ರಸ್ತೆ ಅಪಘಾತ.. ಹಠಾತ್ ಮರಣ: ನಂದಮೂರಿ ಫ್ಯಾಮಿಲಿಯಲ್ಲಿ ದುರಂತಗಳ ಸರಮಾಲೆ, ಶೋಕ ನಿರಂತರ
ತೆಲುಗು ನಟ ಹಾಗೂ ರಾಜಕೀಯ ಮುಖಂಡ ನಂದಮೂರಿ ತಾರಕರತ್ನ ನಿನ್ನೆ(ಫೆ.18) ರಾತ್ರಿ ನಿಧನರಾಗಿದ್ದಾರೆ. ಕಳೆದ ಕೆಲ ದಿನಗಳಿಂದ ಬೆಂಗಳೂರಿನ ನಾರಾಯಣ ಹೃದಯಾಲದಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ತಾರಕರತ್ನ ಕೊನೆಯುಸಿರೆಳೆದಿದ್ದಾರೆ. ಈ ಮೂಲಕ ನಂದಮೂರಿ ಫ್ಯಾಮಿಲಿಯಲ್ಲಿ ದುರಂತದ ಸರಮಾಲೆ ಮುಂದುವರೆದಿದೆ.
ಅದೇನೋ ಗೊತ್ತಿಲ್ಲ. ಎನ್ಟಿಆರ್ ಕುಟುಂಬಕ್ಕೆ ಹಠಾತ್ ಮರಣ ಶಾಪವಾಗಿ ಪರಿಣಮಿಸಿದಂತೆ ಕಾಣುತ್ತಿದೆ. ಕೆಲವರು ರಸ್ತೆ ಅಪಘಾತದಲ್ಲಿ ಕೊನೆಯುಸಿರೆಳೆದರೆ ಮತ್ತೆ ಕೆಲವರು ಹೃದಯಾಘಾತದಿಂದ ನಿಧನರಾಗಿದ್ದಾರೆ. ಒಂದ್ಕಡೆ ಚಿತ್ರರಂಗದಲ್ಲಿ ಮತ್ತೊಂದು ಕಡೆ ರಾಜಕೀಯರಂಗದಲ್ಲಿ ಬೆಳೆಯುತ್ತಿದ್ದ ಸಮಯದಲ್ಲೇ 39 ವರ್ಷಕ್ಕೆ ತಾರಕರತ್ನ ಇಹಲೋಕ ತ್ಯಜಿಸಿದ್ದಾರೆ. 20 ದಿನಗಳ ಹಿಂದೆ ಕುಪ್ಪಂನಲ್ಲಿ ನಡೆದ ಪಾದಯಾತ್ರೆ ವೇಳೆ ಕುಸಿದು ಬಿದ್ದಿದ್ದ ತಾರಕ ರತ್ನ ಅವರಿಗೆ ಕುಪ್ಪಂನಲ್ಲೇ ಚಿಕಿತ್ಸೆ ನೀಡಲಾಗಿತ್ತು.
ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಬೆಂಗಳೂರಿಗೆ ಕರೆತರಲಾಗಿತ್ತು. ಇದೀಗ ಚಿಕಿತ್ಸೆ ಫಲಕಾರಿಯಾಗದೇ ನಂದಮೂರಿ ಕುಟುಂಬದ ಕುಡಿ ಕೊನೆಯುಸಿರೆಳೆದಿದ್ದಾರೆ. ತ್ರಿವಿಕ್ರಮ ರಾವ್ ಇಂದ ತಾರಕರತ್ನವರೆಗೆ ಹೀಗೆ ನಂದಮೂರಿ ಕುಟುಂಬದಲ್ಲಿ ಹಲವರು ಹಠಾತ್ ಮರಣವನ್ನಪ್ಪಿದ್ದಾರೆ.

ತ್ರಿವಿಕ್ರಮ ರಾವ್ ಮತ್ತು ಪುತ್ರ ನಿಧನ
ನಟಸಾರ್ವಭೌಮ, ಆಂಧ್ರದ ಮಾಜಿ ಸಿಎಂ ದಿವಂಗತ ನಟ ಎನ್ಟಿಆರ್ ಸಹೋದರ ತ್ರಿವಿಕ್ರಮ ರಾಮ್(66) ಹೃದಯಾಘಾತದಿಂದ ಕೊನೆಯುರೆಳೆದಿದ್ದರು. ತ್ರಿವಿಕ್ರಮ ರಾವ್ ಒಂದಷ್ಟು ಸಿನಿಮಾಗಳನ್ನು ನಿರ್ಮಾಣ ಮಾಡಿದ್ದರು. ಇನ್ನು ತ್ರಿವಿಕ್ರಮ ರಾವ್ ಕಿರಿಯ ಪುತ್ರ ಹರೀನ್ ಚಕ್ರವರ್ತಿ ರಸ್ತೆ ಅಪಘಾತದಲ್ಲಿ ನಿಧನರಾಗಿದ್ದರು. ಬಾಲನಟನಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದ ಹರೀನ್, 1986ರಲ್ಲಿ ಹೀರೊ ಆಗಿ ಪಾದಾರ್ಪಣೆ ಮಾಡಿದ್ದರು. ಇನ್ನು ಹರೀನ್ ರೆಡ್ಡಿ ಸಹೋದರನ ಮಗ ಪೃಥ್ವಿ ಕೂಡ ರಸ್ತೆ ಅಪಘಾತದಲ್ಲಿ ಕೊನೆಯುಸಿರೆಳೆದಿದ್ದು ವಿಪರ್ಯಾಸ.

ಅಪಘಾತದಲ್ಲಿ ಹರಿಕೃಷ್ಣ ಕಣ್ಮರೆ
ಎನ್ಟಿಆರ್ ತಂದೆ ಲಕ್ಷ್ಮಯ್ಯ ಕೂಡ ರಸ್ತೆ ಅಪಘಾತದಲ್ಲಿ ಹಠಾತ್ ಮರಣವನ್ನಪ್ಪಿದ್ದರು. ಇನ್ನು ಎನ್ಟಿಆರ್ ಹಿರಿಯ ಪುತ್ರ ಹರಿಕೃಷ್ಣ 2018ರಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ನಿಧನರಾಗಿದ್ದರು. ತಂದೆ ಎನ್ಟಿಆರ್ ಜೊತೆಗೆ ಚಿತ್ರರಂಗದಲ್ಲಿ ಗುರ್ತಿಸಿಕೊಂಡಿದ್ದ ಹರಿಕೃಷ್ಣ ಕೂಡ ಒಂದಷ್ಟು ಸಿನಿಮಾಗಳಲ್ಲಿ ಹೀರೋ ಆಗಿ ನಟಿಸಿದ್ದರು. ತೆಲಂಗಾಣದ ನಲ್ಗೊಂಡ ಜಿಲ್ಲೆಯ ಅನ್ನೆಪರ್ತಿ ಬಳಿ ಭೀಕರ ಅಪಘಾತ ಸಂಭವಿಸಿ ನಂದಮೂರಿ ಹರಿಕೃಷ್ಣ ವಿಧಿವಶರಾಗಿದ್ದರು.

ಅಪಘಾತದಲ್ಲಿ ಜಾನಕಿ ರಾಮ್ ನಿಧನ
ಹರಿಕೃಷ್ಣಗೂ ಮುನ್ನ ಅವರ ಪುತ್ರ ಜಾನಕಿ ರಾಮ್ ರಸ್ತೆ ಅಪಘಾತದಲ್ಲಿ ಹಠಾತ್ ಮರಣವನ್ನಪ್ಪಿದ್ದರು. ನಲ್ಗೊಂಡ ಜಿಲ್ಲೆಯ ಆಕುಪಾಮುಲ ಬಳಿ ಜಾನಕಿ ರಾಮ್ ಪ್ರಯಾಣಿಸುತ್ತದ್ದ ಸಫಾರಿ ಕಾರು ಟ್ರ್ಯಾಕ್ಟರ್ಗೆ ಡಿಕ್ಕಿ ಹೊಡೆದ ಪರಿಣಾಮ ಈ ಅಪಘಾತ ಸಂಭವಿಸಿತ್ತು. ಇನ್ನು ಹರಿಕೃಷ್ಣ ಅವರ ಮತ್ತೊಬ್ಬ ಪುತ್ರ ನಟ ಜ್ಯೂ. ಎನ್ಟಿಆರ್ ಕೂಡ ಅಪಘಾತದಲ್ಲಿ ಗಾಯಕೊಂಡಿದ್ದರು. 2009ರಲ್ಲಿ ಚುನಾವಣೆ ಪ್ರಚಾರದ ವೇಳೆ ನಲ್ಗೊಂಡ ಸಮೀಪ ಟಾಟಾ ಸಫಾರಿ ವಾಹನದಲ್ಲಿ ಪ್ರಯಾಣಿಸುತ್ತಿದ್ದರು. ಕಾರು ಮರಕ್ಕೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿತ್ತು.

ತಾರಕ ರತ್ನ ಕೂಡ ಹಠಾತ್ ಮರಣ
ಕಳೆದ 23 ದಿನಗಳಿಂದ ಜೀವನ್ಮರಣ ಹೋರಾಟ ನಡೆಸಿದ ತಾರಕ ರತ್ನ ಚಿಕಿತ್ಸೆ ಫಲಕಾರಿಯಾಗದೇ ನಿನ್ನೆ(ಫೆ.18) ರಾತ್ರಿ ಇಹಲೋಕ ತ್ಯಜಿಸಿದ್ದಾರೆ. ಇದರಿಂದ ಎನ್ಟಿಆರ್ ಫ್ಯಾಮಿಲಿಯಲ್ಲಿ ದುರಂತಗಳ ಸರಮಾಲೆ ಮುಂದುವರೆದಂತಾಗಿದೆ. ನಾಳೆ (ಫೆ.20) ತಾರಕ ರತ್ನ ಪಾರ್ಥೀವ ಶರೀರದ ಅಂತ್ಯಕ್ರಿಯೆ ನಡೆಸಲು ಸಿದ್ಧತೆ ನಡೆಸಲಾಗುತ್ತಿದೆ. ತಾರಕ ರತ್ನ ಅಗಲಿಕೆಗೆ ತೆಲುಗು ಚಿತ್ರರಂಗದ ಗಣ್ಯರು, ರಾಜಕೀಯ ಮುಖಂಡರು ಸಂತಾಪ ಸೂಚಿಸುತ್ತಿದ್ದಾರೆ. ಪಾರ್ಥೀವ ಶರೀದ ಅಂತಿಮ ದರ್ಶನ ಪಡೆಯುತ್ತಿದ್ದಾರೆ.


Click it and Unblock the Notifications











