ಅದೊಂದು ರಾತ್ರಿ ರಜನಿಕಾಂತ್, ದರ್ಶನ್, ಯಶ್ ಜೀವನದ ದಿಕ್ಕನ್ನೇ ಬದಲಿಸಿತ್ತು!
ಜೀವನದಲ್ಲಿ ಯಶಸ್ಸು ಅಷ್ಟು ಸುಲಭವಾಗಿ ಸಿಗುವುದಿಲ್ಲ. ಸತತ ಪರಿಶ್ರಮದ ಹೊರತು ಯಾವುದನ್ನು ಸಾಧಿಸಲು ಸಾಧ್ಯವಿಲ್ಲ. ಅದೃಷ್ಟ ಕೂಡ ಕೈ ಹಿಡಿದರೆ ನಿಮ್ಮನ್ನು ತಡೆಯೋಕ್ಕಾಗಲ್ಲ. ರಾತ್ರೋರಾತ್ರಿ ಫೇಮಸ್ ಆದವರು ಇದ್ದಾರೆ. ಅದೊಂದು ದಿನ, ಅದೊಂದು ಕ್ಷಣ, ಅದೊಂದು ರಾತ್ರಿ ತೆಗೆದುಕೊಂಡು ನಿರ್ಧಾರದಿಂದ ಎಷ್ಟೋ ಜನರ ಜೀವನ ಬದಲಾಗಿರುತ್ತದೆ.
ಎಲ್ಲಾ ಮುಗೀತು ಇನ್ನು ಸಾವೇ ಗತಿ ಎಂದುಕೊಂಡವರು ಇಂದು ನಮ್ಮ ಮುಂದೆ ಜಗವೇ ಮೆಚ್ಚುವ ನಾಯಕರಾಗಿದ್ದಾರೆ. ಶಿವಾಜಿರಾವ್ ಗಾಯಕ್ವಾಡ್ ಒಮ್ಮೆ ಆತ್ಮಹತ್ಯೆ ಮಾಡಿಕೊಳ್ಳಬೇಕು ಎಂದು ನಿರ್ಧರಿಸಿಬಿಟ್ಟಿದ್ದರಂತೆ. ಹೀಗೆ ಹೇಳುತ್ತಾ ಹೋದರೆ ಸಾಕಷ್ಟು ಉದಾಹರಣೆಗಳು ಸಿಗುತ್ತವೆ. ಅಚಲ ಧೈರ್ಯ, ಸಾಧಿಸುವ ಛಲ ಇದ್ದರೆ ಗುರು ಅಥವಾ ದೈವ ಜೊತೆಯಾದರೆ ಯಶಸ್ಸು ನಮ್ಮನ್ನು ಅರಸಿಬರುವಂತಾಗುತ್ತದೆ.

ರಜನಿಕಾಂತ್, ದರ್ಶನ್, ಯಶ್ ಮೂವರು ಇಂದು ನಮ್ಮ ಮುಂದೆ ಸ್ಟಾರ್ ನಟರಾಗಿ ನಿಂತಿದ್ದಾರೆ. ಆದರೆ ವರ್ಷಗಳ ಹಿಂದೆ ಅವರು ಹೀಗಿರಲಿಲ್ಲ. ಈ ಹೆಸರು, ಹಣ, ಅಭಿಮಾನ ಯಾವುದು ಇಲ್ಲದೇ ನಮ್ಮ ನಿಮ್ಮಂತೆ ಸಾಮಾನ್ಯರಲ್ಲಿ ಸಾಮಾನ್ಯರಾಗಿದ್ದರು. ಚಿತ್ರರಂಗಕ್ಕೆ ಬಂದಾಗಲೂ ಸಾಕಷ್ಟು ನೋವು, ಅವಮಾನ ಎದುರಿಸಿದ್ದರು. ಅದನ್ನೆಲ್ಲಾ ಮೆಟ್ಟಿನಿಂತರು. ಸಿನಿಮಾ ಎನ್ನುವ ಸಾಗರದಲ್ಲಿ ಈಸಬೇಕು ಇದ್ದು ಜಯಿಸಬೇಕು ಎಂದು ಹಠಕ್ಕೆ ಬಿದ್ದರು. ಕೊನೆಗೂ ಸಾಧಿಸಿಬಿಟ್ಟರು. ಅವರು ಹುಡುಕಿಕೊಂಡು ಹೋಗಿದ್ದು ಸಿಗುವಂತಾಯಿತು. ಕಂಡ ಕನಸು ನನಸಾಗಿತ್ತು.
ರಜನಿಕಾಂತ್
ಬಿಟಿಎಸ್ ಬಸ್ ಕಂಡೆಕ್ಟರ್ ಶಿವಾಜಿ ಇವತ್ತು ಸೂಪರ್ ಸ್ಟಾರ್ ಆಗಿದ್ದಾರೆ. ದೇಶ ವಿದೇಶಗಳಲ್ಲಿ ಕೂಡ ಅಭಿಮಾನಿಗಳನ್ನು ಸಂಪಾದಿಸಿಕೊಂಡಿದ್ದಾರೆ. ರಜನಿಕಾಂತ್ ಅವರಂತೆ ಇದಕ್ಕೂ ಹಿಂದೆ ಅಥವಾ ಮುಂದೆ ಕ್ರೇಜ್ ಸೃಷ್ಟಿಸಿಕೊಳ್ಳುವುದು ಯಾರೆಗೇ ಆದರೂ ಕಷ್ಟ ಎನ್ನಬಹುದು. 150ಕ್ಕೂ ಅಧಿಕ ಸಿನಿಮಾಗಳಲ್ಲಿ ತರಹೇವಾರಿ ಪಾತ್ರಗಳಲ್ಲಿ ನಟಿಸಿ ರಜನಿಕಾಂತ್ ಸಕ್ಸಸ್ ಕಂಡಿದ್ದಾರೆ.

ಅದ್ಭುತ ನಟ ಅಲ್ಲದೇ ಇದ್ದರೂ ತಮ್ಮ ಸ್ಟೈಲ್, ಮ್ಯಾನರಿಸಂ, ಬಾಡಿಲಾಗ್ವೇಜ್ನಿಂದ ರಜನಿಕಾಂತ್ ಸೂಪರ್ ಸ್ಟಾರ್ ಆಗಿಬಿಟ್ಟರು. ವಯಸ್ಸು 70 ದಾಟಿದರೂ ತಲೈವಾ ಕ್ರೇಜ್ ಮಾತ್ರ ಕಮ್ಮಿ ಆಗಲಿಲ್ಲ. ಬೆಂಗಳೂರಿನಲ್ಲಿ ಬಸ್ ಕಂಡೆಕ್ಟರ್ ಆಗಿದ್ದುಕೊಂಡು ನಾಟಕಗಳಲ್ಲಿ ನಟಿಸುತ್ತಿದ್ದ ಶಿವಾಜಿ ಬಳಿಕ ಚೆನ್ನೈ ಫಿಲ್ಮ್ ಇನ್ಸ್ಟಿಟ್ಯೂಟ್ ಸೇರಿ ನಟನೆಯನ್ನು ಮತ್ತಷ್ಟು ಸಾಣೆ ಹಿಡಿದುಕೊಂಡಿದ್ದರು. ಬಳಿಕ ಕನ್ನಡದಲ್ಲಿ ಸರಿಯಾಗಿ ಅವಕಾಶಗಳು ಸಿಗದೇ ಇದ್ದಾಗ ತಮಿಳು ಚಿತ್ರರಂಗದಲ್ಲಿ ಗುರ್ತಿಸಿಕೊಂಡಿದ್ದರು.
ತಮಿಳು ಚಿತ್ರಗಳಲ್ಲೇ ರಜನಿಕಾಂತ್ ಹೆಚ್ಚು ನಟಿಸಿರೋದು. ಇವತ್ತು ಸೂಪರ್ ಸ್ಟಾರ್ ಆಗಿರುವ ಶಿವಾಜಿ ಅಂದು ಸಾಯುವ ನಿರ್ಧಾರ ಮಾಡಿದ್ದರು. ಆದರೆ ಅದೊಂದು ರಾತ್ರಿ ಅವರ ಜೀವನದಲ್ಲಿ ಎಲ್ಲವನ್ನು ಬದಲಿಸಿಬಿಟ್ಟಿತ್ತು. ಆ ಬಗ್ಗೆ ಸ್ವತಃ ರಜನಿಕಾಂತ್ ಒಮ್ಮೆ ಹೇಳಿಕೊಂಡಿದ್ದರು. "ಚಿಕ್ಕಂದಿನಿಂದ ನನಗೆ ಬಹಳ ಧೈರ್ಯ, ಅದು ಪೂರ್ವಜನ್ಮದ ಪುಣ್ಯದ ಫಲ ಇರಬಹುದು. ಯಾವುದೇ ನಿರ್ಧಾರ ತೆಗೆದುಕೊಳ್ಳಲು ಹಿಂದೇಟು ಹಾಕುವುದಿಲ್ಲ. ಆದರೆ ಒಮ್ಮೆ ಮಾತ್ರ ಜೀವನದ ಬಗ್ಗೆ ಭಯ ಬಿದ್ದು ಆತ್ಮಹ*ತ್ಯೆಗೆ ಮುಂದಾಗಿದ್ದೆ. ಬಳಿಕ ಬೇಡ ಎಂದು ನಿರ್ಧರಿಸಿ ಸುಮ್ಮನಾದೆ" ಎಂದು ರಜನಿಕಾಂತ್ ಆ ಘಟನೆ ನೆನಪಿಸಿಕೊಂಡಿದ್ದರು.

"ನಾನು ಒಂದು ಬೆಟ್ಟದ ಅಡಿ ಕುಳಿತ್ತಿದ್ದೆ. ಅಲ್ಲಿ ಒಬ್ಬರು ಸ್ವಾಮಿಯ ಚಿತ್ರ ಹಾಕಿದ್ದರು. ಹತ್ತಿರ ಹೋಗಿ ನೋಡಿದೆ. ಯಾರೋ ಪೂಜೆ ಮಾಡಿದ್ದರು. ಆ ಸ್ವಾಮಿಜಿ ಯಾರು ಎನ್ನುವುದು ಗೊತ್ತಿಲ್ಲ. ಅದೇನೋ ಗೊತ್ತಿಲ್ಲ, ಅವರನ್ನು ನೋಡುತ್ತಿದ್ದಂತೆ ನನ್ನ ಮನಸ್ಸಿನಲ್ಲಿ ಏನೋ ಬದಲಾವಣೆ ಆಯಿತು. ಆ ನಿರ್ಧಾರದಿಂದ ಹಿಂದೆ ಸರಿದು ಮನೆಗೆ ಹೋಗಿ ಮಲಗಿ ನಿದ್ದೆ ಮಾಡಿಬಿಟ್ಟೆ" ಎಂದು ರಜನಿಕಾಂತ್ ಅಂದು ರಾತ್ರಿ ನಡೆದ ಘಟನೆಯನ್ನು ಬಿಚ್ಚಿಟ್ಟಿದ್ದರು.
"ನಿದ್ದೆ ಮಾಡುವಾಗ ನನಗೆ ಒಂದು ಕನಸು ಬಿತ್ತು. ಒಬ್ಬರು ಸ್ವಾಮಿಜಿ. ಬಿಳಿ ದಾಡಿ, ಕಾವಿ ಬಟ್ಟೆ ಧರಿಸಿದ್ದರು. ಅವರು ಮುಂದೆ ಪ್ರವಾಹದ ರೀತಿ ದೊಡ್ಡ ನದಿ ಹರಿಯುತ್ತಿತ್ತು. ಆ ದಡದಲ್ಲಿ ಸ್ವಾಮಿಜಿ. ಈ ದಡದಲ್ಲಿ ನಾನು. ಅವರು ನನ್ನನ್ನು ಕರೆಯುತ್ತಿದ್ದಾರೆ. ನಾನು ಈಜದೇ ಅವರ ಬಳಿ ಓಡಿ ಹೋದೆ. ತನ್ನ ಹಿಂದೆ ಬರೋಕೆ ಹೇಳಿ ಹೊರಟರು, ನಾನು ಹೊರಟೆ. ಕೂಡಲೇ ಎಚ್ಚರ ಆಯಿತು. ನಾನು ಫೋಟೊದಲ್ಲಿ ನೋಡಿದ ಸ್ವಾಮಿಯೇ ಕನಸಿನಲ್ಲಿ ಬಂದಿದ್ದರು. ಅವರು ಯಾರು ಎಂದು ಕೇಳಿದಾಗ ರಾಘವೇಂದ್ರ ಸ್ವಾಮಿ ಎಂದ್ರು"
ಮಾತು ಮುಂದುವರೆಸಿದ ರಜನಿಕಾಂತ್, "ನಾನುಬಳಿಕ ರಾಘವೇಂದ್ರ ಸ್ವಾಮಿಗಳ ಮಠಕ್ಕೆ ಹೋದೆ. ನಾನು ದೊಡ್ಡ ಶ್ರೀಮಂತನಾಗಬೇಕು ಎಂದು ರಾಘವೇಂದ್ರ ಸ್ವಾಮಿ ಮಠದಲ್ಲಿ ಬೇಡಿಕೊಂಡೆ. ಆ ಬಳಿಕ ನಾನು ಕಂಡೆಕ್ಟರ್ ಆಗಿದ್ದು ಬಳಿಕ ಫಿಲ್ಮ್ ಇನ್ಸ್ಟಿಟ್ಯೂಟ್ ಸೇರಿ ಬಾಲಚಂದರ್ ಸಹಾಯದಿಂದ ಹೀರೊ ಆಗಿದ್ದು ಎಲ್ಲವೂ ನಡೆಯಿತು. ಬಳಿಕ ನಾನು ನಟನಾಗಿ ಮಂತ್ರಾಲಯಕ್ಕೆ ಹೋಗಿದ್ದೆ. ಅಂದು ನಾನು ಕನಸಿನಲ್ಲಿ ನೋಡಿದ್ದ ಆ ನದಿ ಆ ಜಾಗ ಅಲ್ಲಿ ನೋಡಿದೆ. ಅದಕ್ಕೂ ಮುನ್ನ ಆ ಜಾಗವನ್ನು ನೋಡಿರಲಿಲ್ಲ. ಆ ರಾಘವೇಂದ್ರ ಸ್ವಾಮಿ ಆಶೀರ್ವಾದದಿಂದ ನಾನು ನಾನು ಇವತ್ತು ಎಲ್ಲವನ್ನು ಸಾಧಿಸಿದ್ದೀನಿ ಎಂದಿದ್ದರು. ಆ ಒಂದು ರಾತ್ರಿ ಶಿವಾಜಿ ರಾವ್ ಜೀವನವನ್ನು ಬದಲಿಸಿತ್ತು.
ಯಶ್
ಚಿತ್ರರಂಗದ ಹಿನ್ನೆಲೆ ಇಲ್ಲದೇ ಬಣ್ಣದಲೋಕಕ್ಕೆ ಬಂದು ಗೆದ್ದವರಲ್ಲಿ ಯಶ್ ಕೂಡ ಒಬ್ಬರು. ಪ್ರತಿದಿನ ಚಿತ್ರರಂಗಕ್ಕೆ ಸಾಕಷ್ಟು ಜನ ಬರ್ತಾರೆ. ಆದರೆ ಎಲ್ಲರಿಗೂ ಯಶಸ್ಸು ಸಿಗುವುದಿಲ್ಲ. ನವೀನ್ ಗೌಡ ಕೂಡ ನಟನಾಗುವ ಆಸೆ ಕಂಡು ಮೈಸೂರಿನಿಂದ ಬೆಂಗಳೂರಿಗೆ ಬಂದಿದ್ದರು. ಚಿಕ್ಕಂದಿನಿಂದಲೇ ಅವರು ಹೀರೊ ಆಗುವ ಕನಸು ಕಂಡಿದ್ದರು. ಅದನ್ನು ನನಸು ಮಾಡಿಕೊಂಡಿದ್ದಾರೆ.
ಪಿಯುಸಿ ಮುಗಿಸಿ ವಿದ್ಯಾಭ್ಯಾಸ ಬಿಟ್ಟು ಹೀರೊ ಆಗುವ ಕನಸು ಕಂಡವರು ನವೀನ್ ಗೌಡ. ನೇರವಾಗಿ ಚಿತ್ರರಂಗಕ್ಕೆ ಬರುವ ಮುನ್ನ ರಂಗಭೂಮಿ ಪ್ರವೇಶಿಸಿದರು. ಬೆನಕ ತಂಡ ಸೇರಿಕೊಂಡರು. ಎಷ್ಟೋ ದಿನ ತಿನ್ನಲು ಹಣವಿಲ್ಲದೇ ಯಶ್ ಕಳ್ಳೆಪುರಿ ತಿಂದು ನೀರು ಕುಡಿದು ಮಲಗಿದ್ದು ಇದೆ. 'ಸ್ಟಾಪ್' ಎಂಬ ಚಿತ್ರದಲ್ಲಿ ಯಶ್ ಸಹಾಯಕ ನಿರ್ದೇಶಕರಾಗಿದ್ದರು. ಆದರೆ ಆ ಸಿನಿಮಾ ನಿಂತೇಹೋಗಿತ್ತು. ಒಮ್ಮೆ ನೆಂಟರ ಮನೆಯಲ್ಲಿ ಲಗೇಜ್ ಬ್ಯಾಗ್ ಇಡಲು ಅವಕಾಶ ಸಿಕ್ಕಿರಲಿಲ್ಲ. ಆಗ ಸ್ನೇಹಿತರಾಗಿದ್ದರ ಮೋಹನ್ ತಮ್ಮ ಮನೆಗೆ ಕರೆದುಕೊಂಡು ಹೋಗಿದ್ದರು.
ಮೋಹನ್ ಅವರ ಮನೆಗೆ ಹೋಗಿ ಅವರ ಮನೆ ಸ್ಥಿತಿ ಕಂಡು ಬ್ಯಾಗ್ ಮಾತ್ರ ಇಟ್ಟು ಅಲ್ಲಿಂದ ಹೊರಟು ಬಂದುಬಿಟ್ಟಿದ್ದರಂತೆ. ನೇರ ಹೋಗಿ ಮೆಜೆಸ್ಟಿಕ್ ಬಸ್ಸ್ಟಾಪ್ನಲ್ಲಿ ರಾತ್ರಿ ಮಲಗಿದ್ದರಂತೆ. ಈ ವಿಚಾರವನ್ನು ವೀಕೆಂಡ್ ವಿತ್ ರಮೇಶ್ ಶೋನಲ್ಲಿ ಸ್ವತಃ ಯಶ್ ವಿವರಿಸಿದ್ದರು. "ಅಂದು ರಾತ್ರಿ ಮೆಜೆಸ್ಟಿಕ್ನಲ್ಲಿ ಇಡೀ ಪ್ರಪಂಚ ನೋಡಿದೆ. ಒಂದ್ಕಡೆ ಯಾರೋ ಮೈಸೂರು ಎಂದು ಬಸ್ನವರು ಕೂಗುತ್ತಿದ್ದರು, ಮತ್ತೊಂದು ಕಡೆ ಗಾಂಧಿನಗರ.
ಅವತ್ತು ಬಸ್ ಹತ್ತಿ ಮತ್ತೆ ಮೈಸೂರಿಗೆ ಹೋಗಿಬಿಡ್ಲಾ? ಅಥವಾ ಇಲ್ಲೇ ಗಾಂಧಿನಗರದಲ್ಲಿ ಏನಾದರೂ ಸಾಧಿಸ್ಲಾ? ಎಂದು ಯಶ್ ಗೊಂದಲಕ್ಕೆ ಸಿಲುಕಿದ್ದರು. ಭಿಕ್ಷುಕರು, ವೇಶ್ಯೆಯರು ಎಲ್ಲಾ ತರಹದ ಜನರನ್ನು ನೋಡಿದೆ. ಬಸ್ಸ್ಟ್ಯಾಂಡ್ನಲ್ಲಿ ಮಲಗಿದ್ದರಿಗೆ ಪೊಲೀಸರು ಲಾಠಿಯಿಂದ ಹೊಡೆಯುತ್ತಿದ್ದರು. ಇವರೆಲ್ಲರ ನಡುವೆ ನಾನು ಬದುಕಬೇಕು ಎಂಬ ಕನಸು ಇತ್ತು. ಗೆಲ್ಲುವ ಹಠ ಬಂತು ಎಂದು ಯಶ್ ತಮ್ಮ ಜೀವನದ ಆ ಒಂದು ರಾತ್ರಿಯನ್ನು ನೆನಪು ಮಾಡಿಕೊಂಡಿದ್ದರು.
ದರ್ಶನ್
ತಂದೆ ತೂಗುದೀಪ ಶ್ರೀನಿವಾಸ್ ಹಾದಿಯಲ್ಲಿ ದರ್ಶನ್ ಚಿತ್ರರಂಗಕ್ಕೆ ಬಂದಿದ್ದರು. ಆದರೂ ತಂದೆ ಅಗಲಿಕೆ ಬಳಿಕ ಇಂಡಸ್ಟ್ರಿಯಲ್ಲಿ ಬೆಲೆ ಸಿಗಲಿಲ್ಲ. ಸಾಕಷ್ಟು ಅವಮಾನ ಅಪಮಾನ ಎದುರಿಸಿ ದರ್ಶನ್ ಬೆಳೆದು ಬಂದವರು. ಮೊದಲಿಗೆ ಲೈಟ್ ಬಾಯ್ ಆಗಿ ಚಿತ್ರರಂಗ ಪ್ರವೇಶಿಸಿದ್ದರು. ಮೊದಲ ದಿನ ಚೆನ್ನಾಗಿ ನೋಡಿದರು. 2ನೇ ದಿನ ನಾನು ಕೂರುವ ಚೇರ್ ಒದ್ದು ಬಿಟ್ಟಿದ್ದರು. ಅವತ್ತು ನನಗೆ ಭೂಮಿ ಬಾಯ್ಬಿಟ್ಟಂತೆ ಆಗಿತ್ತು. ಅದೇ ದಿನ ಮನೆಗೆ ಬಂದು ಅಮ್ಮನಿಗೆ ಹೇಳಿದೆ. ಸಿನಿಮಾ ಬೇಡ, ನಾನು ಚಿತ್ರರಂಗದಲ್ಲಿ ಕೆಲಸ ಮಾಡಲ್ಲ ಅಂತ ದರ್ಶನ್, 'ವೀಕೆಂಡ್ ವಿತ್ ರಮೇಶ್' ಶೋನಲ್ಲಿ ನೆನಪಿಸಿಕೊಂಡಿದ್ದರು.
ಮನೆಗೆ ಬಂದು ಅಮ್ಮನಿಗೆ ಹೇಳ್ದೆ. ನಾನು ಸಿನಿಮಾ ಕೆಲಸ ಮಾಡಲ್ಲ ಅಂತ. ನನಗೆ ಬೇಡ. ಇಷ್ಟು ಅವಮಾನ ಪಟ್ಕೊಂಡು ಕೆಲಸ ಮಾಡೋಕೆ ಇಷ್ಟ ಇಲ್ಲ. ಹೇಗಿದ್ದರೂ ಅಪ್ಪನ ತೂಗುದೀಪ ಎನ್ನುವ ಟ್ಯಾಗ್ ಇತ್ತು. ಅದಕ್ಕೆ ಅವಮಾನ ಮಾಡೋದು ಬೇಡ ಎಂದುಕೊಂಡೆ. ಅವತ್ತು ರಾತ್ರಿಯೆಲ್ಲಾ ನಿದ್ದೆ ಬರಲಿಲ್ಲ. ಆಮೇಲೆ ಒಂದು ಕ್ಷಣದಲ್ಲಿ ಅನ್ನಿಸಿತು. ಅಪ್ಪ ಇದ್ದಾಗ ಬೆಲೆ ಕೊಡುತ್ತಿದ್ದರು. ಈಗ ಕೊಡುತ್ತಿಲ್ಲ, ಅಷ್ಟೇ ಅಲ್ವಾ? ಅದನ್ನು ಪಡೆದುಕೊಂಡ್ರೆ ಆಯ್ತು ಎಂದು ದರ್ಶನ್ ನಿರ್ಧಾರ ಬದಲಿಸಿಕೊಂಡು ಮತ್ತೆ ಚಿತ್ರರಂಗದಲ್ಲೇ ಮುಂದುವರೆಯಬೇಕು ಎಂದುಕೊಂಡೆ. ಬೆಳಗ್ಗೆ ಸಾಮಾನ್ಯ ಲೈಟ್ಬಾಯ್ ತರ ಹೋದೆ, ಕ್ಯೂನಲ್ಲಿ ನಿಂತು ಊಟ ತಗೊಂಡೆ. ಅವತ್ತು ನಾನು ಇಂಡಸ್ಟ್ರಿ ಬೇಡ ಎಂದು ಬಿಟ್ಟಿದ್ದರೆ ಇವತ್ತು ನಾನು ಇಲ್ಲಿ ಕೂರುತ್ತಿರಲಿಲ್ಲ ಎಂದು ದರ್ಶನ್ ವಿವರಿಸಿದ್ದರು.


Click it and Unblock the Notifications











