13 ದಿನ ನಟಿಸಿದ್ದೆ, ಬಳಿಕ ಬರಬೇಡಿ ಅಂದ್ಬಿಟ್ರು; ದರ್ಶನ್ ಜೊತೆ ನಟಿಸೋಕ್ಕಾಗ್ಲಿಲ್ಲ; ನಿಶಾ ಯೋಗೇಶ್ವರ್ ಭಾವುಕ
ಚನ್ನಪಟ್ಟಣದ ಶಾಸಕರಾದ ಸಿಪಿ ಯೋಗೇಶ್ವರ್ ವಿರುದ್ಧ ಪುತ್ರಿ ನಿಶಾ ಕೆಲ ವರ್ಷಗಳ ಹಿಂದೆ ಸಿಡಿದೆದ್ದಿದ್ದು ಗೊತ್ತೇಯಿದೆ. ತಂದೆಯ ಬಗ್ಗೆ ಆಕೆ ಹಲವು ಗಂಭೀರ ಆರೋಪಗಳನ್ನು ಮಾಡಿದ್ದರು. ನಾನು ರಾಜಕೀಯಕ್ಕೆ ಬರೋಕು ಬಿಡಲಿಲ್ಲ, ಸಮಾಜ ಸೇವೆ ಮಾಡಲು ಬಿಡಲಿಲ್ಲ. ಒಟ್ಟಾರೆ ಯಾವ ಕ್ಷೇತ್ರದಲ್ಲಿ ಬೆಳೆಯಲು ತಂದೆ ಬಿಡುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದರು. ದರ್ಶನ್ ನಟನೆಯ 'ಅಂಬರೀಶ' ಚಿತ್ರಕ್ಕೆ ನಿಶಾ ನಾಯಕಿಯಾಗಿ ಆಯ್ಕೆ ಆಗಿದ್ದರು. ಬಳಿಕ ದಿಢೀರನೆ ಹೊರ ಬಂದಿದ್ದರು.
ನಿಶಾ ಯೋಗೇಶ್ವರ್ ಸಿನಿಮಾ ನಟಿಯಾಗುವ ಕನಸು ಕಂಡಿದ್ದರು. ಮೊದಲ ಪ್ರಯತ್ನದಲ್ಲೇ ದರ್ಶನ್ ಜೊತೆ ನಾಯಕಿಯಾಗಿ ನಟಿಸುವ ಅವಕಾಶ ಸಿಕ್ಕಿತ್ತು. ಎರಡು ವಾರಗಳ ಕಾಲ ಚಿತ್ರೀಕರಣದಲ್ಲಿ ಕೂಡ ಭಾಗಿ ಆಗಿದ್ದರು. ಬಳಿಕ ದಿಢೀರನೆ ಅವರನ್ನು ಕೈಬಿಟ್ಟು ಆ ಪಾತ್ರಕ್ಕೆ ರಚಿತಾ ರಾಮ್ ಅವರನ್ನು ನಾಯಕಿಯಾಗಿ ಆಯ್ಕೆ ಮಾಡಿಕೊಂಡಿದ್ದರು. ಮಹೇಶ್ ಸುಖಧರೆ ನಿರ್ದೇಶನದ 'ಅಂಬರೀಶ' ಚಿತ್ರದಲ್ಲಿ ಪ್ರಿಯಾಮಣಿ ಕೂಡ ನಟಿಸಿದ್ದರು. 2014ರಲ್ಲಿ ನಿರ್ಮಾಣವಾಗಿದ್ದ ಚಿತ್ರವನ್ನು fವತಃ ಮಹೇಶ್ ಸುಖಧರೆ ನಿರ್ಮಿಸಿದ್ದರು.

ನಿಶಾ ಅವರಿಗೆ ನಟನೆ ಚೆನ್ನಾಗಿ ಬರುತ್ತಿರಲಿಲ್ಲ, ನಟನೆಯಲ್ಲಿ ಇನ್ನೂ ಪಕ್ವವಾಗಬೇಕು, ಈ ಪಾತ್ರಕ್ಕೆ ನ್ಯಾಯ ಒದಗಿಸಲು ಸಾಧ್ಯವಿಲ್ಲ ಎನ್ನುವ ಕಾರಣಕ್ಕೆ 'ಅಂಬರೀಶ' ಚಿತ್ರದಿಂದ ಕೈಬಿಟ್ಟರು ಎನ್ನುವ ಊಹಾಪೋಹ ಆ ಸಮಯದಲ್ಲಿ ಕೇಳಿಬಂದಿತ್ತು. ಚಿತ್ರೀಕರಣದ ವೇಳೆ ಕೊಡಗಿನಲ್ಲಿ ಗಾಯಗೊಂಡಿದ್ದರಿಂದ ವೈದ್ಯರು ವಿಶ್ರಾಂತಿಗೆ ಸೂಚಿಸಿದ್ದಾರೆ. ಹಾಗಾಗಿ ನಟಿಸುತ್ತಿಲ್ಲ ಎಂದು ನಿಶಾ ತಾಯಿ ತಿಳಿಸಿದ್ದರು.
12 ವರ್ಷಗಳ ಬಳಿಕ ಸ್ವತಃ ನಿಶಾ ಯೋಗೇಶ್ವರ್ ಈ ವಿಚಾರದ ಬಗ್ಗೆ ಮಾತನಾಡಿದ್ದಾರೆ. ಸುಮನ್ ಟಿವಿ ಕನ್ನಡ ಯೂಟ್ಯೂಬ್ ವಾಹಿನಿ ಸಂದರ್ಶನದಲ್ಲಿ ಆಕೆ ಮಾತನಾಡಿದ್ದಾರೆ. ಯಾಕೆ ಸಿನಿಮಾದಿಂದ ಕೈಬಿಟ್ಟರು ಎನ್ನುವುದು ಗೊತ್ತಿಲ್ಲ. ಆಗ ನಟಿಸುವ ಆಸೆಯಿತ್ತು. ಈಗ ಅದೆಲ್ಲಾ ಮುಗಿದ ಅಧ್ಯಾಯ. ಸಿನಿಮಾ ನಟಿಯಾಗುವ ಕನಸು ಇಲ್ಲ ಎಂದು ತಿಳಿಸಿದ್ದಾರೆ.
ನೀವೇ 'ಅಂಬರೀಶ' ಚಿತ್ರ ರಿಜೆಕ್ಟ್ ಮಾಡಿದ್ರಾ, ಅವ್ರು ಚಿತ್ರದಿಂದ ಕೈಬಿಟ್ರಾ ಎನ್ನುವ ಪ್ರಶ್ನೆಗೆ "13 ದಿನ ಚಿತ್ರೀಕರಣದಲ್ಲಿ ನಾನು ನಟಿಸಿದ್ದೆ. ಬಳಿಕ ಮುಂದಿನ ಶೆಡ್ಯೂಲ್ನಿಂದ ಬರಬೇಡಿ ಅಂದ್ರು. ಬಹಳ ಮುಜುಗರವಾಗಿತ್ತು. ಹಾಗಾಗಿ ಕಾಲಿಗೆ ಏಟಾಗಿದೆ ಎಂದು ಅಮ್ಮನ ಮೂಲಕ ಹೇಳಿಕೆ ಕೊಡಿಸಿದ್ದೆ. ಏನ್ ಆಯ್ತು ಎನ್ನುವುದು ಆಗ ಹೇಳಿರಲಿಲ್ಲ. ಕೆಲ ದಿನಗಳ ಬಳಿಕ ಎಲ್ಲರಿಗೂ ಗೊತ್ತಾಯ್ತು. ಅದು ಬಹಳ ಡಿಫಿಕಲ್ಟ್ ಫೇಸ್.. ನಾನು ಚಿಕ್ಕವಳು.. ಬಹಳ ನೋವಾಗಿತ್ತು. ನನ್ನ ಹುಟ್ಟುಹಬ್ಬ ಅದೇ ಸಮಯದಲ್ಲಿ ಬಂದಿತ್ತು. ಅದನ್ನು ನೆನೆಸಿಕೊಂಡ್ರೆ, ಈಗಲೂ ನೋವಾಗುತ್ತೆ" ಎಂದು ನಿಶಾ ಯೋಗೇಶ್ವರ್ ಹೇಳಿದ್ದಾರೆ.
ಆ ಚಿತ್ರಕ್ಕೆ ಆಯ್ಕೆ ಆಗುತ್ತಿದ್ದಂತೆ ಬಹಳ ಜನಪ್ರಿಯತೆ ಸಿಕ್ಕಿತ್ತು. ನಾನು ಮುಂದೆ ಸಾಕಷ್ಟು ಸಿನಿಮಾಗಳಲ್ಲಿ ನಟಿಸ್ತೀನಿ. ಸ್ವತಂತ್ರವಾಗಿ ಬದುಕುತ್ತೇನೆ ಎನಿಸಿತ್ತು. ಯಾರ ಬಳಿ ಕೈ ಚಾಚಬಾರದು. ಅದು ಬಹಳ ನೋವು ಕೊಡುವ ಸಂಗತಿ. ನಾನು ಬೆಳೆಯಬಾರದು, ದರ್ಶನ್ ಜೊತೆ ನಟಿಸಬಾರದು ಎಂದು ತಂದೆ ಯೋಗೇಶ್ವರ್ ಅವರಿಗೆ ಇತ್ತೋ ಏನೋ ಅವ್ರನ್ನೇ ಕೇಳಬೇಕು ಎಂದು ನಿಶಾ ಯೋಗೇಶ್ವರ್ ಹೇಳಿದ್ದಾರೆ.
ಸದ್ಯ ಸಿಪಿ ಯೋಗೇಶ್ವರ್ ಪುತ್ರ ಧ್ಯಾನ್ ಚಿತ್ರರಂಗ ಪ್ರವೇಶಿಸಿದ್ದಾರೆ. 'ಕರ್ನಾಟ ಬಲಂ' ಹಾಗೂ 'ಸೈನಿಕ- 2' ಸಿನಿಮಾಗಳಲ್ಲಿ ಅವರು ನಟಿಸುತ್ತಿದ್ದಾರೆ. ಇತ್ತೀಚೆಗೆ ಸಿನಿಮಾ ಮುಹೂರ್ತ ಸಮಾರಂಭ ನಡೀತು. ಸಿಎಂ ಡಿಕೆ ಶಿವಕುಮಾರ್ ಕ್ಲಾಪ್ ಮಾಡಿ ಚಿತ್ರಕ್ಕೆ ಶುಭ ಕೋರಿದ್ದರು. ಎರಡೂ ಚಿತ್ರಗಳ ಸಣ್ಣ ಟೀಸರ್ ಝಲಕ್ ಕೂಡ ರಿಲೀಸ್ ಆಗಿದೆ.


Click it and Unblock the Notifications