Puneeth Rajukumar: "ತಮಿಳುನಾಡಿಗೆ ಎಂಜಿಆರ್.. ಕರ್ನಾಟಕಕ್ಕೆ ಅಪ್ಪು.. ಸಾವಿರ ವರ್ಷಕ್ಕೊಬ್ಬರು ಪುನೀತ್": ಹರಿಶೇಖರನ್ IPS
ಐಪಿಎಸ್ ಅಧಿಕಾರಿ ಪಿ. ಹರಿಶೇಖರನ್ ಇತ್ತೀಚೆಗೆ ಸಂದರ್ಶನವೊಂದರಲ್ಲಿ ಪುನೀತ್ ರಾಜ್ಕುಮಾರ್ ಜೊತೆಗಿನ ಒಡನಾಟವನ್ನು ಹಂಚಿಕೊಂಡಿದ್ದರು. "ತಮ್ಮ ಸರಳ, ಸಜ್ಜನಿಕೆ, ವಿಶಾಲ ಹೃದಯದಿಂದ ಅಪ್ಪು ನನ್ನ ಅಹಂ ಅನ್ನು ಇಳಿಸಿಬಿಟ್ಟರು" ಎಂದಿದ್ದರು. ಅದೇ ಸಂದರ್ಶನದಲ್ಲಿ ದಕ್ಷ ಅಧಿಕಾರಿ ಅಪ್ಪು ಕುರಿತು ಮತ್ತಷ್ಟು ಮಾಹಿತಿ ಬಿಚ್ಚಿಟ್ಟಿದ್ದಾರೆ. 1000 ವರ್ಷಕ್ಕೊಮ್ಮೆ ಇಂತಹ ವ್ಯಕ್ತಿತ್ವ ನಾವು ನೋಡಬಹುದು" ಎಂದಿದ್ಧಾರೆ.
"ಪುನೀತ್ ರಾಜ್ಕುಮಾರ್ ಅಗಲಿದ ಬಳಿಕ ಜನರು ನೀಡಿದ ಗೌರವ ನೋಡಿ ನನಗೆ ಬೇರಸವಾಯಿತು. ಅಯ್ಯೋ ನಾನು ಅಪ್ಪುಗೆ ಗೌರವ ಕೊಡಲಿಲ್ಲವೇ ಎನಿಸಿತು. ನಾನು ಒಂದು ದಿನ ಕೂಡ ವಿಶ್ ಮಾಡಲಿಲ್ಲವೇ? ಪುನೀತ್ ಬಂದು ನನಗೆ ಹಲೋ ಹೇಳಲಿ ಎಂದು ಎದುರು ನೋಡಿಬಿಟ್ಟೆನೇ? ಅಂದರೆ ನನಗೆ ಅಹಂ ಇಳಿಸಿದವರು ಅವರು. ಇದನ್ನು ನಾನು ಈ ಮೂಲಕ ವೀಕ್ಷಕರಿಗೆ ಹೇಳುತ್ತಿದ್ದೇನೆ"

"ಅಪ್ಪು ಕೊನೆಯುಸಿರೆಳೆದು 2 ವರ್ಷ ಆಗುತ್ತಾ ಬಂತು. ಇನ್ನು ಜನ ಅವರ ಸಮಾಧಿಗೆ ಹೋಗುತ್ತಿದ್ದಾರೆ ಅಂದ್ರೆ ಸುಮ್ಮನೆ ಅಲ್ಲ. ತಮಿಳುನಾಡಿನಲ್ಲಿ ಎಂಜಿಆರ್ ಗಳಿಸಿದ ಹೆಸರು, ಜನಪ್ರಿಯತೆಯನ್ನು ಕರ್ನಾಟಕದಲ್ಲಿ ಪುನೀತ್ ರಾಜ್ಕುಮಾರ್ ಸಂಪಾದಿಸಿದ್ದರು. ನನ್ನ ಪತ್ನಿಗೆ ಹೀಗೆಲ್ಲಾ ಆಯ್ತು ಎಂದಾಗ ನೀವು ತಪ್ಪು ಮಾಡಿಬಿಟ್ಟಿರಿ ಎಂದಳು. ಮನೆಗೆ ಒಮ್ಮೆ ಊಟಕ್ಕೆ ಕರೆಯಬಹುದಿತ್ತು ಅಂತ ಪತ್ನಿ ಹೇಳಿದ್ಲು. ಅಪ್ಪು ಭೋಜನ ಪ್ರಿಯ. ನಾನು ಕೂಡ ಚೆನ್ನಾಗಿ ಊಟ ಮಾಡ್ತೀನಿ. ನಮ್ಮ ಮನೆಯಲ್ಲೂ ಚೆನ್ನಾಗಿ ಅಡುಗೆ ಮಾಡುತ್ತಾರೆ. ಒಮ್ಮೆ ಪುನೀತ್ ನಮ್ಮ ಮನೆಗೆ ಬಂದಿದ್ದರೆ ಎಲ್ಲಾದರೂ ಹೇಳಿಕೊಳ್ಳುತ್ತಿದ್ದರು. ಹರಿಶೇಖರನ್ ಸರ್ ಮನೆಯಲ್ಲಿ ಊಟ ಚೆನ್ನಾಗಿತ್ತು ಎನ್ನುತ್ತಿದ್ದರು. ಆದರೆ ನಾನು ಊಟಕ್ಕೆ ಕರೆಯಲಿಲ್ಲವೇ ಎನ್ನುವ ಬೇಸರ ಇದೆ."
"ಪುನೀತ್ ರಾಜ್ಕುಮಾರ್ ಇಷ್ಟು ದೊಡ್ಡ ನಟ ಎನ್ನುವುದು ನನಗೆ ಗೊತ್ತಿರಲಿಲ್ಲ. ಜಿಮ್ನಲ್ಲಿ ವರ್ಕ್ಔಟ್ ಮಾಡುವಾಗಲೂ ಎಂದೂ ನಾನು ದೊಡ್ಡ ನಟ ಎಂದು ಬೀಗುತ್ತಿರಲಿಲ್ಲ. ನಾನು ಡಾ. ರಾಜ್ಕುಮಾರ್ ಮಗ ಎಂದು ತೋರಿಸಿಕೊಳ್ಳುತ್ತಿರಲಿಲ್ಲ. ಆ ಮನುಷ್ಯ ಏನೆಲ್ಲಾ ಸಹಾಯ ಮಾಡಿದ್ದರು. ಯಾವುದನ್ನು ತೋರಿಸಿಕೊಳ್ಳಲಿಲ್ಲ. ದೇವರು ಕೊಟ್ಟಿದ್ದನ್ನು ಇಲ್ಲದವರಿಗೆ ಕೊಡಬೇಕು. ಅಪ್ಪು ಆ ಕೆಲಸ ಮಾಡಿದ್ದರು. ಒಬ್ಬ ನಟ ಇಷ್ಟು ದೊಡ್ಡದಾಗಿ ಅಭಿಮಾನ ಸಂಪಾದಿಸಬಹುದು ಎಂದು ನಾನು ಊಹಿಸಿರಲಿಲ್ಲ."
"ತುಂಬಾ ಗಟ್ಟಿಮುಟ್ಟಾಗಿ ಇದ್ದರು. ಅವರ ವರ್ಕೌಟ್ ವಿಡಿಯೋ ನೀವು ನೋಡಿರುತ್ತೀರಾ. ಒಬ್ಬ ನಟನಿಗೆ ಈ ಮಟ್ಟಿಗಿನ ಅಭಿಮಾನ ನೋಡಿ ನನಗೆ ಅಚ್ಚರಿಯಾಗಿತ್ತು. ಇದು 1000 ವರ್ಷಕ್ಕೆ ಒಮ್ಮೆ ನಡೆಯುವಂತದ್ದು. ಪುನೀತ್ ರಾಜ್ಕುಮಾರ್ರಂತ ವ್ಯಕ್ತಿತ್ವ ಕರ್ನಾಟಕದಲ್ಲಿ 1000 ಸಾವಿರ ವರ್ಷದಲ್ಲಿ ಒಬ್ಬರಿಗೆ ಇರುತ್ತದೆ ಅನ್ನೋದು ನನ್ನ ಅಭಿಪ್ರಾಯ. ನಾನು ಒಬ್ಬ ಐಪಿಎಸ್ ಆಫೀಸರ್. ನನ್ನಂತವರು ಸಾವಿರ ಜನ ಇದ್ದಾರೆ. ನಾನೊಬ್ಬನೇ ಅವರಿಗೆ ಗೊತ್ತಿದ್ದ ಆಫೀಸರ್ ಏನಲ್ಲ. ಅವರು ಎಂದು ತಾನೊಬ್ಬ ನಟ ಎಂದು ತೋರ್ಪಡಿಸಿಕೊಳ್ಳುತ್ತಿರಲಿಲ್ಲ."

"ತಮಿಳು ಚೆನ್ನಾಗಿ ಮಾತನಾಡುತ್ತಿದ್ದರು. ಜಿಮ್ನಲ್ಲಿ ನನ್ನ ವರ್ಕೌಟ್ ನೋಡಿ, ಸೂಪರ್ ಆಗಿ ಮಾಡಿದ್ರಿ ಸರ್ ಎನ್ನುತ್ತಿದ್ದರು. ನಾನು ತಮಿಳುನಾಡಲ್ಲಿ ಹುಟ್ಟಿಬೆಳೆದಿದ್ದು ಸರ್, ಆ ಆ ಹೋಟೆಲ್ನಲ್ಲಿ ಅದು ಚೆನ್ನಾಗಿರುತ್ತೆ, ಇದು ಚೆನ್ನಾಗಿರುತ್ತೆ ಎನ್ನುತ್ತಿದ್ದರು. ಸರ್ 25 ವರ್ಷದಲ್ಲಿ ಸಾಕಷ್ಟು ತನಿಖೆ ನಡೆಸಿರುತ್ತೀರಾ, ಸಾಕಷ್ಟು ಕೇಸ್ ನೋಡಿರುತ್ತೀರಾ. ಒಮ್ಮೆ ಕೂತು ಮಾತಾಡೋಣ ಎಂಟ್ರೆಸ್ಟಿಂಗ್ ಆಗಿರುತ್ತೆ ಎಂದರು. ನಾನು ಅದ್ಯಾವುದನ್ನು ಗಂಭೀರವಾಗಿ ತೆಗೆದುಕೊಂಡಿರಲಿಲ್ಲ" ಎಂದು ಹರಿಶೇಖರನ್ ಪಶ್ಚಾತ್ತಾಪ ವ್ಯಕ್ತಪಡಿಸಿದ್ದಾರೆ.


Click it and Unblock the Notifications











