Pan India Race : ಇನ್ನು ಮುಂದೆ ಕನ್ನಡ- ತೆಲುಗು ಸಿನಿಮಾಗಳ ನಡುವೆ ಪ್ಯಾನ್ ಇಂಡಿಯಾ ವಾರ್?
ಭಾರತೀಯ ಸಿನಿಮಾ ರಂಗದಲ್ಲಿ ಕಳೆದ ಐದಾರು ವರ್ಷಗಳ ಬೆಳವಣಿಗೆಗಳು ತೀರಾ ವಿಭಿನ್ನವಾಗಿದೆ. ಎಸ್ .ಎಸ್. ರಾಜಮೌಳಿ ನಿರ್ದೇಶನದ ಬಾಹುಬಲಿ ಸರಣಿಯಿಂದ ಆರಂಭವಾದ ಪ್ಯಾನ್ ಇಂಡಿಯಾ ಸಿನಿಮಾಗಳ ಪ್ರಯತ್ನ ಈಗ 'ಕೆಜಿಎಫ್ -2' ಚಿತ್ರದ ಮೂಲಕ ತಾರಸ್ಥಾಯಿಗೆ ಸೇರಿದೆ. ಒಂದೆಡೆ ಬಾಲಿವುಡ್ ಚಿತ್ರಗಳು ಈಗ ಸೌತ್ ಸಿನಿಮಾಗಳ ಬಿಡುಗಡೆಯಿಂದ ನೋಡಿಕೊಂಡು ತಮ್ಮ ಚಿತ್ರಗಳನ್ನು ಬಿಡುಗಡೆ ಮಾಡಬೇಕಾದ ಸ್ಥಿತಿಗೆ ಬಂದು ತಲುಪಿದೆ.
ಇನ್ನೊಂದೆಡೆ ಸೌತ್ ಸಿನಿಮಾಗಳ ಬಜೆಟ್ ನೂರು-ಇನ್ನೂರು ಹೀಗೆ ಮಿತಿ ಮೀರುತ್ತಿದೆ. ಇನ್ನು ಕಲೆಕ್ಷನ್ ವಿಚಾರಕ್ಕೆ ಬಂದರೆ ಸಾವಿರ ಕೋಟಿಗೂ ಮೀರಿ ಗಳಿಕೆ ಮಾಡುವ ಹಾದಿಯಲ್ಲಿವೆ. ಈಗ ಪ್ಯಾನ್ ಇಂಡಿಯಾ ಸೂಪರ್ ಸ್ಟಾರ್ಗಳು ಎಂದರೆ ಅದು ಜೂನಿಯರ್ ಎನ್ಟಿಆರ್, ರಾಮ್ ಚರಣ್ ತೇಜ, ಪ್ರಭಾಸ್, ಅಲ್ಲು ಅರ್ಜುನ್ ಮತ್ತು ಕನ್ನಡದ ಯಶ್. ಇವರ ಚಿತ್ರಗಳ ಮುಂದೆ ಬಾಲಿವುಡ್ ಚಿತ್ರಗಳು ತೀರಾ ಸಣ್ಣದಾಗಿ ಕಾಣುತ್ತಿವೆ. ಅದರಲ್ಲೂ ಈಗ ನೀವು ಸರಿಯಾಗಿ ಗಮನಿಸಿದರೆ ತೆಲುಗು ಮತ್ತು ಕನ್ನಡ ಚಿತ್ರಗಳು ಬಾಲಿವುಡ್ ಮೇಲೆ ದಂಡಯಾತ್ರೆ ಮಾಡುತ್ತಿವೆ.

ಬಾಲಿವುಡ್ ಮೇಲೆ ಟಾಲಿವುಡ್ ದಂಡಯಾತ್ರೆ
ಎಸ್. ಎಸ್. ರಾಜಮೌಳಿ ನಿರ್ದೇಶನದ ಬಾಹುಬಲಿ 1 ಮತ್ತು 2 ಚಿತ್ರಗಳ ಮೂಲಕ ತೆಲುಗು ಸಿನಿಮಾರಂಗ ಇತರ ಸಿನಿಮಾರಂಗಗಳಿಗೆ ಪ್ಯಾನ್ ಇಂಡಿಯಾ ಸಿನಿಮಾಗಳ ಪರಿಚಯ ಮಾಡಿಕೊಟ್ಟಿತು. ಬಳಿಕ ಪ್ರಭಾಸ್ ಅಭಿನಯದ 'ಸಾಹೋ', ಸುಕುಮಾರ್ ನಿರ್ದೇಶನದ 'ಪುಷ್ಪ-1', ರಾಜಮೌಳಿ ನಿರ್ದೇಶನದ 'ಆರ್ ಆರ್ ಆರ್' ಚಿತ್ರಗಳು ಕೂಡ ಪ್ಯಾನ್ ಇಂಡಿಯಾ ಚಿತ್ರಗಳಾಗಿ ಭಾರಿ ಯಶಸ್ಸನ್ನು ಕಂಡಿದೆ. ಅಲ್ಲದೆ ಮುಂಬರುವ ದಿನಗಳಲ್ಲಿ ತೆಲುಗಿನಿಂದ ಪ್ರಶಾಂತ್ ನೀಲ್ ನಿರ್ದೇಶನದ 'ಸಲಾರ್', ಪುಷ್ಪ -2'ಶಂಕರ್ -ರಾಮ್ ಚರಣ್ ತೇಜ ಕಾಂಬಿನೇಷನ್ನಲ್ಲಿ ಮೂಡಿಬರುತ್ತಿರುವ 'RC-15' 750 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ನಾಗ ಅಶ್ವಿನ್ ನಿರ್ದೇಶನದಲ್ಲಿ ಪ್ರಭಾಸ್ ಅಭಿನಯಿಸುತ್ತಿರುವ ಪ್ಯಾನ್ ವರ್ಲ್ಡ್ ಸಿನಿಮಾ 'ಪ್ರಾಜೆಕ್ಟ್ -K' ರೆಡಿಯಾಗಿದೆ. ಇನ್ನು ನಿರ್ಮಾಣಕ್ಕೆ ಮೊದಲೇ ಎಸ್ಎಸ್ ರಾಜಮೌಳಿ ನಿರ್ದೇಶನದಲ್ಲಿ ಮಹೇಶ್ ಬಾಬು ಅಭಿನಯಿಸಲಿರುವ ಸಿನಿಮಾ ಸುಮಾರು 800 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಲಿದೆ. ಈ ಎಲ್ಲಾ ಸಿನಿಮಾಗಳೂ ಮುಂಬರುವ ದಿನಗಳಲ್ಲಿ ತೆಲುಗು ಚಿತ್ರರಂಗ ಬಾಲಿವುಡ್ ಮೇಲೆ ದಂಡಯಾತ್ರೆಯನ್ನು ಮುಂದುವರಿಸುವುದರ ಸಂಕೇತ.

ತಮಿಳು ಸಿನಿಮಾ ಕಥೆಯೇನು?
ಒಂದು ಕಾಲದಲ್ಲಿ ಸೌತ್ ಸಿನಿಮಾ ಎಂದರೆ ಅದನ್ನು ತಮಿಳು ಸಿನಿಮಾ ರಂಗ ಅಂತಲೇ ಪರಿಗಣಿಸಲಾಗುತ್ತಿತ್ತು. ಹಿಂದಿನ ತಲೆಮಾರಿನ ನಿರ್ದೇಶಕರನ್ನು ನಾವು ನೋಡಿದರೆ ಕೆ.ಬಾಲಚಂದರ್, ಭಾರತಿರಾಜ, ಬಾಲ ಮಹಿಂದ್ರ, ಶ್ರೀಧರ್ ಮುಂತಾದ ನಿರ್ದೇಶಕರು ಹೊಸ ಅಲೆಯ ಚಿತ್ರಗಳನ್ನು ತಮಿಳು ಸಿನಿಮಾರಂಗದಲ್ಲಿ ತೆರೆಗೆ ತಂದರು. ಆ ನಂತರದ ಸಮಯದಲ್ಲಿ ಮಣಿರತ್ನಂ, ಶಂಕರ್, ಮುರುಗದಾಸ್ನಂತಹ ನಿರ್ದೇಶಕರು ತಮಿಳು ಸಿನಿಮಾರಂಗದ ವಿಜಯ ಪತಾಕೆಯನ್ನು ರಾಷ್ಟ್ರೀಯ, ಅಂತರಾಷ್ಟ್ರೀಯ ಮಟ್ಟಕ್ಕೆ ತೆಗೆದುಕೊಂಡು ಹೋದರು. ರಜನಿಕಾಂತ್- ಕಮಲಹಾಸನ್ ಅಂತಹ ನಾಯಕನಟರು ಭಾರತೀಯ ಸಿನಿಮಾ ರಂಗದಲ್ಲಿ ದೊಡ್ಡಮಟ್ಟದಲ್ಲಿ ಜನಪ್ರಿಯರಾಗಿದ್ದ ತಾರೆಗಳು. ಬಾಲಿವುಡ್ ಕೂಡ ಸೌತ್ ಸಿನಿಮಾ ಎಂದರೆ ಕೇವಲ ತಮಿಳು ಸಿನಿಮಾಗಳು ಎಂಬಂತೆ ಭಾವಿಸುತ್ತಿದ್ದರು. ಶಂಕರ್ ನಿರ್ದೇಶನದಲ್ಲಿ ರಜನಿಕಾಂತ್ ಅಭಿನಯದ 'ರೋಬೋ'ಚಿತ್ರ ಹೊರತುಪಡಿಸಿ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾ ತಮಿಳಿನಿಂದ ಬಂದಿಲ್ಲ. ತಮಿಳು ನಿರ್ದೇಶಕರು ಮತ್ತು ನಾಯಕ ನಟರು ಕೂಡ ಹಿಂದಿ ಸಿನಿಮಾರಂಗದಲ್ಲಿ ದೊಡ್ಡಮಟ್ಟದ ಛಾಪು ಮೂಡಿಸಲು ಸಾಧ್ಯವಾಗಿಲ್ಲ.
ಹಿಂದೆ ವಿಜಯ್ ಅಭಿನಯದ 'ಪುಲಿ' ಚಿತ್ರ ಪ್ಯಾನ್ ಇಂಡಿಯಾ ಸಿನಿಮಾ ಹಾಗೆ ಬಿಡುಗಡೆಯಾಯಿತು. ಆದರೆ ಸಿನಿಮಾ ಬಾಕ್ಸಾಫೀಸ್ನಲ್ಲಿ ಸೋತು ಹೋಯ್ತು. ಇತ್ತೀಚೆಗೆ ದೊಡ್ಡ ಸುದ್ದಿ ಮಾಡಿದ 'ಬೀಸ್ಟ್' ಮಕಾಡೆ ಮಲಗಿದೆ. ವಿಜಯ್, ಸೂರ್ಯ, ವಿಕ್ರಂ ಇಂತಹ ದೊಡ್ಡ ನಟರ ಚಿತ್ರಗಳು ಕೂಡ ಹಿಂದಿ ಸಿನಿಮಾರಂಗ ಅಥವಾ ಹಿಂದಿ ಆಡಿಯನ್ಸ್ ಅನ್ನು ಹೆಚ್ಚಿಗೆ ಚಿತ್ರಮಂದಿರಗಳ ಕಡೆಗೆ ಕರೆದುಕೊಂಡು ಬರುಲು ವಿಫಲವಾಗಿವೆ. ಅಲ್ಲಿಗೆ ಪ್ಯಾನ್ ಇಂಡಿಯಾ ವಿಷಯದಲ್ಲಿ ತಮಿಳು ಚಿತ್ರರಂಗ ಸದ್ಯ ಸೋತಿದೆ. ಪ್ರಸ್ತುತ ತಮಿಳಿನಲ್ಲಿ ಯಾವುದೇ ಪ್ಯಾನ್ ಇಂಡಿಯಾ ಸಿನಿಮಾ ನಿರ್ಮಾಣವಾಗುತ್ತಿಲ್ಲ.

ಮಲಯಾಳಂ ಸಿನಿಮಾದಲ್ಲಿ ಕಂಟೆಂಟ್
ಇನ್ನು ಮಲಯಾಳಂ ಚಿತ್ರರಂಗಕ್ಕೆ ಬರುವುದಾದರೆ ಮಲಯಾಳಿ ಚಿತ್ರಗಳು ಸಣ್ಣ ಬಜೆಟ್ಟಿನಲ್ಲಿ ಅಲ್ಲಿನ ಸಾಂಸ್ಕೃತಿಕ ವಾತಾವರಣವನ್ನು ಆಧರಿಸಿ ನಿರ್ಮಾಣಗೊಳ್ಳುತ್ತದೆ. ಬಹುತೇಕ ಮಲಯಾಳಂ ಚಿತ್ರಗಳು ಕಥಾ ಆಧಾರಿತವಾಗಿರುತ್ತದೆ. ಇಲ್ಲಿ ಮಾಸ್ ಎಲಿಮೆಂಟ್ ಗಳು ಹೆಚ್ಚಾಗಿ ಇರುವುದಿಲ್ಲ. ಆದರೆ ಬಹುತೇಕ ಮಲಯಾಳಂ ಚಿತ್ರಗಳು ಬೇರೆ ಭಾಷೆಗೆ ರಿಮೇಕ್ ಆಗುತ್ತವೆ. ಹಿಂದೆ ಮೋಹನ್ ಲಾಲ್ ಅಭಿನಯದ 'ದೃಶ್ಯಂ' ಚಿತ್ರ ಎಲ್ಲಾ ಭಾಷೆಗಳಿಗೂ ರಿಮೇಕ್ ಆಗಿ ದೊಡ್ಡ ಯಶಸ್ಸನ್ನು ಕಂಡಿದೆ. ಈಗ ಮೋಹನ್ ಲಾಲ್ ಮಗ ಪ್ರಣವ್ ಮೋಹನ್ ಲಾಲ್ ಅಭಿನಯಿಸಿರುವ 'ಹೃದಯಂ' ಚಿತ್ರ ಕೂಡ ದೊಡ್ಡ ಯಶಸ್ಸನ್ನು ಕಂಡಿದ್ದು ನಿರ್ಮಾಪಕ ಕರಣ್ ಜೋಹರ್ ಎಲ್ಲಾ ಭಾರತೀಯ ಭಾಷೆಗಳ ರಿಮೇಕ್ ಹಕ್ಕುಗಳನ್ನು ಖರೀದಿ ಮಾಡಿದ್ದಾರೆ.
ಮಲಯಾಳಂ ಚಿತ್ರಗಳು ತಮ್ಮ ಕಂಟೆಂಟ್ ಗಳ ಮೂಲಕ OTT ಪ್ಲಾಟ್ಫಾರ್ಮ್ಗಳಲ್ಲಿ ದೊಡ್ಡ ಯಶಸ್ಸನ್ನು ಕಾಣುತ್ತಿರುವುದು ನಮಗೆಲ್ಲ ಗೊತ್ತಿರುವುದೆ. ಆದರೆ ಮಾಸ್ ಸಿನಿಮಾಗಳ ಮೂಲಕ ಮಲಯಾಳಂ ಪ್ಯಾನ್ ಇಂಡಿಯಾ ಸಿನಿಮಾಗಳ ನಿರ್ಮಾಣ ಮಾಡಲು ಸಾಧ್ಯವಾಗಿಲ್ಲ. ಮುಂದೆ ಕೂಡ ಸಾಧ್ಯವಾಗದೇ ಇರಬಹುದು. ಕೆಲವು ತಿಂಗಳ ಹಿಂದೆ ಮೋಹನ್ ಲಾಲ್ ಅಭಿನಯದ ನೂರು ಕೋಟಿ ವೆಚ್ಚದ 'ಮರಕ್ಕಲ್" ಚಿತ್ರ ಪ್ಯಾನ್ ಇಂಡಿಯಾ ಮಟ್ಟದಲ್ಲೇ ಬಿಡುಗಡೆ ಮಾಡಿದರು ಕೂಡ ತೀರಾ ನಿರಾಸೆಯನ್ನು ಉಂಟು ಮಾಡಿತ್ತು. ಹೀಗಾಗಿ ಭವಿಷ್ಯದ ದಿನಗಳಲ್ಲಿ ಮಲಯಾಳಂ ಮಾಸ್ ಸಿನಿಮಾಗಳ ಮೇಕಿಂಗ್ ನಲ್ಲಿ ಅಂತಹ ಗಮನ ಸೆಳೆಯುವ ಲಕ್ಷಣಗಳಿಲ್ಲ.

ಸ್ಯಾಂಡಲ್ವುಡ್ ಕಥೆಯೇನು?
ನಿರೀಕ್ಷೆಯಂತೆ ಪ್ರಶಾಂತ್ ನೀಲ್ ನಿರ್ದೇಶನದಲ್ಲಿ ಯಶ್ ಅಭಿನಯದ 'ಕೆಜಿಎಫ್' ಸರಣಿ ಚಿತ್ರಗಳು ದೊಡ್ಡ ಮಟ್ಟದ ಯಶಸ್ಸನ್ನು ಕಂಡಿದೆ. ಈಗ ಈ ಚಿತ್ರಗಳ ಮೂಲಕ ಯಶ್ ಭಾರತೀಯ ಸಿನಿಮಾ ರಂಗದ ಹೊಸ ಸೂಪರ್ ಸ್ಟಾರ್ ಸ್ಥಾನ ಪಡೆದಿದ್ದಾರೆ.'ಕೆಜಿಎಫ್ -2' ಚಿತ್ರದ ಗಳಿಕೆಯನ್ನು ಈಗ 'ಆರ್ ಆರ್ ಆರ್' ಚಿತ್ರ ಮತ್ತು 'ಬಾಹುಬಲಿ- 2' ಚಿತ್ರದ ಗಳಿಕೆ ಜೊತೆಯಲ್ಲಿ ನೋಡಲಾಗುತ್ತಿದೆ
ಪ್ರಶಾಂತ್ ನೀಲ್ ಕೂಡ ಪ್ರಸ್ತುತ ದೊಡ್ಡ ಮಟ್ಟದಲ್ಲೇ ಭಾರತೀಯ ಸಿನಿಮಾ ರಂಗದ ಗಮನಸೆಳೆಯುತ್ತಿದ್ದಾರೆ. ಅಲ್ಲಿಗೆ ಕೆಜಿಎಫ್ 'larger than life' ಸ್ಥಿತಿಗೆ ಕನ್ನಡ ಸಿನಿಮಾ ರಂಗವನ್ನು ತೆಗೆದುಕೊಂಡು ಹೋಗಿದೆ.

ಫ್ಯಾನ್ ಇಂಡಿಯಾ ಕಥೆಯೇನು?
ಆದರೆ ಪ್ರಶಾಂತ್ ನೀಲ್ ಮುಂದಿನ ಮೂರು ಚಿತ್ರಗಳು 'ಸಲಾರ್', ಜೂನಿಯರ್ ಎನ್ಟಿಆರ್ ಸಿನಿಮಾ ಮತ್ತು ರಾಮಚರಣ್ ಚಿತ್ರಗಳು ನೇರ ತೆಲುಗು ಚಿತ್ರಗಳಾಗಿದ್ದು ಇದು ದೊಡ್ಡ ಮಟ್ಟದಲ್ಲಿ ಪ್ಯಾನ್ ಇಂಡಿಯಾ ಸಿನಿಮಾಗಳಾಗಿ ಬಿಡುಗಡೆಯಾಗುತ್ತಿದೆ. ಯಶ್ ಅವರ ಮುಂದಿನ ಚಿತ್ರದ ಬಗ್ಗೆ ಇನ್ನೂ ಯಾವುದೇ ತರದ ಅನೌನ್ಸ್ಮೆಂಟ್ ಕೂಡ ಆಗಿಲ್ಲ. ಇನ್ನು ಸುದೀಪ್ ಅಭಿನಯದ 'ವಿಕ್ರಾಂತ್ ರೋಣ' ಕೂಡ ದೊಡ್ಡ ಮಟ್ಟದಲ್ಲಿ ಬಿಡುಗಡೆಗೆ ಸಿದ್ಧವಾಗುತ್ತಿದೆ. ಅಲ್ಲದೆ ಧ್ರುವ ಸರ್ಜಾ ಅಭಿನಯದ 'ಮಾರ್ಟಿನ್' ಚಿತ್ರ ಕೂಡ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆ ಮಾಡಲಾಗುತ್ತಿದೆ. ದರ್ಶನ್ ಅಭಿನಯದ 'ಕಾಂತಿ' ಚಿತ್ರ ಕೂಡ ಪ್ಯಾನ್ ಇಂಡಿಯಾ ಸಿನಿಮಾ ಅಂತ ಹೇಳಲಾಗುತ್ತಿದೆ. ಕನ್ನಡ ಸಿನಿಮಾ ರಂಗದ ಪವರ್ 'ಕೆಜಿಎಫ್-2' ಚಿತ್ರದ ಮೂಲಕ ದೊಡ್ಡದಾಗಿದೆ. ಆದರೆ ಇದು ಗಟ್ಟಿಯಾದ ಸ್ಥಾನ ಪಡೆಯಬೇಕಾದರೆ ಮುಂದಿನ ಈ ಮೂರು ಹೀರೋಗಳ ಚಿತ್ರಗಳು ಇಂಡಿಯಾ ಮಟ್ಟದಲ್ಲಿ ದೊಡ್ಡ ಯಶಸ್ಸನ್ನು ಕಾಣಬೇಕಾಗುತ್ತದೆ.


Click it and Unblock the Notifications











