ದರ್ಶನ್ ಪಾಲಿನ ಕರಾಳ ವರ್ಷ ಮುಗೀತು!; ಹೊಸ ವರ್ಷ ಎಷ್ಟು ಮಹತ್ವ
ನಟ ದರ್ಶನ್ಗೆ ಇದು ಮರೆಯಲಾರದ ವರ್ಷ. ಕಳೆದ ವರ್ಷದ ಕೊನೆಗೆ 'ಕಾಟೇರ' ರೀತಿಯ ಬ್ಲಾಕ್ಬಸ್ಟರ್ ಸಿನಿಮಾ ಕೊಟ್ಟಿದ್ದ ದರ್ಶನ್ ಈ ವರ್ಷ ಭಾರೀ ಪೆಟ್ಟು ತಿಂದರು. ದೈಹಿಕವಾಗಿ ಮಾನಸಿಕವಾಗಿ ಬಹಳ ನೋವು ಅನುಭವಿಸಿದ್ದಾರೆ. ಕೊ* ಪ್ರಕರಣದಲ್ಲಿ ಸೆರೆವಾಸ ಅನುಭವಿಸುವಂತಾಯಿತು. ಬರುವಂತಾಗಿದೆ. ಸದ್ಯ ಜಾಮೀನು ಪಡೆದು ನಿಟ್ಟುಸಿರು ಬಿಟ್ಟಿದ್ದಾರೆ.
ಈ ವರ್ಷ ದರ್ಶನ್ ಸುತ್ತಾ ಸುತ್ತಿಕೊಂಡು ವಿವಾದಗಳು ಒಂದೆರಡಲ್ಲ. ಬೇರೆ ಬೇರೆ ಪ್ರಕರಣದಲ್ಲಿ ನಾಲ್ಕೈದು ದೂರು ದಾಖಲಾಗಿದೆ. ಅದೆಲ್ಲದರ ನಡುವೆ ಬೆನ್ನು ನೋವಿನಿಂದ ಬಳಲುತ್ತಿದ್ದಾರೆ. ಮಾರ್ಚ್ ತಿಂಗಳಲ್ಲಿ 'ಡೆವಿಲ್' ಚಿತ್ರೀಕರಣ ಆರಂಭವಾಗಿತ್ತು. ಆಕ್ಷನ್ ಸನ್ನಿವೇಶ ಚಿತ್ರೀಕರಣದ ವೇಳೆ ಎಡಗೈಗೆ ಪೆಟ್ಟಾಗಿತ್ತು. ಅದರಿಂತ ಚೇತರಿಸಿಕೊಂಡು ಚಿತ್ರೀಕರಣ ಆರಂಭಿಸಬೇಕು ಎನ್ನುವಷ್ಟರಲ್ಲಿ ರೇಣುಕಾಸ್ವಾಮಿ ಪ್ರಕರಣ ಬೆಳಕಿಗೆ ಬಂದಿತ್ತು.

ಕೊ* ಆರೋಪಿಯಾಗಿ ನಟ ದರ್ಶನ್ 141 ದಿನಗಳ ಜೈಲಿನಲ್ಲಿ ಕಳೆಯುವಂತಾಯಿತು. ಕೊನೆಗೆ ಸರ್ಜರಿ ನೆಪವೊಡ್ಡಿ ಮಧ್ಯಂತರ ಜಾಮೀನು ಪಡೆದು ಬಳ್ಳಾರಿ ಜೈಲಿನಿಂದ ಬಿಡುಗಡೆ ಆಗಿದ್ದರು. ಬಳಿಕ ಇತ್ತೀಚೆಗೆ ರೆಗ್ಯುಲರ್ ಬೇಲ್ ಸಹ ಮಂಜೂರಾಗಿದ್ದಾರೆ. ಇನ್ನು ಒಂದೂವರೆ ತಿಂಗಳ ಕಾಲ ಬಿಜಿಎಸ್ ಆಸ್ಪತ್ರೆಯಲ್ಲಿ ದಾಖಲಾಗಿದ್ದ ದರ್ಶನ್ ನಂತರ ಡಿಸ್ಚಾರ್ಜ್ ಆಗಿದ್ದರು. ಸದ್ಯ ಮನೆಯಲ್ಲೇ ದರ್ಶನ್ ವಿಶ್ರಾಂತಿ ಪಡೆಯುತ್ತಿದ್ದಾರೆ. ನೆಚ್ಚಿನ ನಟ ಸಂಕಷ್ಟದಿಂದ ಪಾರಾದರು ಎಂದು ಅಭಿಮಾನಿಗಳು ಖುಷಿಯಾಗಿದ್ದಾರೆ.
ಅದ್ಯಾಕೋ 2024 ದರ್ಶನ್ ಬಾಳಿನ ಕರಾಳ ವರ್ಷವಾಗಿ ಬಿಟ್ಟಿದೆ. ಇದನ್ನೆಲ್ಲಾ ಮೀರಿ ಮುಂದಿನ ವರ್ಷ ದರ್ಶನ್ ಎದ್ದು ಬರಬೇಕಿದೆ. 2025ರಲ್ಲಿ ಹೇಗೆ ಕಂಬ್ಯಾಕ್ ಮಾಡುತ್ತಾರೆ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ. ಬೆನ್ನು ಹುರಿ ಸಮಸ್ಯೆ ಬಹಳವಾಗಿ ಕಾಡುತ್ತಿದೆ. ದರ್ಶನ್ ಕುಂಟುತ್ತಾ ಓಡಾಡುತ್ತಿದ್ದಾರೆ. ಚೇತರಿಸಿಕೊಳ್ಳಲು ಇನ್ನು ಒಂದೂವರೆ ತಿಂಗಳು ಬೇಕಾಗಬಹುದು ಎನ್ನಲಾಗ್ತಿದೆ.
ಸದ್ಯ ದರ್ಶನ್ ಮೈಸೂರಿನ ತಮ್ಮ ಫಾರ್ಮ್ಹೌಸ್ನಲ್ಲಿ ಬೀಡುಬಿಟ್ಟಿದ್ದಾರೆ. ಇತ್ತೀಚೆಗೆ ಮೈಸೂರಿನ ಕಾಮಾಕ್ಷಿ ಆಸ್ಪತ್ರೆಗೆ ಭೇಟಿ ನೀಡಿ ತಪಾಸಣೆ ಮಾಡಿಸಿಕೊಂಡಿದ್ದರು. ದರ್ಶನ್ ಬೆನ್ನು ಮೂಳೆ ಜರುಗಿದ್ದು ಸದ್ಯಕ್ಕೆ ಸರ್ಜರಿ ಮಾಡಲು ಸಾಧ್ಯವಿಲ್ಲ ಎಂದು ವೈದ್ಯರು ಹೇಳಿದ್ದಾರೆ ಎನ್ನಲಾಗ್ತಿದೆ. ಇದೀಗ ಫಿಸಿಯೋಥೆರಫಿ ನಡೀತಿದೆ. ಆದಷ್ಟು ಬೇಘ ಚೇತರಿಸಿಕೊಳ್ಳಲಿ ಎಂದು ಅಭಿಮಾನಿಗಳು ಪ್ರಾರ್ಥಿಸುತ್ತಿದ್ದಾರೆ.

ದರ್ಶನ್ ನಾಲ್ಕೈದು ಸಿನಿಮಾಗಳನ್ನು ಒಪ್ಪಿಕೊಂಡುಬಿಟ್ಟಿದ್ದಾರೆ. ಮಿಲನಾ ಪ್ರಕಾಶ್ ನಿರ್ಮಿಸಿ ನಿರ್ದೇಶನ ಮಾಡುತ್ತಿರುವ 'ಡೆವಿಲ್' ಸಿನಿಮಾ ಒಂದು ವಾರ ಚಿತ್ರೀಕರಣ ಮುಗಿಸಿದೆ. ಹಾಗಾಗಿ ಸದ್ಯಕ್ಕೆ ಅದೇ ಸಿನಿಮಾ ಚಿತ್ರೀಕರಣ ಮುಂದುವರೆಸಬೇಕಿದೆ. ಬಳಿಕ ಜೋಗಿ ಪ್ರೇಮ್ ನಿರ್ದೇಶನದ ಸಿನಿಮಾದಲ್ಲಿ ನಟಿಸಬೇಕಿದೆ. ಕೆವಿಎನ್ ಸಂಸ್ಥೆ ಈ ಚಿತ್ರಕ್ಕೆ ಹಣ ಹೂಡುತ್ತಿದೆ. ಆದರೆ ದರ್ಶನ್ ಸಂಪೂರ್ಣವಾಗಿ ಚೇತರಿಸಿಕೊಳ್ಳುವವರೆಗೆ ಶೂಟಿಂಗ್ ಸೆಟ್ಗೆ ಹೋಗುವುದು ಕಷ್ಟ ಎನ್ನುವಂತಾಗಿದೆ.
ಕಳೆದ 25 ವರ್ಷಗಳಲ್ಲಿ ದರ್ಶನ್ ಪ್ರತಿವರ್ಷ ಒಂದು, ಎರಡು ಸಿನಿಮಾಗಳಲ್ಲಿ ನಟಿಸುತ್ತಾ ಬಂದಿದ್ದಾರೆ. ನಾಲ್ಕೈದು ಸಿನಿಮಾಗಳ ಮೂಲಕ ಪ್ರೇಕ್ಷಕರ ಮುಂದೆ ಬಂದಿರುವುದು ಇದೆ. ಆದರೆ ಕೋವಿಡ್ ಹಿನ್ನೆಲೆ ಚಿತ್ರೀಕರಣ ತಡವಾಗಿದೆ 2022ರಲ್ಲಿ ಯಾವುದೇ ಸಿನಿಮಾ ತೆರೆಗೆ ಬಂದಿರಲಿಲ್ಲ. ಅದು ಬಿಟ್ಟರೆ ಈ ವರ್ಷ ದರ್ಶನ್ ದೊಡ್ಡ ಪರದೆಗೆ ಎಂಟ್ರಿ ಕೊಡಲು ಸಾಧ್ಯವಾಗಲಿಲ್ಲ.
ಕಳೆದ ವರ್ಷ ಹೀರೊ ಆಗಿ 2 ಚಿತ್ರಗಳಲ್ಲಿ ದರ್ಶನ್ ನಟಿಸಿದ್ದರು. 'ಕಾಟೇರ' ಸಿನಿಮಾ ವರ್ಷದ ಕೊನೆಗೆ ಬಂದಿತ್ತು. ಡಿಸೆಂಬರ್ 29ಕ್ಕೆ ಬಿಡುಗಡೆಯಾಗಿದ್ದ ಸಿನಿಮಾ ಈ ವರ್ಷದ ಆರಂಭದಲ್ಲಿ ಭಾರ ಸದ್ದು ಮಾಡಿತ್ತು. ಶತಾಯಗತಾಯ 'ಡೆವಿಲ್' ಚಿತ್ರವನ್ನು ಅಕ್ಟೋಬರ್ನಲ್ಲಿ ರಿಲೀಸ್ ಮಾಡುತ್ತೇವೆ ಎಂದಿದ್ದರು. ಆದರೆ ಕ್ರಿಸ್ಮಸ್ ಹಬ್ಬಕ್ಕೆ ಸಿನಿಮಾ ತೆರೆಗೆ ತರುವುದಾಗಿ ಚಿತ್ರತಂಡ ಬಳಿಕ ಘೋಷಿಸಿತ್ತು. ಆದರೆ ಸಾಧ್ಯವಾಗಲಿಲ್ಲ.
2025ರಲ್ಲಿ ದರ್ಶನ್ ಕಂಬ್ಯಾಕ್ ನೋಡಲು ಅಭಿಮಾನಿಗಳು ಉತ್ಸುಕರಾಗಿದ್ದಾರೆ. 'ಡೆವಿಲ್' ಸಿನಿಮಾ ಚಿತ್ರೀಕರಣ ಮುಗಿಸಿ ತೆರೆಗೆ ಬರುತ್ತಾ? ಕಾದು ನೋಡಬೇಕಿದೆ. ಒಟ್ಟಾರೆ ಹೊಸ ವರ್ಷ ದರ್ಶನ್ಗೆ ಬಹಳ ಮಹತ್ವ ಎನ್ನುವಂತಾಗಿದೆ. ಬಾಕ್ಸಾಫೀಸ್ ಸುಲ್ತಾನ್ ಎಂದು ಮರೆಯುತ್ತದ್ದ ದರ್ಶನ್ಗೆ ರೇಣುಕಾಸ್ವಾಮಿ ಪ್ರಕರಣ ಬಹಳ ಹಿನ್ನಡೆ ತಂದೊಡ್ಡಿದೆ. ಅದನ್ನು ಮೆಟ್ಟಿ ಹೇಗೆ ಎದ್ದು ಬರ್ತಾರೆ ಕಾದು ನೋಡಬೇಕಿದೆ.


Click it and Unblock the Notifications











