"ಲೀಲಾವತಿಯವ್ರು ವಿನೋದ್ ರಾಜ್ ನಿಮ್ಮ ಮಗ ಅಂತಿದ್ದಾರೆ ನಿಜವೇ?" ಈ ಪ್ರಶ್ನೆಗೆ ಅಣ್ಣಾವ್ರು ಏನಂದಿದ್ರು?
ನಟಸಾರ್ವಭೌಮ ಡಾ. ರಾಜ್ಕುಮಾರ್ ಕನ್ನಡ ಚಿತ್ರರಂಗಕ್ಕೆ ನೀಡಿದ ಕೊಡುಗೆಯನ್ನು ಮರೆಯೋಕೆ ಸಾಧ್ಯವಿಲ್ಲ. ಅಣ್ಣಾವ್ರ ಸರಳ ಸಜ್ಜನ ವ್ಯಕ್ತಿತ್ವದ ಬಗ್ಗೆ ಎಷ್ಟು ಮಾತನಾಡಿದರೂ ಕಮ್ಮಿಯೇ. ಆದರೆ ಲೀಲಾವತಿ ಹಾಗೂ ಡಾ. ರಾಜ್ಕುಮಾರ್ ಮಗ ವಿನೋದ್ ರಾಜ್ ಎನ್ನುವ ವಿವಾದವೊಂದು ದಶಕಗಳಿಂದ ಸದ್ದು ಮಾಡುತ್ತಿದೆ. ಬಹುತೇಕರು ಇದು ಕಟ್ಟು ಕಥೆ ಎನ್ನುತ್ತಾರೆ.
ಡಾ. ರಾಜ್ಕುಮಾರ್ ಎದುರು ಅವರ ಆಪ್ತರೊಬ್ಬರು ಈ ಪ್ರಶ್ನೆ ಇಟ್ಟಿದ್ದರಂತೆ. ಆಗ ಅಣ್ಣಾವ್ರು ಈ ಬಗ್ಗೆ ಉತ್ತರ ಕೂಡ ನೀಡಿದ್ದರು. ಡಾ. ರಾಜ್ ಕುಟುಂಬಕ್ಕೆ ನಿರ್ದೇಶಕ ಪ್ರಕಾಶ್ ಮೇಹು ಬಹಳ ಆಪ್ತರಾಗಿದ್ದರು. ದೊಡ್ಮನೆಯ ಸಿನಿಮಾಗಳಲ್ಲಿ ಅವರು ಹೆಚ್ಚು ಕೆಲಸ ಕೂಡ ಮಾಡಿದ್ದಾರೆ. ಅಣ್ಣಾವ್ರ ಕುಟುಂಬ ಸದಸ್ಯರ ಜೊತೆ ಪ್ರಕಾಶ್ ಮೇಹು ಅವರಿಗೆ ಬಹಳ ಸಲುಗೆ ಇತ್ತು. ಇದೇ ಸಲುಗೆಯಿಂದ ಅಣ್ಣಾವ್ರ ಬಳಿ ಈ ಪ್ರಶ್ನೆ ಇಟ್ಟುಬಿಟ್ಟಿದ್ದರಂತೆ. ಒಂದು ಕ್ಷಣ ಇದನ್ನು ಕೇಳಿ ಮೌನಕ್ಕೆ ಜಾರಿದ್ದ ಡಾ. ರಾಜ್ಕುಮಾರ್ ನಂತರ ಉತ್ತರ ನೀಡಿದ್ದರಂತೆ. ಟೋಟಲ್ ಕನ್ನಡ ಮೀಡಿಯಾ ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ಪ್ರಕಾಶ್ ಮೇಹು ಈ ಬಗ್ಗೆ ವಿವರಿಸಿದ್ದಾರೆ.
ಬರಹಗಾರರು ಆಗಿರುವ ಪ್ರಕಾಶ್ ರಾಜ್ ಮೇಹು, ಡಾ. ರಾಜ್ಕುಮಾರ್ ಕುರಿತು 'ಅಂತರಂಗದಲ್ಲಿ ಅಣ್ಣ' ಎನ್ನುವ ಪುಸ್ತಕವನ್ನು ಬರೆದಿದ್ದಾರೆ. ಈ ಪುಸ್ತಕದಲ್ಲಿ ಡಾ. ರಾಜ್ಕುಮಾರ್ ಕುರಿತು ಯಾರಿಗೂ ಗೊತ್ತಿಲ್ಲದ ಸಾಕಷ್ಟು ಸಂಗತಿಗಳನ್ನು ಬಿಚ್ಚಿಟ್ಟಿದ್ದಾರೆ.

ಸಿನಿಮಾ ನೋಡ್ತಾ ಅಣ್ಣಾವ್ರು ಹೇಳಿದ್ದೇನು?
ಡಾ. ರಾಜ್ಕುಮಾರ್ ಎದುರು ಇಂತಹ ಪ್ರಶ್ನೆ ಇಡುವುದು ಅಂದರೆ ತಮಾಷೆಯ ಮಾತಲ್ಲ. ಆದರೆ ಅಂದು ಪ್ರಕಾಶ್ ಮೇಹು, ಅಣ್ಣಾವ್ರ ಜೊತೆಗೆ ಇದ್ದರಂತೆ. ಆ ಪ್ರಶ್ನೆಗೆ ಕೇಳಲು ಪೂರಕವಾದ ಸನ್ನಿವೇಶವೂ ಎದುರಾಗಿತ್ತು ಎಂದು ಪ್ರಕಾಶ್ ಮೇಹು ವಿವರಿಸಿದ್ದಾರೆ. "ಒಮ್ಮೆ ಟಿವಿಯಲ್ಲಿ ತಮಿಳು ಬ್ಲಾಕ್ ಅಂಡ್ ವೈಟ್ ಸಿನಿಮಾ ಬರ್ತಿತ್ತು. ಆ ಚಿತ್ರದ ಹೀರೊ, ತಮಿಳಿನ ದೊಡ್ಡ ಕಲಾವಿದನ ಮಗ. ಅಂದರೆ ಅನಧಿಕೃತ ಮಗ. ಆದರೆ ಅವರು ನೋಡಲು ಥೇಟ್ ಆ ನಟನ ರೀತಿಯೇ ಇದ್ದಾರೆ. ಸಿನಿಮಾ ನೋಡುತ್ತಿದ್ದ ಅಣ್ಣಾವ್ರು, ನೋಡಪ್ಪ ಆತ ಆ ನಟನ ರೀತಿ ಇದ್ದಾನೆ. ಅವರ ಮಕ್ಕಳು ಇಬ್ಬರು ಇದ್ದಾರಲ್ಲ, ಅವರೂ ಕೂಡ ಇಷ್ಟು ಹೋಲಿಕೆ ಇಲ್ಲ ಎಂದು ಅಣ್ಣಾವ್ರು, ವರದಪ್ಪಗೆ ಹೇಳಿದ್ರಂತೆ. ಇದಕ್ಕೆ ಉತ್ತರಿಸಿದ ವರದಪ್ಪ, ಅದು ಅಲ್ಲಿ ಎಲ್ಲರಿಗೂ ಗೊತ್ತು. ಓಪನ್ ಸೀಕ್ರೆಟ್ ಅದು, ಆತ ಅವರ ಮಗನೇ ಎಂದು ಹೇಳಿ" ಹೊರಟು ಹೋದರಂತೆ.

"ವಯಸ್ಸು ತಪ್ಪು ಮಾಡಿಸುತ್ತೆ": ಡಾ. ರಾಜ್
ವರದಪ್ಪ ಎದ್ದು ಹೋದ ಮೇಲೆ ಅಣ್ಣಾವ್ರು ಹಾಗೂ ಪ್ರಕಾಶ್ ಮೇಹು ಮಾತ್ರ ಸಿನಿಮಾ ನೋಡುತ್ತಿದ್ದರಂತೆ. ಅದೇನು ಅನ್ನಿಸಿತೋ ಏನೋ, ಪ್ರಕಾಶ್ ಮೇಹು, "ಅಣ್ಣಾ ಲೀಲಾವತಿಯವರು ಎಲ್ಲಾ ಕಡೆ ವಿನೋದ್ ರಾಜ್ ನಿಮ್ಮ ಮಗ ನಿಮ್ಮ ಮಗ ಎಂದು ಹೇಳ್ಕೊಂಡು ಓಡಾಡುತ್ತಿದ್ದಾರೆ. ಏನಣ್ಣಾ? ಎಂದು ಕೇಳಿದ್ದೆ. ಒಂದು ಕ್ಷಣ ಇದನ್ನು ಕೇಳಿ ಅಣ್ಣಾವ್ರು ಮೌನಕ್ಕೆ ಜಾರಿದ್ದರಂತೆ. ಇತ್ತ ಪ್ರಕಾಶ್ ಮೇಹು ಯಾಕಾದರೂ ಈ ಪ್ರಶ್ನೆ ಕೇಳಿದೇನೋ ಎಂದು ಚಡಪಡಿಸುತ್ತಿದ್ದರಂತೆ. ಸ್ವಲ್ಪ ಹೊತ್ತಿನ ನಂತರ ಅಣ್ಣಾವ್ರು "ವಯಸ್ಸು ಎಂತಹವರನ್ನು ತಪ್ಪು ಮಾಡಿಸುತ್ತೆ" ಎಂದರಂತೆ. ಈ ಮಾತು ಕೇಳಿ ಓಹೋ ಅಣ್ಣಾವ್ರು ಒಪ್ಪಿಕೊಂಡುಬಿಟ್ಟರು ಎಂದು ಪ್ರಕಾಶ್ ಮೇಹು ಅಂದುಕೊಂಡರಂತೆ.

ಆ ವೇಳೆಗೆ ನಮ್ಮ ಸಂಬಂಧ ಕಡಿದಿತ್ತು
ಸ್ವಲ್ಪ ಹೊತ್ತಿನ ನಂತರ ಮತ್ತೆ ಮಾತು ಮುಂದುವರೆಸಿದ ಅಣ್ಣಾವ್ರು "ಆದ್ರೆ ಆ ಮಗು ಹುಟ್ಟುವ ವೇಳೆಗೆ ನಮ್ಮ ಸಂಬಂಧ ಕಡಿದು 3 ವರ್ಷದ ಮೇಲಾಗಿತ್ತು. ಅವ್ರು ಆ ರೀತಿ ಹೇಳಿಕೊಳ್ಳುವುದರಿಂದ ಅವ್ರಿಗೋ, ಅವ್ರ ಮಗನಿಗೋ ಒಳ್ಳೇದು ಆಗುವುದಿದ್ದರೇ ಸುಳ್ಳು ಎಂದು ಹೇಳಿ ನಾನ್ಯಾಕೆ ವಿಲನ್ ಆಗಲಿ? ಬದುಕಲಿ ಬಿಡಿ, ಅವನಿಗೂ ಒಳ್ಳೆಯದಾಗಲಿ" ಎಂದು ಡಾ. ರಾಜ್ಕುಮಾರ್ ಹೇಳಿದ್ದರಂತೆ.

ಚರ್ಚೆ ಹುಟ್ಟಾಕಿತ್ತು 'ರಾಜ್ ಲೀಲಾ ವಿನೋದ'
ರಂಗಭೂಮಿ ಕಲಾವಿದರು ಒಬ್ಬರು ಇದ್ದರು. ಮಹಾಲಿಂಗ ಭಾಗವತರ್ ಎಂದು. ಅವರ ಮಗ ವಿನೋದ್ ರಾಜ್ ಎನ್ನುವುದು ನಮಗಿರುವ ಮಾಹಿತಿ ಎಂದು ನಂತರ ಅಣ್ಣಾವ್ರು ಹೇಳಿದ್ದರಂತೆ. ಲೀಲಾವತಿ- ಮಹಾಲಿಂಗ ಭಾಗವತರ್ ಮದುವೆ ಆಗಿದ್ದರು. ಅಷ್ಟಿದ್ದೂ ಅವರು ಯಾಕೆ ಆ ರೀತಿ ಹೇಳುತ್ತಿದ್ದಾರೆ ಎನ್ನುವುದು ಗೊತ್ತಿಲ್ಲ" ಎಂದು ಅಣ್ಣಾವ್ರು ನಂತರ ಹೇಳಿದ್ದರಂತೆ. ಲೀಲಾವತಿ ಹಾಗೂ ಡಾ. ರಾಜ್ಕುಮಾರ್ ಮಗ ವಿನೋದ್ ರಾಜ್ ಎನ್ನುವ ಎನ್ನುವಂತೆ ರವಿ ಬೆಳಗೆರೆ 'ರಾಜ್ ಲೀಲಾ ವಿನೋದ' ಎನ್ನುವ ಪುಸ್ತಕ ಹೊರ ತಂದಿದ್ದರು. ಈ ಭಾರೀ ಚರ್ಚೆ ಹುಟ್ಟಾಕ್ಕಿದ್ದು ಗೊತ್ತೇಯಿದೆ.


Click it and Unblock the Notifications











