'ಪ್ರಿನ್ಸ್' ಸೋಲು ಮೊದ್ಲೆ ಗೊತ್ತಿತ್ತು, ನಾನು- ದರ್ಶನ್ ದೂರಾಗಲು ನಿಖಿತಾ ಕಾರಣ- ಓಂಪ್ರಕಾಶ್ ರಾವ್
ನಟ ದರ್ಶನ್ ಹಾಗೂ ನಿರ್ದೇಶಕ ಓಂ ಪ್ರಕಾಶ್ ಜೋಡಿ ಕನ್ನಡದಲ್ಲಿ ಹಿಟ್ ಕಾಂಬಿನೇಷನ್ ಎನಿಸಿಕೊಂಡಿತ್ತು. 'ಕಲಾಸಿಪಾಳ್ಯ', 'ಮಂಡ್ಯ', 'ಅಯ್ಯ' ಹಾಗೂ 'ಯೋಧ' ಚಿತ್ರಗಳು ಹಿಟ್ ಆಗಿತ್ತು. ಆದರೆ 'ಪ್ರಿನ್ಸ್' ಸಿನಿಮಾ ಸೋತಿತ್ತು. ಆ ಬಗ್ಗೆ ನಿರ್ದೇಶಕ ಓಂ ಪ್ರಕಾಶ್ ರಾವ್ ಮಾತನಾಡಿದ್ದಾರೆ.
ಅಂಬರೀಶ್ ಹಾಗೂ ದರ್ಶನ್ ನಟಿಸಿದ್ದ 'ಅಣ್ಣಾವ್ರು' ಚಿತ್ರಕ್ಕೆ ಓಂಪ್ರಕಾಶ್ ರಾವ್ ಮೊದಲು ಆಕ್ಷನ್ ಕಟ್ ಹೇಳಿದ್ದರು. ಪ್ರಿನ್ಸ್ ಬಳಿಕ ಕೆಲ ಭಿನ್ನಾಭಿಪ್ರಾಯಗಳಿಂದ ಇಬ್ಬರೂ ದೂರಾಗಿದ್ದರು. ಬಳಿಕ ಒಟ್ಟಿಗೆ ಸಿನಿಮಾ ಮಾಡಲಿಲ್ಲ. ಇವರಿಬ್ಬರು ಸೇರಿ ಒಟ್ಟಿಗೆ ಕೆಲಸ ಮಾಡಬೇಕು ಎಂದು ಅಭಿಮಾನಿಗಳು ಬಯಸಿದ್ದರು. ಅದೇ ಕಾರಣಕ್ಕೆ 'ಫೀನಿಕ್ಸ್' ಎಂಬ ಕಥೆಯನ್ನು ಓಂಪ್ರಕಾಶ್ ಬರೆದಿದ್ದರು. ಆದರೆ ಈಗ ಅದೇ ಕಥೆಯಲ್ಲಿ ಬೇರೆ ಸಿನಿಮಾ ಮಾಡಿದ್ದಾರೆ.

ದರ್ಶನ್ ಹಾಗೂ ನನ್ನ ನಡುವೆ ಭಿನ್ನಾಭಿಪ್ರಾಯ ಮೂಡಲು ನಟಿ ನಿಖಿತಾ ತುಕ್ರಾಲ್ ಕಾರಣ ಎಂದು ಓಂಪ್ರಕಾಶ್ ರಾವ್ ಮತ್ತೊಮ್ಮೆ ಪುನರುಚ್ಚರಿಸಿದ್ದಾರೆ. ಡೈಲಿ ಮಾಧ್ಯಮ ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ಅವ್ರು ಮಾತನಾಡಿದ್ದಾರೆ. ಈ ವೇಳೆ ಸಾಕಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ. 'ಪ್ರಿನ್ಸ್' ಸಿನಿಮಾ ಗೆಲ್ಲಲ್ಲ ಎನ್ನುವುದು ಬಿಡುಗಡೆಗೂ ಮುನ್ನ ನನಗೆ ಗೊತ್ತಿತ್ತು ಎಂದಿದ್ದಾರೆ.
"ಅಯ್ಯ ಸಿನಿಮಾ ಸೂಪರ್ ಹಿಟ್ ಆಗಿತ್ತು. ನಮ್ಮಿಬ್ಬರ ನಡುವೆ ಒಳ್ಳೆ ಬಾಂಧವ್ಯ ಇತ್ತು. 'ಕಲಾಸಿಪಾಳ್ಯ', 'ಮಂಡ್ಯ', 'ಅಯ್ಯ', 'ಯೋಧ' ಸಿನಿಮಾಗಳು ಹಿಟ್ ಆಯಿತು. 'ಪ್ರಿನ್ಸ್' ಗೆಲ್ಲಲಿಲ್ಲ. ಫಸ್ಟ್ ಕಾಪಿ ನೋಡಿದಾಗ್ಲೇ ಹೇಳ್ದೆ ಗೆಲ್ಲಲ್ಲ ಫ್ಲಾಪ್ ಆಗುತ್ತೆ ಅಂತ. ದರ್ಶನ್ ಸರ್ ಬಳಿ ಇ ಮಾತು ಹೇಳಿದ್ದೆ. ನಮ್ಮ ಸಿನಿಮಾ ಜೊತೆ 'ಸಂಜು ವೆಡ್ಸ್ ಗೀತಾ' ರಿಲೀಸ್ ಆಯ್ತು. ಅವ್ರು ಭಯ ಪಟ್ಟಿದ್ರು. ನಾನೇ ಹೇಳ್ದೆ ಭಯಪಡಬೇಡಿ, ನಿಮ್ಮ ಸಿನ್ಮಾ ಚೆನ್ನಾಗಿದೆ ಗೆಲ್ಲುತ್ತೆ, ನಮ್ಮ ಸಿನ್ಮಾ ಫ್ಲಾಪ್ ಆಗುತ್ತೆ ಅಂತ ಹೇಳಿದ್ದೆ. ಅವ್ರಿಗೂ ಶಾಕ್ ಆಗಿತ್ತು. ಆದ್ರೆ ನಾನು ಹೇಳಿದಂತೆ ಆಯ್ತು" ಎಂದು ಓಂಪ್ರಕಾಶ್ ರಾವ್ ನೆನಪಿಸಿಕೊಂಡಿದ್ದಾರೆ.

'ಪ್ರಿನ್ಸ್' ಬಳಿಕ ಯಾಕೆ ಮತ್ತೆ ದರ್ಶನ್ ಕಾಂಬಿನೇಷನ್ನಲ್ಲಿ ಸಿನಿಮಾ ಮಾಡಲಿಲ್ಲ ಎನ್ನುವ ಪ್ರಶ್ನೆಗೆ ನಟಿ ನಿಖಿತಾ ತುಕ್ರಾಲ್ ಕಡೆ ಓಂಪ್ರಕಾಶ್ ಬೊಟ್ಟು ಮಾಡಿದ್ದಾರೆ. "ಮೇಡಂ ಇದ್ದಾರಲ್ಲ, ನಿಖಿತಾ ತುಕ್ರಾಲ್ ಅಂತ. ಅವ್ರು ಮಾಡಿದ ಎಡವಟ್ಟು ಅದು. ಅವರಿಂದ ನಾವಿಬ್ಬರು ದೂರಾಗಿದ್ದೆವು. ನಾವು ಒಳ್ಳೆಯದ್ದನ್ನು ಬಯಸುತ್ತೇವೆ, ಹೇಳುತ್ತೇವೆ. ಅದನ್ನು ಅವ್ರು ಬೇರಿ ರೀತಿ ಹೇಳಿ ಹಿಂಗಾಯ್ತು. ನಮ್ಮ ವೈಫ್ ಹೇಳಿದ್ರು ನಾನು ಕೇಳಲಿಲ್ಲ. ನನ್ನ ಬಗ್ಗೆ ಏನೇನೋ ದರ್ಶನ್ ಬಳಿಕ ಹೇಳಿ ನಾವಿಬ್ಬರು ದೂರಾಗುವಂತಾಯಿತು" ಎಂದಿದ್ದಾರೆ.
ನನ್ನ ಮೇಲೆ ಬಹಳ ಪ್ರೀತಿ, ಕನಿಕರ ಅನ್ನಿಸುತ್ತೆ. ಅದಕ್ಕೆ ಈ ರೀತಿ ಮಾಡಿರಬಹುದು. ಆ ಬಳಿಕ ಬಹಳ ವರ್ಷಗಳ ನಂತರ ನಾನು, ದರ್ಶನ್ ಅವರೊಟ್ಟಿಗೆ ಮಾತನಾಡಿದ್ದೆ. ಫೀನಿಕ್ಸ್ ಕಥೆ ಅವರಿಗಾಗಿ ಮಾಡಿದ್ದ ಕಥೆ. ದರ್ಶನ್ ಫ್ಯಾನ್ಸ್ ಪದೇ ಪದೆ ಕೇಳ್ತಿದ್ರು. ನಮ್ಮ ಬಾಸ್ ಜೊತೆ ಸಿನಿಮಾ ಮಾಡಿ ಅಂತ. ನಾನೇ ಹೋಗಿ ಮಾತನಾಡಿದ್ದೆ. ನಾನು ಬಹಳ ಇಷ್ಟಪಡುವ ವ್ಯಕ್ತಿ ದರ್ಶನ್. ನಾನೇ ಕ್ಷಮೆ ಕೇಳಿ ಸಿನಿಮಾ ಮಾಡಲು ಮುಂದಾಗಿದ್ದೆ, ಸಾಧ್ಯವಾಗಲಿಲ್ಲ ಎಂದು ಓಂಪ್ರಕಾಶ್ ರಾವ್ ವಿವರಿಸಿದ್ದಾರೆ.
ಸಂದೇಶ್ ನಾಗರಾಜ್ 'ಪ್ರಿನ್ಸ್' ಸಿನಿಮಾ ನಿರ್ಮಾಣ ಮಾಡಿದ್ದರು. ವಿ. ಹರಿಕೃಷ್ಣ ಸಂಗೀತ ಚಿತ್ರಕ್ಕಿತ್ತು. ಜೆನಿಫರ್ ಕೊತ್ವಾಲ್, ನಿಖಿತಾ, ಆದಿ ಲೋಕೇಶ್, ಅವಿನಾಶ್, ರಂಗಾಯಣ ರಘು ಚಿತ್ರದ ತಾರಾಗಣದಲ್ಲಿದ್ದರು. ತೆಲುಗಿನ 'ಶಾಕ್' ಸಿನಿಮಾ ರೀಮೆಕ್ ಇದಾಗಿತ್ತು.


Click it and Unblock the Notifications











