"ನೀವು ನಂಬಲ್ಲ, ಆ ದೃಶ್ಯ ನೋಡಿದ್ರೆ ಉಪ್ಪಿ ನಿಜಕ್ಕೂ ಅತ್ತುಬಿಡ್ತಾರೆ"; ಪ್ರಿಯಾಂಕಾ ಉಪೇಂದ್ರ
ರಿಯಲ್ ಸ್ಟಾರ್ ಉಪೇಂದ್ರ. ಭಾರತೀಯ ಚಿತ್ರರಂಗದಲ್ಲೇ ಅದ್ಭುತ ನಿರ್ದೇಶಕ. ಸಾಕಷ್ಟು ಸ್ಟಾರ್ ನಿರ್ದೇಶಕರ ನೆಚ್ಚಿನ ನಿರ್ದೇಶಕ. ಕನ್ನಡ ಫಿಲ್ಮ್ ಮೇಕರ್ಸ್ ಮಾತ್ರ ಪರಭಾಷಾ ಫಿಲ್ಮ್ ಮೇಕರ್ಸ್ ಕೂಡ ಸ್ಯಾಂಡಲ್ವುಡ್ ಬುದ್ಧಿವಂತನಿಂದ ಪ್ರೇರಣೆಗೊಂಡು ಸಿನಿಮಾಗಳನ್ನು ಮಾಡಿದ್ದಾರೆ. ಅದನ್ನು ಬಹಿರಂಗವಾಗಿ ಹೇಳಿಕೊಳ್ತಾರೆ.
ಪ್ರಶಾಂತ್ ನೀಲ್ ಆಲ್ಟೈಮ್ ಫೇವರಿಟ್ ಡೈರೆಕ್ಟರ್ ಕೂಡ ಉಪೇಂದ್ರ. ವಿಭಿನ್ನ ಆಲೋಚನೆಗಳ ವಿಭಿನ್ನ ಸಿನಿಮಾಗಳನ್ನು ರಿಯಲ್ ಸ್ಟಾರ್ ಕಟ್ಟಿಕೊಟ್ಟಿದ್ದಾರೆ. ತೆರೆಮೇಲೆ ಚಿತ್ರವಿಚಿತ್ರ ಪ್ರಯೋಗಗಳನ್ನು ಮಾಡಿದ್ದಾರೆ. ನಿರ್ದೇಶಕನಾಗಿ ಮಾತ್ರವಲ್ಲದೇ ಬರಹಗಾರನಾಗಿ ಚಿತ್ರ ಸಾಹಿತಿಯಾಗಿ ಉಪೇಂದ್ರ ಗೆದ್ದವರು. ಕೊನೆಗೆ ಹೀರೋ ಆಗಿಯೂ ಪ್ರೇಕ್ಷಕರನ್ನು ರಂಜಿಸುತ್ತಿದ್ದಾರೆ. ಐಕಾನಿಕ್ ಸಿನಿಮಾಗಳಿಂದ ಉಪ್ಪಿ ಇವತ್ತಿಗೂ ಬಹುಬೇಡಿಕೆಯ ನಿರ್ದೇಶಕ ಎನಿಸಿಕೊಂಡಿದ್ದಾರೆ.

'ಯುಐ' ಚಿತ್ರದ ಮೂಲಕ ಶೀಘ್ರದಲ್ಲೇ ಮತ್ತೆ ತೆರೆಮೇಲೆ ಜಾದೂ ಮಾಡಲು ಹೊರಟಿದ್ದಾರೆ. ಈಗಾಗಲೇ ಚಿತ್ರದ ಟೀಸರ್, ಸಾಂಗ್ಸ್ ರಿಲೀಸ್ ಆಗಿ ಧೂಳೆಬ್ಬಿಸಿದೆ. ಉಪ್ಪಿ ತಮ್ಮ ಸಿನಿಮಾಗಳಲ್ಲಿ ಫಿಲಾಸಫಿಯನ್ನು ಹೇಳುತ್ತಾರೆ. ನಾವು ನೀವು ಅಂದುಕೊಂಡಂತೆ ಜೀವನ ಅಲ್ಲ. ಎಲ್ಲವನ್ನು ಯಾಕೆ ನೇರವಾಗಿಯೇ ನೋಡಬೇಕು, ವಿರುದ್ಧವಾಗಿ ಯಾಕೆ ನೋಡಬಾರದು, ಆಲೋಚಿಸಬಾರದು ಎನ್ನುವುದು ಉಪೇಂದ್ರ ವಾದ. ಅದನ್ನೇ ತಮ್ಮ ಸಿನಿಮಾಗಳಲ್ಲಿ ತೋರಿಸುತ್ತಾರೆ.
ತೆರೆಮೇಲೆ ಮಾತ್ರವಲ್ಲ ನಿಜಜೀವನದಲ್ಲಿ ಕೂಡ ಉಪೇಂದ್ರ ಮಾತು, ನಡೆ ಎಲ್ಲವೂ ವಿಭಿನ್ನ ಎನಿಸುತ್ತದೆ. ರಾಜಕೀಯ ಪ್ರವೇಶದ ಬಗ್ಗೆಯೂ ರಿಯಲ್ ಸ್ಟಾರ್ ವಿಭಿನ್ನ ಆಲೋಚನೆಯಲ್ಲಿದ್ದಾರೆ. ತಮಗಿರುವ ಜನಪ್ರಿಯತೆಯಿಂದ ಯಾವುದೋ ಒಂದು ಪಕ್ಷ ಸೇರಿ ಉಪೇಂದ್ರ ಪಾಲಿಟಿಕ್ಸ್ನಲ್ಲಿ ಗುರ್ತಿಸಿಕೊಳ್ಳಬಹುದಿತ್ತು. ಆದರೆ ಅವರು ಆ ರೀತಿ ಮಾಡಲಿಲ್ಲ. ರಾಜಕೀಯವೇ ಬೇಡ ಎಂದರು. ನನ್ನದು 'ಪ್ರಜಾಕೀಯ' ಎಂದು ಘೋಷಿಸಿದರು.
ಪ್ರಜಾಕೀಯದ ಗೆಲುವು ಸೋಲು ಎಲ್ಲವನ್ನು ಪಕ್ಕಕ್ಕಿಟ್ಟುಬಿಡೋಣ. ಆದರೆ ಇವತ್ತಿಗೂ ಪ್ರಜಾಕೀಯದ ಕಾನ್ಸೆಪ್ಟ್ ಬಿಟ್ಟು ರಾಜಕೀಯದತ್ತ ಬರಲು ಉಪೇಂದ್ರ ಸಿದ್ಧರಿಲ್ಲ. ಇನ್ನು ತೆರೆಮೇಲೆ ಪ್ರೀತಿ ಪ್ರೇಮ ಪುಸ್ತಕದ ಬದ್ನೆಕಾಯಿ ಎಂದಿದ್ದ ಉಪೇಂದ್ರ ಕೊನೆಗೆ ನಟಿ ಪ್ರಿಯಾಂಕ ಅವರನ್ನು ಪ್ರೀತಿಸಿ ಮದುವೆ ಆಗಿದ್ದರು. ದಂಪತಿಗೆ ಇಬ್ಬರು ಮಕ್ಕಳು ಇದ್ದಾರೆ. 'ಉಪೇಂದ್ರ' ಸಿನಿಮಾ ನೋಡಿ ಇವರನ್ನು ಇಷ್ಟಪಟ್ಟೆ ಎಂದು ಇತ್ತೀಚೆಗೆ ಪ್ರಿಯಾಂಕ ಹೇಳಿದ್ದರು. ಪಕ್ಕದಲ್ಲೇ ಇದ್ದ ಉಪ್ಪಿ ಇದಕ್ಕೆ ತಮಾಷೆಯಾಗಿ ಪ್ರತಿಕ್ರಿಯಿಸಿದ್ದರು.

ಪ್ರಿಯಾಂಕ ಉಪೇಂದ್ರ ಇತ್ತೀಚೆಗೆ ತೆಲುಗು ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ. ತಮ್ಮ ವೈಯಕ್ತಿಕ ಹಾಗೂ ಸಿನಿಮಾಗಳ ಬಗ್ಗೆ ಸಾಕಷ್ಟು ಸಂಗತಿಗಳನ್ನು ಅವರು ಬಿಚ್ಚಿಟ್ಟಿದ್ದಾರೆ. ಈ ವೇಳೆ ಉಪೇಂದ್ರ ಬಗ್ಗೆಯೂ ಒಂದಷ್ಟು ವಿಚಾರಗಳನ್ನು ಹೇಳಿದ್ದಾರೆ. ಪತಿಯ ಅಭಿರುಚಿ, ಸಿನಿಮಾ ಪ್ರೀತಿ ಎಲ್ಲವನ್ನು ವಿವರಿಸಿದ್ದಾರೆ. ತೆರೆಮೇಲೆ ಅಬ್ಬರಿಸಿ ಬೊಬ್ಬಿರಿಯುವ ಉಪೇಂದ್ರ ಎಷ್ಟು ಸೂಕ್ಷ್ಮ ಸ್ವಭಾವದವರು ಎಂದು ಹೇಳಿದ್ದಾರೆ.
"ಉಪ್ಪಿ ಅಂತರ್ಮುಖಿ(Introvert). ನಾನು ಅದೇ ರೀತಿ ಇದ್ದೆ. ಚಿತ್ರರಂಗಕ್ಕೆ ಬಂದಮೇಲೆ ಬದಲಾದೆ. ಅವರು ಈಗ ಕೂಡ ಬಹಳ ನಾಚಿಕೆ ಸ್ವಭಾದವರು. ತಮ್ಮ ಕೆಲ ಆಪ್ತ ಸ್ನೇಹಿತರ ಜೊತೆ ಹೆಚ್ಚು ಬೆರೆಯುತ್ತಾರೆ. ಉಳಿದಂತೆ ಅಷ್ಟು ಸುಲಭವಾಗಿ ಓಪನ್ ಅಪ್ ಆಗಲ್ಲ. ನಾವಿಬ್ಬರೂ ಬಹಳ ಸೂಕ್ಷ್ಮ ಸ್ವಭಾವದವರು. ಅವರು ಬಹಳ ಭಾವುಕಜೀವಿ. ಯಾವುದಾದರೂ ದುಃಖದ ಸನ್ನಿವೇಶ ನೋಡಿದರೆ ಉಪ್ಪಿ ಅತ್ತುಬಿಡುತ್ತಾರೆ"
"ಇವತ್ತಿಗೂ ಅವರು ಬದಲಾಗಿಲ್ಲ. ಸಿನಿಮಾದಲ್ಲಿ ತಾಯಿ-ಮಗು ಭಾವನಾತ್ಮಕ ದೃಶ್ಯ ನೋಡುತ್ತಿದ್ದರೆ, ಅಥವಾ ಯಾವುದೇ ಮನಕಲಕುವ ಸನ್ನಿವೇಶ ತೆರೆಮೇಲೆ ಬಂದರೆ ನೋಡುತ್ತಾ ಅಳುತ್ತಾರೆ. ಇದನ್ನು ಹೇಳಿದರೆ ಯಾರು ನಂಬಲ್ಲ. ಆದರೆ ಅದೇ ನಿಜ" ಎಂದು ಪ್ರಿಯಾಂಕ ಹೇಳಿದ್ದಾರೆ. ಇದನ್ನು ಕೇಳಿ ಕೆಲ ಅಭಿಮಾನಿಗಳು ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ. ರಿಯಲ್ ಸ್ಟಾರ್ ಹುಟ್ಟುಹಬ್ಬದ ಸಂಭ್ರಮದಲ್ಲಿ ಇತ್ತೀಚೆಗೆ 'ಉಪೇಂದ್ರ' ಸಿನಿಮಾ ರೀ-ರಿಲೀಸ್ ಆಗಿ ಸದ್ದು ಮಾಡ್ತಿದೆ.


Click it and Unblock the Notifications











