ಪಾರ್ವತಮ್ಮ ಜೊತೆ ಅಣ್ಣಾವ್ರು ಫಸ್ಟ್ ಟೈಂ ಜಗಳ ಮಾಡಿದ್ಯಾಕೆ ಗೊತ್ತಾ?
ಡಾ. ರಾಜ್ಕುಮಾರ್ ಹಾಗೂ ಪಾರ್ವತಮ್ಮ ಅವರದ್ದು ಜನಮದ ಜೋಡಿ. ಕನ್ನಡ ಚಿತ್ರರಂಗಕ್ಕೆ ಇವರಿಬ್ಬರ ಕೊಡುಗೆ ಅಪಾರ. ಅಣ್ಣಾವ್ರ ಏಳುಬೀಳಿನ ಜೀವನದಲ್ಲಿ ಹೆಜ್ಜೆ ಹೆಜ್ಜೆಗೂ ಜೊತೆಯಾಗಿ ನಿಂತವರು ಪತ್ನಿ ಪಾರ್ವತಮ್ಮ. ಕನ್ನಡ ಚಿತ್ರರಂಗದ ವಜ್ರೇಶ್ವರಿ ಈಕೆ. ದೊಡ್ಡ ಕುಟುಂಬವನ್ನು ಸಲಹುತ್ತಾ ಅಣ್ಣಾವ್ರ ಯಶಸ್ಸಿಗೆ ಬೆನ್ನೆಲುಬಾಗಿ ಇದ್ದವರು ಪಾರ್ವತಮ್ಮ.
ಮುತ್ತುರಾಜ್ ಮಾವನ ಮಗಳು ಪಾರ್ವತಿಯನ್ನು ಮದುವೆಯಾದ ಬೆನ್ನಲ್ಲೇ 'ಬೇಡರ ಕಣ್ಣಪ್ಪ' ಸಿನಿಮಾ ಅವಕಾಶ ಸಿಕ್ಕಿತ್ತು. ಬಳಿಕ ಆ ಸಿನಿಮಾ ಹಿಟ್ ಆಗಿ ಅಣ್ಣಾವ್ರು ಚಿತ್ರರಂಗದಲ್ಲಿ ಸೂಪರ್ ಸ್ಟಾರ್ ಆಗಿ ಬೆಳೆಯುವಂತಾಯಿತು. ಅಣ್ಣಾವ್ರ ಪಾಲಿಗೆ ಅದೃಷ್ಟ ದೇವತೆಯಾಗಿದ್ದರು ಪತ್ನಿ ಪಾರ್ವತಮ್ಮ. ಮುಂದೆ ತಮ್ಮದೇ ಸ್ವಂತ ಸಿನಿಮಾ ನಿರ್ಮಾಣ ಸಂಸ್ಥೆಯನ್ನು ಹುಟ್ಟುಹಾಕಿ ಅದ್ಭುತ ಸಿನಿಮಾಗಳನ್ನು ಪಾರ್ವತಮ್ಮ ನಿರ್ಮಿಸಿದರು.

ಹಲವು ಕಾದಂಬರಿಗಳನ್ನು ಸಿನಿಮಾ ಮಾಡಿದರು. ತಮ್ಮ ಬ್ಯಾನರ್ನಲ್ಲಿ ಸಾಕಷ್ಟು ಹೊಸ ಪ್ರತಿಭೆಗಳಿಗೆ ಅವಕಾಶ ಕೊಟ್ಟರು. ಮನೆಯ ಸಂಪೂರ್ಣ ಜವಾಬ್ದಾರಿಯನ್ನು ಪಾರ್ವತಮ್ಮ ತಾವೇ ವಹಿಸಿಕೊಂಡು ಅಣ್ಣಾವ್ರು ನಿಶ್ಚಿಂತೆಯಿಂದ ಸಿನಿಮಾಗಳಲ್ಲಿ ನಟಿಸಲು ಅನುವು ಮಾಡಿಕೊಟ್ಟರು. ಚಿಕ್ಕಂದಿನಲ್ಲೇ ಪಾರ್ವತಮ್ಮ ಅವರನ್ನು ನಮ್ಮ ಮಗನಿಗೆ ಮದುವೆ ಮಾಡಿಕೊಡಬೇಕು ಎಂದು ಡಾ. ರಾಜ್ ತಂದೆ ಮಾತು ತೆಗೆದುಕೊಂಡಿದ್ದರಂತೆ. ಅದರಂತೆ ಪಾರ್ವತಮ್ಮ ಹೈಸ್ಕೂಲಿನಲ್ಲಿ ಇದ್ದಾಗ ಮದುವೆ ನಡೆದಿತ್ತು.
ಸಾಕಷ್ಟು ಸಂದರ್ಶನಗಳಲ್ಲಿ ಪಾರ್ವತಮ್ಮ ಮಾತನಾಡಿದ್ದಾರೆ. ಅಣ್ಣಾವ್ರ ಜೀವನ ಚರಿತ್ರೆ ಬಗ್ಗೆ ನಿರ್ದೇಶಕ ನಾಗತೀಹಳ್ಳಿ ಚಂದ್ರಶೇಖರ್ ಒಂದು ವಿಶೇಷ ಸಂದರ್ಶನ ಮಾಡಿದ್ದರು. ಅದರಲ್ಲಿ ಪಾರ್ವತಮ್ಮ ಭಾಗಿಯಾಗಿ ಸಾಕಷ್ಟು ವಿಚಾರಗಳನ್ನು ಹಂಚಿಕೊಂಡಿದ್ದರು. ತಮ್ಮಿಬ್ಬರ ಮದುವೆ, ಸಿನಿಮಾ, ರಂಗಭೂಮಿ, ಕುಟುಂಬ ಹೀಗೆ ಹತ್ತು ಹಲವು ವಿಚಾರಗಳನ ಬಗ್ಗೆ ಮಾತನಾಡಿದ್ದರು. ಆ ಸಂದರ್ಶನದಲ್ಲಿ ಅಣ್ಣಾವ್ರ ಜೊತೆ ಮೊದಲಿಗೆ ಜಗಳ ಆಗಿದ್ದು ಯಾವಾಗ? ಎನ್ನುವುದನ್ನು ವಿವರಿಸಿದ್ದರು.
"ನಾವು ಮೊದಲ ಜಗಳ ಆಡಿದ್ದು ಚಿತ್ರದುರ್ಗದ ಕ್ಯಾಂಪ್ನಲ್ಲಿ. 'ಬೇಡರ ಕಣ್ಣಪ್ಪ' ಸಿನಿಮಾ ಚಿತ್ರೀಕರಣ ಮುಗಿಸಿ, ಸಿನಿಮಾ ರಿಲೀಸ್ ಕೂಡ ಆಗಿತ್ತು. ಮೇ 8ನೇ ತಾರೀಖು ನಾವು ಸಂಸಾರ ಶುರು ಮಾಡಿದ್ದು. 'ಬೇಡರ ಕಣ್ಣಪ್ಪ'ಗೂ ಮುನ್ನ ಮದುವೆ ಆಗಿತ್ತು. ಆದರೂ ನಾನಿನ್ನು ಚಿಕ್ಕ ಹುಡುಗಿ. ಹಾಗಾಗಿ 14 ವರ್ಷ ತುಂಬಿ 15 ವರ್ಷಕ್ಕೆ ಕಾಲಿಟ್ಟ ಮೇಲೆ ಸಂಸಾರ ಶುರು ಮಾಡಿದೆವು"

"ಚಿತ್ರದುರ್ಗದಲ್ಲಿದ್ದ ಸಂಬಂಧಿಕರ ಮನೆಗೆ ಹೋಗಿದ್ದೆವು. ಅವರ ಮಡದಿ ಇರಲಿಲ್ಲ. ನಮ್ಮ ಮನೆಯವರು ಬಸ್ನಲ್ಲಿ ಹೋಗುವಾಗಲೇ ನಿನಗೆ ಅಡುಗೆ ಮಾಡೋಕೆ ಬರುತ್ತಾ ಎಂದು ಕೇಳಿದ್ದರು. ನಾನು, ಓಹ್, ಫಸ್ಟ್ ಕ್ಲಾಸ್ ಆಗಿ ಮಾಡ್ತೀನಿ. ಆದರೆ ನನಗೆ ಬರುತ್ತಿರಲಿಲ್ಲ. ಹೇಳಿಕೊಳ್ಳು ಸಂಕೋಚ. ಹಾಗಾಗಿ ಮಾಡ್ತೀನಿ ಎಂದುಬಿಟ್ಟೆ."
"ಮನೆಗೆ ಹೋದಾಗ ನಾನ್ವೆಜ್ ಮಾಡಬೇಕು ಅಂದ್ರು. ನನಗೆ ನಾನ್ವೆಜ್ ತಿಂದು ಗೊತ್ತಿಲ್ಲ. ಮಾಡಿ ಗೊತ್ತಿಲ್ಲ. ಆದರೂ ಮಾಡ್ತೀನಿ ಎಂದು ಹೋದೆ. ಅಡುಗೆ ಮಾಡೋಕೆ ಬರಲಿಲ್ಲ. ಯಾರೋ ಮಸಾಲೆ ರುಬ್ಬುತ್ತಿದ್ದರು. 5 ಮೆಣಸಿನ ಕಾಯಿ ತಗೊಂಡೆ. ಅವ್ರು ಕೇಳಿದ್ರು. 5 ಸಾಕಾ? ಅಂತ ನಮ್ಮ ಅಮ್ಮ ಅಷ್ಟೆ ಹೇಳಿದ್ದು. ಅಂದೆ ಅಯ್ಯೋ ಅವ್ರು 4 ಜನಕ್ಕೆ ಹೇಳಿರ್ತಾರೆ. 20 ಜನಕ್ಕೆ ಅಡುಗೆ ಮಾಡ್ತಿರೋದು ಬಿಡು ಎಂದು ಹೇಳಿದ್ದರು" ಎಂದು ಆ ಘಟನೆಯನ್ನು ಪಾರ್ವತಮ್ಮ ನೆನಪಿಸಿಕೊಂಡಿದ್ದರು.
"ಬಳಿಕ ನನಗೆ ಹಸಿವು ಎಂದೆ. ನಮ್ಮ ಚಿಕ್ಕಪ್ಪ ಬಹಳ ಆಪ್ತರು. ಹೋಗಲಿ ಬಿಡು, ಆಕೆ ಮಾಡಿ ಗೊತ್ತಿಲ್ಲ, ಮುಂದೆ ಕಲಿಯುತ್ತಾಳೆ ಎಂದು ಯಜಮಾನರಿಗೆ ಸಮಾಧಾನ ಮಾಡಿದ್ದರು. ಬಳಿಕ ಹೋಟೆಲ್ನಿಂದ ತಿಂಡಿ ತಂದು ಕೊಟ್ಟರು. ತಿಂದು ಮಲಗಿದೆ. ಬಳಿಕ ಪಕ್ಕದ ಮನೆಯವರನ್ನು ಕರೆಸಿ ಅಡುಗೆ ಮಾಡಿಸಿದರು. ಸಂಜೆ ವೇಳೆಗೆ ಅಡುವೆ ಆಯಿತು. ನಿಮ್ಮ ಮಗಳನ್ನು ನಂಬಿಕೊಂಡರೆ ಊಟ ಇಲ್ಲದೇ ಮಲಗಬೇಕಾಗುತ್ತದೆ ಎಂದರು. ಆಗಲೂ ನಮ್ಮ ಚಿಕ್ಕಪ್ಪ ಸಮಾಧಾನ ಮಾಡಿದರು" ಎಂದು ಪಾರ್ವತಮ್ಮ ವಿವರಿಸಿದ್ದರು.


Click it and Unblock the Notifications











