ಪವಿತ್ರಾ ಲೋಕೇಶ್ ಕೈಗೆ ವೇಷ ಮರೆಸಿಕೊಂಡು ಬಂದಿದ್ದ ರಜನಿಕಾಂತ್ ಸಿಕ್ಕಿ ಬಿದ್ದಿದ್ದು ಹೇಗೆ? ಮುಂದೆ ಆಗಿದ್ದು ಏನು?
ಸೂಪರ್ ಸ್ಟಾರ್ ರಜನಿಕಾಂತ್ ವೇಷ ಮರೆಸಿಕೊಂಡು ಊರೂರು ಸುತ್ತಾಡುತ್ತಾರೆ ಎನ್ನುವ ವಿಚಾರ ಗೊತ್ತೇಯಿದೆ. ಸ್ವತಃ ತಲೈವಾ ಈ ವಿಚಾರವನ್ನು ಸಾಕಷ್ಟು ಸಂದರ್ಭಗಳಲ್ಲಿ ಹೇಳಿಕೊಂಡಿದ್ದಾರೆ. ವೇಷ ಮರೆಸಿಕೊಂಡು ಬಂದು ಗಾಂಧಿನಗರದ ಥಿಯೇಟರ್ಗಳಲ್ಲಿ ರಜನಿಕಾಂತ್ ಸಿನಿಮಾಗಳನ್ನು ನೋಡಿರುವ ಉದಾಹರಣೆ ಕೂಡ ಇದೆ. ಎಷ್ಟೇ ವೇಷ ಬದಲಿಸಿಕೊಂಡು ಸೂಪರ್ ಸ್ಟಾರ್ ನಟಿಸಿದರು ಕೆಲವೊಮ್ಮೆ ಸಿಕ್ಕಿಬಿದ್ದಿರುವ ಉದಾಹರಣೆಗಳು ಇದೆ.
ಸ್ನೇಹಿತರನ್ನು ಭೇಟಿ ಮಾಡಲು ಕೂಡ ರಜನಿಕಾಂತ್ ಇದೇ ರೀತಿ ವೇಷ ಬದಲಿಸಿಕೊಂಡು ರಜನಿಕಾಂತ್ ಬೆಂಗಳೂರಿಗೆ ಬರುತ್ತಾರೆ. ಬಹಳ ವರ್ಷಗಳ ಕಾಲ ಈ ವಿಚಾರ ಆಪ್ತರಿಗೆ ಬಿಟ್ಟರೆ ಯಾರಿಗೂ ಗೊತ್ತಿರಲಿಲ್ಲ. ಆದರೆ ಬಹಳ ದಿನಗಳ ನಂತರ ಪತ್ರಿಕೆಯೊಂದರಿಂದ ಈ ವಿಚಾರ ರಟ್ಟಾಗಿತ್ತು. ಮಾರು ವೇಷದಲ್ಲೂ ಕೂಡ ತಮ್ಮನ್ನು ಗುರ್ತಿಸಿದ್ದವರ ಬಗ್ಗೆ ತಲೈವಾ ಹೇಳಿದ್ದು ಇದೆ. 'ಗುಪ್ತಗಾಮಿನಿ' ಧಾರಾವಾಹಿ ಚಿತ್ರೀಕರಣದ ವೇಳೆ ಸೆಟ್ನಲ್ಲಿ ನಡೆದ ಸ್ವಾರಸ್ಯಕರ ಘಟನೆಯನ್ನು ಪವಿತ್ರಾ ಲೋಕೇಶ್ ಕೆಲ ದಿನಗಳ ಹಿಂದೆ ನೆನಪಿಸಿಕೊಂಡಿದ್ದರು.

ಐ ಡ್ರೀಮ್ಸ್ ಸಂದರ್ಶನದಲ್ಲಿ ಪವಿತ್ರಾ ಲೋಕೇಶ್ ತಾವು ರಜನಿಕಾಂತ್ ಅವರನ್ನು ಭೇಟಿ ಆಗಿದ್ದ ಘಟನೆಯನ್ನು ನೆನಪಿಸಿಕೊಂಡಿದ್ದರು. ಆ ವಿಡಿಯೋ ಈಗ ವೈರಲ್ ಆಗುತ್ತಿದೆ. ನರೇಶ್ ಹಾಗೂ ಪವಿತ್ರಾ ಲೋಕೇಶ್ ಲಿವ್ಇನ್ ರಿಲೇಷನ್ಶಿಪ್ನಲ್ಲಿರುವ ವಿಚಾರ ಈಗ ಭಾರೀ ಸದ್ದು ಮಾಡುತ್ತಿದೆ. 'ಮಳ್ಳಿ ಪೆಳ್ಳಿ' ಚಿತ್ರದ ಪ್ರಚಾರದ ವೇಳೆ ತಮ್ಮಿಬ್ಬರ ವೈಯಕ್ತಿಕ ಜೀವನದ ಬಗ್ಗೆ ಕೂಡ ಇಬ್ಬರು ಮಾತನಾಡಿದ್ದಾರೆ. ಪವಿತ್ರಾ ಲೋಕೇಶ್ ಹಿಂದಿನ ಸಂದರ್ಶನಗಳಲ್ಲಿ ಮಾತನಾಡಿದ್ದ ಮಾತುಗಳು ಸಹ ವೈರಲ್ ಆಗ್ತಿದೆ.
ಸೂಪರ್ ಸ್ಟಾರ್ ರಜನಿಕಾಂತ್ ಅವರ ಬಗ್ಗೆ ನಿಮ್ಮ ಅಭಿಪ್ರಾಯ ಏನು ಎನ್ನುವ ಪ್ರಶ್ನೆಗೆ ಪವಿತ್ರಾ ಲೋಕೇಶ್ ಉತ್ತರಿಸಿದ್ದಾರೆ. "ನಾನು ರಜನಿಕಾಂತ್ ಅವರನ್ನು ಭೇಟಿ ಮಾಡಿದ್ದೇನೆ. ಅವರೊಟ್ಟಿಗೆ ಫೋಟೊ ಕೂಡ ಕ್ಲಿಕ್ಕಿಸಿಕೊಂಡಿದ್ದೇನೆ. 'ಗುಪ್ತಗಾಮಿನಿ' ಧಾರಾವಾಹಿ ಚಿತ್ರೀಕರಣದ ವೇಳೆ ಅವರು ಸೆಟ್ಗೆ ಬಂದಿದ್ದರು. ಆ ಧಾರಾವಾಹಿಯನ್ನು ಅಶೋಕ್ ನನ್ನ ಪತಿಯ ಪಾತ್ರ ಮಾಡಿದ್ದರು. ಅವರು ಅದ್ಭುತ ಕಲಾವಿದರು. ಮದ್ರಾಸ್ ಫಿಲ್ಮ್ ಇನ್ಸಿಟ್ಯೂಟ್ನಲ್ಲಿ ರಜನಿಕಾಂತ್ ಹಾಗೂ ಅಶೋಕ್ ಕ್ಲಾಸ್ಮೇಟ್ಸ್"
"ಒಂದು ದಿನ ರಜನಿಕಾಂತ್ ಅವರು ಅಶೋಕ್ ಅವರನ್ನು ಭೇಟಿ ಮಾಡಿ ಶೂಟಿಂಗ್ ಸೆಟ್ಗೆ ಬಂದಿದ್ದರು. ಅವರು ನಾರ್ಮಲ್ ಆಗಿ ಬಂದಿರಲಿಲ್ಲ. ವಯಸ್ಸಾದ ವ್ಯಕ್ತಿಯ ರೀತಿ ವೇಷ ಬದಲಿಸಿಕೊಂಡು ಬಂದಿದ್ದರು. ಸೆಟ್ನಲ್ಲಿ ಓಡಾಡಿಕೊಂಡಿದ್ದ ನನ್ನನ್ನು ಅಶೋಕ್ ಅವರು ಕರೆದರು. ನನಗೆ ರಜನಿಕಾಂತ್ ಅವರನ್ನು ನೋಡಿದ ಕೂಡಲೇ ಅನುಮಾನ ಬಂತು. ಇವರು ವಯಸ್ಸಾದ ವ್ಯಕ್ತಿ ಅಲ್ಲ ಅನ್ನಿಸಿತ್ತು. ಆಗ ಅಶೋಕ್ ಸರ್ ಪರಿಚಯ ಮಾಡಿಸಿದರು. ಇವರು ನಮ್ ಅಂಕಲ್, ನನ್ನನ್ನು ಭೇಟಿ ಮಾಡಲು ಬಂದಿದ್ದಾರೆ ಎಂದರು"

"ನಾನು ಒಮ್ಮೆ ಅವರನ್ನು ದಿಟ್ಟಿಸಿ ನೋಡಿ, ನೀವು ರಜನಿಕಾಂತ್ ಅಲ್ವಾ? ಎಂದು ಕೇಳಿಬಿಟ್ಟೆ. ಆಗ ಅವರು ಅಯ್ಯೋ ನನ್ನ ಆಕ್ಟಿಂಗ್ ಎಲ್ಲಾ ವ್ಯರ್ಥ ಆಯ್ತು. ನೀವು ಹೇಳಿ ಗುರ್ತು ಹಿಡಿದ್ರಿ ಎಂದು ಕೇಳಿದ್ದರು. ನನಗೆ ಗೊತ್ತಿಲ್ಲ. ಅದೇನೋ ಆ ರೀತಿ ಅನ್ನಿಸಿತ್ತು. ಅವರ ವಾಕಿಂಗ್ ಸ್ಟೈಲ್ ಎಲ್ಲಾ ನೋಡಿ ನನಗೆ ಹಾಗೆ ಅನ್ನಿಸಿತ್ತೋ ಏನೋ ಗೊತ್ತಿಲ್ಲ. ಆಗ ನಾನು ಸರ್, ನಿಮ್ಮನ್ನು ಈ ವೇಷ ಇಲ್ಲದೇ ನಿಜ ರೂಪದಲ್ಲಿ ನೋಡಬೇಕು ಎಂದು ಕೇಳಿದೆ. ಅವರು ಸರಿ ನಾಳೆ ಬೆಳಗ್ಗೆ ಬರ್ತೀನಿ ಅಂದ್ರು"
"ಬೆಳಗ್ಗೆ ಸೆಟ್ನಲ್ಲಿ ಇದ್ದ ಎಲ್ಲರಿಗೂ ತಿಂಡಿ ಕಟ್ಟಿಸಿಕೊಂಡು ಬಂದಿದ್ದರು. ನಂತರ ಎಲ್ಲರೊಟ್ಟಿಗೆ ತಿಂಡಿ ಸವಿದರು. ನಾನು ಅವರೊಟ್ಟಿಗೆ ಫೋಟೊ ಕ್ಲಿಕ್ಕಿಸಿಕೊಂಡಿದ್ದೆ. ರಜನಿ ಸರ್ ಆ ರೀತಿ ವೇಷ ಬದಲಿಸಿಕೊಂಡು ಬರ್ತಾರೆ ಎಂದು ಕೇಳಿದ್ದೆ. ಆದರೆ ನಾನು ಆ ದಿನ ಸೆಟ್ನಲ್ಲಿ ನಿಜವಾಗಿ ನೋಡಿದ್ದೆ. ರಜನಿಕಾಂತ್ ವೇಷ ಮರೆಸಿಕೊಂಡು ಓಡಾಡುತ್ತಾರೆ ಅನ್ನೋದು ನಿಜವೇ" ಎಂದು ಆ ದಿನ ನಡೆದ ಘಟನೆಯನ್ನು ನೆನಪಿಸಿಕೊಂಡಿದ್ದರು.


Click it and Unblock the Notifications











