ಪುನೀತ್ ರಾಜ್ಕುಮಾರ್ ಸರ್ ಜೊತೆ ಆ ಸಿನಿಮಾ ಮುಗಿದ ಅಧ್ಯಾಯ; ಪ್ರಶಾಂತ್ ನೀಲ್
ಕನ್ನಡ ನಟ ಪುನೀತ್ ರಾಜ್ಕುಮಾರ್ ಅಗಲಿ 4 ವರ್ಷ ಕಳೆದಿದೆ. ತಮ್ಮ ಹೃದಯ ಸಾಮ್ರಾಜ್ಯದಲ್ಲಿ ನೆಲೆಸಿರುವ ನೆಚ್ಚಿನ ನಟನನ್ನು ಅಭಿಮಾನಿಗಳು ನೆನಪಿಸಿಕೊಳ್ಳದ ದಿನವಿಲ್ಲ. ಮಾಡುತ್ತಿದ್ದ ಕೆಲಸಗಳನ್ನು ಅರ್ಧಕ್ಕೆ ಬಿಟ್ಟು ಅಪ್ಪು ಎದ್ದು ಹೊರಟುಬಿಟ್ಟರು. ನಾಲ್ಕೈದು ಸಿನಿಮಾಗಳ ಮಾತುಕತೆ ನಡೆದಿತ್ತು. ಆ ಕಥೆಗಳೆಲ್ಲಾ ಅಲ್ಲೇ ನಿಂತು ಹೋಗಿದೆ.
ಪ್ರಶಾಂತ್ ನೀಲ್ ಕೂಡ ಪುನೀತ್ ರಾಜ್ಕುಮಾರ್ ಕಾಂಬಿನೇಷನ್ನಲ್ಲಿ ಸಿನಿಮಾ ಮಾಡುವ ಕನಸು ಕಂಡಿದ್ದರು. 'ಉಗ್ರಂ' ಬಳಿಕ ಅಪ್ಪುಗಾಗಿ ಕಥೆ ಸಿದ್ಧಪಡಿಸಿದ್ದರು. ಅದೇ ಕಥೆಯನ್ನು ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಸಿನಿಮಾ ಮಾಡುವ ಪ್ರಯತ್ನ ನಡೆದಿತ್ತು. ಆದರೆ ಅಪ್ಪು ಬೇರೆ ಬೇರೆ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದರು. ಹಾಗಾಗಿ 'ಕೆಜಿಎಫ್' ಚಿತ್ರದ ಒಂದು ಸಣ್ಣ ಸನ್ನಿವೇಶವನ್ನು ವಿಜಯ್ ಕಿರಗಂದೂರ್ ಅವರಿಗೆ ಪ್ರಶಾಂತ್ ನೀಲ್ ಹೇಳಿದ್ದರು. ಅದು ಓಕೆ ಆಗಿ ಸಿನಿಮಾ ಕೆಲಸಗಳು ಆರಂಭವಾಯಿತು.

ಅಪ್ಪುಗಾಗಿ 'ಆಹ್ವಾನ' ಎಂಬ ಫ್ಯಾಮಿಲಿ ಎಂಟರ್ಟೈನರ್ ಸಿನಿಮಾ ಕಥೆ ಮಾಡಿದ್ದರು. ಮುಂದೊಂದು ದಿನ ಅವರೊಟ್ಟಿಗೆ ಸಿನಿಮಾ ಮಾಡಲು ಮನಸ್ಸು ಮಾಡಿದ್ದರು. 'ಕೆಜಿಎಫ್' ಸಿನಿಮಾ ಗೆದ್ದು ಚಾಪ್ಟರ್-2 ಶುರುವಾಯಿತು. ಅಷ್ಟರಲ್ಲಿ ಪುನೀತ್ ರಾಜ್ಕುಮಾರ್ ಬಾರದ ಊರಿಗೆ ಪಯಣ ಬೆಳೆಸಿಬಿಟ್ಟರು. ಮತ್ತೊಮ್ಮೆ 'ಆಹ್ವಾನ' ಸಿನಿಮಾ ಬಗ್ಗೆ ಪ್ರಶಾಂತ್ ನೀಲ್ ಪ್ರತಿಕ್ರಿಯಿಸಿದ್ದಾರೆ.
ಸದ್ಯಕ್ಕೆ 'ಡ್ರ್ಯಾಗನ್' ಸಿನಿಮಾ ಗ್ಲಿಂಪ್ಸ್ ರಿಲೀಸ್ ಆಗಿ ಸದ್ದು ಮಾಡ್ತಿದೆ. ಪ್ರಶಾಂತ್ ನೀಲ್ ತಮ್ಮದೇ ಶೈಲಿಯಲ್ಲಿ ಈ ಆಕ್ಷನ್ ಥ್ರಿಲ್ಲರ್ ಸಿನಿಮಾ ಕಟ್ಟಿಕೊಡುತ್ತಿದ್ದಾರೆ. 'ಗಲಾಟ ಪ್ಲಸ್' ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ಚಿತ್ರದ ಬಗ್ಗೆ ಸಾಕಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಬೇರೆ ಯಾವ ಜಾನರ್ ಸಿನಿಮಾ ಮಾಡಲು ಆಲೋಚನೆ ಇದೆ ಎನ್ನುವ ಪ್ರಶ್ನೆಗೆ ಒಂದು ಮೈಥಾಲಜಿ ಕಥೆ ಮಾಡ್ತಾ ಇದ್ದೀನಿ. ಸದ್ಯ ಒಪ್ಪಿಕೊಂಡಿರುವ ಸಿನಿಮಾಗಳೆಲ್ಲಾ ಮುಗಿದ ಬಳಿಕ ಆ ಸಿನಿಮಾ ಮಾಡ್ತೀನಿ ಎಂದಿದ್ದಾರೆ. ಇದೇ ವೇಳೆ 'ಆಹ್ವಾನ' ಸಿನಿಮಾ ಬಗ್ಗೆ ಪ್ರಸ್ತಾಪವಾಗಿದೆ.
ನಿಮ್ಮ ಮುಂದಿನ ಸಿನಿಮಾಗಳಲ್ಲಿ ಆ ಫ್ಯಾಮಿಲಿ ಸ್ಟೋರಿ(ಆಹ್ವಾನ) ಸಿನಿಮಾ ಕೂಡ ಇರುತ್ತಾ ಎನ್ನುವ ಪ್ರಶ್ನೆಗೆ "ಅದು ಅಪ್ಪು ಸರ್ಗಾಗಿ ಮಾಡಿದ ಕಥೆ. ಬಹುಶಃ ಅದು ಅವರ ಜೊತೆಗೆ ಹೋಗಿಬಿಡ್ತು. ಆ ಕಥೆಯಲ್ಲಿ ಬೇರೆ ಯಾರನ್ನೂ ಊಹಿಸಿಕೊಳ್ಳಲು ಸಾಧ್ಯವಿಲ್ಲ" ಎಂದಿದ್ದಾರೆ. ಸದ್ಯ ಈ ವಿಡಿಯೋ ಸಖತ್ ವೈರಲ್ ಆಗ್ತಿದೆ. 'ವೀ ಮಿಸ್ ಯು ಅಪ್ಪು' ಎಂದು ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ.
'ಜೇಮ್ಸ್' ಚಿತ್ರದ ಕೆಲ ದೃಶ್ಯಗಳ ಚಿತ್ರೀಕರಣ ಹಾಗೂ ಡಬ್ಬಿಂಗ್ ಬಾಕಿ ಇರುವಾಗಲೇ ಅಪ್ಪು ನಿಧನರಾಗಿದ್ದರು. ಬಳಿಕ ಪವನ್ ಕುಮಾರ್ ನಿರ್ದೇಶನದ 'ದ್ವಿತ್ವ' ಚಿತ್ರದಲ್ಲಿ ನಟಿಸಬೇಕಿತ್ತು. ಹೆಬ್ಬುಲಿ ಕೃಷ್ಣ ಹಾಗೂ ದಿನಕರ್ ತೂಗುದೀಪ ನಿರ್ದೇಶನದ ಸಿನಿಮಾಗಳಲ್ಲಿ ಪುನೀತ್ ನಟಿಸುವ ಬಗ್ಗೆ ಚರ್ಚೆ ಆಗಿತ್ತು. ರಾಜಕುಮಾರ ಹಾಗೂ ಯುವರತ್ನ ಬಳಿಕ ಅದೇ ಕಾಂಬಿನೇಷನ್ನಲ್ಲಿ ಮತ್ತೊಂದು ಸಿನಿಮಾ ಮೂಡಿ ಬರಬೇಕಿತ್ತು.
ಪುನೀತ್ ರಾಜ್ಕುಮಾರ್ ವಿಶೇಷ ಪಾತ್ರದಲ್ಲಿ ನಟಿಸಿದ್ದ 'ಲಕ್ಕಿಮ್ಯಾನ್' ಸಿನಿಮಾ ಕೊನೆಯದಾಗಿ ಬಿಡುಗಡೆ ಆಗಿತ್ತು. ಅದಕ್ಕೂ ಮುನ್ನ 'ಗಂಧದಗುಡಿ' ಡಾಕ್ಯೂ ಡ್ರಾಮ ಸಿನಿಮಾ ಮೂಡಿ ಬಂದಿತ್ತು. ಪ್ರಶಾಂತ್ ನೀಲ್ ನಿರ್ದೇಶನದ 'ಡ್ರ್ಯಾಗನ್' ಸಿನಿಮಾ ಭಾರೀ ಹೈಪ್ ಕ್ರಿಯೇಟ್ ಮಾಡಿದೆ. ಮುಂದಿನ ವರ್ಷ ಜೂನ್ 11ಕ್ಕೆ ಸಿನಿಮಾ ತೆರೆಗೆ ಬರಲಿದೆ. ಜ್ಯೂ. ಎನ್ಟಿಆರ್ ಹುಟ್ಟುಹಬ್ಬದ ಸಂಭ್ರಮದಲ್ಲಿ ಫಸ್ಟ್ ಗ್ಲಿಂಪ್ಸ್ ರಿಲೀಸ್ ಆಗಿದೆ. ಮುಂದೆ 'ಸಲಾರ್- 2' ಚಿತ್ರವನ್ನು ಪ್ರಶಾಂತ್ ನೀಲ್ ತೆರೆಗೆ ತರಬೇಕಿದೆ.


Click it and Unblock the Notifications