South Vs Bollywood: 69ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ: ಪ್ರಾದೇಶಿಕ ಸಿನಿಮಾಗಳ ಎದುರು ಬಾಲಿವುಡ್ ಸೈಲೆಂಟ್
ಕಳೆದ ನಾಲ್ಕೈದು ವರ್ಷಗಳಿಂದ ಸೌತ್ ವರ್ಸಸ್ ಬಾಲಿವುಡ್ ಎನ್ನುವ ಚರ್ಚೆ ಜೋರಾಗಿದೆ. ಪ್ಯಾನ್ ಇಂಡಿಯಾ ಸಿನಿಮಾಗಳ ಮೂಲಕ ನಮ್ಮ ಸಿನಿಮಾಗಳು ಹಿಂದಿ ಸಿನಿಮಾಗಳಿಗೆ ಭಾರೀ ಪೈಪೋಟಿ ಕೊಡುತ್ತಿದೆ. ಬಾಲಿವುಡ್ ಮಾಡದ ಸಾಧನೆಯನ್ನು ದಕ್ಷಿಣದ ಸಿನಿಮಾಗಳು ಮಾಡಿ ತೋರಿಸಿವೆ. 69ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಲ್ಲೂ ಇದು ಮತ್ತೆ ಸಾಬೀತಾಗಿದೆ.
ಒಂದ್ಕಾಲದಲ್ಲಿ ಭಾರತೀಯ ಚಿತ್ರರಂಗ ಅಂದರೆ ಬಾಲಿವುಡ್ ಎನ್ನುವಂತಾಗಿಬಿಟ್ಟಿತ್ತು. ದಕ್ಷಿಣದ ಸಿನಿಮಾಗಳನ್ನು ಬಿಟೌನ್ ಮಂದಿ ಸಣ್ಣದಾಗಿಯೇ ನೋಡುತ್ತಿದ್ದರು. ಆದರೆ ಈಗ ಕಾಲ ಬದಲಾಗಿದೆ. ನಮ್ಮ ಸಿನಿಮಾಗಳು ಅಂತರಾಷ್ಟ್ರೀಯಮಟ್ಟದಲ್ಲಿ ಸದ್ದು ಮಾಡ್ತಿವೆ. ಬಾಲಿವುಡ್ ಸೂಪರ್ ಸ್ಟಾರ್ಗಳೇ ಕಳೆದ ಮೂರ್ನಾಲ್ಕು ವರ್ಷಗಳಿಂದ ಒಂದು ಹಿಟ್ ಕೊಡಲು ತಿಣುಕಾಡುವಂತಿದೆ. ಮೂರು ವರ್ಷಗಳಿಂದ ಬಾಲಿವುಡ್ ಸೈಲೆಂಟ್ ಆಗಿಬಿಟ್ಟಿದೆ.

ಉತ್ತರ ಭಾರತದಲ್ಲೂ ಈಗ ಸೌತ್ ಸಿನಿಮಾಗಳು ಕಾರುಬಾರು ಜೋರಾಗಿದೆ. ಬಾಹುಬಲಿ, KGF ಸರಣಿಗಳು, 'ಪುಷ್ಪ', 'ಕಾಂತಾರ' ಹೀಗೆ ಪ್ಯಾನ್ ಇಂಡಿಯಾ ಸಿನಿಮಾಗಳು ಉತ್ತರ ಭಾರತ ಬಾಕ್ಸಾಫೀಸ್ನಲ್ಲಿ ಧೂಳೆಬ್ಬಿಸಿವೆ. ಪ್ರಭಾಸ್, ಯಶ್ ಸಿನಿಮಾಗಳು ಅಲ್ಲೂ ಭಾರೀ ಕ್ರೇಜ್ ಸೃಷ್ಟಿಸಿವೆ. ಇನ್ನು ಒಂದು ಕಾಲದಲ್ಲಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಲ್ಲೂ ಹಿಂದಿ ಸಿನಿಮಾಗಳ ಪಾರುಪತ್ಯ ಜೋರಾಗಿತ್ತು. ಹೆಚ್ಚು ಪ್ರಶಸ್ತಿಗಳನ್ನು ಬಾಲಿವುಡ್ ಸಿನಿಮಾಗಳೇ ಬಾಚಿಕೊಳ್ಳುತ್ತಿದ್ದವು.
ಪ್ರಶಸ್ತಿಗಳ ವಿಚಾರದಲ್ಲಿ ಬಾಲಿವುಡ್ ಮಂದಿ ಲಾಬಿ ಮಾಡುತ್ತಾರೆ ಎನ್ನುವ ಆರೋಪವೂ ಕೇಳಿಬಂದಿತ್ತು. ಆದರೆ ಅದನ್ನೆಲ್ಲಾ ಮೀರಿ ಈಗ ದಕ್ಷಿಣದ ಸಿನಿಮಾಗಳು ಸದ್ದು ಮಾಡುತ್ತಿವೆ. ಬಾಕ್ಸಾಫೀಸ್ ಮಾತ್ರವಲ್ಲ ಪ್ರಶಸ್ತಿಗಳ ವಿಚಾರದಲ್ಲೂ ಮುಂದಿವೆ. ರಾಜಮೌಳಿ ನಿರ್ದೇಶನದ 'RRR' ಸಿನಿಮಾ ಅಂತರಾಷ್ಟ್ರೀಯ ವೇದಿಕೆಗಳಲ್ಲಿ ಪ್ರಶಸ್ತಿ ಗೆದ್ದುಕೊಂಡಿತ್ತು. ಇದೀಗ 69ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಲ್ಲೂ ದಕ್ಷಿಣದ ಸಿನಿಮಾಗಳಿಗೆ ಸಿಂಹಪಾಲು ಸಿಕ್ಕಿದೆ.

ತೆಲುಗು ಸಿನಿಮಾಗಳು 10 ವಿಭಾಗಗಳಲ್ಲಿ ರಾಷ್ಟ್ರಪ್ರಶಸ್ತಿ ಮುಡಿಗೇರಿಸಿಕೊಡಿವೆ. 'RRR' ಸಿನಿಮಾ 6 ವಿಭಾಗಗಳಲ್ಲಿ ಪ್ರಶಸ್ತಿ ಗೆದ್ದಿದೆ. 'ಪುಷ್ಪ' ಚಿತ್ರದ ನಟನೆಗಾಗಿ ಅಲ್ಲು ಅರ್ಜುನ್ ಅತ್ಯುತ್ತಮ ನಟ ಪ್ರಶಸ್ತಿ ಪಡೆದಿದ್ದಾರೆ. ಕೆಲ ವರ್ಷಗಳ ಹಿಂದೆ ಬಾಲಿವುಡ್ ಸಿನಿಮಾಗಳು ಹೀಗೆ ಹೆಚ್ಚು ಹೆಚ್ಚು ಪ್ರಶಸ್ತಿಗಳನ್ನು ಬಾಚಿಕೊಳ್ಳುತ್ತಿದ್ದವು. ಮುಖ್ಯವಾಗಿ ಈ ಬಾರಿ ಮಲಯಾಳಂ ಸಿನಿಮಾಗಳು ಹೆಚ್ಚು ಪೈಪೋಟಿ ಕೊಟ್ಟಿವೆ.
ಚಲನಚಿತ್ರ ರಾಷ್ಟ್ರ ಪ್ರಶಸ್ತಿ ಘೋಷಣೆ ಬಳಿಕ ಈ ವರ್ಷ ತೀರ್ಪುಗಾರರ ಸದಸ್ಯರಾಗಿದ್ದ ಮಲಯಾಳಂ ನಿರ್ಮಾಪಕ ಜಿ. ಸುರೇಶ್ ಕುಮಾರ್, ತಾಂತ್ರಿಕವಾಗಿ ಶ್ರೀಮಂತವಾದ ಮಲಯಾಳಂ ಚಿತ್ರಗಳು ಈ ವರ್ಷ ಪ್ರಶಸ್ತಿಗಳ ಅಂತಿಮ ಹಂತ ತಲುಪಿವೆ ಎಂದು ಹೇಳಿದ್ದಾರೆ. ಎಂಟು ಮಲಯಾಳಂ ಚಿತ್ರಗಳು ಈ ಬಾರಿ ಅಂತಿಮ ಸುತ್ತಿಗೆ ಬಂದಿದ್ದವು ಎಂದು ವಿವರಿಸಿದ್ದಾರೆ.
ಅಂತಿಮ ಹಂತದಲ್ಲಿ 8 ಮಲಯಾಳಂ ಚಿತ್ರಗಳನ್ನು ಪ್ರಶಸ್ತಿಗಳಿಗೆ ಪರಿಗಣಿಸಲಾಗಿತ್ತು. ಜೋಜು ಜಾರ್ಜ್ ಮತ್ತು ಇಂದ್ರನ್ಸ್ ಅತ್ಯುತ್ತಮ ಪೋಷಕ ನಟ ವಿಭಾಗದಲ್ಲಿ ನಾಮಿನೇಟ್ ಆಗಿದ್ದರು. ಕೊನೆಯ ಸುತ್ತಿಗೆ ತಲುಪಿದರು, ಆದರೆ ಆ ವಿಭಾಗದಲ್ಲಿ ಅತ್ಯುತ್ತಮ ಕಲಾವಿದರು ಇದ್ದರು. ತಾಂತ್ರಿಕವಾಗಿ ಶ್ರೀಮಂತ ಸಿನಿಮಾಗಳು ಎಂದಾಗ ದಕ್ಷಿಣ ಭಾರತದ ಚಿತ್ರಗಳು ಬಾಲಿವುಡ್ಗೆ ಸರಿಸಾಟಿಯಾಗಿದೆ. ತಾಂತ್ರಿಕವಾಗಿ 'ಮಿನ್ನಲ್ ಮುರಳಿ', 'ನಯಟ್ಟು', 'ಆವಾಸವ್ಯೂಹಂ' ಮತ್ತು 'ಮೆಪ್ಪಾಡಿಯನ್'ನಂತಹ ಗುಣಮಟ್ಟದ ಚಿತ್ರಗಳು ಅಂತಿಮ ಸುತ್ತಿಗೆ ತಲುಪಿದ್ದವು" ಎಂದು ಜಿ. ಸುರೇಶ್ ಕುಮಾರ್ ಮಾಧ್ಯಮವೊಂದಕ್ಕೆ ಮಾಹಿತಿ ನೀಡಿದ್ದಾರೆ.


Click it and Unblock the Notifications











