ಮಾಡಿದ್ದ ಚಿಕ್ಕ ಪಾತ್ರಕ್ಕೂ ಕತ್ತರಿ ಹಾಕಿದ್ದ ಕಮಲ್ ಹಾಸನ್, ಪ್ರೀಮಿಯರ್ನಲ್ಲಿ ಬಿಕ್ಕಿ ಬಿಕ್ಕಿ ಅತ್ತಿದ್ದರು ಈ ನಟ..!
ಇವತ್ತು ಸ್ಟಾರ್ ಆದವರಲ್ಲಿ ಬಹುತೇಕರು ಒಂದಿಲ್ಲೊಂದು ದಿನ ಈ ಹಿಂದೆ ಟಾರ್ ರೋಡ್ನಲ್ಲಿ ಅಲೆದಾಡಿದವರೇ. ಒಂದೇ ಒಂದು ಅವಕಾಶ ಸಿಕ್ಕರೆ ಸಾಕು ತಮ್ಮ ಸಾಮರ್ಥ್ಯ ಪ್ರದರ್ಶನ ಮಾಡಲು ಹವಣಿಸುತ್ತಿದ್ದ ಇವರು ಆ ದಿನಗಳಲ್ಲಿ ಅವಮಾನವನ್ನು ಎದುರಿಸಿದ್ದಾರೆ. ಚಿಕ್ಕ ಪುಟ್ಟ ಪಾತ್ರಗಳನ್ನು ಕಣ್ಣಿಗೊತ್ತಿಕೊಂಡು ಮಾಡಿದ್ದಾರೆ. ತಮ್ಮ ಚಿಕ್ಕ ಪಾತ್ರಕ್ಕೆ ಇನ್ನೂ ಕತ್ತರಿ ಬಿದ್ದಾಗ ಕಣ್ಣೀರನ್ನು ಹಾಕಿದ್ದಾರೆ. ಇದಕ್ಕೆ ನವಾಜುದ್ದೀನ್ ಸಿದ್ದಿಕಿ ಸದ್ಯದ ಉದಾಹರಣೆ.
ಸದಾ ಸವಾಲಿನ ಪಾತ್ರಗಳನ್ನೇ ಆಯ್ಕೆ ಮಾಡಿಕೊಳ್ಳುವವರು ನವಾಜುದ್ದೀನ್ ಸಿದ್ದಿಕಿ. ದೇಸೀ ಲುಕ್ಕಿನ ನವಾಜುದ್ದೀನ್ ಇದುವರೆಗೂ ಮಾಡಿರುವ ಚಿತ್ರಗಳು ಮತ್ತು ನಿರ್ವಹಿಸಿರುವ ಪಾತ್ರಗಳು ಇವರನ್ನು ವಿಶಿಷ್ಟ ಸ್ಥಾನದಲ್ಲಿ ಕರೆದೊಯ್ದು ನಿಲ್ಲಿಸಿವೆ. ಈವತ್ತಿಗೆ ಬಾಲಿವುಡ್ನ ಈ ಅದ್ಭುತ ಆಕ್ಟರ್ನ ಕೈ ತುಂಬಾ ಅವಕಾಶಗಳಿವೆ.

ಕೇವಲ ಅವಕಾಶ ಮಾತ್ರ ಅಲ್ಲ, ಅವಕಾಶಗಳ ಜೊತೆ ಜೊತೆಯಲ್ಲಿ ನವಾಜುದ್ದೀನ್ ಗೆ 'ಕುಬೇರ ವರ' ಕೂಡ ಪ್ರಾಪ್ತಿಯಾಗಿದೆ. ಮನಸು ಮಾಡಿದರೆ ಮುಂಬೈ, ದೆಹಲಿಯಂಥಾ ಮಹಾ ನಗರಗಳಲ್ಲಿ ಹೈಫೈ ಜಂಗುಳಿಯಲ್ಲಿ ಕಾಲುಗಳನ್ನು ಮಣ್ಣಿಗೆ ಸೋಕಿಸದಂತೆ ಕಳೆದು ಬಿಡಬಹುದು. ಹಾಗಂಥ ಈ ಆಡಂಬರದ ಬದುಕು ನವಾಜುದ್ದೀನ್ಗೆ ಸುಲಭವಾಗಿ ದಕ್ಕಿದ್ದಲ್ಲ. ಮುಳ್ಳಿನ ಹಾದಿಯಲ್ಲಿ ನಡೆದ ಮೇಲೆಯೇ ಈ ಐಶಾರಾಮಿ ಬದುಕು ನವಾಜುದ್ದೀನ್ಗೆ ಪ್ರಾಪ್ತಿಯಾಗಿದೆ. ಇಂಥಾ ನವಾಜುದ್ದೀನ್ ಸಿದ್ದಿಕಿ ಹಿಂದೊಮ್ಮೆ ಕಮಲ್ ಹಾಸನ್ ಎದುರು ಗಳಗಳನೆ ಕಣ್ಣೀರು ಹಾಕಿದ ವಿಚಾರ ಬಹುತೇಕರಿಗೆ ಗೊತ್ತಿರಲಿಕ್ಕಿಲ್ಲ.
ಹೌದು, ಅಸಲಿಗೆ ಗ್ಯಾಂಗ್ಸ್ ಆಫ್ ವಾಸೇಪುರ್ ಚಿತ್ರಕ್ಕೂ ಮುನ್ನ ನವಾಜುದ್ದೀನ್ ಸಿದ್ದಿಕಿ ಹಲವು ಚಿತ್ರಗಳಲ್ಲಿ ಚಿಕ್ಕ ಪುಟ್ಟ ಪಾತ್ರಗಳನ್ನು ಮಾಡಿದ್ದರು. ಆ ಪೈಕಿ ಕಮಲ್ ಹಾಸನ್ ನಿರ್ದೇಶನದ ಹೇ ರಾಮ್ ಚಿತ್ರ ಕೂಡ ಒಂದು. ಆದರೆ, ಕಮಲ್ ಹಾಸನ್ ಈ ಚಿತ್ರದಲ್ಲಿ ನವಾಜುದ್ದೀನ್ ಸಿದ್ದಿಕಿ ಅಭಿನಯದ ದೃಶ್ಯಗಳನ್ನು ತೆಗೆದು ಹಾಕಿದ್ದರು. ಈ ವಿಚಾರ ಗೊತ್ತಾದ ನಂತರ ಆಘಾತಕ್ಕೊಳಗಾಗಿದ್ದ ನವಾಜುದ್ದೀನ್ ಆ ದಿನಗಳನ್ನು ಇತ್ತೀಚೆಗೆ ಮೆಲುಕು ಹಾಕಿದ್ದಾರೆ.
ಈ ಕುರಿತು ಮಾತನಾಡಿರುವ ನವಾಜುದ್ದೀನ್ ಮುಂಬೈನ ಫಿಲ್ಮ್ ಸಿಟಿಯಲ್ಲಿ ಹೇ ರಾಮ್ ಚಿತ್ರದ ಪ್ರೀಮಿಯರ್ ಪ್ರದರ್ಶನ ಇತ್ತು. ಹೇ ರಾಮ್ ಸಿನಿಮಾ ಬರ್ತಿದೆ, ನಾನು ಈ ಚಿತ್ರದಲ್ಲಿ ಅಭಿನಯಿಸಿದ್ದೇನೆ ಎಂದು ಹೆಮ್ಮೆಯಿಂದ ಹೇಳಿಕೊಂಡು ನಾನು ನನ್ನ ಐದಾರು ಸ್ನೇಹಿತರನ್ನು ನಾನು ಚಿತ್ರ ಪ್ರದರ್ಶನಕ್ಕೆ ಕರೆದುಕೊಂಡು ಹೋಗಿದ್ದೆ ಎಂದು ಹೇಳಿದ್ದಾರೆ.
ಅಲ್ಲಿ ಹೋದ ನಂತರ ಇನ್ನೇನು ಚಿತ್ರದ ಚಿತ್ರೀಕರಣ ಶುರುವಾಗಬೇಕು ಅಷ್ಟರಲ್ಲಿ ಕಮಲ್ ಹಾಸನ್ ಅವರು ನನ್ನ ಬಳಿ ಬಂದರು ಎಂದಿರುವ ನವಾಜುದ್ದೀನ್, ಆ ನಂತರ ನವಾಜ್ ಚಿತ್ರದಲ್ಲಿ ನಿನ್ನ ಪಾತ್ರಕ್ಕೆ ಕತ್ತರಿ ಹಾಕಲಾಗಿದೆ ಎಂಬ ವಿಚಾರ ನಿನ್ನ ಸ್ನೇಹಿತರಿಗೆ ಹೇಳಿ ಬಿಡು ಎಂದು ಕಮಲ್ ಹಾಸನ್ ಹೇಳಿದರು ಎಂದಿದ್ದಾರೆ. ಕಮಲ್ ಹಾಸನ್ ಹೇಳಿದ ಈ ಮಾತಿಂದ ನನಗೆ ನಿಂತ ನೆಲವೇ ಕುಸಿದಂತೆ ಆಯ್ತು ಎಂದಿರುವ ನವಾಜುದ್ದೀನ್ ಸರ್ ಹೀಗೆಲ್ಲ ಮಾಡಬೇಡಿ, ನನ್ನ ಮರ್ಯಾದೆ ಹೋಗುತ್ತೆ ಎಂದು ನಾನು ಕಮಲ್ ಹಾಸನ್ ಎದುರು ಕಣ್ಣೀರು ಹಾಕಿದ್ದೇ ಎಂದು ಹೇಳಿದ್ದಾರೆ.
ಕಣ್ಣೀರು ಹಾಕುತ್ತಾನೇ ಸ್ನೇಹಿತರ ಬಳಿ ಬಂದು ನನ್ನ ಪಾತ್ರವನ್ನು ಚಿತ್ರದಲ್ಲಿ ಕಟ್ ಮಾಡಿರುವ ವಿಚಾರ ಹೇಳಿದೆ ಚಿತ್ರವನ್ನು ನೋಡುವುದು ಬಿಡುವುದು ನಿಮಗೆ ಬಿಟ್ಟಿದ್ದು ಎಂದು ಹೇಳಿದ್ದೇ ಆದರೆ ಅವರೆಲ್ಲ ಚಿತ್ರ ನೋಡಿಯೇ ಹೋಗೋಣ ಎಂದು ಹೇಳಿ ಚಿತ್ರವನ್ನು ನೋಡಿದ್ದರು ಎಂದು ಹೇಳಿದ್ದಾರೆ ನವಾಜುದ್ದೀನ್ ಸಿದ್ದಿಕಿ.ಇನ್ನು ಈ ಕುರಿತು ಈ ಹಿಂದೆ ಮಾತನಾಡಿದ್ದ ಕಮಲ್ ಹಾಸನ್ ಅನಿವಾರ್ಯ ಕಾರಣಗಳಿಂದ ನವಾಜುದ್ದೀನ್ ಸಿದ್ದಿಕಿ ದೃಶ್ಯಗಳಿಗೆ ಕತ್ತರಿ ಹಾಕಬೇಕಾಯಿತು ಆದರೆ ನನಗೆ ಅವನ ಬೆಳವಣಿಗೆಯ ಬಗ್ಗೆ ಹೆಮ್ಮೆ ಇದೆ ಎಂದು ಹೇಳಿದ್ದರು. ಹೇ ರಾಮ್ ಚಿತ್ರಕ್ಕೆ ನವಾಜುದ್ದೀನ್ ಸಹಾಯಕ ನಿರ್ದೇಶಕರಾಗಿ ಕೂಡ ಕೆಲಸ ಮಾಡಿದ್ದರು ಎಂದು ಹೇಳಿದ್ದರು.


Click it and Unblock the Notifications











