ಅಣ್ಣಾವ್ರು ಮಾಡಬೇಕಿದ್ದ ಸಿನ್ಮಾದಲ್ಲಿ ನಟಿಸಿ ಗೆದ್ದ ಅಂಬಿ; ಸಾಂಗ್ ರೆಕಾರ್ಡಿಂಗ್ ಬಳಿಕ ಏನಾಯ್ತು?
ಚಿತ್ರರಂಗದಲ್ಲಿ ಒಬ್ಬರ ಅವಕಾಶ ಮತ್ತೊಬ್ಬರ ಪಾಲಾಗವುದು ಸಹಜವಾಗಿ ನಡೆಯುತ್ತಿರುತ್ತದೆ. ಕಾರಣಾಂತರಗಳಿಂದ ಒಬ್ಬರು ಬಿಟ್ಟ ಕಥೆಯಲ್ಲಿ ಮತ್ತೊಬ್ಬರು ನಟಿಸಿ ಗೆದ್ದಿರುವ ಸಾಕಷ್ಟು ಉದಾಹರಣೆಗಳಿವೆ. ಬೇರೆಯವರು ನಟಿಸಬೇಕಿದ್ದ ಕಥೆಯಲ್ಲಿ ಡಾ. ರಾಜ್ಕುಮಾರ್ ನಟಿಸಿದ್ದು ಅದೇ ರೀತಿ ಅಣ್ಣಾವ್ರು ಮಾಡಬೇಕಿದ್ದ ಪಾತ್ರವನ್ನು ಮತ್ತೊಬ್ಬರು ಮಾಡಿ ಸೈ ಎನಿಸಿಕೊಂಡ ಅಪರೂಪದ ಉದಾಹರಣೆಗಳಿವೆ.
200ಕ್ಕೂ ಅಧಿಕ ಸಿನಿಮಾಗಳಲ್ಲಿ ಡಾ. ರಾಜ್ಕುಮಾರ್ ನಟಿಸಿ ಪ್ರೇಕ್ಷಕರನ್ನು ರಂಜಿಸಿದರು. ಅದು ಯಾವುದೇ ಜಾನರ್ ಆಗಿದ್ದರೂ ಅಣ್ಣಾವ್ರ ಅಭಿನಯ ಎಂಥಹವರನ್ನು ಮೋಡಿ ಮಾಡುತ್ತಿತ್ತು. ಬರೀ ನನ್ನಿಂದ ಸಿನಿಮಾ ಗೆಲ್ಲುತ್ತದೆ ಎನ್ನುವ ಅಹಂ ಮುತ್ತುರಾಜನಿಗೆ ಇರಲಿಲ್ಲ. ಇನ್ನು ಅಣ್ಣಾವ್ರ ಸಿನಿಮಾಗಳ ಯಶಸ್ಸಿನ ಹಿಂದೆ ಒಂದು ತಂಡ ಕೆಲಸ ಮಾಡುತಿತ್ತು. ಆ ತಂಡದಲ್ಲಿ ವರದಪ್ಪ, ಚಿ. ಉದಯ್ ಶಂಕರ್ ಬಳಿಕ ಪಾರ್ವತಮ್ಮ ಇರುತ್ತಿದ್ದರು.

ಡಾ. ರಾಜ್ಕುಮಾರ್, ವರದಪ್ಪ, ಚಿ. ಉದಯ್ ಶಂಕರ್ ಸದಾ ಕಥೆಗಳ ಚರ್ಚೆಗೆ ಕೂರುತ್ತಿದ್ದರು. ನಂತರ ಪಾರ್ವತಮ್ಮ ಕೂಡ ಕಥೆಯ ವಿಚಾರದಲ್ಲಿ ಗಮನ ಹರಿಸುತ್ತಿದ್ದರು. ಅಣ್ಣಾವ್ರು ನಟಿಸಬೇಕಿದ್ದ ಕೆಲ ಸಿನಿಮಾಗಳು ಕಾರಣಾಂತರಳಿಂದ ನಿಂತು ಹೋಗಿದ್ದವು. ಅದೇ ರೀತಿ ವರದಪ್ಪ, ಉದಯ್ ಶಂಕರ್ ಬೇಡ ಎಂದ ಸಿನಿಮಾಗಳಲ್ಲಿ ಕೂಡ ಅಣ್ಣಾವ್ರು ನಟಿಸುತ್ತಿರಲಿಲ್ಲ.
ಅದಾಗಲೇ ಸಾಂಗ್ ರೆಕಾರ್ಡಿಂಗ್ ಮುಗಿದು ಇನ್ನೇನು ಚಿತ್ರೀಕರಣ ಶುರು ಮಾಡಬೇಕು ಎಂದುಕೊಂಡಿದ್ದ ಚಿತ್ರವೊಂದು ನಿಂತು ಹೋಗಿತ್ತು. ಬೇಡ, ಆ ಕಥೆ ನಿನಗೆ ಸೂಟ್ ಆಗಲ್ಲ ಎಂದು ಸಹೋದರ ವರದಪ್ಪ ಹೇಳಿದ್ದಕ್ಕೆ ಡಾ. ರಾಜ್ ಆ ಚಿತ್ರದಲ್ಲಿ ನಟಿಸಿರಲಿಲ್ಲ. ಬಳಿಕ ಕಥೆ ಕಥೆಯಲ್ಲಿ ರೆಬಲ್ ಸ್ಟಾರ್ ಅಂಬರೀಶ್ ನಟಿಸಿ ಗೆದ್ದಿದ್ದರು. ಆ ಸಿನಿಮಾ ಮತ್ಯಾವುದೂ ಅಲ್ಲ 'ಹೃದಯ ಹಾಡಿತು'.
ಎಂ. ಎಸ್ ರಾಜಶೇಖರ್ ನಿರ್ದೇಶನದ 'ಹೃದಯ ಹಾಡಿತು' ಚಿತ್ರದಲ್ಲಿ ಡಾ. ರಾಜ್ಕುಮಾರ್ ನಟಿಸಬೇಕಿತ್ತು. ವಂಶಿ ಬರೆದ 'ಹಿಮದ ಹೂವು' ಕಾದಂಬರಿ ಆಧರಿಸಿ ಕಥೆ ಸಿದ್ಧವಾಗಿತ್ತು. ಜೆಮಿನಿ ಸ್ಟುಡಿಯೋದಲ್ಲಿ ಒಂದು ಸಾಂಗ್ ರೆಕಾರ್ಡಿಂಗ್ ಸಹ ಆಗಿತ್ತು. ಪೂಜೆ ಮಾಡಿದ್ದರು. ಬಳಿಕ ಸಿನಿಮಾ ನಿಂತು ಹೋಯಿತು ಎಂದು ಅಣ್ಣಾವ್ರ ಆಪ್ತ ಬಳಗದಲ್ಲಿ ಗುರ್ತಿಸಿಕೊಂಡಿದ್ದ ಆದಿತ್ಯಾ ಚಿಕ್ಕಣ್ಣ ಟೋಟಲ್ ಕನ್ನಡ ಮೀಡಿಯಾ ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ವಿವರಿಸಿದ್ದರು.

ವರದಪ್ಪ ಬಂದು ಕಥೆ ಕೇಳಿ ಇದು ಮಹಿಳಾ ಪ್ರಧಾನ ಸಿನಿಮಾ. ಇಬ್ಬರು ನಾಯಕಿಯರು. ಒಬ್ಬರಿಗೆ ಮೋಸ ಮಾಡಿ ಮತ್ತೊಬ್ಬರಿಗೆ ನ್ಯಾಯ ಮಾಡಿದಂತಾಗುತ್ತದೆ ಬೇಡ ಎಂದುಬಿಟ್ಟರು. ಹಾಗಾಗಿ ಸಿನಿಮಾ ನಿಂತು ಹೋಯಿತು. ಬಳಿಕ ಅಂಬರೀಶ್ ಡೇಟ್ಸ್ ಪಡೆದು ಪಾರ್ವತಮ್ಮ ಸಹೋದರ ಎಸ್. ಎ ಶ್ರೀನಿವಾಸ್ ಚಿತ್ರ ನಿರ್ಮಿಸಿದರು. 'ಹೃದಯ ಹಾಡಿತು' ಸಿನಿಮಾ ಸೂಪರ್ ಹಿಟ್ ಆಯಿತು ಎಂದು ಹೇಳಿದ್ದಾರೆ.
'ಹೃದಯ ಹಾಡಿತು' ಚಿತ್ರದಲ್ಲಿ ಡಾ. ಪ್ರಸಾದ್ ಆಗಿ ಅಂಬಿ, ಡಾ. ಅಭಿಲಾಷ ಆಗಿ ಭವ್ಯ ನಟಿಸಿದ್ದರು. ಆಶಾ ಎನ್ನುವ ಮತ್ತೊಂದು ಪಾತ್ರದಲ್ಲಿ ಮಾಲಾಶ್ರೀ ಮಿಂಚಿದ್ದರು. ಗೌರಿ ಶಂಕರ್ ಛಾಯಾಗ್ರಹಣ, ಉಪೇಂದ್ರ ಕುಮಾರ್ ಸಂಗೀತ ಚಿತ್ರಕ್ಕಿತ್ತು. ಚಿ. ಉದಯ್ ಶಂಕರ್ ಚಿತ್ರಕಥೆ ಹಾಗೂ ಸಾಹಿತ್ಯ ಬರೆದಿದ್ದರು.
ಚಿತ್ರದ 'ನಲಿಯುತಾ' ಹಾಡನ್ನು ಖುದ್ದು ಡಾ. ರಾಜ್ಕುಮಾರ್ ಹಾಡಿದ್ದರು. 1991ರಲ್ಲಿ ಸಿನಿಮಾ ತೆರಕಂಡು ಯಶಸ್ಸು ಗಳಿಸಿತ್ತು. ಅಣ್ಣಾವ್ರಿಗೆ ಬೇಡ ಎಂದಮೇಲೆ ಈ ಕಥೆ ಶಿವರಾಜ್ಕುಮಾರ್ಗೆ ಸೂಕ್ತ ಎಂದು ಪಾರ್ವತಮ್ಮ ಅಂದುಕೊಂಡಿದ್ದರಂತೆ ಎನ್ನುವ ವಾದವೂ ಇದೆ. ಆದರೆ ಅದು ರೆಬಲ್ ಸ್ಟಾರ್ ಅಂಬರೀಶ್ ಪಾಲಾಗಿತ್ತು.


Click it and Unblock the Notifications











