ಆದಿಪುರುಷ್: ಪೌರಾಣಿಕ ಸಿನಿಮಾ, ಕಥೆ, ಚಿತ್ರಕಥೆ, ಪಾತ್ರಗಳ ಅಪಹಾಸ್ಯ
ರಾಮಾಯಣ, ಮಹಾಭಾರತದಂತಹ ಮಹಾನ್ ದೃಶ್ಯ ಕಾವ್ಯಗಳಲ್ಲಿ ರಾಮ, ಲಕ್ಷ್ಮಣ, ಸೀತೆ, ಕೃಷ್ಣ, ಅರ್ಜುನ ಮುಂತಾದ ಪಾತ್ರಧಾರಿಗಳು ಹೇಗೆ ಇದ್ದರು ಎನ್ನುವುದು ಒಂದು ಕಾಲ್ಪನಿಕ ಸೃಷ್ಟಿ. ಮನೋರಂಜನಾ ತಾಣದಲ್ಲಿ ಇಂತಹ ಪಾತ್ರಗಳಲ್ಲಿ ಏನಾದರೂ ವ್ಯತ್ಯಾಸ ಕಂಡು ಬಂದಾಗ ವ್ಯಾಪಕ ವಿರೋಧವೂ ವ್ಯಕ್ತವಾಗಿದ್ದುಂಟು. ನಿಮ್ಮ ರಾಮ, ಕೃಷ್ಣ ಹೀಗೇ ಇದ್ದ ಎನ್ನುವುದಕ್ಕೆ ಏನಾದರೂ ಪುರಾವೆ ಇದೆಯೇ ಎಂದು ನಾಸ್ತಿಕರು ಲೇವಡಿ ಮಾಡಿದ್ದೂ ನೋಡಿದ್ದೇವೆ.
ಆದರೂ, ಬಹುಸಂಖ್ಯಾತರು ನಂಬಿರುವ ಈ ಪೌರಾಣಿಕ ಪಾತ್ರಗಳನ್ನು ಜನರು ಹೀಗೆಯೇ ಎಂದು ನಂಬುತ್ತಾರೆ. ಉದಾಹರಣೆಗೆ, ಕರಾವಳಿಯ ತಾಯಿಯೊಬ್ಬರು ತನ್ನ ಮಗುವಿಗೆ ಪ್ರಹ್ಲಾದನ ಬಗ್ಗೆ ವಿವರಿಸುತ್ತಿದ್ದಾಗ, ಹಿರಣ್ಯಕಶಿಪು ಎಂದರೆ ಯಾರು ಎಂದಾಗ ಡಾ.ರಾಜಕುಮಾರ್ ಅವರ ಫೋಟೋ ತೋರಿಸಿದ್ದರಂತೆ.

ಪೌರಾಣಿಕ ಕಥೆಯೊಂದನ್ನು ಸಿನಿಮಾಗೆ ತರುವುದು ದೊಡ್ಡ ಸಾಹಸದ ಕೆಲಸ. ಬಜೆಟ್ ಮತ್ತು ಪಾತ್ರಕ್ಕೆ ಜೀವ ತುಂಬುವುದು ಸುಲಭದ ಮಾತಲ್ಲ. ಇಂತಹ ಸಿನಿಮಾಗಳನ್ನು ಮಾಡುವುದರಲ್ಲಿ ದಕ್ಷಿಣದ ಕಲಾವಿದರು ಮಂಚೂಣಿಯಲ್ಲಿ ಬರುತ್ತಾರೆ. ಅದು, ನಮ್ಮ ಅಣ್ಣಾವ್ರು ಇರಬಹುದು ತೆಲುಗಿನ ಎನ್.ಟಿ.ರಾಮರಾವ್, ಅಕ್ಕಿನೇನಿ ನಾಗೇಶ್ವರ್ ರಾವ್ ಇರಬಹುದು ಅಥವಾ ತಮಿಳಿನ ಎಂಜಿಆರ್, ಶಿವಾಜಿ ಗಣೇಶನ್ ಇರಬಹುದು.
ದಶಕಗಳ ಹಿಂದೆ ರಮಾನಾಂದ ಸಾಗರ್ ಅವರ ಸಂಪೂರ್ಣ ರಾಮಾಯಣ ಟಿವಿಯಲ್ಲಿ ಬರುತ್ತಿದ್ದಂತಹ ಸಮಯ, ಎಲ್ಲರ ಮನೆಯಲ್ಲೂ ಟಿವಿಯೂ ಇರುತ್ತಿರಲಿಲ್ಲ. ಆದರೂ, ಆ ಧಾರವಾಹಿ ಮಾಡಿದ್ದ ಮೋಡಿ ಒಂದಲ್ಲಾ.. ಎರಡಲ್ಲಾ.. ಆ ಸೀರಿಯಲ್ ಮುಗಿದ ನಂತರ ಬೇರೆ ಸರ್ಕಾರೀ/ಖಾಸಗಿ ಕಾರ್ಯಕ್ರಮ ಶುರುವಾದ ಉದಾಹರಣೆಗಳಿದ್ದವು.

ರಾಮನ ಪಾತ್ರಧಾರಿ ಅರುಣ್ ಗೋವಿಲ್, ಸೀತೆಯ ಪಾತ್ರ ಮಾಡಿದ್ದ ದೀಪಿಕಾ ಚಿಖಾಲಿಯಾ ಸಾರ್ವಜನಿಕರ ಮುಂದೆ ಬಂದರೆ, ಜನರು ರಸ್ತೆಯಲ್ಲೇ ನಮಸ್ಕಾರ ಸಲ್ಲಿಸುತ್ತಿದ್ದರು. ಇದಕ್ಕೆಲ್ಲಾ ಕಾರಣ, ಇಡೀ ರಾಮಾಯಣ ಸೀರಿಯಲ್ ಅನ್ನು ರಮಾನಂದ ಸಾಗರ್ ಕಟ್ಟಿಕೊಟ್ಟಿದ್ದ ರೀತಿ, ಪೈಪೋಟಿಗೆ ಬಿದ್ದಂತೆ ಕಲಾವಿದರ ನಟನೆ, ಪೌರಾಣಿಕ ಪಾತ್ರಕ್ಕೆ ನ್ಯಾಯ ಸಲ್ಲಿಸಲಾಗಿದ್ದ ಸಂಭಾಷಣೆಗಳು.
ಶುಕ್ರವಾರ (ಜೂನ್ 16) ರಾಮಾಯಣದ ಕಥೆಯ, ಬಹುನಿರೀಕ್ಷಿತ ಓಂ ರಾವತ್ ನಿರ್ದೇಶನದ ಆದಿಪುರುಷ್ ಚಿತ್ರ ಬಿಡುಗಡೆಯಾಗಿದೆ. 500-600 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ, ಬಹುತಾರಾಗಣದ ಈ ಸಿನಿಮಾ ಕಳಪೆ ಮೇಕಿಂಗ್ ನಿಂದ ಭಾರೀ ಟ್ರೋಲಿಗೆ ಒಳಗಾಗುತ್ತಿದೆ. ಚಿತ್ರದ ಕೆಲವು ದೃಶ್ಯಗಳಲ್ಲಿನ ಸಂಭಾಷಣೆ ಪೌರಾಣಿಕ ಸಿನಿಮಾವೋ/ಲಾಂಗ್ ಮಚ್ಚಿನ ಸಿನಿಮಾವೊ ಎನ್ನುವ ಆಭಾಸವನ್ನು ಉಂಟು ಮಾಡುತ್ತಿದೆ.

ಈ ಮೇಲೆ ಹೇಳಿದಂತೆ, ಜನರು ಇಂತಹ ಪೌರಾಣಿಕ ಸಿನಿಮಾಗಳು ಹಿಂದೆಯೂ ನೋಡಿರುವುದರಿಂದ ಪಾತ್ರಧಾರಿಗಳ ವೇಷಭೂಷಣಗಳು ಹೀಗೆಯೇ ಇರಬೇಕು ನಿರೀಕ್ಷೆ ಇಟ್ಟುಕೊಂಡು ಚಿತ್ರಮಂದಿರಕ್ಕೆ ಬಂದಿರುತ್ತಾರೆ. ಆದರೆ, ಇಲ್ಲೂ ಓಂ ರಾವತ್ ಎಡವಿದ್ದಾರೆ. ಅಲ್ಲಲ್ಲಿ ರಾಮನ ಕಾಸ್ಟ್ಯೂಮ್ಸ್, ರಾವಣ, ವಿಭೀಷಣನ ವೇಷಭೂಷಣಗಳು ಅಪಹಾಸ್ಯಕ್ಕೆ ಈಡಾಗಿದೆ.
ರಾಮಾಯಣದ ಕಥೆ ಅಂದು ಕೂಡಾ ಒಂದೇ, ಇಂದು ಕೂಡಾ ಒಂದೇ. ಅಂದಿನಿಂದ ಇಂದಿಗೆ ಬದಲಾಗಿರಬೇಕಾಗಿರುವುದು ಆಧುನಿಕ ತಂತ್ರಜ್ಣಾನ, ಇನ್ನಷ್ಟು ಕುತೂಹಲಕಾರಿಯಾಗಿ ಹಣೆಯಬೇಕಾಗಿರುವ ಚಿತ್ರಕಥೆ. ಎಲ್ಲಕ್ಕಿಂತ ಮುಖ್ಯವಾಗಿ ನಿರ್ದೇಶಕ ಓಂ ರಾವತ್ ಅವರಿಗೆ ವಾಲ್ಮೀಕಿ ರಾಮಾಯಣದ ಕಥೆಯ ಮೇಲೆ ಇರಬೇಕಾಗಿದ್ದ ಹಿಡಿತ. ಸನ್ನಿವೇಶವನ್ನು ಹಳೆಯ ಸೊಗಡನ್ನೇ ಇಟ್ಟುಕೊಂಡು ಈಗಿನ ಕಾಲಘಟ್ಟಕ್ಕೆ ತರಬೇಕಾಗಿದ್ದ ಜಾಣ್ಮೆ. ಅದ್ದೂರಿ ವಿಎಫ್ಎಕ್ಸ್ ಸದ್ಬಳಕೆ, ಅದು ಇಲ್ಲಿ ನಿರ್ದೇಶಕರಿಂದ ಮಿಸ್ ಆಗಿದೆ ಎನ್ನಬಹುದು.
ದರ್ಶನ್ ಅವರು ತಮ್ಮ ಕುರುಕ್ಷೇತ್ರ ಚಿತ್ರ ಬಿಡುಗಡೆಯ ಸಂದರ್ಭದಲ್ಲಿ ಒಂದು ಮಾತನ್ನು ಹೇಳಿದ್ದರು. ನನ್ನ ತಂದೆ (ತೂಗುದೀಪ ಶ್ರೀನಿವಾಸ್) ಮತ್ತು ಅಣ್ಣಾವ್ರ ಪೌರಾಣಿಕ ಸಿನಿಮಾಗಳನ್ನು ಐವತ್ತು ಬಾರಿ ನೋಡಿ, ಶೂಟಿಂಗಿಗೆ ಸಜ್ಜಾಗುತ್ತಿದೆ. ಆದರೂ, ನಾನು ಅವರ ಪಾದಧೂಳಿಗೆ ಸಮನಲ್ಲ ಎಂದು. ಆ ಚಿತ್ರದಲ್ಲಿ ಹೆಚ್ಚಿನ ಕಲಾವಿದರು ಪಕ್ವ ಅಭಿನಯವನ್ನು ನೀಡಿದ್ದರು, ಅದಕ್ಕೆ ಕಾರಣ ಅವರ ಗ್ರೌಂಡ್ ವರ್ಕ್.
ಎಲ್ಲರಿಗೂ ಅವರದ್ದೇ ಆದ ಸ್ಟೈಲ್ ಇರುತ್ತದೆ, ಅವರದ್ದೇ ಆದ ಬಾಡಿ ಲಾಂಗ್ವೇಜ್ ಇರುತ್ತೆ, ಒಬ್ಬರಿಗೆ ಇನ್ನೊಬ್ಬರನ್ನು ಹೋಲಿಸುವುದು ಸೂಕ್ತವಲ್ಲ ಎನ್ನುವುದು ಒಪ್ಪಿಕೊಳ್ಳಬೇಕಾದ ವಿಚಾರ. ಆದರೆ, ಆದಿಪುರುಷ್ ಒಂದು ಪೌರಾಣಿಕ ಸಿನಿಮಾ, ಚಿತ್ರದ ಪಾತ್ರ, ಪಾತ್ರಧಾರಿ, ವೇಷಭೂಷಣ, ಸಂಭಾಷಣೆ ಮುಂತಾದ ವಿಭಾಗದಲ್ಲಿ ಜಾಗ್ರತೆಯನ್ನು ವಹಿಸಿಕೊಳ್ಳಬೇಕಾಗಿತ್ತು. ಕೆಲವೊಂದು ವೀಕ್ಷಕರ ಪ್ರಕಾರ, ಆದಿಪುರುಷ್ ಎನ್ನುವ ಚಿತ್ರ ಪೌರಾಣಿಕ ಸಿನಿಮಾ, ಕಥೆ, ಚಿತ್ರಕಥೆ, ಪಾತ್ರಗಳ ಅಪಹಾಸ್ಯ..


Click it and Unblock the Notifications











