Puneeth Rajkumar: ಐಪಿಎಸ್ ಹರಿಶೇಖರನ್ ಅಹಂ ಇಳಿಸಿದ್ದ ಅಪ್ಪು: ಭಾವುಕರಾಗಿ ದಕ್ಷ ಅಧಿಕಾರಿ ಬಿಚ್ಚಿಟ್ಟ ಕಥೆ ಏನು?
ದಿವಂಗತ ನಟ ಪುನೀತ್ ರಾಜ್ಕುಮಾರ್ ನಗು , ಅವರ , ಸರಳತೆ , ಅವರ ಸಹಾಯ ಮನೋಭಾವ, ಅವರ ವಿನಯತೆಯನ್ನು ಅಭಿಮಾನಿಗಳು ಎಂದೂ ಮರೆಯೋಕ್ಕೆ ಸಾಧ್ಯವಿಲ್ಲ. ತಿಂಗಳುಗಳೇ ಕಳೆದರೂ ಅಪ್ಪು ಅಗಲಿಕೆಯ ನೋವು ಕರಗುತ್ತಿಲ್ಲ. ಕಂಠೀರವ ಸ್ಟುಡಿಯೋದಲ್ಲಿರುವ ಸಮಾಧಿ ಬಂದು ನಮಿಸುವವರ ಸಂಖ್ಯೆ ಕಮ್ಮಿ ಆಗಲಿಲ್ಲ. ಅಪ್ಪು ಕುರಿತು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರಾದ ಹರಿಶೇಖರನ್ ಮಾತುಗಳು ವೈರಲ್ ಆಗುತ್ತಿದೆ.
ತಮಿಳುನಾಡು ಮೂಲದ ಪಿ. ಹರಿಶೇಖರನ್ ಹಲವು ವರ್ಷಗಳಿಂದ ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಐಪಿಎಸ್ ಅಧಿಕಾರಿ ತಮಿಳು ಯೂಟ್ಯೂಬ್ ಸಂದರ್ಶನವೊಂದರಲ್ಲಿ ಪುನೀತ್ ರಾಜ್ಕುಮಾರ್ ಕುರಿತು ಮಾತನಾಡಿದ್ದಾರೆ. ಅಪ್ಪು ಜೊತೆಗಿನ ಒಡನಾಟವನ್ನು ನೆನಪಿಸಿಕೊಂಡಿದ್ದಾರೆ. ಪುನೀತ್ ರಾಜ್ಕುಮಾರ್ ನನ್ನ ಈಗೋ ಹೊಡೆದು ಹಾಕಿದರು ಎಂದು ಹೇಳಿದ್ದಾರೆ. ಅಪ್ಪುನ ಮನೆಗೆ ಕರೆಯಲು ಸಾಧ್ಯವಾಗಲಿಲ್ಲವೇ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಅಪ್ಪು ವಿಚಾರದಲ್ಲಿ ಎಲ್ಲೂ ಹೇಳಿಕೊಳ್ಳದಂತಹ ವಿಚಾರವನ್ನು ಸಂದರ್ಶನದಲ್ಲಿ ಬಿಚ್ಚಿಟ್ಟಿದ್ದಾರೆ.

"ಪುನೀತ್ ರಾಜ್ಕುಮಾರ್ ಅಗಲಿಕೆ ನನ್ನನ್ನು ಬಹಳ ಕದಲಿಸಿಬಿಟ್ಟಿತು. ಅಪ್ಪು ದೊಡ್ಡ ಸ್ಟಾರ್ ಎಂದು ಹೇಳೋದಾ? ಸಹೋದರನ ರೀತಿ ಇದ್ದರು ಅನ್ನೋದಾ? ಯಾವಾಗಲೂ ನನ್ನನ್ನು ಪ್ರೀತಿಯಿಂದ ಸಾಹೇಬ್ರೆ, ಸಾಹೇಬ್ರೆ ಎಂದು ಕರೆಯುತ್ತಿದ್ದರು. ಅದನ್ನೆಲ್ಲಾ ನೆನಪಿಸಿಕೊಂಡರೆ ಮನಸ್ಸಿಗೆ ಬಹಳ ನೋವಾಗುತ್ತದೆ. ಅಪ್ಪು ಅಗಲಿಕೆ ವಿಚಾರ ನನ್ನ ಪತ್ನಿ, ಮಕ್ಕಳು ಎಲ್ಲರಿಗೂ ಆಘಾತ ತಂದಿತ್ತು."
"ಕಳೆದ ಕೆಲ ವರ್ಷಗಳಿಂದ ನಾನು ನಾನಾ ಹುದ್ದೆಗಳಲ್ಲಿ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದೇನೆ. ಕೆಲ ವರ್ಷಗಳ ಹಿಂದೆ ಸ್ಟೂಡೆಂಟ್ ಪೊಲೀಸ್ ಕೆಡೆಟ್ ಕಾರ್ಯಕ್ರಮ ಆರಂಭಿಸಲು ನನಗೆ ಸೂಚನೆ ಬಂದಿತ್ತು. ಪುನೀತ್ ರಾಜ್ಕುಮಾರ್ ಕಾರ್ಯಕ್ರಮಕ್ಕೆ ಬಂದರೆ ವಿದ್ಯಾರ್ಥಿಗಳನ್ನು ಹುರಿದುಂಬಿಸಲು ಚೆನ್ನಾಗಿರುತ್ತದೆ ಎಂದು ನಮ್ಮ ಸಿಬ್ಬಂದಿ ಒಬ್ಬರು ಹೇಳಿದರು. ನಾನು ಸರಿ ಎಂದು ಸುಮ್ಮನಾದೆ. ನನ್ನ ಪರವಾಗಿ ನಮ್ಮ ಇನ್ಸ್ಪೆಕ್ಟರ್ ಹೋಗಿ ಅಪ್ಪುನ ಕಾರ್ಯಕ್ರಮಕ್ಕೆ ಅತಿಥಿಯಾಗಿ ಆಹ್ವಾನಿಸಿ ಬಂದಿದ್ದರು. ನಾನು ಬರುತ್ತಾರೋ ಇಲ್ಲವೋ ಎಂದುಕೊಂಡಿದ್ದೆ"
"ಸರ್ ಕರೆದ್ರಾ? ಹಾಗಿದ್ದರೆ ನಾನು ಬರ್ತೀನಿ ಎಂದು ನಮ್ಮ ಇನ್ಸ್ಪೆಕ್ಟರ್ ಬಳಿ ಹೇಳಿದ್ದರಂತೆ. ನಾನಂತೂ ಕರೆದಿಲ್ಲ. ಒಂದು ಫೋನ್ ಕೂಡ ಮಾಡಲಿಲ್ಲ. ನನ್ನ ಒಳ ಮನಸ್ಸಿನಲ್ಲಿ ಬೇಸರವಾಗುತ್ತಿತ್ತು. ಅಯ್ಯೋ ನಾನು ಆಹ್ವಾನಿಸಬೇಕಿತ್ತು. ಆದರೆ ಆಹ್ವಾನಿಸಲಿಲ್ಲ, ತಪ್ಪು ಮಾಡಿದೆ ಎಂದು ಇವತ್ತಿಗೂ ಅನಿಸುತ್ತದೆ."
"ನಾನು ಬರ್ತಾರೋ ಇಲ್ಲವೋ ಎಂದುಕೊಂಡಿದ್ದೆ. ಆದರೆ ಸಮಯಕ್ಕೆ ಸರಿಯಾಗಿ ಬಂದರು. ಬಂದ ಕೂಡಲೇ ಸರ್, ಎಂದು ಬಂದು ಮಾತನಾಡಿಸಿದರು. ನಿಜ ಹೇಳ್ತೀನಿ, ನಾನೇ ಆಗಿದ್ದರೂ ಹಾಗೆ ಹೋಗುತ್ತಿರಲಿಲ್ಲ. ಯಾರೋ ಬಂದು ಕರೆದರೆ ನಾನು ಯಾವುದೇ ಕಾರ್ಯಕ್ರಮಕ್ಕೆ ಹೋಗಲ್ಲ. ನಿಜಕ್ಕೂ ಇದನ್ನು ಹೇಳಲು ನಾನು ಭಾವುಕನಾಗುತ್ತಿದ್ದೇನೆ. ಅವತ್ತು ಯಾವುದೇ ಈಗೋ ಇಲ್ಲದೇ ಬಂದು ಶೇಕ್ ಹ್ಯಾಂಡ್ ಮಾಡಿ ಅಪ್ಪು ಮಾತನಾಡಿಸಿದರು."
"ಸರ್ ನಾನು ನಿಮ್ಮ ಅಭಿಮಾನಿ. ನಿಮ್ಮ ರನ್ನಿಂಗ್ ಹೇಗಿದೆ ಸರ್ ಎಂದು ಕೇಳಿದರು. ನಾವು ಅದೇ ಮೊದಲ ಬಾರಿ ಭೇಟಿ ಆಗಿದ್ದು. ಆದರೆ ಅವರು ಬಹಳ ಆಪ್ತರಂತೆ ಮಾತನಾಡಿದರು. ಅದಕ್ಕು ಮುನ್ನ ಪುನೀತ್ ಜೊತೆ ಕೆಲ ಬಾರಿ ಫೋನ್ನಲ್ಲಿ ಮಾತನಾಡಿದ್ದೆ ಅಷ್ಟೆ. ನಾನು 50 ನಿಮಿಷಗಳಲ್ಲಿ 10 ಕಿಲೋ ಮೀಟರ್ ಮ್ಯಾರಥಾನ್ ಓಡಿದ್ದೆ. ಆದರೆ ಅಪ್ಪು ಆಗ ರನ್ನಿಂಗ್ ಎಲ್ಲಾ ಮಾಡುತ್ತಿರಲಿಲ್ಲ. ಜಿಮ್ ಮಾಡುತ್ತಿದ್ದರು. ಸರಿ ಕಾರ್ಯಕ್ರಮ ಚೆನ್ನಾಗಿ ನಡೀತು"
"ಪುನೀತ್ ರಾಜ್ಕುಮಾರ್ ಒಬ್ಬ ನಟ ಎಂದು ಗೊತ್ತಿತ್ತು. ಸ್ಟಾರ್ ಅಂತ ಗೊತ್ತಿತ್ತು. ಅದು ಬಿಟ್ಟರೆ ನಾನು ಹೆಚ್ಚು ಸಿನಿಮಾಗಳನ್ನು ನೋಡುತ್ತಿರಲಿಲ್ಲ. ಆ ಘಟನೆ ಬಳಿಕ ಒಮ್ಮೆ ನಾನು ನಮ್ಮ ಮನೆಯಿಂದ ಸದಾಶಿವನಗರದಲ್ಲಿ ಜೀಪ್ ಏರಿ ಹೋಗುತ್ತಿದ್ದೆ. ದಿಢೀರನೆ ಹಿಂದಿನಿಂದ ಒಂದು ಐಷಾರಾಮಿ ಕಾರ್ ವೇಗವಾಗಿ ಬಂದು ಅಟ್ಯಾಕ್ ಮಾಡುವಂತೆ ಬಂದು ನಿಂತಿತ್ತು. ನನಗೆ ಬಹಳ ಕೋಪ. ಯಾರದು ಅಂತ ಬೈಯಲು ಇಳಿದೆ. ಅಷ್ಟರಲ್ಲಿ ಸರ್ ನಮಸ್ಕಾರ ಎಂದು ಅಪ್ಪು ಕಾರ್ನಿಂದ ಇಳಿದು ಬಂದರು"
"ಬಂದ ಕೂಡಲೇ ಸರ್, ಹೇಗಿದ್ದೀರಾ? ಚೆನ್ನಾಗಿದ್ದೀರಾ? ಎಂದು ಮಾತನಾಡಿಸಿದರು. ನನಗೆ ಆ ಕ್ಷಣಕ್ಕೆ ಏನು ಮಾಡಬೇಕು ಎಂದು ಗೊತ್ತಾಗಲಿಲ್ಲ. ನಾನು ಖುಷಿಯಿಂದ ಮಾತನಾಡಿಸಿದೆ. ಪರಸ್ಪರ ಉಭಯ ಕುಶಲೋಪರಿ ವಿಚಾರಿಸಿದೆವು. ನಾನು ಈಗ ರನ್ನಿಂಗ್ ಮಾಡ್ತಿದ್ದೀನಿ, ನೀವು ಬರ್ತಿಲ್ವಲ್ಲ ಸರ್ ಎಂದರು. ಬಳಿಕ ನೀವು ವರ್ಕ್ಔಟ್ ಮಾಡೋದು ಯಾವ ಜಿಮ್ ಸರ್, ಅದೇ ಜಿಮ್ಗೆ ಬರ್ತೀನಿ ಅಂದ್ರು."
"ಏನ್ ಸರ್, ಮನೆ ಕಟ್ಟಿಸಿದ್ದೀರಂತೆ. ಕರೆಯಲೇ ಇಲ್ಲ ಎಂದು ಕೇಳಿದರು. ಇಲ್ಲ ಸರ್ ಸಣ್ಣ ಮನೆ ಎಂದೆ. ಅವರು ಆ ರೀತಿ ಕೇಳುತ್ತಿದ್ದಂತೆ ಏನು ಹೇಳಬೇಕು ಗೊತ್ತಾಗಲಿಲ್ಲ. ಅಷ್ಟು ಅಣ್ಣನಂತೆ, ಸ್ನೇಹಿತನಂತೆ ವಿನಮ್ರತೆಯಿಂದ ಕೇಳಿದರು. ನಾನು ಏನು ಹೇಳುವುದು ಅಂತ ಗೊತ್ತಿಲ್ಲದೇ, ಸುಳ್ಳು ಹೇಳಿದೆ. ಕೋವಿಡ್ ಟೈಮ್ ಅಲ್ಲಿ ಯಾರನ್ನು ಕರೆಯಲು ಆಗಲಿಲ್ಲ ಸ್ವಾರಿ ಎಂದೆ. ಅದಕ್ಕವರು ಪರವಾಗಿಲ್ಲ ಬಿಡಿ ಸರ್, ಮನೆಗೆ ಬರ್ತೀನಿ, ಪಾರ್ಟಿ ಮಾಡೋಣ ಬಿಡಿ ಎಂದರು"
"ಅದನ್ನೆಲ್ಲಾ ನೆನಪಿಸಿಕೊಂಡರೆ ಈಗ ನನ್ನ ಮನಸ್ಸಿಗೆ ಬೇಸರವಾಗುತ್ತದೆ. ಅಪ್ಪುನ ಮನೆಗೆ ಕರೆಯಲೇ ಇಲ್ಲವಲ್ಲ ಎಂದು ನೋವಾಗುತ್ತದೆ. ಅವರು ಮನೆಗೆ ಬಂದಿದ್ದರೆ ಮತ್ತಷ್ಟು ಮಾತನಾಡಬಹುದಿತ್ತು ಎನಿಸುತ್ತದೆ. ಇದೆಲ್ಲ ಆದ ಬಳಿಕ ಜಿಮ್ನಲ್ಲಿ ಸಿಗುತ್ತಿದ್ದರು. ಬಂದ ಕೂಡಲೇ ಗುಡ್ಮಾರ್ನಿಂಗ್ ಸರ್, ಹೇಗಿದ್ದೀರಾ ಸರ್, ಎಂದು ಮಾತನಾಡಿಸುತ್ತಿದ್ದರು. ನಾನು ಒಂದು ದಿನ ಕೂಡ ಅವರನ್ನು ನೋಡಿದ ಕೂಡಲೇ ಮಾತನಾಡಿಸಲಿಲ್ಲ, ವಿಶ್ ಮಾಡಲಿಲ್ಲ."
"ಪುನೀತ್ ರಾಜ್ಕುಮಾರ್ ನನ್ನನ್ನು ಜಿಮ್ನಲ್ಲಿ ಹುಡುಕಿ ಹುಡುಕಿ ಬಂದು ವಿಶ್ ಮಾಡುತ್ತಿದ್ದರು. ನನ್ನ ಈಗೋ ಹೊಡೆದು ಹಾಕಿದರು. ಪ್ರತಿ ವ್ಯಕ್ತಿಗೂ ಈಗೋ ಇರುತ್ತದೆ ಅಲ್ಲವೇ. ನಾನು ಕೆಲವೊಮ್ಮೆ ಅಪ್ಪುನ ನೋಡಿಯೂ ನೋಡದಂತೆ ಇದ್ದಾಗಲೂ ಅವರಾಗಿಯೇ ಬಂದು ವಿಶ್ ಮಾಡಿ ಮಾತನಾಡಿಸಿರುವುದು ಇದೆ. ನನಗೆ ಮಾತ್ರವಲ್ಲ, ನನ್ನ ಮಗ ಕೂಡ ಅದೇ ಜಿಮ್ಗೆ ಬರ್ತಿದ್ದ. ನಾನು ಜಿಮ್ಗೆ ಹೋಗದ ದಿನ ಅವನ ಬಳಿಯೂ ನನ್ನ ಬಗ್ಗೆ ಅಪ್ಪು ವಿಚಾರಿಸುತ್ತಿದ್ದರು. ಅಪ್ಪು ಮನಸ್ಸು ಏನು ಅನ್ನುವುದು ನನಗೆ ಆಗ ಗೊತ್ತಾಗಲಿಲ್ಲ. ಅಪ್ಪು ಅಗಲಿದ ಮೇಲೆ ಜನ ನೀಡಿದ ಗೌರವ, ಪ್ರೀತಿ ನೋಡಿದಾಗ ಛೇ, ನಾನು ಅಪ್ಪುಗೆ ಗೌರವ ನೀಡಲಿಲ್ಲವೇ ಎನಿಸಿತು" ಎಂದು ಹರಿಶೇಖರನ್ ವಿವರಿಸಿದ್ದಾರೆ.


Click it and Unblock the Notifications











