಾಬು ಜೊತೆ 'ಒನ್' ನೇನೊಕ್ಕಡಿನೇ ಸಿನಿಮಾ ಮಾಡಿದ್ದರು. ಬಾಕ್ಸಾಫೀಸ್ನಲ್ಲಿ ಸಿನಿಮಾ ಸೋತರೂ ಕಲ್ಟ್ ಸಿನಿಮಾ ಎನಿಸಿಕೊಂಡಿತ್ತು. ಹಾಗಾಗಿ ರಂಗಸ್ಥಳಂ ಬಳಿಕ ಮಹೇಶ್ ಬಾಬು ಜೊತೆ ಮತ್ತೊಂದು ಸಿನಿಮಾ ಪ್ಲಾನ್ ಮಾಡಿದ್ದಾರೆ.
ಕಾರಣಾಂತರಗಳಿಂದ ಮಹೇಶ್ ಬಾಹು ಹಾಗೂ ಸುಕುಮಾರ್ ಕಾಂಬಿನೇಷನ್ ಸಿನಿಮಾ ಸೆಟ್ಟೇರಲಿಲ್ಲ. ಈ ವಿಚಾರವನ್ನು ಸ್ವತಃ ಮಹೇಶ್ ಬಾಬು ಟ್ವೀಟ್ ಮಾಡಿ ಸ್ಪಷ್ಟಪಡಿಸಿದರು. ಇದರ ಬೆನ್ನಲ್ಲೇ ಅಲ್ಲು ಅರ್ಜುನ್ ಜೊತೆ 'ಪುಷ್ಪ' ಚಿತ್ರಕ್ಕೆ ಸುಕ್ಕು ಶ್ರೀಕಾರ ಹಾಕಿದ್ದರು. ಹಾಗಾಗಿ ಮಹೇಶ್ ಬಾಬುಗೆ ಮಾಡಿದ್ದ ಕಥೆಯೇ 'ಪುಷ್ಪ' ಎನ್ನಲಾಗುತ್ತಿದೆ. ಅಂದರೆ ಮಹೇಶ್ ಬಾಬು 'ಪುಷ್ಪ'ರಾಜ್ ಆಗಿ ನಟಿಸುವ ಅವಕಾಶ ಕಳೆದುಕೊಂಡರು ಎನ್ನುವ ಚರ್ಚೆ ಹಲವು ದಿನಗಳಿಂದ ಟಾಲಿವುಡ್ನಲ್ಲಿದೆ.

'ಪುಷ್ಪ' ಚಿತ್ರದ ನಟನೆಗಾಗಿ ಅಲ್ಲು ಅರ್ಜುನ್ಗೆ ರಾಷ್ಟ್ರಪ್ರಶಸ್ತಿ ಘೋಷಣೆ ಆಗುತ್ತಿದ್ದಂತೆ ಮಹೇಶ್ ಬಾಬು ಹಳೇ ಟ್ವೀಟ್ ವೈರಲ್ ಆಗುತ್ತಿದೆ. "ಕ್ರಿಯೇಟಿವ್ ಡಿಫ್ರೆನ್ಸ್ ಕಾರಣಕ್ಕೆ ನನ್ನ ಹಾಗೂ ಸುಕುಮಾರ್ ಸಿನಿಮಾ ಶುರುವಾಗುತ್ತಿಲ್ಲ. ಅವರ ಹೊಸ ಸಿನಿಮಾಕ್ಕೆ ನನ್ನ ಶುಭಾಶಯ. ಒಬ್ಬ ಸಿನಿಮಾ ಮೇಕರ್ ಮೇಲಿನ ನನ್ನ ಗೌರವ ಸದಾ ಹಾಗೆ ಇರುತ್ತದೆ. ಒನ್ ನೇನೊಕ್ಕಡಿನೇ ಕಲ್ಟ್ ಸಿನಿಮಾ ಆಗಿ ಉಳಿಯುತ್ತದೆ. ಆ ಚಿತ್ರಕ್ಕಾಗಿ ಕೆಲಸ ಮಾಡಿದ ಪ್ರತಿಕ್ಷಣವನ್ನು ಎಂಜಾಯ್ ಮಾಡಿದ್ದೇನೆ" ಎಂದು ಮಹೇಶ್ ಬಾಬು 2019, ಏಪ್ರಿಲ್ 3ರಂದು ಟ್ವೀಟ್ ಮಾಡಿದ್ದರು.
ಅಲ್ಲು ಅರ್ಜುನ್ಗೆ ರಾಷ್ಟ್ರಪ್ರಶಸ್ತಿ ಘೋಷಣೆ ಆಗುತ್ತಿದ್ದಂತೆ ಮಹೇಶ್ ಬಾಬು ಹಳೇ ಟ್ವೀಟ್ನ ನೆಟ್ಟಿಗರು ಶೇರ್ ಮಾಡುತ್ತಿದ್ದಾರೆ. ಛೇ ಒಂದೊಳ್ಳೆ ಅವಕಾಶವನ್ನು ಮಹೇಶ್ ಬಾಬು ಮಿಸ್ ಮಾಡಿಕೊಂಡರು ಎನ್ನುತ್ತಿದ್ದಾರೆ. ಇನ್ನು ಮಹೇಶ್ ಬಾಬು ಅಭಿಮಾನಿಗಳು 'ಗುಂಟೂರು ಖಾರಂ' ಅಥವಾ ರಾಜಮೌಳಿ ಸಿನಿಮಾದಲ್ಲಿ ನಮ್ಮ ನೆಚ್ಚಿನ ನಟನಿಗೂ ಅವಕಾಶ ಬರುತ್ತೆ ಬಿಡಿ ಎನ್ನುತ್ತಿದ್ದಾರೆ.
ಸುಕುಮಾರ್ ಮಹೇಶ್ ಬಾಬುಗಾಗಿ ಮಾಡಿದ್ದ ಕಥೆ ಹಾಗೂ 'ಪುಷ್ಪ' ಕಥೆ ಒಂದೇನಾ? ಎನ್ನುವುದು ಕೆಲವರ ಅನುಮಾನ. ಇನ್ನು ಕೆಲವರು ಮಹೇಶ್ ಬಾಬುಗೆ 'ಪುಷ್ಪ'ರಾಜ್ ರಗಡ್ ಪಾತ್ರ ಸೂಟ್ ಆಗುತ್ತಿರಲಿಲ್ಲ ಬಿಡಿ ಎನ್ನುತ್ತಿದ್ದಾರೆ. ಅಂದಹಾಗೆ 'ಪುಷ್ಪ- 2' ಸಿನಿಮಾ ಚಿತ್ರೀಕರಣ ನಡೀತಿದೆ. ಮುಂದಿನ ವರ್ಷ ಮಾರ್ಚ್ 22ಕ್ಕೆ ಸಿನಿಮಾ ರಿಲೀಸ್ ಎನ್ನುವ ಮಾತುಗಳು ಕೇಳಿಬರ್ತಿದೆ. ಮತ್ತೆ 'ಪುಷ್ಪ'ರಾಜ್ ಆರ್ಭಟ ನೋಡಲು ಸಿನಿರಸಿಕರು ಕಾಯುತ್ತಿದ್ದಾರೆ.


Click it and Unblock the Notifications










