ಪೋಷಕರ ವಿರೋಧದ ಮಧ್ಯೆ ರಾಮ್ಕುಮಾರ್- ಪೂರ್ಣಿಮಾ ಮದುವೆ, 3 ವರ್ಷ ಮಾತುಬಿಟ್ಟಿದ್ದ ಪಾರ್ವತಮ್ಮ
ಅಣ್ಣಾವ್ರ ಐದು ಜನ ಮಕ್ಕಳಲ್ಲಿ ಶಿವಣ್ಣ, ರಾಘಣ್ಣ ಹಾಗೂ ಅಪ್ಪು ಬಗ್ಗೆ ಎಲ್ಲರಿಗೂ ಗೊತ್ತೇಯಿದೆ. ಡಾ. ರಾಜ್ಕುಮಾರ್ ಹಾಗೂ ಪಾರ್ವತಮ್ಮ ದಂಪತಿಗೆ ಇಬ್ಬರು ಹೆಣ್ಣುಮಕ್ಕಳು. ಅದರಲ್ಲಿ ಪೂರ್ಣಿಮಾ ಕೂಡ ಒಬ್ಬರು. ನಟ ರಾಮ್ಕುಮಾರ್ ಅವರನ್ನು ಅವರು ಪ್ರೀತಿಸಿ ಮದುವೆ ಆಗಿದ್ದಾರೆ. ಆ ದಂಪತಿಯ ಮಕ್ಕಳಾದ ಧೀರೆನ್ ಹಾಗೂ ಧನ್ಯಾ ಈಗ ಚಿತ್ರರಂಗಕ್ಕೆ ಬಂದಿದ್ದಾರೆ.
ರಾಮ್ಕುಮಾರ್ ಹಾಗೂ ಪೂರ್ಣಿಮಾ ಜೋಡಿಯ ಲವ್ಸ್ಟೋರಿ, ಮದುವೆ ಬಗ್ಗೆ ಸಾಕಷ್ಟು ಜನರಿಗೆ ಗೊತ್ತಿಲ್ಲ. ಅಣ್ಣಾವ್ರು ಒಪ್ಪಿ ಮಗಳನ್ನು ರಾಮ್ಕುಮಾರ್ಗೆ ಕೊಟ್ಟು ಮದುವೆ ಮಾಡಿಸಿದ್ದರು ಎಂದು ಬಹುತೇಕರು ಅಂದುಕೊಂಡಿದ್ದಾರೆ. ಆದರೆ ತಮ್ಮ ಲವ್ಸ್ಟೋರಿ ಬಗ್ಗೆ ಇದೇ ಮೊದಲ ಬಾರಿಗೆ ಪೂರ್ಣಿಮಾ ಮಾತನಾಡಿದ್ದಾರೆ. ರ್ಯಾಪಿಡ್ ರಶ್ಮಿ ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ಮನದಾಳ ತೆರೆದಿಟ್ಟಿದ್ದಾರೆ.

ಮುದ್ದಿನ ಮಗಳಾಗಿದ್ದ ಪೂರ್ಣಿಮಾ ಚಿಕ್ಕಂದಿನಿಂದಲೇ ಮನೆಯಲ್ಲಿ ಸಾಕಷ್ಟು ಜವಾಬ್ದಾರಿಗಳನ್ನು ವಹಿಸಿಕೊಂಡಿದ್ದರಂತೆ. ಅಪ್ಪ ಅಮ್ಮ ಸದಾ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದರಿಂದ ಮನೆಯ ಕೆಲಸಗಳನ್ನು ಅವರು ಹೆಚ್ಚು ಭಾಗಿ ಆಗುತ್ತಿದ್ದರಂತೆ. ನಮ್ಮ ತಂದೆಗೆ ಪದ್ಮಭೂಷಣ ಪ್ರಶಸ್ತಿ ಸಿಕ್ಕ ಸಮಾರಂಭದಲ್ಲಿ ನನ್ನ ಹಾಗೂ ರಾಮ್ಕುಮಾರ್ ಮೊದಲ ಭೇಟಿ ಎಂದು ಪೂರ್ಣಿಮಾ ನೆನಪಿಸಿಕೊಂಡಿದ್ದಾರೆ.
"ನನಗೆ ಆಗ ಇನ್ನು 14 ವರ್ಷ ವಯಸ್ಸು. ಮೊದಲಿಗೆ ಅವತ್ತು ಇಬ್ಬರೂ ಒಬ್ಬರನ್ನೊಬ್ಬರು ನೋಡಿ ಸ್ಮೈಲ್ ಮಾಡಿದ್ದೆವು. ಅದು ಬಿಟ್ಟು ಬೇರೆ ಏನು ಗೊತ್ತಿರಲಿಲ್ಲ. ಬಳಿಕ ನಮ್ಮ ಮನೆಯಲ್ಲಿ ಅಯ್ಯಪ್ಪನ ಪೂಜೆಗೆ ರಾಮ್ಕುಮಾರ್ ಆಗಾಗ್ಗೆ ಬರುತ್ತಿದ್ದರು. ಆಗಲೂ ಪದೇ ಪದೆ ನೋಡುತ್ತಿದ್ದೆವು. ಆದರೆ ಬೇರೆ ಯಾವುದೇ ಭಾವನೆ ಇರಲಿಲ್ಲ. ರಾಘು ಮದುವೆಯಲ್ಲಿ ಅದು ಕೊಂಚ ಸೀರಿಯಸ್ ಆಗಿತ್ತು" ಎಂದು ಪೂರ್ಣಿಮಾ ತಮ್ಮ ಲವ್ಸ್ಟೋರಿ ತೆರೆದಿಟ್ಟಿದ್ದಾರೆ.

"ರಾಘು ಮದುವೆ ಅಂದರೆ 1986-1987ರ ಸಮಯ. ಆಗ ನಾವು ಪ್ರೀತಿ, ಮದುವೆ ಎನ್ನುವ ಬಗ್ಗೆ ಯೋಚಿಸಲು ಆರಂಭಿಸಿದೆವು. ಆಗಾಗ್ಗೆ ಕಾರ್ಯಕ್ರಮಗಳಲ್ಲಿ ಭೇಟಿ ಆಗಿದ್ದು ಬಿಟ್ಟರೆ ಹೊರಗಡೆ ಹೋಗಿ ಸುತ್ತಾಡಿರಲಿಲ್ಲ. ಫೋನ್ ಅಲ್ಲಿ ಹೆಚ್ಚು ಮಾತನಾಡುತ್ತಿದ್ದೆವು. ಲ್ಯಾಂಡ್ಲೈನ್ ಫೋನ್, ಹಾಗಾಗಿ ಮನೆಯಲ್ಲಿ ಬೇಗ ವಿಷಯ ಗೊತ್ತಾಗಿಬಿಡ್ತು" ಎಂದು ಪೂರ್ಣಿಮಾ ನಕ್ಕಿದ್ದಾರೆ.
"ಮನೆಯಲ್ಲಿ ವಿಷಯ ಗೊತ್ತಾದಮೇಲೆ ಅಮ್ಮನಿಗೆ ಹೋಗಿ ನಾನು ನಮ್ಮ ಪ್ರೀತಿ ಬಗ್ಗೆ ಹೇಳಿದ್ದೆ. 4 ವರ್ಷಗಳ ಕಾಲ ನಮ್ಮಿಬ್ಬರ ಪ್ರೀತಿ ನಡೀತು. ನಮ್ಮ ಮನೆಯಲ್ಲಿ ಅಷ್ಟು ಸುಲಭವಾಗಿ ಒಪ್ಪಿಕೊಳ್ಳಲಿಲ್ಲ. ಅಪ್ಪನಿಗೆ ಹೇಳಿರಲಿಲ್ಲ. ಬಳಿಕ ಏನೇನೋ ಆಯಿತು. ಮನೆಯಲ್ಲಿ ಒಪ್ಪಲಿಲ್ಲ ಎಂದು ನಾನು, ರಾಮ್ಕುಮಾರ್ ಹೋಗಿ ಮದುವೆ ಮಾಡಿಕೊಂಡೆವು. ಬಳಿಕ ವರದಪ್ಪ ಮನೆಗೆ ಹೋಗಿ ಅಪ್ಪನನ್ನು ಕರೆಸಿ ಮಾತನಾಡಿದ್ದೆವು" ಎಂದು ಮದುವೆಯ ಅಸಲಿ ಸಂಗತಿ ತಿಳಿಸಿದ್ದಾರೆ.
"ಅಮ್ಮನಿಗೆ ಫ್ಯಾಮಿಲಿ ಬಗ್ಗೆ ಬಹಳ ಚಿಂತೆ ಇತ್ತು. ಎಲ್ಲರಿಗೂ ಇದರಿಂದ ಸಮಸ್ಯೆ ಎಂದು ಬೇಸರಗೊಂಡಿದ್ದರು. ಅಂತೂ ಇಂತೂ ಬಳಿಕ ಎಲ್ಲವೂ ಸರಿಹೋಯಿತು. ಮದುವೆ ಆಗಿ ಎರಡು ವರ್ಷ ಅಮ್ಮನನ್ನು ನೋಡಿರಲಿಲ್ಲ, ಅವರಿಗೆ ಅಷ್ಟು ಕೋಪ ಇತ್ತು. ಧನ್ಯಾ ಹುಟ್ಟುವ ವೇಳೆಗೆ ಅಮ್ಮ ಸಮಾಧಾನಗೊಂಡರು. ಎಲ್ಲಾ ಮರೆತು ಒಪ್ಪಿಕೊಂಡರು" ಎಂದು ವಿವರಿಸಿದ್ದಾರೆ.
"ನಿನ್ನ ಅಮ್ಮನಿಗೆ ನಿನ್ನ ಮೇಲೆ ಬಹಳ ಪ್ರೀತಿ, ನಂಬಿಕೆ ಇತ್ತು. ಅದಕ್ಕೆ ಅಷ್ಟು ರೋಷ, ಅದು ಹೋಗುವರೆಗೂ ನೀನು ಕಾಯಲೇಬೇಕು ಎಂದು ಅಪ್ಪ ಹೇಳುತ್ತಿದ್ದರು. ನಿಜ ಆಕೆಗೆ ಆಗ ಅಷ್ಟು ನೋವಾಗಿತ್ತು. ಅದು ಹೋಗುವವರಗೂ ನೀನು ಕಾಯಬೇಕು, ನನ್ನ ರೀತಿ ನಿಮ್ಮ ಅಮ್ಮ ಅಲ್ಲ ಎಂದು ಅಪ್ಪ ಹೇಳಿದ್ದನ್ನು ನಾನು ಮರೆಯಲ್ಲ. ಅದು ನಿಜ ಕೂಡ. ಕೊನೆಗೆ ಅಪ್ಪ ನಾವೇ ಹುಡುಕಿದ್ದರೂ ಇಂತಹ ಹುಡುಗ ಮಗಳಿಗೆ ಸಿಗುತ್ತಿರಲಿಲ್ಲ" ಎಂದು ತಂದೆ ಹೇಳಿದ್ದಾಗಿ ಪೂರ್ಣಿಮಾ ನೆನಪಿಸಿಕೊಂಡಿದ್ದಾರೆ.


Click it and Unblock the Notifications











