ದರ್ಶನ್ ನಟನೆಯ 'ಮೆಜೆಸ್ಟಿಕ್' ಚಿತ್ರಕ್ಕೆ ಸಹಾಯ ಮಾಡಿದ್ದರು ಅಪ್ಪು
ಅಭಿಮಾನಿಗಳ ನಡುವೆ ಏನೇ ಕೆಸರೆರಚಾಟ, ಸೋಶಿಯಲ್ ಮೀಡಿಯಾ ವಾರ್ ಇದ್ದರೂ ನಟರ ಮಧ್ಯೆ ಉತ್ತಮ ಬಾಂಧವ್ಯ ಇರುತ್ತದೆ. ನಟ ದರ್ಶನ್ ಫ್ಯಾನ್ಸ್ ಹಾಗೂ ಪುನೀತ್ ರಾಜ್ಕುಮಾರ್ ಫ್ಯಾನ್ಸ್ ಕೆಲವೊಮ್ಮೆ ವಿಕೋಪಕ್ಕೆ ಹೋಗಿದ್ದು ಇದೆ. ಆದರೆ ದರ್ಶನ್ ಹಾಗೂ ಅಪ್ಪು ನಡುವೆ ಆತ್ಮೀಯ ಒಡನಾಟ ಇತ್ತು.
ಡಾ. ರಾಜ್ಕುಮಾರ್ ಹಾಗೂ ತೂಗುದೀಪ ಶ್ರೀನಿವಾಸ್ ಕುಟುಂಬಗಳ ನಡುವೆ ದಶಕಗಳಿಂದ ಉತ್ತಮ ಬಾಂಧವ್ಯ ಇದೆ. ಅಣ್ಣಾವ್ರ ಸಾಕಷ್ಟು ಸಿನಿಮಾಗಳಲ್ಲಿ ತೂಗುದೀಪ ಶ್ರೀನಿವಾಸ್ ನಟಿಸಿದ್ದರು. ದೊಡ್ಮನೆ ಬ್ಯಾನರ್ ಸಿನಿಮಾಗಳಲ್ಲಿ ಅವರಿಗೊಂದು ಪಾತ್ರ ಇರುತ್ತಿತ್ತು. ನಟ ದರ್ಶನ್ ಸಹ ಆರಂಭದಲ್ಲಿ ಪೂರ್ಣಿಮಾ ಎಂಟರ್ಪ್ರೈಸಸ್ ಬ್ಯಾನರ್ನಲ್ಲಿ ಕೆಲಸ ಮಾಡಿದ್ದರು.

'ಜನುಮದ ಜೋಡಿ' ಚಿತ್ರಕ್ಕಾಗಿ ಛಾಯಾಗ್ರಾಹಕ ಗೌರಿ ಶಂಕರ್ ಬಳಿ ಸಹಾಯಕರಾಗಿ ದರ್ಶನ್ ಕೆಲಸ ಮಾಡಿದ್ದರು. ಮುಂದೆ ಸಣ್ಣಪುಟ್ಟ ಪಾತ್ರಗಳ ಮೂಲಕ ನಟನೆಯತ್ತ ಮುಖ ಮಾಡಿದ್ದರು. 'ಮೆಜೆಸ್ಟಿಕ್' ಚಿತ್ರದಲ್ಲಿ ಹೀರೊ ಆಗಿ ನಟಿಸಿ ದರ್ಶನ್ ಗೆದ್ದರು. ಆದರೆ ಈ ಚಿತ್ರಕ್ಕೆ ಕೂಡ ಪುನೀತ್ ರಾಜ್ಕುಮಾರ್ ಸಹಾಯ ಮಾಡಿದ್ದರು. ಈ ವಿಚಾರವನ್ನು ಸಂದರ್ಶನವೊಂದರಲ್ಲಿ ನಿರ್ಮಾಪಕ ಭಾ. ಮಾ ಹರೀಶ್ ಹೇಳಿಕೊಂಡಿದ್ದರು.
'ಮೆಜೆಸ್ಟಿಕ್' ಚಿತ್ರದ ಚಿತ್ರೀಕರಣದಕ್ಕೆ ಪೂರ್ಣಿಮಾ ಔಟ್ಡೋರ್ ಯೂನಿಟ್ ಅನ್ನು ಬಳಸಿಕೊಳ್ಳಲಾಗಿತ್ತು. ಅದಕ್ಕೆ ಹಣ ಪಾವತಿಸಲು ಭಾ. ಮಾ ಹರೀಶ್ ಅಂದು ಪುನೀತ್ ಅವರ ಕಛೇರಿಗೆ ಹೋಗಿದ್ದರಂತೆ. ಆ ಸಮಯದಲ್ಲಿ ಚಿತ್ರದ ಹೀರೊ ತೂಗುದೀಪ ಶ್ರೀನಿವಾಸ್ ಮಗ ದರ್ಶನ್ ಎಂದು ಗೊತ್ತಾದಾಗ ಅಪ್ಪು ಕಮ್ಮಿ ಹಣ ಪಡೆದಿದ್ದರು. ತೂಗುದೀಪ ಶ್ರೀನಿವಾಸ್ ಅಂಕಲ್ ನಮ್ಮವರು. ಅವರ ಮಗ ಹೀರೊ ಆಗ್ತಿದ್ದಾನೆ, ಆತನಿಗೆ ಒಳ್ಳೆಯದಾಗಲಿ ಎಂದು ಪುನೀತ್ ಹೇಳಿದ್ದಾಗಿ ಭಾ. ಮಾ ಹರೀಶ್ ವಿವರಿಸಿದ್ದರು.
ಅಪ್ಪು ಹೀಗೆ ಕಡಿಮೆ ಹಣ ಪಡೆದು 'ಮೆಜೆಸ್ಟಿಕ್' ಚಿತ್ರಕ್ಕೆ ಬೆಂಬಲವಾಗಿ ನಿಂತ ವಿಚಾರ ದರ್ಶನ್ಗೂ ಗೊತ್ತಿತ್ತು ಎಂದು ಭಾ. ಮಾ ಹರೀಶ್ ಹೇಳಿದ್ದರು. ಪಿ. ಎನ್ ಸತ್ಯಾ ನಿರ್ದೇಶನದ 'ಮೆಜೆಸ್ಟಿಕ್' ಸಿನಿಮಾ ಸೂಪರ್ ಹಿಟ್ ಆಗಿತ್ತು. ದರ್ಶನ್ ಹೀರೊ ಆಗಿ ಕನ್ನಡ ಚಿತ್ರರಂಗದಲ್ಲಿ ಸಕ್ಸಸ್ ಕಂಡರು. ಮುಂದೆ ಸಾಲು ಸಾಲು ಸಿನಿಮಾಗಳಲ್ಲಿ ಹೀರೊ ಆಗಿ ನಟಿಸಿ ಚಾಲೆಂಜಿಂಗ್ ಸ್ಟಾರ್ ಪಟ್ಟಕ್ಕೇರಿರು.

ಅಂದಹಾಗೆ ದರ್ಶನ್ ಹಾಗೂ ಅಪ್ಪು ನಡುವೆ ಉತ್ತಮ ಸ್ನೇಹವೂ ಇತ್ತು. ಕನ್ನಡ ಚಿತ್ರರಂಗದ ಸುವರ್ಣ ಮಹೋತ್ಸವ ಸಂಭ್ರಮದಲ್ಲಿ ಅರ್ಜುನ(ದರ್ಶನ್) ಹಾಗೂ ಬಭ್ರುವಾಹನ(ಅಪ್ಪು) ಅವತಾರದಲ್ಲಿ ಇಬ್ಬರೂ ವೇದಿಕೆ ಏರಿದ್ದರು. ಪುನೀತ್ ರಾಜ್ಕುಮಾರ್ ನಟನೆಯ 'ಅರಸು' ಚಿತ್ರದಲ್ಲಿ ದರ್ಶನ್ ಅತಿಥಿ ಪಾತ್ರದಲ್ಲಿ ನಟಿಸಿದ್ದರು. ಅದಕ್ಕಾಗಿ ನನಗೆ ಸಂಭಾವನೆ ಬೇಡ ಎಂದೇ ದರ್ಶನ್ ಮೊದಲಿಗೆ ಹೇಳಿದ್ದರಂತೆ.
ಕೆಲ ಸಭೆ, ಸಮಾರಂಭಗಳಲ್ಲಿ ಕೂಡ ಪುನೀತ್ ರಾಜ್ಕುಮಾರ್ ಹಾಗೂ ದರ್ಶನ್ ಆತ್ಮೀಯವಾಗಿ ಕಾಣಿಸಿಕೊಂಡಿದ್ದರು. ಅದಕ್ಕೆ ಸಂಬಂಧಿಸಿದ ಫೋಟೊಗಳು ಇವತ್ತಿಗೂ ವೈರಲ್ ಆಗುತ್ತಲೇ ಇದೆ. ಆದರೆ ಅದ್ಯಾಕೋ ಇತ್ತೀಚಿನ ವರ್ಷಗಳ ಇಬ್ಬರ ಅಭಿಮಾನಿಗಳ ನಡುವೆ ಸುಖಾಸುಮ್ಮನೆ ತಿಕ್ಕಾಟ ನಡೆಯುತ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ಕೆಸರೆರಚಾಟ ಮುಂದುವರೆದಿದೆ.
ಮೈಸೂರಿನಲ್ಲಿ ತೂಗುದೀಪ ಶ್ರೀನಿವಾಸ್ ಮನೆ ಕಟ್ಟಿಸಲು ಅಣ್ಣಾವ್ರು ಸಹಾಯ ಮಾಡಿದ್ದರು. ಮನೆಗೆ ಮುತ್ತುರಾಜ್- ಪಾರ್ವತಮ್ಮ ಕೃಪಾ(ಮು. ಪಾ ಕೃಪ) ಎಂದೇ ಹೆಸರಿಡಲಾಗಿದೆ. ಈ ವಿಚಾರವನ್ನು ದರ್ಶನ್ ಹಾಗೂ ದಿನಕರ್ ಸಹ ಹೇಳಿಕೊಂಡಿದ್ದಾರೆ. ಪುನೀತ್ ರಾಜ್ಕುಮಾರ್ ನಟನೆಯ ಚಿತ್ರವನ್ನು ದಿನಕರ್ ನಿರ್ದೇಶನ ಮಾಡಲು ಮುಂದಾಗಿದ್ದರು. ಆದರೆ ಅಷ್ಟರಲ್ಲೇ ಅಪ್ಪು ಬಾರದ ಲೋಕಕ್ಕೆ ಪಯಣ ಬೆಳೆಸಿಬಿಟ್ಟರು.


Click it and Unblock the Notifications











