ಅಣ್ಣಾವ್ರು ಯಾರಿಗಾದ್ರು ಸಹಾಯ ಮಾಡಲು ಹಣ ಕೊಡು ಅಂದಾಗ ಇಲ್ಲ ಎನ್ನುವಂತಿರಲಿಲ್ಲ ಪಾರ್ವತಮ್ಮ
ವರನಟ ಡಾ. ರಾಜ್ಕುಮಾರ್ ತಮ್ಮ ಸಿನಿಮಾಗಳಿಂದ ಮಾತ್ರವಲ್ಲ, ಆದರ್ಶ ವ್ಯಕ್ತಿತ್ವದಿಂದಲೂ ಎಲ್ಲರಿಗೂ ಮಾದರಿ ಆಗಿದ್ದವರು. ಪರೋಪಕಾರಿ ಗುಣದಿಂದ ಸಾಕಷ್ಟು ಜನರಿಗೆ ಕಷ್ಟಗಳನ್ನು ಪರಿಹರಿಸಿದ್ದರು. ಯಾರಾದರೂ ಮನೆಗೆ ಬಂದಾಗ ಅವರನ್ನು ನೋಡಿ ಕಷ್ಟ ಅರಿತು ಸಹಾಯ ಮಾಡುತ್ತಿದ್ದರು. ಬಲಗೈಯಲ್ಲಿ ಮಾಡಿದ ಸಹಾಯ ಎಡಗೈಗೂ ಗೊತ್ತಾಗಬಾರದು ಎನ್ನುವುದು ಅಣ್ಣಾವ್ರ ಎನ್ನುವ ತತ್ವ ಅವರದ್ದು.
ದೊಡ್ಮನೆಯ ಹಣಕಾಸು ವ್ಯವಹಾರ ಎಲ್ಲವನ್ನು ಪಾರ್ವತಮ್ಮ ರಾಜ್ಕುಮಾರ್ ನೋಡಿಕೊಳ್ಳುತ್ತಿದ್ದರು. ಯಾರಿಗಾದರೂ ಸಹಾಯ ಮಾಡಬೇಕು ಅಂದ್ರೆ, ಪಾರ್ವತಿ ಇಷ್ಟು ಹಣ ತಂದು ಕೊಡು ಎಂದು ಡಾ. ರಾಜ್ ಹೇಳುತ್ತಿದ್ದರು. ಮರು ಮಾತನಾಡದೇ ಪಾರ್ವತಮ್ಮ ತಂದು ಕೊಡುತ್ತಿದ್ದರು. ಕೆಲವೊಮ್ಮೆ ಇರಿಸು ಮುರಿಸು ಅನಿಸಿದರೂ ಹಣ ಕೊಡದೇ ಬೇರೆ ವಿಧಿ ಇರಲಿಲ್ಲ. ಕಾರಣ ಏನು ಗೊತ್ತಾ? ಈ ವಿಚಾರವನ್ನು ಖ್ಯಾತ ಛಾಯಾಗ್ರಹಕ, ನಟ ಪ್ರವೀಣ್ ನಾಯಕ್ ನೆನಪಿಸಿಕೊಂಡಿದ್ದಾರೆ.

ಅಣ್ಣಾವ್ರ ಆಪ್ತ ಬಳಗದಲ್ಲಿ ಪ್ರವೀಣ್ ನಾಯಕ್ ಗುರ್ತಿಸಿಕೊಂಡಿದ್ದವರು. ದಶಕಗಳ ಕಾಲ ಅಣ್ಣಾವ್ರ ಕುಟುಂಬದ ಜೊತೆ ಒಡನಾಟ ಇಟ್ಟುಕೊಂಡಿದ್ದವರು. ದೊಡ್ಮನೆಯನ್ನು ಬಹಳ ಹತ್ತಿರದಿಂದ ಬಲ್ಲವರು. ಫೇಸ್ಬುಕ್ನಲ್ಲಿ ಅವರು ಅಣ್ಣಾವ್ರ ಜೊತೆಗಿನ ನೆನಪುಗಳನ್ನು ಮೆಲುಕು ಹಾಕಿದ್ದಾರೆ. ಅದರಲ್ಲೂ ಮುತ್ತುರಾಜನ ಸಹಾಯಗುಣ, ಪಾರ್ವತಮ್ಮನವರ ಸರಳತೆ, ಸಹಿಷ್ಣುತೆ ಅವರಿಬ್ಬರ ಅನ್ಯೋನ್ಯ ದಾಂಪತ್ಯ ಎಲ್ಲವನ್ನು ವಿವರಿಸಿದ್ದಾರೆ.
ಅಣ್ಣಾವ್ರು ಹಾಗೂ ಪಾರ್ವತಮ್ಮ ಅವರ ಸಹಾಯಗುಣದ ಬಗ್ಗೆ ಎರಡು ಸಂದರ್ಭಗಳನ್ನು ಪ್ರವೀಣ್ ನಾಯಕ್ ನೆನಪಿಸಿಕೊಂಡಿದ್ದಾರೆ. ಒಮ್ಮೆ ಮದುವೆಗೆ ಆಮಂತ್ರಣ ನೀಡಲು ಹಿರಿಯ ವ್ಯಕ್ತಿಯೊಬ್ಬರು ಬಂದಿದ್ರು. ಅವ್ರನ್ನು ನೋಡುತ್ತಿದ್ದಂತೆ ಕಷ್ಟ ಅರಿತು ಅಣ್ಣಾವ್ರು ಸಹಾಯ ಮಾಡಿದ್ರು. ಆ ದಿನ ನಾನು ಅಲ್ಲೇ ಇದ್ದೆ ಎಂದು ಪ್ರವೀಣ್ ನಾಯಕ್ ತಿಳಿಸಿದ್ದಾರೆ. "ಒಮ್ಮೆ ಮನೆಗೆ ಯಾರೋ ಮದುವೆ ಪತ್ರಿಕೆ ಕೊಡಲು ಬಂದಿದ್ರು.. ಅವರ ಉಭಯ ಕುಶಲೋಪರಿ ವಿಚಾರಿಸಿ, ಟೀ, ಕಾಫಿ ತಿಂಡಿ ವ್ಯವಸ್ಥೆ ಎಲ್ಲಾ ಆಯ್ತು.. ಅವ್ರು ತಿಂಡಿ ತಿನ್ನಲು ಒಳಗೆ ಹೋದ್ರು, ಅಣ್ಣಾವ್ರು ನನ್ನ ಬಳಿ ಒಂದು ಮಾತು ಹೇಳಿದ್ರು" ಎಂದು ಪ್ರವೀಣ್ ನಾಯಕ್ ಆ ಘಟನೆಯನ್ನು ಕಣ್ಣಿಗೆ ಕಟ್ಟಿದಂತೆ ಹೇಳಿದ್ದಾರೆ.
"ನೋಡಿ ಪ್ರವೀಣ್ ಈಗ ಮದುವೆಗೆ ಆಮಂತ್ರಣ ಕೊಡಲು ಬಂದಿದ್ದಾರಲ್ಲ, ಹಿರಿಯ ವ್ಯಕ್ತಿ.. ಅವ್ರು ರೇಷ್ಮೆ ಪಂಚೆ, ಅಂಗಿ ಧರಿಸಿ ಬಂದಿದ್ದಾರೆ. ಆದರೆ ಅವ್ರು ಕಷ್ಟದಲ್ಲಿದ್ದಾರೆ. ಅಷ್ಟು ಸ್ಥಿತಿವಂತರಲ್ಲ. ನನ್ನನ್ನು ನೋಡಲು ಹೀಗೆ ಬಂದಿದ್ದಾರೆ. ಒಂದ್ಕಾಲದಲ್ಲಿ ನನ್ನನನ್ನು ಹೆಗಲ ಮೇಲೆ ಹೊತ್ತು ತಿರುಗಿದವರು. ಅವ್ರು ಸಹಾಯ ಕೇಳಲ್ಲ.. ಆದ್ರೆ ನಾನೇನು ಮಾಡ್ತೀನಿ ಗೊತ್ತಾ, ಪಾರ್ವತಿಗೆ ಕರೆದು ಇಷ್ಟು ಲಕ್ಷ ಕೊಡು ಅಂತೀನಿ.. ಕೊಡೊಕೆ ಆಗುತ್ತಾ ಅಂದ್ರೆ, ಅವ್ಳು ತನ್ನ ಸಮಸ್ಯೆ ಹೇಳ್ತಾಳೆ.. ಅದೆಲ್ಲಾ ಬೇಡ.. ನೋಡಿ ಅಂತ ಎಲ್ಲರ ಮುಂದೆ ಪಾರ್ವತಿ ಇಷ್ಟು ಲಕ್ಷ ತಂದು ಕೊಡು ಅಂದ್ರು.. ಪಾರ್ವತಮ್ಮ ಒಳಗೆ ಹೋಗಿ ಅಷ್ಟು ಹಣ ತಂದು ಕೊಟ್ರು.. ಅಣ್ಣಾವ್ರ ಕಿರುನಗೆ ಬೀರಿದ್ರು.. ಬಳಿಕ ಅವ್ರು ಹಣ ತಗೊಂಡು ಹೋದ್ರು.. ಬಳಿಕ ಪಾರ್ವತಮ್ಮ ಏನಂದ್ರು ಎನ್ನುವುದನ್ನು ಪ್ರವೀಣ್ ನಾಯಕ್ ತಿಳಿಸಿದ್ದಾರೆ.
ನೋಡಿ ಪ್ರವೀಣ್ ಇವ್ರು(ರಾಜ್ಕುಮಾರ್) ಅಷ್ಟು ಸುಲಭವಾಗಿ ಹಣ ತಂದು ಕೊಡು ಅಂತಾರೆ.. ನಾನು ಇಷ್ಟು ದೊಡ್ಡ ಕುಟುಂಬ ನೋಡಿಕೊಳ್ತಿದ್ದೀನಿ.. ಅವ್ರಿಗೆ ಸಹಾಯ ಮಾಡು ಇವ್ರಿಗೆ ಸಹಾಯ ಮಾಡು ಅಂತಾರೆ.. ಆಗುತ್ತಾ ಅಂತ ಕೇಳಲ್ಲ. ಕೊಟ್ಟುಬಿಡು ಎಂದು ಹೇಳಿಬಿಡ್ತಾರೆ.. ನನಗೆ ಎಷ್ಟು ಕಷ್ಟ ಇರುತ್ತೆ.. ಎಲ್ಲವನ್ನು ನಿಭಾಯಿಸಬೇಕು.. "ಆದ್ರೂ... ಅಂದ್ರು.. ಆದ್ರೂ ಒಂದು ಸತ್ಯ ಏನು ಗೊತ್ತಾ? ಅವ್ರು ಹೇಳ್ದಾಗ ಒಂದು ಕ್ಷಣ ಆ ರೀತಿ ಅನ್ಸತ್ತೆ.. ಆದ್ರೆ ಇದೆಲ್ಲಾ ಅವ್ರೇ ದುಡಿದಿದ್ದು ಅಲ್ವಾ? ಅವ್ರಿಂದಲೇ ಎಲ್ಲೋ ಇದ್ದವ್ರು ಇಲ್ಲಿಗೆ ಬಂದಿದ್ದೀವಿ ಅಲ್ವಾ? ಬರೀ ಪಾರ್ವತಮ್ಮ ಅಂದ್ರೆ ಬೆಲೆಯಿಲ್ಲ.. ಪಾರ್ವತಮ್ಮ ರಾಜ್ಕುಮಾರ ಅಂದ್ರೆನೇ ಬೇರೆ.. ಎಷ್ಟೇ ಆದ್ರು ಅವ್ರು ದುಡಿದಿದ್ದು ಅಲ್ವಾ? ನನಗೇನು ಬೇಸರ ಇಲ್ಲ.. ಸುಮ್ನೆ ಒಂದು ಮಾತು ಕೇಳಬಹುದಲ್ವಾ?" ಎಂದು ಪ್ರವೀಣ್ ನಾಯಕ್ ಮೆಲುಕು ಹಾಕಿದ್ದಾರೆ.
ಸಾಕಷ್ಟು ಜನ ಅಣ್ಣಾವ್ರು ಏನ್ ಮಾಡಿದ್ರು ಅಂತ ಕೇಳ್ತಾರೆ.. ಅವರಿಗೆ ಸತ್ಯ ಗೊತ್ತಿಲ್ಲ.. ಅವ್ರು ಸಹಾಯ ಮಾಡಿದ್ದನ್ನು ಡಂಗುರ ಸಾರುತ್ತಿರಲಿಲ್ಲ ಎಂದು ಪ್ರವೀಣ್ ನಾಯಕ್ ಹೇಳಿದ್ದಾರೆ. "ಮುತ್ತತ್ತಿಯಲ್ಲಿ ಯಾರೋ ಕಲ್ಯಾಣ ಮಂಟಪ ಕಟ್ಟಿಸೋಕೆ ಬಂದು ಸಹಾಯ ಕೇಳಿದ್ರು.. ಆ ಕಾಲಕ್ಕೆ 15 ಲಕ್ಷ ರೂಪಾಯಿ ಆಗುತ್ತೆ ಅಂದ್ರು.. 14.50 ಲಕ್ಷ ನಾನು ಕೊಡ್ತೀನಿ.. ಇನ್ನು ಉಳಿದ 50 ಸಾವಿರ ರೂಪಾಯಿ ಎಲ್ಲರಿಂದ ಸಂಗ್ರಹ ಮಾಡಿ ಕಲ್ಯಾಣ ಮಂಟಪ ಕಟ್ಟಿ.. ನಾನು ಕಟ್ಟಿಸಿದ್ದು ಅಂತ ಆಗುವುದು ಬೇಡ, ಎಲ್ಲರೂ ಸೇರಿ ಕಟ್ಟಿಸಿದ್ದು ಎನ್ನುವಂತೆ ಆಗಬೇಕು ಎಂದು ಅಣ್ಣಾವ್ರು ಹೇಳಿದ್ದಾಗಿ" ತಿಳಿಸಿದ್ದಾರೆ.
ಖ್ಯಾತ ನಟರೊಬ್ಬರು, ಅಣ್ಣಾವ್ರ ಸಮಕಾಲೀನರು.. ಸಿನಿಮಾ ನಿರ್ಮಾಣ ಮಾಡಿ ಹಣ ಕಳೆದುಕೊಂಡಿದ್ರು.. ಅವರ ಪತ್ನಿ ಬಂದು ಪಾರ್ವತಮ್ಮ ಬಳಿ ಸಹಾಯಕ್ಕೆ ಅಂಗಲಾಚಿದ್ರು.. ಅಮ್ಮ ಅಮ್ಮ ಆ ರೀತಿ ಮಾತನಾಡಬೇಡ.. ನನ್ನ ಕೈಲಾದ ಸಹಾಯ ಮಾಡ್ತೀನಿ ಅಂದ್ರು.. ಒಳಗೆ ಹೋಗಿ ಬೀರುವಿನಲ್ಲಿದ್ದ ಅಷ್ಟು ಹಣವನ್ನು ತಂದು ಕೊಟ್ಟಿದ್ರು.. ಎಂದು ಪ್ರವೀಣ್ ನಾಯಕ್ ಹೇಳಿದ್ದಾರೆ. ಖ್ಯಾತ ನಿರ್ದೇಶಕರೊಬ್ಬರು ಸಿನಿಮಾ ಮಾಡಿ ಅವತ್ತಿನ ಕಾಲಕ್ಕೆ 18 ಲಕ್ಷ ರೂ. ಸಾಲ ಮಾಡಿಕೊಂಡಿದ್ರು.. ಅವ್ರ ಕಷ್ಟ ನೋಡಿ ಹಿಂದು ಮುಂದು ನೋಡದೇ ಕಚೇರಿಗೆ ಕರೆಸಿ 18 ಲಕ್ಷ ರೂ. ಚೆಕ್ ಬರೆದು ಕೊಟ್ಟಿದ್ರು.. ಈ ವಿಚಾರವನ್ನು ಆ ನಿರ್ದೇಶಕರೇ ನನ್ನ ಬಳಿ ಹೇಳಿದ್ರು ಎಂದು ಪ್ರವೀಣ್ ನಾಯಕ್ ವಿವರಿಸಿದ್ದಾರೆ.


Click it and Unblock the Notifications











