Year ender 2024: ಈ ವರ್ಷ ಅತ್ಯುತ್ತಮ ನಟ ರಾಷ್ಟ್ರಪ್ರಶಸ್ತಿ ಪಡೆಯುವಂತಹ ನಟನೆ ಯಾರದ್ದು?
ವರ್ಷದ ಕೊನೆಯಲ್ಲಿ ಈ ವರ್ಷ ತೆರೆಕಂಡ ಸಿನಿಮಾಗಳ ಬಗ್ಗೆ ವಿಶ್ಲೇಷಣೆ ನಡೀತಿದೆ. ಯಾವ ಸಿನಿಮಾ ಪ್ರೇಕ್ಷಕರನ್ನು ರಂಜಿಸಿತು? ಯಾವುದು ನಿರಾಸೆ ಮೂಡಿಸಿತು? ಎಂದು ಸಿನಿರಸಿಕರು ಚರ್ಚೆ ಮಾಡುತ್ತಿದ್ದಾರೆ. ಇದೆಲ್ಲದರ ನಡುವೆ ಈ ವರ್ಷ ಅತ್ಯುತ್ತಮ ನಟ ವಿಭಾಗದಲ್ಲಿ ರಾಷ್ಟ್ರಪ್ರಶಸ್ತಿ ಪಡೆಯುವಂತಹ ನಟನೆ ಯಾರದ್ದು? ಎನ್ನುವ ಲೆಕ್ಕಾಚಾರ ಮುನ್ನಲೆಗೆ ಬಂದಿದೆ.
ಒಂದು ವರ್ಷ ತಡವಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಮಾಡುತ್ತಾ ಬರಲಾಗುತ್ತಿದೆ. 2022ನೇ ಸಾಲಿನ ಚಿತ್ರಗಳಿಗೆ ಈ ವರ್ಷ ಪ್ರಶಸ್ತಿ ಪ್ರದಾನ ಮಾಡಲಾಯಿತು. 2023ರ ಚಿತ್ರಗಳಿಗೆ ಮುಂದಿನ ವರ್ಷ ಪ್ರಶಸ್ತಿ ಘೋಷಣೆ ಆಗುತ್ತದೆ. ಅದೇ ರೀತಿ ಈ ವರ್ಷದ ಚಿತ್ರಗಳಿಗೆ 2026ರಲ್ಲಿ ರಾಷ್ಟ್ರಪ್ರಶಸ್ತಿ ನೀಡುವ ಸಾಧ್ಯತೆಯಿದೆ. ಆದರೆ ಈ ವರ್ಷ ಬಂದಿರುವ ಸಿನಿಮಾಗಳನ್ನು ನೋಡಿ ಯಾರಿಗೆ ಪ್ರಶಸ್ತಿ ಸಿಗಬಹುದು ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ.

ಈ ವರ್ಷ ಕನ್ನಡದಲ್ಲೇ 200ಕ್ಕೂ ಅಧಿಕ ಚಿತ್ರಗಳು ರಿಲೀಸ್ ಆಗಿದೆ. ಹಿಂದಿ, ತಮಿಳು, ತೆಲುಗು, ಮಲಯಾಳಂ ಸೇರಿ ವಿವಿಧ ಭಾಷೆಗಳಲ್ಲಿ ನೂರಾರು ಚಿತ್ರಗಳು ಪ್ರೇಕ್ಷಕರ ಮುಂದೆ ಬಂದಿವೆ. ಆದರೆ ಈ 4 ಚಿತ್ರಗಳಲ್ಲಿ ನಾಯಕ ನಟರ ಅಭಿನಯ ಹೆಚ್ಚು ಗಮನ ಸೆಳೆದಿದೆ.
'ಪುಷ್ಪ-2' ಅಲ್ಲು ಅರ್ಜುನ್
ತೆಲುಗು ನಟ ಅಲ್ಲು ಅರ್ಜುನ್ ಈ ವರ್ಷ ಭಾರೀ ಸುದ್ದಿಯಲ್ಲಿದ್ದಾರೆ. ಒಂದ್ಕಡೆ 'ಪುಷ್ಪ'-2 ಚಿತ್ರದ ಭಾರತೀಯ ಚಿತ್ರರಂಗದಲ್ಲೇ ಹೊಸ ದಾಖಲೆ ಬರೆದಿದೆ. 2021ರಲ್ಲಿ ಬಂದ 'ಪುಷ್ಪ' ಚಿತ್ರದ ನಟನೆಗಾಗಿ ಕಳೆದ ವರ್ಷ ಅಲ್ಲು ಅರ್ಜುನ್ ಅತ್ಯುತ್ತಮ ನಟ ರಾಷ್ಟ್ರ ಪ್ರಶಸ್ತಿ ಪಡೆದಿದ್ದರು. ಇದೀಗ ಸೀಕ್ವೆಲ್ನಲ್ಲಿ ಮತ್ತೊಮ್ಮೆ ಮೋಡಿ ಮಾಡುತ್ತಿದ್ದಾರೆ. ವಿಭಿನ್ನ ಮ್ಯಾನರಿಸಂನಿಂದ ಗಮನ ಸೆಳೆದಿದ್ದಾರೆ. ಗಂಗಮ್ಮ ಜಾತ್ರೆ ಸನ್ನಿವೇಶಗಳಲ್ಲಿ ಸೀರೆ ಉಟ್ಟು ಅಭಿನಯಿಸಿದ್ದಾರೆ. ಅಭಿಮಾನಿಗಳಂತೂ ಬನ್ನಿ ನಟನೆ ನೋಡಿ ಮತ್ತೆ ರಾಷ್ಟ್ರಪ್ರಶಸ್ತಿ ಗ್ಯಾರೆಂಟಿ ಎನ್ನುತ್ತಿದ್ದಾರೆ,

'ತಂಗಲಾನ್' ವಿಕ್ರಂ
ಪಾ. ರಂಜಿತ್ ನಿರ್ದೇಶನದ 'ತಂಗಲಾನ್' ಸಿನಿಮಾ ಈ ವರ್ಷ ಬಾಕ್ಸಾಫೀಸ್ನಲ್ಲಿ ಮುಗ್ಗರಿಸಿತ್ತು. ಆದರೆ ವಿಕ್ರಂ ನಟನೆ ಬಗ್ಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿತ್ತು. ಬುಡಕಟ್ಟು ಜನಾಂಗದ ನಾಯಕನ ಪಾತ್ರದಲ್ಲಿ ಹುಬ್ಬೇರಿಸುವಂತೆ ನಟಿಸಿ ಕಮಾಲ್ ಮಾಡಿದ್ದರು. ಅವರು ಲುಕ್, ಗೆಟಪ್ ಎಲ್ಲವೂ ಚಪ್ಪಾಳೆ ಗಿಟ್ಟಿಸಿತ್ತು. ವಿಕ್ರಂ ಕೂಡ ಈ ಅತ್ಯುತ್ತಮ ನಟ ಪ್ರಶಸ್ತಿ ರೇಸ್ನಲ್ಲಿ ಇರ್ತಾರೆ ಎನ್ನಬಹುದು.
'ಮಹಾರಾಜ' ಸೇತುಪತಿ
ತಮಿಳಿನ 'ಮಹಾರಾಜ' ಸಿನಿಮಾ ಈ ವರ್ಷ ಬ್ಲಾಕ್ಬಸ್ಟರ್ ಹಿಟ್ ಆಗಿತ್ತು. ಭಾರತ ಮಾತ್ರವಲ್ಲದೇ ಇತ್ತೀಚೆಗೆ ಚೀನಾದಲ್ಲಿ ಸಿನಿಮಾ ತೆರೆಕಂಡು ಸದ್ದು ಮಾಡಿತ್ತು. ಚಿತ್ರದಲ್ಲಿ ತಮ್ಮ ಮಗಳ ಸಾವಿಗೆ ಸೇಡು ತೀರಿಸಿಕೊಳ್ಳುವ ತಂದೆಯ ಪಾತ್ರದಲ್ಲಿ ಸೇತುಪತಿ ನಟನೆ ನೋಡುಗರ ಮನಗೆದ್ದಿತ್ತು. ಕರ್ಮ ಸಿದ್ಧಾಂತದಂತೆ ಬಹಳ ವಿಭಿನ್ನವಾಗಿ ಚಿತ್ರದ ಕಥೆ ಕಟ್ಟಿಕೊಡಲಾಗಿತ್ತು. ವೈವಿಧ್ಯಮಯ ಪಾತ್ರಗಳಲ್ಲಿ ನಟಿಸಿ ಗೆದ್ದಿರುವ ಸೇತುಪತಿ ಮಹಾರಾಜನಾಗಿಯೂ ಪ್ರಶಸ್ತಿ ಗೆಲ್ಲುವಂತಹ ಅಭಿನಯ ಪ್ರದರ್ಶನಿಸಿದ್ದರು.
'ಆಡುಜೀವಿತಂ' ಪೃಥ್ವಿರಾಜ್
2024ನೇ ಸಾಲಿನ ಸಿನಿಮಾಗಳಲ್ಲಿ ಅತ್ಯುತ್ತಮ ನಟ ಪ್ರಶಸ್ತಿಗೆ ಪೃಥ್ವಿರಾಜ್ ಸ್ಪರ್ಧೆಯಲ್ಲಿ ಮುಂದಿದ್ದಾರೆ. 'ಆಡುಜೀವಿತಂ' ಚಿತ್ರದಲ್ಲಿ ಅವರ ನಟನೆ ನೋಡಿ ಮೆಚ್ಚದವರಿಲ್ಲ. ಪಾತ್ರಕ್ಕಾಗಿ ಅವರ ಶ್ರಮ ಮೆಚ್ಚುವಂತದ್ದು. ನೈಜ ಘಟನೆ ಆಧರಿಸಿ ಚಿತ್ರ ತೆರೆಗೆ ತರಲಾಗಿತ್ತು. ತನ್ನದಲ್ಲದ ತಪ್ಪಿಗೆ ಗಲ್ಫ್ನ ಮರುಭೂಮಿಯಲ್ಲಿ ಸಿಕ್ಕಿ ಹಾಕಿಕೊಂಡು ನರಕಯಾತನೆ ಅನುಭವಿಸುವ ಯುವಕನ ಪಾತ್ರದಲ್ಲಿ ಪೃಥ್ವಿರಾಜ್ ನಟನೆ ಮರೆಯುವುದಕ್ಕೆ ಸಾಧ್ಯವಿಲ್ಲ.
ಸದ್ಯ ಸಿನಿರಸಿಕರು ಈ ನಾಲ್ಕು ಚಿತ್ರಗಳಲ್ಲಿ ನಾಯಕ ನಟರ ಅಭಿನಯ ನೋಡಿ ಯಾರಾದರೂ ಒಬ್ಬರಿಗೆ ರಾಷ್ಟ್ರಪ್ರಶಸ್ತಿ ಸಿಗಬಹುದು ಎಂದು ಅಂದಾಜಿಸುತ್ತಿದ್ದಾರೆ. ಬಹುತೇಕರು 'ಆಡುಜೀವಿತಂ' ಚಿತ್ರದ ನಟನೆಗಾಗಿ ಪೃಥ್ವಿರಾಜ್ಗೆ ಪ್ರಶಸ್ತಿ ಎನ್ನುತ್ತಿದ್ದಾರೆ. ಆದರೆ ಈ ನಾಲ್ವರನ್ನು ಮೀರಿ ಯಾರಿಗಾದರೂ ಅಚ್ಚರಿ ಎನ್ನುವಂತೆ ಪ್ರಶಸ್ತಿ ಸಿಗುತ್ತಾ ಕಾದು ನೋಡಬೇಕಿದೆ.


Click it and Unblock the Notifications











