ಸಂಚಾರಿ ವಿಜಯ್ ರೀತಿ ಅಪಘಾತದಲ್ಲಿ ದುರಂತ ಅಂತ್ಯ ಕಂಡಿದ್ದ ಖಳನಟ ಕೆಡಿ ನಾಗಪ್ಪ
ಪ್ರೇಕ್ಷಕರ ಮನಸ್ಸಿನಲ್ಲಿ ಉಳಿಯಲು ನೂರಾರು ಸಿನಿಮಾಗಳಲ್ಲಿ ನಟಿಸಬೇಕಿಲ್ಲ. ಒಂದೆರಡು ಚಿತ್ರಗಳಲ್ಲೇ ತಮ್ಮ ನಟನೆಯಿಂದ ಛಾಪು ಮೂಡಿಸಿದ ಸಾಕಷ್ಟು ಕಲಾವಿದರು ಕನ್ನಡ ಚಿತ್ರರಂಗದಲ್ಲಿದ್ದಾರೆ. ಬ್ಲಾಕ್ ಅಂಡ್ ವೈಟ್ ಜಮಾನದಲ್ಲೇ ಕೆಡಿ ನಾಗಪ್ಪ ಎಂಬ ನಟ ಗಮನ ಸೆಳೆದಿದ್ದರು. ವಜ್ರಮುನಿಗೂ ಮುನ್ನ ಖಳನಟನಾಗಿ ಸ್ಟಾರ್ ಪಟ್ಟ ಅಲಂಕರಿಸಿಬಿಟ್ಟಿದ್ದರು. ಆದರೆ ದಿಢೀರನೆ ಅವರು ಕಣ್ಮರೆಯಾದರು.
ಈ ತಲೆಮಾರಿನ ಸಿನಿರಸಿಕರಿಗೆ ಬಹುಶಃ ಕೆಡಿ ನಾಗಪ್ಪ ಯಾರು ಎನ್ನುವ ಬಗ್ಗೆ ಮಾಹಿತಿಯಿಲ್ಲ. ಆದರೆ ಅಣ್ಣಾವ್ರ ಹಳೇ ಬ್ಲಾಕ್ ಅಂಡ್ ವೈಟ್ ಸಿನಿಮಾಗಳನ್ನು ನೋಡಿದವರಿಗೆ ಇವರ ಮುಖ ಪರಿಚಯ ಇರುತ್ತದೆ. ಆದರೆ ಹೆಸರು ಗೊತ್ತಿರಲ್ಲ. ಚಿತ್ರರಂಗದ ಆರಂಭದ ದಿನಗಳಲ್ಲಿ ರಂಗಭೂಮಿಯಿಂದ ಚಿತ್ರರಂಗಕ್ಕೆ ಬಂದವರೇ ಹೆಚ್ಚು. 'ದಾನವೀರಶೂರ ಕರ್ಣ' ನಾಟಕದಲ್ಲಿ ಕರ್ಣನ ಪಾತ್ರ ಮಾಡುತ್ತ ಜನಪ್ರಿಯತೆ ಗಳಿಸಿದ ತಗಡೂರು ನಾಗಪ್ಪ ಮುಂದೆ ಚಿತ್ರರಂಗಕ್ಕೆ ಬಂದಿದ್ದರು.

70ರ ದಶಕದಲ್ಲಿ ಕನ್ನಡ ಸಿನಿಮಾಗಳಲ್ಲಿ ಖಳನಾಯಕ ಪಾತ್ರಗಳಲ್ಲಿ ನಾಗಪ್ಪ ಹೆಚ್ಚು ನಟಿಸಿದ್ದರು. ಹಾಗಾಗಿ ಕೆಡಿ ನಾಗಪ್ಪ ಎಂದೇ ಮುಂದೆ ಚಿತ್ರರಂಗದಲ್ಲಿ ಗುರ್ತಿಸಿಕೊಂಡಿದ್ದರು. 'ಕಠಾರಿವೀರ' ಅವರು ನಟಿಸಿದ ಮೊದಲ ಸಿನಿಮಾ. ಮುಂದೆ 'ಮೇಯರ್ ಮುತ್ತಣ್ಣ', 'ಬಾಳು ಬೆಳಗಿತು', 'ಭಲೇ ಬಸವ', 'ಬೀದಿ ಬಸವಣ್ಣ', 'ಪರೋಪಕಾರಿ', 'ದೇವರ ಮಕ್ಕಳು' ಹೀಗೆ 25ಕ್ಕೂ ಅಧಿಕ ಸಿನಿಮಾಗಳಲ್ಲಿ ನಾಗಪ್ಪ ನಟಿಸಿ ಗೆದ್ದಿದ್ದರು.
ಕೆಡಿ ನಾಗಪ್ಪ ಅವರ ಬಗ್ಗೆ ಹೆಚ್ಚಿನ ಮಾಹಿತಿ ಎಲ್ಲೂ ಸಿಗುವುದಿಲ್ಲ. ಅವರ ದುರಂತ ಸಾವಿನ ಬಗ್ಗೆಯೂ ಸಾಕಷ್ಟು ಜನರಿಗೆ ಗೊತ್ತಿಲ್ಲ. ನಿರ್ದೇಶಕ ರಘುರಾಮ್ ತಮ್ಮ ಯೂಟ್ಯೂಬ್ ಚಾನಲ್ಗಾಗಿ ಕೆಡಿ ನಾಗಪ್ಪ ಅವರ ಮಗಳು ಮಲ್ಲಿಕಾ ಅವರ ಸಂದರ್ಶನ ಮಾಡಿದ್ದಾರೆ. ಇದರಲ್ಲಿ ಸಾಕಷ್ಟು ಸಂಗತಿಗಳು ಅವರು ಹಂಚಿಕೊಂಡಿದ್ದಾರೆ. ನಂಜನಗೂಡಿನ ತಗಡೂರಿನಲ್ಲಿ ಕೃಷಿಕ ಕುಟುಂಬದಲ್ಲಿ ನಾಗಪ್ಪ ಹುಟ್ಟಿದ್ದರು. ಹಳ್ಳಿಗಳಲ್ಲಿ ನಡೆಯುತ್ತಿದ್ದ ನಾಟಕಗಳಲ್ಲಿ ಅವರು ಮೊದಲಿಗೆ ಬಣ್ಣ ಹಚ್ಚಿದ್ದರು.
ಗುಬ್ಬಿ ಕಂಪೆನಿ ಸೇರಿದ ಬಳಿಕ ಚಿತ್ರರಂಗಕ್ಕೆ ಬರುವುದು ಕಷ್ಟವಾಗಲಿಲ್ಲ. ಇನ್ನು ಅಣ್ಣಾವ್ರ ಜೊತೆ ಉತ್ತಮ ಒಡನಾಟವಿತ್ತು. ಡಾ. ರಾಜ್ಕುಮಾರ್ಗೆ ಪರಮಾಪ್ತರಾಗಿಬಿಟ್ಟಿದ್ದರು. ಹಾಗಾಗಿ ಅವರ ಸಿನಿಮಾಗಳಲ್ಲಿ ಅವಕಾಶಗಳು ಸುಲಭವಾಗಿ ಸಿಗುತ್ತಿತ್ತು. ತಮ್ಮ ಖಡಕ್ ನೋಟ, ಮ್ಯಾನರಿಸಂ, ವಾಯ್ಸ್ ಹಾಗೂ ನಟನೆಯಿಂದ ಖಳನಾಯಕ ಪಾತ್ರಗಳಲ್ಲಿ ನಾಗಪ್ಪ ಜೀವ ತುಂಬಿ ನಟಿಸುತ್ತಿದ್ದಾರೆ. ಆದರೆ ತಮ್ಮ 37 ವಯಸ್ಸಿಗೆ ದುರಂತ ಅಂತ್ಯ ಕಂಡು ಇಹಲೋಕ ತ್ಯಜಿಸಿಬಿಟ್ಟರು.

ತಮ್ಮ ತಂದೆ ಸಾವಿನ ಬಗ್ಗೆ ಮಗಳು ಮಲ್ಲಿಕಾ ಮಾತನಾಡಿದ್ದಾರೆ. "ಅವತ್ತು ಯಾವುದೋ ಸಿನಿಮಾ ಚಿತ್ರೀಕರಣಕ್ಕೆ ಹೋಗಲು ತಂದೆ ಸಿದ್ಧರಾಗಿದ್ದರು. ತಿಂಡಿ ತಿಂದು ಮೈಸೂರಿನ ಲಾಡ್ಜ್ನಲ್ಲಿ ಹೊರಟು ನಿಂತಿದ್ದರು. ಆಗ ಬಂದಿದ್ದ ಸಹಪಾಠಿ ನಾರಾಯಣ ಗೌಡ ತಮ್ಮ ಗದ್ದೆ ನೋಡಿಕೊಂಡು ಬರೋಣ ಬನ್ನಿ ಎಂದು ಕರೆದಿದ್ದರಂತೆ. ಮೊದಲಿಗೆ ನಮ್ಮಪ್ಪ ಬರಲ್ಲ ಎಂದಿದ್ದರಂತೆ. ನೀನು ಶೂಟಿಂಗ್ಗೆ ಹೋಗುವ ವೇಳೆಗೆ ಬರೋಣ ಬಾ ಎಂದು ಕೇಳಿ ಕರೆದುಕೊಂಡು ಹೋಗಿದ್ದರು"
"ನಾರಾಯಣ ಗೌಡ ಅವರ ಜೊತೆ ಬೈಕ್ನಲ್ಲಿ ಹೋಗುವಾಗ ಲಾರಿ ಬಂದು ಗುದ್ದಿತ್ತು. ಅಪಘಾತದಲ್ಲಿ ನಾರಾಯಣ ಗೌಡ ಜೀವಬಿಟ್ಟರು. ನಮ್ಮ ತಂದೆ ಉಸಿರಾಡುತ್ತಿದ್ದರಂತೆ. ನೀರು ಕೇಳಿದ್ದರಂತೆ. ಬಳಿಕ ಪ್ರಾಣಪಕ್ಷಿ ಹಾರಿ ಹೋಗಿತ್ತು. ಹೀಗೆ ಬೈಕ್ ಅಪಘಾತದಲ್ಲಿ ನಮ್ಮ ತಂದೆ ಕೊನೆಯುಸಿರೆಳೆದರು. ನನಗೆ ಆಗ ನಾಲ್ಕು ವರ್ಷ ವಯಸ್ಸು" ಎಂದು ಮಲ್ಲಿಕಾ ವಿವರಿಸಿದ್ದಾರೆ.
ನಮ್ಮ ತಂದೆ ಇಷ್ಟು ಸಿನಿಮಾಗಳಲ್ಲಿ ನಟಿಸಿದ್ದರೂ ಚಿತ್ರರಂಗದವರು ಯಾರು ನಮ್ಮ ಕುಟುಂಬವನ್ನು ನೆನಪಿಸಿಕೊಳ್ಳಲ್ಲ ಎಂದು ಕೆಡಿ ನಾಗಪ್ಪ ಮಗಳು ಮಲ್ಲಿಕಾ ಬೇಸರ ವ್ಯಕ್ತಪಡಿಸಿದ್ದಾರೆ. ಶಂಕರ್ ನಾಗ್, ಸಂಚಾರಿ ವಿಜಯ್, ಸುನಿಲ್ ಹೀಗೆ ಕನ್ನಡದ ಜನಪ್ರಿಯ ಕಲಾವಿದರು ರಸ್ತೆ ಅಪಘಾತದಲ್ಲಿ ಕೊನೆಯುಸಿರೆಳೆದಿದ್ದಾರೆ.


Click it and Unblock the Notifications











