"ಅಣ್ಣವ್ರು ಬೇರೆ ನಟರನ್ನು ಬೆಳೆಯಲು ಬಿಡಲಿಲ್ವಾ? ವೀರಪ್ಪನ್ ನಮ್ಮ ತಂದೆಯನ್ನು ಅಪಹರಿಸಿದ್ದು ಯಾಕೆ?
ಡಾ. ರಾಜ್ಕುಮಾರ್ ಪತ್ನಿ, ನಿರ್ಮಾಪಕಿ ಪಾರ್ವತಮ್ಮ ರಾಜ್ಕುಮಾರ್ ಎಂತಹ ಗಟ್ಟಿಗಿತ್ತಿ ಅನ್ನೋದು ಗೊತ್ತೇಯಿದೆ. ಅಣ್ಣಾವ್ರ ಸಾಧನೆಯಲ್ಲಿ ಪತ್ನಿ ಪಾಲು ಕೂಡ ಇದೆ. ನಟ ಸಾರ್ವಭೌಮನ ಕಥೆಗಳ ಆಯ್ಕೆಯಿಂದ ಹಿಡಿದು ಸಿನಿಮಾಗಳ ನಿರ್ಮಾಣದಲ್ಲಿ ಬೆಂಬಲವಾಗಿ ನಿಲ್ಲುತ್ತಿದ್ದವರೇ ಪಾರ್ವತಮ್ಮ ರಾಜ್ಕುಮಾರ್. ತಮ್ಮ ತಂದೆ ಹಾಗೂ ತಾಯಿ ಬಗ್ಗೆ ಪುತ್ರಿ ಪೂರ್ಣಿಮಾ ರಾಮ್ಕುಮಾರ್ ಯೂಟ್ಯೂಬ್ ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ.
ಅಣ್ಣಾವ್ರಿಗೆ ಶಿವರಾಜ್ಕುಮಾರ್, ರಾಘವೇಂದ್ರ ರಾಜ್ಕುಮಾರ್, ಪುನೀತ್ ರಾಜ್ಕುಮಾರ್ ಜೊತೆಗೆ ಲಕ್ಷ್ಮಿ ಹಾಗೂ ಪೂರ್ಣಿಮಾ ಸೇರಿ ಒಟ್ಟು ಐದು ಜನ ಮಕ್ಕಳು. ಡಾ. ರಾಜ್ಕುಮಾರ್ ಸಿನಿಮಾಗಳ ಜೊತೆ ಜೊತೆಗೆ ಇಡೀ ಕುಟುಂಬವನ್ನು ಸಾಕಿ ಸಲುಹಿದವರು ಪಾರ್ವತಮ್ಮ. ತಮ್ಮ ಮಕ್ಕಳು ಮಾತ್ರವಲ್ಲದೇ ಸೋದರ ಸಂಬಂಧಿಗಳು, ಅವರ ಮಕ್ಕಳು ಹೀಗೆ ದೊಡ್ಡ ಅವಿಭಕ್ತ ಕುಟುಂಬಕ್ಕೆ ಬೆನ್ನೆಲುಬಾಗಿ ಇದ್ದರು. ದೊಡ್ಮೆನೆಯ ನಿಜವಾದ ವಜ್ರೇಶ್ವರಿ ಪಾರ್ವತಮ್ಮ ರಾಜ್ಕುಮಾರ್ ಎಂದರೆ ತಪ್ಪಿಲ್ಲ.

ಸದಾ ಪತಿಯ ಜೊತೆಗೆ ಇರುತ್ತಿದ್ದ ಪಾರ್ವತಮ್ಮ ರಾಜ್ಕುಮಾರ್ ಅಂದು ಕಾಡುಗಳ್ಳ ವೀರಪ್ಪನ್ ವರನಟನನ್ನು ಅಪಹರಿಸಿದ ದಿನ ಆತನಿಗೆ ಸವಾಲು ಹಾಕಿದ್ದರಂತೆ. ಈ ವಿಚಾರವನ್ನು ಪೂರ್ಣಿಮಾ ಟೋಟಲ್ ಕನ್ನಡ ಯೂಟ್ಯೂಬ್ ಸಂದರ್ಶನದಲ್ಲಿ ಹಂಚಿಕೊಂಡಿದ್ದಾರೆ. ಅದೇ ರಾಜ್ಕುಮಾರ್ ಜನರಿಗಾಗಿ ಏನು ಮಾಡಿದ್ದಾರೆ? ಅಣ್ಣಾವ್ರು ಬೇರೆ ನಟರು ಬೆಳೆಯದಂತೆ ತುಳಿದುಬಿಟ್ಟರು ಎನ್ನುವವರಿಗೆ ತಿರುಗೇಟು ನೀಡಿದ್ದಾರೆ.
ಅಮ್ಮ ಬಹಳ ಧೈರ್ಯವಾಗಿ ಇದ್ದರು
"ನಮ್ಮ ತಂದೆಯನ್ನು ವೀರಪ್ಪನ್ ಅಪಹರಿಸಿದಾಗ ಇಡೀ ಸನ್ನಿವೇಶವನ್ನು ನಿಭಾಯಿಸಿದ್ದು ನಮ್ಮ ತಾಯಿನೇ. ಬೇರೆ ಯಾರ ಹೆಸರನ್ನು ನಾನು ತೆಗೆದುಕೊಳ್ಳುವುದಿಲ್ಲ. ಅವರು ನಮ್ಮ ಮನೆಯ ಆಧಾರಸ್ತಂಭ. ಆ ಸಮಯದಲ್ಲಿ ಅವರಲ್ಲಿ ಕೊಂಚವೂ ಅಳುಕು ಕಾಣಿಸಲಿಲ್ಲ. ಅಪ್ಪಾಜಿ ವಾಪಸ್ ಬಂದ ದಿನ ನಾವೆಲ್ಲಾ ಅತ್ತಿದ್ದು ನೋಡಿ ಕೊಂಚ ಭಾವುಕರಾದರು. ಉಳಿದಂತೆ ಅವರು ಎಂದು ನೋವು ತೋರಿಸಿಕೊಳ್ಳಲಿಲ್ಲ"

ನಮ್ಮ ತಾಯಿ ಸವಾಲು ಹಾಕಿದ್ದರು
"ಅಪ್ಪ ಅಪಹರಣವಾದ ದಿನ ನಾವು ಬೆಂಗಳೂರಿನಲ್ಲಿ ಇದ್ದೆವು. ನಮಗೆ ಗೊತ್ತಾಗಿದ್ದು ಬೆಳಗ್ಗೆ. ಆ ದಿನ ನಮ್ಮ ತಾಯಿ, ನಮ್ಮ ಅತ್ತೆ ಇನ್ನು ಕೆಲ ಸಂಬಂಧಿಕರು ಅಲ್ಲಿ ಇದ್ದರು. ಅಂದು ಅಮ್ಮ ವೀರಪ್ಪನ್ಗೆ "ನೀನು ಹೆಂಗೆ ಕರೆದುಕೊಂಡು ಹೋಗ್ತೀಯೋ ಹಂಗೆ ನಾನು ಕರೆದುಕೊಂಡು ಬರ್ತೀನಿ ಎಂದು ಹೇಳಿದ್ದರಂತೆ. ನಮ್ಮ ತಂದೆ ಆ ಸಮಯದಲ್ಲಿ ಮಾತನಾಡಬೇಡ ಸುಮ್ಮನಿರು ಎಂದು ತಾಯಿಗೆ ಹೇಳಿದ್ರಂತೆ. ಯಾಕಂದರೆ ಬೇರೆ ಯಾರಿಗಾದರೂ ತೊಂದರೆ ಮಾಡುತ್ತಾನೆ ಎನ್ನುವ ಭಯ ಅವರಿಗಿತ್ತು."
ಊಟಿಯಲ್ಲಿ ತಂದೆ ಮೇಲೆ ಗಲಾಟೆ
"ವೀರಪ್ಪನ್ ನಮ್ಮ ತಂದೆಯನ್ನು ಅಪಹರಣ ಮಾಡಲು ಕಾರಣ ಏನು? ಇದರಲ್ಲಿ ರಾಜ್ಕುಮಾರ್ ಸ್ವಂತ ವಿಷಯ ಏನಾದರೂ ಇತ್ತಾ? ಅವನಿಗೆ ಅಣ್ಣಾವ್ರ ಜೊತೆ ಏನಾದರೂ ವೈಷಮ್ಯ ಇತ್ತಾ? ಸೇಡು ತೀರಿಸಿಕೊಳ್ಳಲು? ಇಲ್ಲ ಅಲ್ವಾ? ಗೋಕಾಕ್ ಚಳುವಳಿ ನಂತರ ತಂದೆಗೆ ಊಟಿಯಲ್ಲಿ ಹೊಡೆಯಲು ಬಂದರು ಅದಕ್ಕೆ ಏನು ಕಾರಣ? ಏನು ರಾಜ್ಕುಮಾರ್ ಸ್ವಂತ ವಿಷಯಕ್ಕೆ ಬಂದಿದ್ರಾ? ಅಪ್ಪಾಜಿಗೆ ಹೊಡೆಯಲು ಬೇರೆ ವಿಷಯ ಇತ್ತಾ? ಎಲ್ಲದಕ್ಕೂ ಕಾರಣ ಏನು? ಯಾಕಂದರೆ ಅಪ್ಪಾಜಿನ ಮುಂದೆ ನಿಲ್ಲಿಸಿದ್ರಿ"
ಬೇರೆಯವರನ್ನು ತಂದೆ ಬೆಳೆಯಲು ಬಿಡಲಿಲ್ವಾ?
"ರಾಜ್ಕುಮಾರ್ ಅಂದ್ರೆ ಕನ್ನಡ ಇಂಡಸ್ಟ್ರಿ ಎನ್ನುವಂತೆ ಅವರನ್ನು ಎಲ್ಲದಕ್ಕೂ ಮುಂದೆ ನಿಲ್ಲಿಸಿದ್ರಿ. ಹಿಂದೆ ಏನೇ ನಡೆದರೂ ತಲೆ ಕೊಡಬೇಕಾದವರು ಅವರು ಒಬ್ಬರೇ. ಈಗ ಮಾತು ಎತ್ತಿದ್ದರೆ ಎಲ್ಲದಕ್ಕೂ ಅವ್ರೇ ಕಾರಣ ಅಂತಾರೆ. ಇಂಡಸ್ಟ್ರಿಗೆ ಏನು ಮಾಡಿದ್ದಾರೆ? ಅವರಿಂದ ಮತ್ತೊಬ್ಬ ಕಲಾವಿದರ ಬೆಳೆಯಲಿಲ್ಲ ಎನ್ನುತ್ತೀರಾ. ರಾಜ್ಕುಮಾರ್ ಎಲ್ಲರನ್ನು ಹಿಡಿದು ನಿಲ್ಲಿಸಲು ಆಗುತ್ತಾ? ಅವರನ್ನೇ ಬಿಡದೇ ವೀರಪ್ಪನ್ ಕರೆದುಕೊಂಡು ಹೋದ, ಅಂತಾದ್ರಲ್ಲಿ ಮತ್ತೊಬ್ಬರನ್ನು ತಡೆಯಲು ರಾಜ್ಕುಮಾರ್ಗೆ ಸಾಧ್ಯಾನಾ?"
ಅಣ್ಣಾವ್ರು ಏನು ಮಾಡಬೇಕಿತ್ತು?
"ಗೋಕಾಕ್ ಚಳುವಳಿ ನಂತರ ಆದ ಗಲಾಟೆ ಆಗಲಿ, ವೀರಪ್ಪನ್ ಅಪಹರಣಕ್ಕಾಗಿ ಕಾರಣ ಏನು? ಅವರ ಮನೆ ವಿಚಾರ ಅಲ್ಲ, ಅಣ್ಣಾವ್ರ ಕಾಡಿಗೆ ಹೋದಾಗ ಇಡೀ ಕುಟುಂಬ ಕಷ್ಟಪಟ್ಟಿದೆ. ಅಭಿಮಾನಿಗಳು, ಚಿತ್ರರಂಗ ಎಲ್ಲರೂ ಕಷ್ಟಪಟ್ಟಿದ್ದಾರೆ. ಇಂಡಸ್ಟ್ರಿಗಾಗಿಯೇ ಅಲ್ಲವೇ ಅವರು ಇದ್ದಿದ್ದು. ಇಂಡಸ್ಟ್ರಿಯಲ್ಲೂ ಕೆಲವರು ಹೀಗೆ ಮಾತನಾಡುತ್ತಾರೆ? ಅಣ್ಣಾವ್ರು ಏನು ಮಾಡಿದ್ರು ಎಂದು ಕೇಳುತ್ತಾರೆ? ಏನು ಮಾಡಬೇಕಿತ್ತು? ಇಷ್ಟೆಲ್ಲಾ ಅನುಭವಿಸಿದ್ದು ಸಾಕಲ್ಲವೇ? ಎಂದು ಪೂರ್ಣಿಮಾ ಪ್ರಶ್ನಿಸಿದ್ದಾರೆ.


Click it and Unblock the Notifications











