ಎಂಜಿ ರಸ್ತೆಯಲ್ಲಿ ಅಂದು ಸುದೀಪ್ ಕಾರು ಅಪಘಾತ; ವಿಷಯ ಮುಚ್ಚಿಡೋಕೆ ಕಿಚ್ಚ ಬಯಸಿದ್ದಿದ್ದೇಕೆ?
ನಟ ಕಿಚ್ಚ ಸುದೀಪ್ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಶೀಘ್ರದಲ್ಲೇ ಬಿಗ್ಬಾಸ್ ಸೀಸನ್ 12 ಶುರುವಾಗಲಿದೆ. ಈ ಬಾರಿ ಕೂಡ ಕಿಚ್ಚ ಸಾರಥ್ಯ ವಹಿಸಿಕೊಳ್ಳುತ್ತಿದ್ದಾರೆ. 22 ವರ್ಷಗಳ ಹಿಂದೆ ಎಂಜಿ ರಸ್ತೆಯಲ್ಲಿ ಸುದೀಪ್ ಕಾರು ಅಪಘಾತಕ್ಕೀಡಾಗಿತ್ತು. ಈ ಬಗ್ಗೆ ಸಾಕಷ್ಟು ಜನರಿಗೆ ಗೊತ್ತಿಲ್ಲ. ಆ ಸುದ್ದಿ ಬಹಿರಂಗವಾಗಬಾರದು ಎಂದು ಸುದೀಪ್ ಕಿಚ್ಚ ಕೂಡ ಬಯಸಿದ್ದರಂತೆ.
ಇದು ಸೋಶಿಯಲ್ ಮೀಡಿಯಾ ಜಮಾನ. ಸಿಸಿಟಿವಿ, ಟಿವಿ ಚಾನಲ್ಗಳ ಭರಾಟೆ ಜೋರಾಗಿದೆ. ಈಗ ಯಾವುದೇ ಸುದ್ದಿಯನ್ನು ಮುಚ್ಚಿಡುವುದು ಅಷ್ಟು ಸುಲಭವಲ್ಲ. ಅದರಲ್ಲೂ ಸೆಲೆಬ್ರೆಟಿಗಳಿಗೆ ಸಂಬಂಧಿಸಿದ ವಿಚಾರಗಳು ಬಹಳ ಬೇಗ ವೈರಲ್ ಆಗುಬಿಡುತ್ತದೆ. ಆದರೆ 2003ರಲ್ಲಿ ಎಂಜಿ ರಸ್ತೆಯಲ್ಲಿ ರಾತ್ರಿ 12.30 ಗಂಟೆಗೆ ನಾನು ಹಾಗೂ ಸುದೀಪ್ ಸರ್ ಇದ್ದ ಕಾರು ಅಪಘಾತಕ್ಕೆ ಈಡಾಗಿತ್ತು ಎಂದು ಪ್ರಶಾಂತ್ ಸಂಬರಗಿ ಹೇಳಿದ್ದಾರೆ.

ಮನೆಯವರಿಗೆ ವಿಷಯ ಗೊತ್ತಾದರೆ ಗಾಬರಿ ಆಗುತ್ತಾರೆ ಎಂದು ಸುದೀಪ್ ಅಂದು ಆ ವಿಷಯ ಬಹಿರಂಗವಾಗಬಾರದು ಎಂದು ಬಯಸಿದ್ದಾಗಿ ಪ್ರಶಾಂತ್ ಸಂಬರಗಿ ಹೇಳಿದ್ದಾರೆ. ಈ ಹಿಂದೆ ಸಿನಿಲಹರಿ ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ಪ್ರಶಾಂತ್ ಮಾತನಾಡಿದ್ದರು. ಆ ವೀಡಿಯೋ ಈಗ ವೈರಲ್ ಆಗುತ್ತಿದೆ. ಬಿಗ್ಬಾಸ್ ಸೀಸನ್ 8ರಲ್ಲಿ ಪ್ರಶಾಂತ್ ಸ್ಪರ್ಧಿಯಾಗಿ ದೊಡ್ಮನೆ ಒಳಗೆ ಹೋಗಿದ್ದರು.
ಪ್ರಶಾಂತ್ ಸಂಬರಗಿ ಬಿಗ್ಬಾಸ್ ಮನೆಗೆ ಹೋದಮೇಲೆ ಸುದೀಪ್ ಅವರಿಗೆ ಪರಿಚಯ ಆಗಿದ್ದು ಎಂದು ಕೆಲವರು ಭಾವಿಸಿದ್ದಾರೆ. ಆದರೆ ದಶಕಗಳ ಹಿಂದೆಯೇ ರಿಲಯನ್ಸ್ ಟೆಲಿಕಾಂ ಸಂಸ್ಥೆಯಲ್ಲಿ ಪ್ರಶಾಂತ್ ಕೆಲಸ ಮಾಡುತ್ತಿದ್ದರು. ಆಗ ಸುದೀಪ್ ಬ್ರ್ಯಾಂಡ್ ಅಂಬಾಸಿಡರ್ ಆಗಿದ್ದರು. ಆಗ ಇಬ್ಬರೂ ಒಟ್ಟೊಟ್ಟಿಗೆ ಓಡಾಡುವ ಅವಕಾಶ ಸಿಕ್ಕಿತ್ತು. ಇದೇ ವೇಳೆ ಆ ಘಟನೆ ನಡೆದಿತ್ತಂತೆ. ಆ ಅಚ್ಚರಿಯ ಸಂಗತಿಯನ್ನು ಸಂಬರಗಿ ನೆನಪು ಮಾಡಿಕೊಂಡಿದ್ದರು.

"ಎಂಜಿ ರಸ್ತೆಯಲ್ಲಿ ಅಂದು ಅಪಘಾತವಾಗಿತ್ತು. ನಾವು ಕೂತಿದ್ದ ಕಾರಿಗೆ ಹೊಸ ಕಾರ್ ಬಂದು ಡಿಕ್ಕಿ ಹೊಡೆದಿತ್ತು. ರಾತ್ರಿ 12.30ಕ್ಕೆ ಈ ಅಪಘಾತ ಸಂಭವಿಸಿತ್ತು. ಆ ಸಮಯದಲ್ಲಿ ಯಾರು ಅದನ್ನು ನೋಡಿರಲಿಲ್ಲ, ಯಾರಿಗೂ ಗೊತ್ತಾಗುವುದಿಲ್ಲ. ಮನೆಯಲ್ಲಿ ಗೊತ್ತಾದರೆ ಗಾಬರಿ ಆಗುತ್ತಾರೆ ಎಂದಿದ್ದರು. ಇಬ್ಬರಿಗೂ ಸಣ್ಣಪುಟ್ಟ ಗಾಯಗಳಾಗಿತ್ತು. ಅವತ್ತಿನ ಕಾಲಕ್ಕೆ ದೊಡ್ಡ ನ್ಯೂಸ್ ಪೇಪರ್ ಕಛೇರಿಯ ಮುಂಭಾಗದಲ್ಲಿ ಅಪಘಾತ ಸಂಭವಿಸಿತ್ತು. ಹಾಗಾಗಿ ಪೇಪರ್ನಲ್ಲಿ ಸುದ್ದಿ ಆಗಿತ್ತು" ಎಂದು ಪ್ರಶಾಂತ್ ಸಂಬರಗಿ ಹೇಳಿದ್ದಾರೆ.
ಮನೆಯಲ್ಲಿ ವಿಷಯ ಗೊತ್ತಾಗಿ ಗಾಬರಿ ಆಗಿದ್ದರು. ಬಹಳ ಜನಕ್ಕೆ ಈ ವಿಷಯ ಗೊತ್ತಿಲ್ಲ ಎಂದು ಪ್ರಶಾಂತ್ ಹೇಳಿದ್ದಾರೆ. "ಅವತ್ತು ನಾನು ಪೆಟ್ಟಾಗಿ ಸುದೀಪ್ ಸರ್ ಮನೆಯಲ್ಲೇ ಮಲಗಿದ್ದೆ. ಆ ಒಂದು ಪೇಪರ್ನಲ್ಲಿ ಮಾತ್ರ ಸುದ್ದಿ ಆಗಿತ್ತು. ಇನ್ನುಳಿದಂತೆ ಆಗ ಟಿವಿ ಮಾಧ್ಯಮ, ಡಿಜಿಟಲ್ ಮಾಧ್ಯಮ ಇರಲಿಲ್ಲ. ಮೊಬೈಲ್ ಇರಲಿಲ್ಲ. ಆಗ ಸುದೀಪ್ ಸರ್ ಪೊಲೀಸ್ ಕಂಪ್ಲೇಂಟ್ ಬೇಡ, ನಮ್ಮ ಕಾರ್ಗೆ ಬಂದು ಡಿಕ್ಕಿ ಹೊಡೆದಿದ್ದು ಯಾರು ಎಂದು ಹುಡುಕಲು ಹೇಳಿದ್ರು" ಎಂದಿದ್ದಾರೆ.
ಹೊಸದಾಗಿ ಖರೀದಿಸಿದ್ದ ಕಾರ್, ಯಾವ ಕಲರ್, ಯಾವ ಶೋ ರೂಂನಿಂದ ಖರೀದಿಸಿದ್ದ ಕಾರ್ ಎನ್ನುವುದು ಮಾತ್ರ ಗೊತ್ತಿತ್ತು. ಆರ್ಟಿಓಗೆ ಹೋದರೆ ಕಾರ್ ನಂಬರ್ ಕೇಳ್ತಾರೆ. ಪೊಲೀಸ್ ಕಂಪ್ಲೇಂಟ್ ಕೇಳ್ತಾರೆ. ಬಳಿಕ ಕಾರ್ ಶೋರೂಂ ಅಲ್ಲಿ ಹೋಗಿ ವಿಚಾರಿಸಿದಾಗ ಯಾರಿಗೆ ಕಾರ್ ಮಾರಾಟ ಮಾಡಿದ್ದರು ಎನ್ನುವುದು ಗೊತ್ತಾಯಿತು. ಅದು ಒಬ್ಬ ಸರ್ದಾರ್ಜೀ ಕಾರ್ ಎಂದು ಗೊತ್ತಾಗಿ ಹುಡುಕಿದೆವು ಎಂದು ಪ್ರಶಾಂತ್ ವಿವರಿಸಿದ್ದಾರೆ.
"ನಮ್ಮ ಕಾರ್ಗೆ ಡ್ಯಾಮೇಜ್ ಆಗಿದೆ ಎಂದು ನಾನು ನಿಮ್ಮನ್ನು ಹುಡುಕಿ ಬರಲಿಲ್ಲ. ಕನಿಷ್ಠ ಮಾನವೀಯತೆ ಬೇಡವೇ? ಅಪಘಾತವಾದಾಗ ಕಾರಿನಲ್ಲಿ ಇದ್ದವರಿಗೆ ಏನಾಗಿದೆ ಎಂದು ನೋಡದೇ ಹೋದೆ ಎಂದು ಸರ್ದಾರ್ಜೀನ ಸುದೀಪ್ ಸರ್ ಪ್ರಶ್ನಿಸಿದ್ದರು. ಬಳಿಕ ಆತನಿಂದ ಅಪಾಲಜಿ ಲೆಟರ್ ಬರೆಸಿಕೊಂಡೆವು. ಆ ರೀತಿ ಶೋರೂಂ ಹೋಗಿ ಕಾರ್ ಮಾಲೀಕರ ಮಾಹಿತಿ ಪಡೆಯಬಹುದು ಎನ್ನುವುದು ಸುದೀಪ್ ಸರ್ಗೆ ಗೊತ್ತಿರಲಿಲ್ಲ. ಆ ಕೆಲಸ ಮಾಡಿದ್ದಕ್ಕೆ ನನ್ನ ಬಗ್ಗ ಮೆಚ್ಚಿಕೊಂಡಿದ್ರು" ಎಂದು ಸಂಬರಗಿ ಮೆಲುಕು ಹಾಕಿದ್ದಾರೆ.


Click it and Unblock the Notifications











