25 ವರ್ಷದ ಹಿಂದಿನ ಕಥೆ: ಅಣ್ಣಾವ್ರನ್ನು ರಾಜಕೀಯಕ್ಕೆ ಆಹ್ವಾನಿಸಿದ್ದರು ಎನ್.ಟಿ.ಆರ್!
1978ರಲ್ಲಿ ಚಿಕ್ಕಮಗಳೂರು ಲೋಕಸಭೆ ಕ್ಷೇತ್ರಕ್ಕೆ ಉಪಚುನಾವಣೆ ಘೋಷಣೆಯಾಗಿತ್ತು. ಕಾಂಗ್ರೆಸ್ ಪಕ್ಷದಿಂದ ಇಂದಿರಾ ಗಾಂಧಿ ಸ್ಪರ್ಧೆಗೆ ನಿಂತರು. ಇಂದಿರಾ ಗಾಂಧಿಯನ್ನು ಸೋಲಿಸಲು ವಿಪಕ್ಷಗಳು ಯೋಚಿಸುತ್ತಿದ್ದ ವೇಳೆ ಅವರ ಕಣ್ಣಿಗೆ ಬಿದ್ದಿದ್ದು ಕನ್ನಡ ಚಿತ್ರರಂಗದ ವರನಟ ಡಾ ರಾಜ್ ಕುಮಾರ್.
Recommended Video
ಅಂದಿನ ಕಾಲಕ್ಕೆ ಡಾ ರಾಜ್ ಕುಮಾರ್ ಜನಪ್ರಿಯತೆ ಭಾರಿ ದೊಡ್ಡಮಟ್ಟದಲ್ಲಿತ್ತು. ಅಣ್ಣಾವ್ರು ಸ್ಪರ್ಧೆ ಮಾಡಿದ್ರೆ ಇಂದಿರಾ ಗಾಂಧಿ ಸೋಲುವುದು ಖಚಿತ ಎನ್ನುವ ಅಂದಾಜು ಹಾಕಿದ್ದ ರಾಜಕೀಯ ಪಕ್ಷಗಳು ರಾಜ್ ಮನೆ ಮುಂದೆ ದುಂಬಾಲು ಬಿದ್ದರು.
ಆದರೆ, ಡಾ ರಾಜ್ ಕುಮಾರ್ ರಾಜಕೀಯ ಬರಲು ಸಮ್ಮತಿ ನೀಡಿಲ್ಲ. ಒಬ್ಬ ನಟನಾಗಿ ಅಭಿಮಾನಿಗಳು ನನ್ನನ್ನ ಪ್ರೀತಿಸುತ್ತಾರೆ, ನಟನಾಗಿಯೇ ಇರಲು ಬಯಸುತ್ತೇನೆ ಎಂದು ಹೇಳಿ ರಾಜಕೀಯವನ್ನು ನಿರಾಕರಿಸಿದ್ದರು. ಈ ಘಟನೆ ಆದ ಬಳಿಕವೂ ಅಣ್ಣಾವ್ರಿಗೆ ರಾಜಕೀಯ ಪಕ್ಷ ಸ್ಥಾಪಿಸಲು ಎನ್ ಟಿ ಆರ್ ಆಹ್ವಾನ ನೀಡಿದ್ದರು ಎಂಬ ವಿಚಾರ ಚರ್ಚೆಯಾಗುತ್ತಿದೆ. ಈ ಬಗ್ಗೆ ಪೂರ್ತಿ ವಿವರ ತಿಳಿಯಲು ಮುಂದೆ ಓದಿ...

ಭಾರತ ದೇಶಂ ಪಕ್ಷ ಸ್ಥಾಪನೆಗೆ ರಾಜ್ ಗೆ ಆಹ್ವಾನ!
ಸುಮಾರು 25 ವರ್ಷಗಳ ಹಿಂದೆ, ಅಂದ್ರೆ 1995ರ ವರದಿಯಂತೆ ತೆಲುಗು ದೇಶಂ ಪಕ್ಷದ ಸಂಸ್ಥಾಪಕ ಹಾಗೂ ಆಂಧ್ರ ಪ್ರದೇಶದ ಅಂದಿನ ಮುಖ್ಯಮಂತ್ರಿ ಎನ್ ಟಿ ರಾಮರಾವ್ ಅವರು, ಕನ್ನಡ ನಟ ರಾಜ್ ಕುಮಾರ್ ಹಾಗೂ ತಮಿಳು ನಟ ರಜನಿಕಾಂತ್ ಅವರನ್ನು ರಾಜಕೀಯಕ್ಕೆ ಆಹ್ವಾನಿಸಿದ್ದರು. ಭಾರತ ದೇಶಂ ಎಂಬ ಪಕ್ಷ ಕಟ್ಟಲು ಎನ್ ಟಿ ಆರ್ ಚಿಂತಿಸಿದ್ದರು ಎಂದು 'Deccan herald' ಪತ್ರಿಕೆ ವರದಿ ಮಾಡಿದೆ. ಈ ವಿಚಾರ ಈಗ ಚರ್ಚೆಗೆ ಕಾರಣವಾಗಿದೆ.

1982ರಲ್ಲಿ ತೆಲುಗು ದೇಶಂ ಪಕ್ಷ ಕಟ್ಟಿದ್ದ ಎನ್ ಟಿ ಆರ್
1982ರಲ್ಲಿ ರಾಜಕೀಯ ಪ್ರವೇಶ ಮಾಡಿದ್ದ ತೆಲುಗು ನಟ ಎನ್ ಟಿ ಆರ್ ತೆಲುಗು ದೇಶಂ ಪಕ್ಷ ಸ್ಥಾಪಿಸಿದ್ದರು. ಅಂದು ಅಧಿಕಾರದಲ್ಲಿದ್ದ ಕಾಂಗ್ರೆಸ್ ಸರ್ಕಾರದ ವಿರುದ್ಧ ರಾಜ್ಯಾದ್ಯಂತ ಪ್ರವಾಸ ಮಾಡಿ ಜನನಾಯಕರಾದರು. 1983ರ ಚುನಾವಣೆಯಲ್ಲಿ ಎನ್ ಟಿ ಆರ್ ಸಾರಥ್ಯದ ತೆಲುಗು ದೇಶಂ ಪಕ್ಷ ಭಾರಿ ಬಹುಮತದಿಂದ ಸರ್ಕಾರ ರಚನೆ ಮಾಡಿತ್ತು. ಎನ್ ಟಿ ಆರ್ ಮೊದಲ ಬಾರಿಗೆ ಆಂಧ್ರಪ್ರದೇಶ ಮುಖ್ಯಮಂತ್ರಿ ಆದರು.

ಗೋಕಾಕ್ ಚಳವಳಿಯಲ್ಲಿ ಡಾ ರಾಜ್
1980ರ ದಶಕದಲ್ಲಿ ಸಾಹಿತಿಗಳು, ಕನ್ನಡ ವಿದ್ಯಾರ್ಥಿಗಳು, ಹಲವು ಸಂಘಸಂಸ್ಥೆಗಳು ಗೋಕಾಕ್ ವರದಿಯನ್ನು ಜಾರಿಗೊಳಿಸುವಂತೆ ಹೋರಾಟ ಪ್ರಾರಂಭ ಮಾಡಿದರು. ನಂತರ ಡಾ ರಾಜ್ ಕುಮಾರ್ ಹೋರಾಟಕ್ಕೆ ಕೈಜೋಡಿಸಿದರು. ಅಣ್ಣಾವ್ರು ಹೋರಾಟಕ್ಕೆ ಧುಮುಕಿದ ಬಳಿಕ ಇಡೀ ಚಳುವಳಿಯ ಸ್ವರೂಪವೇ ಬದಲಾಯಿತು. ಡಾ ರಾಜ್ ಕರ್ನಾಟಕದ ಶಕ್ತಿಯಾಗಿ ಪ್ರತಿಬಿಂಬಿಸಿದರು. ಈ ಹೋರಾಟ ಇಡೀ ದೇಶದ ಗಮನ ಸೆಳೆಯಿತು.

ರಾಜಕೀಯದಿಂದ ದೂರವೇ ಉಳಿದ ರಾಜ್
ಇಂದಿರಾ ಗಾಂಧಿ ವಿರುದ್ಧ ಸ್ಪರ್ಧೆಗೆ ಆಹ್ವಾನ, ಗೋಕಾಕ್ ಚಳವಳಿ ಹಾಗೂ ಭಾರತ ದೇಶಂ ಪಕ್ಷ ಸ್ಥಾಪನೆಗೆ ಎನ್ ಟಿ ಆರ್ ಆಹ್ವಾನ....ಈ ಎಲ್ಲ ಬೆಳವಣಿಗಳ ನಡುವೆಯೂ ಅಣ್ಣಾವ್ರದ್ದು ಒಂದೇ ನಿಲುವು ಆಗಿತ್ತು. ರಾಜಕೀಯದಿಂದ ದೂರ, ಸಿನಿಮಾ ಮಾತ್ರ ನನ್ನ ಕರ್ತವ್ಯ, ಅದರಿಂದಲೇ ಜನಸೇವೆ ಹಾಗೂ ಕಲಾಸೇವೆ ಎಂದು ನಂಬಿದ್ದರು. ಕೊನೆಗೂ ರಾಜ್ ಕುಮಾರ್ ಯಾವ ರಾಜಕೀಯ ಪಕ್ಷದ ಜೊತೆಯೂ ಗುರುತಿಸಿಕೊಂಡಿಲ್ಲ. ಯಾರ ಪರವಾಗಿಯೂ ಚುನಾವಣೆ ಪ್ರಚಾರ ಮಾಡಿಲ್ಲ. ಅಧಿಕೃತವಾಗಿ ಅಣ್ಣಾವ್ರ ಜೀವನದಲ್ಲಿ ರಾಜಕೀಯ ಬಲು ದೂರವಾಗಿಯೇ ಉಳಿದಿತ್ತು.


Click it and Unblock the Notifications











