ಡಾ. ರಾಜ್ ಬೇಡ ಎಂದು ಬಿಟ್ಟ ರೀಮೆಕ್ ಚಿತ್ರವನ್ನು ಪ್ರಭಾಕರ್ ಮಾಡಿ ಗೆದ್ದಿದ್ದು ಹೇಗೆ?
ಈಗ ಪ್ಯಾನ್ ಇಂಡಿಯಾ ಟ್ರೆಂಡ್ ನಡೆಯುತ್ತಿದೆ. ಹಿಂದೆ ರೀಮೆಕ್ ಸಂಸ್ಕೃತಿ ಇತ್ತು. ಒಂದು ಭಾಷೆಯಲ್ಲಿ ಹಿಟ್ ಆದ ಕಥೆಯನ್ನು ಮತ್ತೊಂದು ಭಾಷೆಯಲ್ಲಿ ರೀಮೆಕ್ ಮಾಡಲಾಗುತ್ತಿದೆ. ಕೆಲವೊಮ್ಮೆ ನೇಟಿವಿಟಿಗೆ ತಕ್ಕಂತೆ ಕಥೆಯನ್ನು ಬದಲಿಸಿಕೊಳ್ಳಲಾಗುತ್ತಿದೆ. 50, 60, 70ರ ದಶಕದಲ್ಲಿ ಒಟ್ಟೊಟ್ಟಿಗೆ ಮೂರ್ನಾಲ್ಕು ಭಾಷೆಗಳಲ್ಲಿ ಕಥೆಯನ್ನು ಬೇರೆ ಬೇರೆ ನಟ-ನಟಿಯರನ್ನು ಬಳಸಿಕೊಂಡು ಚಿತ್ರೀಕರಣ ಮಾಡಲಾಗುತ್ತಿತ್ತು.
ಡಾ. ರಾಜ್ಕುಮಾರ್ ಕೂಡ ಕೆಲ ರೀಮೆಕ್ ಸಿನಿಮಾಗಳಲ್ಲಿ ನಟಿಸಿರುವುದು ಇದೆ. ಆದರೆ ಬಹುತೇಕ ಸ್ವಮೇಕ್ ಸಿನಿಮಾಗಳಲ್ಲೆ ಅಣ್ಣಾವ್ರು ಪ್ರೇಕ್ಷಕರನ್ನು ರಂಜಿಸಿದ್ದಾರೆ. ಕೆಲವೊಮ್ಮೆ ಡಾ. ರಾಜ್ ಮಾಡಬೇಕಿದ್ದ ಕಥೆಗಳು ಬೇರೆಯವರ ಪಾಲಾಗಿದ್ದು ಇದೆ. ಅಂಬರೀಶ್ ನಟಿಸಿದ 'ಹೃದಯ ಹಾಡಿತು' ಚಿತ್ರದಲ್ಲಿ ಅಣ್ಣಾವ್ರು ನಟಿಸಬೇಕಿತ್ತು. ಒಂದು ಸಾಂಗ್ ರೆಕಾರ್ಡಿಂಗ್ ಬಳಿಕ ಆ ಕಥೆ ಅವರಿಗೆ ಸೂಟ್ ಆಗಲ್ಲ ಎಂದು ಕೈಬಿಡಲಾಗಿತ್ತು.

ನಟ ಪ್ರಭಾಕರ್ ಸಣ್ಣ ಪುಟ್ಟ ಪಾತ್ರಗಳ ಮೂಲಕ ಚಿತ್ರರಂಗಕ್ಕೆ ಬಂದರು. ಮುಂದೆ ಟೈಗರ್ ಪ್ರಭಾಕರ್ ಆಗಿ ಹೀರೊ ಆಗಿಯೂ ಸಕ್ಸಸ್ ಕಂಡರು. ಕನ್ನಡ ಮಾತ್ರವಲ್ಲದೇ ತೆಲುಗು, ತಮಿಳು ಸಿನಿಮಾಗಳಲ್ಲಿ ಕೂಡ ನಟಿಸಿ ಕಮಾಲ್ ಮಾಡಿದ್ದರು. ಎನ್ಟಿಆರ್, ರಜನಿಕಾಂತ್, ಚಿರಂಜೀವಿ ರೀತಿಯ ಸ್ಟಾರ್ ನಟರ ಜೊತೆ ತೆರೆ ಹಂಚಿಕೊಂಡು ಗೆದ್ದವರು. ಹೀರೊ ಆಗಿ ಸಕ್ಸಸ್ ಕಂಡ ಬಳಿಕ ಕೂಡ ಮತ್ತೆ ವಿಲನ್ ಆಗಿ ನಟಿಸಿದ್ದರು.
ಆರಂಭದಲ್ಲಿ ವಿಲನ್ ಆಗಿ ಬರೀ ಹೀರೊಗಳ ಕೈಯಲ್ಲಿ ಒದೆ ತಿನ್ನುವ ಪಾತ್ರಗಳಲ್ಲೇ ಪ್ರಭಾಕರ್ ಹೆಚ್ಚು ನಟಿಸಿದ್ದರು. ಖುದ್ದು ಅವರ ತಾಯಿ ನೀನು ಇಷ್ಟೆಲ್ಲಾ ಕಸರತ್ತು ಮಾಡಿ ದೇಹ ದಂಡಿಸಿ, ಹೀರೊಗಳ ಕೈಯಲ್ಲಿ ಒದೆ ತಿನ್ನುವ ಪಾತ್ರ ಯಾಕೆ ಮಾಡ್ತೀಯಾ? ಎಂದು ಕೇಳಿದ್ದು ಇದೆಯಂತೆ. 'ಚೆಲ್ಲಿದ ರಕ್ತ' ಚಿತ್ರದಲ್ಲಿ ಒಂದೊಳ್ಳೆ ಪಾತ್ರ ಪ್ರಭಾಕರ್ಗೆ ಸಿಕ್ಕಿತ್ತು. ಬಳಿಕ ಕೂಡ ಸಣ್ಣ ಪುಟ್ಟ ಪಾತ್ರಗಳಲ್ಲಿ ನಟಿಸುವಂತಾಗಿತ್ತು.

ಟೈಗರ್ ಪ್ರಭಾಕರ್ಗೆ ಹೀರೊ ಆಗಿ ದೊಡ್ಡ ಬ್ರೇಕ್ ಕೊಟ್ಟ ಚಿತ್ರ 'ಮುತ್ತೈದೆ ಭಾಗ್ಯ'. ನಿಜ ಹೇಳಬೇಕು ಅಂದ್ರೆ ಈ ಚಿತ್ರದಲ್ಲಿ ಡಾ. ರಾಜ್ಕುಮಾರ್ ನಟಿಸಬೇಕಿತ್ತು. ಈ ವಿಚಾರವನ್ನು ಹಿರಿಯ ಪತ್ರಕರ್ತ ಹಾಗೂ ಪ್ರಭಾಕರ್ಗೆ ಬಹಳ ಆಪ್ತರು ಆಗಿದ್ದ ಎನ್. ಎಸ್ ಶ್ರೀಧರ ಮೂರ್ತಿ ಹೇಳಿದ್ದಾರೆ. ಟೋಟಲ್ ಕನ್ನಡ ಮೀಡಿಯಾ ಯೂಟ್ಯೂಬ್ ಚಾನಲ್ನಲ್ಲಿ ಈ ಬಗ್ಗೆ ವಿವರಿಸಿದ್ದಾರೆ.
ಖ್ಯಾತ ನಿರ್ದೇಶಕ ಕೆ. ಎಸ್. ಎಲ್ ಸ್ವಾಮಿ ತಮಿಳಿನಲ್ಲಿ ಶಿವಾಜಿ ಗಣೇಶನ್ ನಟಿಸಿದ್ದ ಚಿತ್ರವೊಂದರ ರೀಮೆಕ್ ರೈಟ್ಸ್ ತಂದಿದ್ದರಂತೆ. ಅದು ಅಣ್ಣಾವ್ರಿಗೆ ಸೂಕ್ತವಾಗಿರುತ್ತದೆ ಎಂದು ಕಥೆ ಹೇಳಿದ್ದರಂತೆ. ಆದರೆ ಕೊಂಚ ನೆಗೆಟಿವ್ ಶೇಡ್ ಇದೆ ಎನ್ನುವ ಕಾರಣಕ್ಕೆ ಡಾ. ರಾಜ್ ಚಿತ್ರದಲ್ಲಿ ನಟಿಸೋಕೆ ಒಲ್ಲೆ ಎಂದಿದ್ದರು. ಅಣ್ಣಾವ್ರ ನಟಿಸಲ್ಲ ಎಂದು ಬಿಟ್ಟ ಪಾತ್ರ ಬೇರೆ ಯಾರು ಒಪ್ಪುತ್ತಾರೆ ಎಂದು ಸುಮ್ಮನಾಗಿಬಿಟ್ಟಿದ್ದರು.
ಒಮ್ಮೆ ಕೆ. ಎಸ್. ಎಲ್ ಸ್ವಾಮಿ ಪತ್ನಿ ಬಿ. ವಿ ರಾಧ ಜೊತೆ ಚರ್ಚಿಸುವಾಗ ಅವರು ಪ್ರಭಾಕರ್ ಜೊತೆ ಯಾಕೆ ಮಾಡಬಾರದು ಎಂದು ಸಲಹೆ ಕೊಟ್ಟಿದ್ದರು. ಸಿನಿಮಾ ನೋಡಿದ್ದ ಪ್ರಭಾಕರ್ ಇದು ನಾನು ಮಾಡುವ ಪಾತ್ರ ಅಲ್ಲ. ನಾನು ವಿಲನ್ ಪಾತ್ರ ಮಾಡುವವನು. ಇದು ಬಹಳ ಘನತೆ ಇರುವ ತ್ಯಾಗಮಯಿ ಪಾತ್ರ ಆಗಲ್ಲ ಎಂದರಂತೆ. ಆದರೆ ನಿರ್ದೇಶಕರು ಒಪ್ಪಿಸಿದ್ದರು. ಆರತಿ ಜೋಡಿಯಾಗಿದ್ದರು.
ಪ್ರಭಾಕರ್ ಹೀರೊ ಎಂದು ಕೇಳಿ ಗಾಂಧಿನಗರದ ಮಂದಿ ಶಾಕ್ ಆಗಿದ್ದರಂತೆ. ಆದರೆ ಶಿಸ್ತಿನ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಪ್ರಭಾಕರ್ ನಟಿಸಿ ಗೆದ್ದಿದ್ದರು. ಅವರಿಗೆ ದೊಡ್ಡಮಟ್ಟದಲ್ಲಿ ಮಹಿಳಾ ಅಭಿಮಾನಿಗಳು ಈ ಚಿತ್ರದಿಂದ ಸಿಕ್ಕರು. 'ಮುತ್ತೈದೆ ಭಾಗ್ಯ' ಸಿನಿಮಾ 25 ವಾರ ಪ್ರದರ್ಶನ ಕಂಡಿತ್ತು. ಕೆ. ಎಸ್. ಎಲ್ ಸ್ವಾಮಿ ಪತ್ನಿ ಬಿ. ವಿ ರಾಧ ಸಿನಿಮಾ ನಿರ್ಮಿಸಿದ್ದರು. ಕೆ. ಎನ್ ಚಂದ್ರಶೇಖರ್ ಶರ್ಮಾ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದರು.
ಚಿ. ಉದಯಶಂಕರ್ 'ಮುತ್ತೈದೆ ಭಾಗ್ಯ' ಚಿತ್ರಕ್ಕೆ ಸಂಭಾಷಣೆ ಬರೆದಿದ್ದರು. ವಿಜಯಭಾಸ್ಕರ್ ಸಂಗೀತವಿತ್ತು. ಸುಂದರ್ ರಾಜ್, ವಜ್ರಮುನಿ, ಸುಧೀರ್, ಜಯಮಾಲ ತಾರಾಗಣದಲ್ಲಿದ್ದರು. ಸಾಹಸಸಿಂಹ ವಿಷ್ಣುವರ್ಧನ್ ಅತಿಥಿ ಪಾತ್ರದಲ್ಲಿ ನಟಿಸಿದ್ದರು. ಸಿನಿಮಾ ಸಿಲ್ವರ್ ಜುಬಿಲಿ ಆಚರಿಸಿಕೊಂಡರೂ ಮತ್ತೆ ಹೀರೊ ಆಗಿ ಪ್ರಭಾಕರ್ ಅವರಿಗೆ ಅವಕಾಶ ಸಿಕ್ಕಿರಲಿಲ್ಲ ಎನ್ನುವುದು ವಿಪರ್ಯಾಸ.


Click it and Unblock the Notifications











