ಕನ್ನಡದಲ್ಲಿ ಮೊದಲು ₹1 ಕೋಟಿ ಸಂಭಾವನೆ ಪಡೆದ ನಟ ಪುನೀತ್; ಯಾವ ಸಿನಿಮಾ ಗೊತ್ತಾ?
ಕನ್ನಡ ಚಿತ್ರರಂಗದಲ್ಲಿ ಸೂಪರ್ ಸ್ಟಾರ್ ಪಟ್ಟಕ್ಕೇರಿದ್ದ ನಟ ಪುನೀತ್ ರಾಜ್ಕುಮಾರ್. ಬ್ಲಾಕ್ಬಸ್ಟರ್ ಸಿನಿಮಾಗಳ ಮೂಲಕ ಪ್ರೇಕ್ಷಕರನ್ನು ರಂಜಿಸಿದವರು. ದೊಡ್ಮನೆಯಲ್ಲಿ ಅಣ್ಣಾವ್ರ ಬಳಿಕ ಬಾಲನಟನಾಗಿಯೇ ಸ್ಟಾರ್ ಪಟ್ಟ ಅಲಂಕರಿಸಿದ್ದರು ಅಪ್ಪು. ಶಿವಣ್ಣನಿಗಿಂತ ಮುನ್ನ ಪುನೀತ್ ಕನ್ನಡ ಸಿನಿರಸಿಕರು ಮನಗೆದ್ದುಬಿಟ್ಟಿದ್ದರು. ಹೀರೊ ಆಗಿ ಸಕ್ಸಸ್ ಕಂಡ ಪವರ್ ಸ್ಟಾರ್ ಭಾರೀ ಸಂಭಾವನೆ ಪಡೆಯುತ್ತಿದ್ದರು.
ಬಾಲನಟನಾಗಿ ರಾಷ್ಟ್ರಪ್ರಶಸ್ತಿ ಪಡೆದಿದ್ದ ಪುನೀತ್ ಮುಂದೆ ಹೀರೋ ಆಗಿ ಕೂಡ ಚಿತ್ರರಂಗಕ್ಕೆ ವಾಪಸ್ ಬಂದಿದ್ದರು. ಅಪ್ಪು ದೊಡ್ಡ ಬ್ಯುಸಿನೆಸ್ಮನ್ ಆಗುವ ಕನಸು ಕಂಡಿದ್ದು. ಗ್ರಾನೈಟ್ ಬ್ಯುಸಿನೆಸ್ ಮಾಡಬೇಕು ಎಂದು ಹೋಗಿ ಕೈಸುಟ್ಟುಕೊಂಡಿದ್ದರು. ಡಾ. ರಾಜ್ಕುಮಾರ್ ಅವರನ್ನು ವೀರಪ್ಪನ್ ಅಪಹರಣ ಮಾಡಿ 108 ದಿನಗಳ ಬಿಡುಗಡೆ ಮಾಡಿದ್ದ. ಆ ನಂತರ ಪುನೀತ್ ಚಿತ್ರರಂಗಕ್ಕೆ ಬರಬೇಕು ಎನ್ನುವುದು ಕುಟುಂಬಸ್ಥರ ಆಸೆ ಆಗಿತ್ತು.

'ಯುವರಾಜ' ಸಿನಿಮಾ ಸಮಯದಲ್ಲಿ ಶಿವಣ್ಣನಿಗೆ ನಿರ್ದೇಶಕ ಪೂರಿ ಜಗನ್ನಾಥ್ ಬೇರೆ 3 ಕಥೆಗಳನ್ನು ಹೇಳಿದ್ದರು. ಅದರಲ್ಲಿ ಒಂದು ಕಥೆ ಸಹೋದರನಿಗೆ ಚೆನ್ನಾಗಿರುತ್ತದೆ ಎಂದು ನಿರ್ಧರಿಸಿದ್ದರು. ಇದನ್ನು ಮನೆಯಲ್ಲಿ ಹೇಳಿ ಪೂರಿ ಜಗನ್ನಾಥ್ ಕಥೆ ಹೇಳುವಂತಾಯಿತು. ಅಣ್ಣಾವ್ರು, ವರದಪ್ಪ, ಪಾರ್ವತಮ್ಮ ಎಲ್ಲರೂ ಕಥೆ ಮೆಚ್ಚಿದ್ದರು. ಅಷ್ಟರಲ್ಲಿ ಪುನೀತ್ ಸ್ಟಂಟ್, ಡ್ಯಾನ್ಸ್ ಕಲಿಯಲು ಆರಂಭಿಸಿದರು. ತಮ್ಮದೇ ಪೂರ್ಣಿಮಾ ಎಂಟರ್ಪ್ರೈಸಸ್ ಬ್ಯಾನರ್ನಲ್ಲಿ ಸಿನಿಮಾ ನಿರ್ಮಾಣವಾಯಿತು.
'ಅಪ್ಪು' ಸಿನಿಮಾ ಮೂಲಕ ಪುನೀತ್ ರಾಜ್ಕುಮಾರ್ ಹೀರೊ ಆಗಿ ಭರ್ಜರಿ ಎಂಟ್ರಿ ಕೊಟ್ಟಿದ್ದರು. ಗುರುಕಿರಣ್ ಮ್ಯೂಸಿಕ್ನಲ್ಲಿ ಆಲ್ಬಮ್ ಸೂಪರ್ ಹಿಟ್ ಆಗಿತ್ತು. ಸಿನಿಮಾ ಭರ್ಜರಿ ಓಪನಿಂಗ್ ಪಡೆದುಕೊಂಡು ಶತದಿನೋತ್ಸವ ಆಚರಿಸಿತ್ತು. ಅವತ್ತಿನ ಕಾಲಕ್ಕೆ ಅಂದಾಜು 1 ಕೋಟಿ ರೂ. ಬಜೆಟ್ನಲ್ಲಿ ನಿರ್ಮಾಣವಾಗಿದ್ದ 'ಅಪ್ಪು' ಸಿನಿಮಾ 10ರಿಂದ 12 ಕೋಟಿ ರೂ. ಕಲೆಕ್ಷನ್ ಮಾಡಿ ದಾಖಲೆ ಬರೆದಿತ್ತು.
ಮೊದಲ ಸಿನಿಮಾ ಸಕ್ಸಸ್ ಬೆನ್ನಲ್ಲೇ ದಿನೇಶ್ ಬಾಬು ನಿರ್ದೇಶನದಲ್ಲಿ 'ಅಭಿ' ಸಿನಿಮಾ ಮೂಡಿ ಬಂತು. ರಮ್ಯಾ ನಾಯಕಿಯಾಗಿ ಮಿಂಚಿದ್ದರು. 'ಅಪ್ಪು' ಚಿತ್ರಕ್ಕೆ ಕೆಲಸ ಮಾಡಿದ್ದ ಬಹುತೇಕರು 'ಅಭಿ' ಚಿತ್ರಕ್ಕೂ ಜೊತೆಯಾಗಿದ್ದರು. ಈ ಚಿತ್ರವನ್ನು ಕೂಡ ಪಾರ್ವತಮ್ ರಾಜ್ಕುಮಾರ್ ನಿರ್ಮಾಣ ಮಾಡಿದ್ದರು. ಅಷ್ಟರಲ್ಲಿ ಪುನೀತ್ ರಾಜ್ಕುಮಾರ್ ಕ್ರೇಜ್ ಶುರುವಾಗಿತ್ತು. ದೊಡ್ಡ ದೊಡ್ಡ ನಿರ್ದೇಶಕರು ನಿರ್ಮಾಪಕರು ಅವರೊಟ್ಟಿಗೆ ಸಿನಿಮಾ ಮಾಡಲು ಮುಗಿಬಿದ್ದರು.
ಪುನೀತ್ ಖದರ್ ನೋಡಿದ್ದ ಪೂರಿ ಜಗನ್ನಾಥ್ ತಮ್ಮ 'ಆಂಧ್ರವಾಲ' ಚಿತ್ರವನ್ನು ಏಕಕಾಲಕ್ಕೆ ಕನ್ನಡದಲ್ಲಿ ತೆರೆಗೆ ತರಲು ತೀರ್ಮಾನಿಸಿದ್ದರು. ಅತ್ತ ತೆಲುಗಿನಲ್ಲಿ ಜ್ಯೂ. ಎನ್ಟಿಆರ್ ಹೀರೋ ಆಗಿದ್ದರು. ಸ್ವತಃ ಪೂರಿ ಜಗನ್ನಾಥ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದರು. ಇತ್ತ ಕನ್ನಡದಲ್ಲಿ 'ವೀರ ಕನ್ನಡಿಗ' ಚಿತ್ರವನ್ನು ಅವರ ಶಿಷ್ಯ ಮೆಹರ್ ರಮೇಶ್ ನಿರ್ದೇಶನ ಮಾಡುವುದು ಎಂದು ಫಿಕ್ಸ್ ಆಗಿತ್ತು.
ಅದಾಗಲೇ ತಮ್ಮದೇ ಬ್ಯಾನರ್ ಅಡಿಯಲ್ಲಿ ಪುನೀತ್ ಎರಡು ಸಿನಿಮಾಗಳಲ್ಲಿ ನಟಿಸಿ ಗೆದ್ದಿದ್ದರು. 3ನೇ ಸಿನಿಮಾ ಬಗ್ಗೆ ಎಕ್ಸ್ಪೆಕ್ಟೇಷನ್ ಎವರೆಸ್ಟ್ ಎತ್ತರಕ್ಕಿತ್ತು. ತೆಲುಗು ನಿರ್ಮಾಪಕರು ಅಪ್ಪು ಕೇಳಿದಷ್ಟು ಸಂಭಾವನೆ ಕೊಟ್ಟು ಸಿನಿಮಾ ಮಾಡಲು ಮುಂದಾಗಿದ್ದರು. ತೆಲುಗಿನಲ್ಲಿ ಅದಾಗಲೇ ಸಿನಿಮಾಗಳನ್ನು ನಿರ್ಮಿಸಿ ಗೆದ್ದಿದ್ದ ಕೆ.ಎಸ್. ರಾಮರಾವ್ ಹಾಗೂ ಕೆ. ಎ. ವಲ್ಲಭ 'ವೀರ ಕನ್ನಡಿಗ' ಚಿತ್ರಕ್ಕೆ ಬಂಡವಾಳ ಹೂಡಿದ್ದಿತ್ತು. ಅವತ್ತಿನ ಕಾಲಕ್ಕೆ ಪುನೀತ್ ರಾಜ್ಕುಮಾರ್ ಅವರಿಗೆ 1 ಕೋಟಿ ರೂ. ಸಂಭಾವನೆ ಕೊಟ್ಟಿದ್ದರು.
ಕನ್ನಡ ಚಿತ್ರರಂಗದಮಟ್ಟಿಗೆ 1 ಕೋಟಿ ರೂ. ಸಂಭಾವನೆ ಪಡೆದ ಮೊದಲ ನಟ ಅಪ್ಪು ಎನ್ನುವುದರಲ್ಲಿ ದೂಸ್ರಾ ಮಾತಿಲ್ಲ. ಸ್ಲಮ್ನಲ್ಲಿರುವ ಮುನ್ನ ಎಂಬ ರಗಡ್ ಯುವಕನ ಪಾತ್ರದಲ್ಲಿ ಪುನೀತ್ ನಟಿಸಿದ್ದರು. ಆತನ ತಂದೆ ಶಂಕರ್ ಎನ್ನುವ ಮತ್ತೊಂದು ಪಾತ್ರದಲ್ಲಿ ಕೂಡ ಅಬ್ಬರಿಸಿದ್ದರು. ಶತದಿನೋತ್ಸವ ಕಂಡಿದ್ದ ಸಿನಿಮಾ ಕನ್ನಡದಲ್ಲಿ ಗೆದ್ದಿತ್ತು. ಈ ಮೂಲಕ ರಾಜರತನ್ ಹ್ಯಾಟ್ರಿಕ್ ಬಾರಿಸಿದ್ದರು. ನಿರೀಕ್ಷಿತ ಮಟ್ಟದಲ್ಲಿ ಪ್ರೇಕ್ಷಕರ ಮನಗೆಲ್ಲದಿದ್ದರೂ ಅಪ್ಪು ಅಭಿಮಾನಿಗಳಿಗೆ ಇಷ್ಟವಾಗಿತ್ತು. ಕಮರ್ಷಿಯಲ್ ಆಗಿ ಸಿನಿಮಾ ಸದ್ದು ಮಾಡಿದ್ದು ಸುಳ್ಳಲ್ಲ. ಆದರೆ ತೆಲುಗಿನಲ್ಲಿ 'ಆಂಧ್ರವಾಲ' ಸಿನಿಮಾ ಹೀನಾಯವಾಗಿ ಸೋತಿತ್ತು.
ಇವತ್ತು ಕನ್ನಡ ಕೆಲ ನಟರು ಚಿತ್ರವೊಂದಕ್ಕೆ ಕೋಟಿ ಕೋಟಿ ಸಂಭಾವನೆ ಪಡೆಯುತ್ತಾರೆ. ಆದರೆ 20 ವರ್ಷಗಳ ಹಿಂದೆ 1 ಕೋಟಿ ಎನ್ನುವುದು ಕನ್ನಡ ಚಿತ್ರರಂಗದಲ್ಲಿ ಒಂದು ದಾಖಲೆಯೇ ಸರಿ. ಚಿತ್ರದಿಂದ ಚಿತ್ರಕ್ಕೆ ಪುನೀತ್ ರಾಜ್ಕುಮಾರ್ ಕ್ರೇಜ್ ಹೆಚ್ಚುತ್ತಾ ಹೋಯಿತು. ಡಿಮ್ಯಾಂಡ್ಗೆ ತಕ್ಕಂತೆ ತಮ್ಮ ಸಂಭಾವನೆಯನ್ನು ಹೆಚ್ಚಿಸಿಕೊಳ್ಳುತ್ತಾ ಬಂದಿದ್ದರು. ಕೆಲವೊಮ್ಮೆ ಸಂಭಾವನೆ ತಗ್ಗಿಸಿಕೊಂಡಿರುವುದು ಇದೆ. ಮೊದಲ ಎರಡು ಚಿತ್ರಗಳನ್ನು ತಮ್ಮದೇ ಬ್ಯಾನರ್ ಅಡಿಯಲ್ಲಿ ನಟಿಸಿದ್ದರು. ಹಾಗಾಗಿ ಸಂಭಾವನೆ ವಿಚಾರ ಅಲ್ಲಿ ಬಂದಿರಲಿಲ್ಲ. ಆದರೆ 3ನೇ ಚಿತ್ರದಲ್ಲಿ ದಾಖಲೆಯ ಸಂಭಾವನೆ ಪಡೆದರು.
ತಮ್ಮ ಸಿನಿಕರಿಯರ್ನಲ್ಲಿ ಪುನೀತ್ ಸೋಲು ಕಂಡಿರುವುದು ಇದೆ. ಆವರೇಜ್ ಸಿನಿಮಾಗಳು ಲಿಸ್ಟ್ನಲ್ಲಿವೆ. ಆದರೂ ಅಪ್ಪು ಕ್ರೇಜ್ ಮಾತ್ರ ಕೊನೆಯವರೆಗೂ ಕಮ್ಮಿ ಆಗಲಿಲ್ಲ. ದೊಡ್ಡ ದೊಡ್ಡ ನಿರ್ಮಾಪಕರು ಅಪ್ಪು ಕಾಲ್ಶೀಟ್ಗಾಗಿ ಕ್ಯೂ ನಿಂತಿದ್ದರು. ಕೋವಿಡ್ ಆರ್ಭ ಟದ ಬಳಿಕ ಹೆಚ್ಚು ಹೆಚ್ಚು ಸಿನಿಮಾಗಳಲ್ಲಿ ನಟಿಸೋಕೆ ಮನಸ್ಸು ಮಾಡಿದ್ದರು.

ಪುನೀತ್ ರಾಜ್ಕುಮಾರ್ ಹೀರೋ ಆಗಿ ನಟಿಸಿದ ಕೊನೆಯ ಸಿನಿಮಾ 'ಜೇಮ್ಸ್'. ಆ ಚಿತ್ರದ ಬಹುತೇಕ ಚಿತ್ರೀಕರಣ ಮುಕ್ತಾಯವಾಗಿತ್ತು. ಕಿಶೋರ್ ಪತ್ತಿಕೊಂಡ ಚಿತ್ರಕ್ಕೆ ಹಣ ಹೂಡಿದ್ದರು. ಆ ಚಿತ್ರಕ್ಕೆ 5ರಿಂದ 6 ಕೋಟಿ ರೂ. ಸಂಭಾವನೆ ಪುನೀತ್ ಪಡೆದಿದ್ದರು ಎಂದು ಗಾಂಧಿನಗರದ ಮಂದಿ ಮಾತನಾಡಿಕೊಂಡಿದ್ದರು. ಕೆಲ ಸನ್ನಿವೇಶಗಳ ಬಾಕಿ ಇತ್ತು. ಡಬ್ಬಿಂಗ್ ಕೂಡ ಮಾಡಿರಲಿಲ್ಲ. ಅಷ್ಟರಲ್ಲೇ ಅಪ್ಪು ಇಹಲೋಕ ತ್ಯಜಿಸಿದ್ದರು. ಬಳಿಕ ಶಿವಣ್ಣ 'ಜೇಮ್ಸ್' ಪಾತ್ರಕ್ಕೆ ಡಬ್ ಮಾಡುವಂತಾಯಿತು. ಅಂದಾಜು 30 ಕೋಟಿ ರೂ. ಬಜೆಟ್ ಸಿನಿಮಾ 100 ಕೋಟಿ ರೂ.ಗೂ ಅಧಿಕ ಗಳಕೆ ಕಂಡಿತ್ತು.
ಇನ್ನು ಅಪ್ಪುಗೆ ಸಂಖ್ಯಾಶಾಸ್ತ್ರ, ಜಾತಕ, ಜ್ಯೋತಿಷ್ಯದಲ್ಲಿ ನಂಬಿಕೆ ಇತ್ತು. ಸಂಖ್ಯೆ '9' ಅನ್ನು ಲಕ್ಕಿ ಎಂದು ಭಾವಿಸಿದ್ದರು. ತಾವು ಸಂಭಾವನೆ ಪಡೆಯವಾಗಲೂ 9 ಸಂಖ್ಯೆ ಇರುವಂತೆ ನೋಡಿಕೊಳ್ಳುತ್ತಿದ್ದರು. 'ವೀರ ಕನ್ನಡಿಗ' ಚಿತ್ರಕ್ಕೆ 1 ಕೋಟಿ ರೂ. ಸಂಭಾವನೆ ಮಾತನಾಡಿದರೂ 9 ಲಕ್ಕಿ ಎನ್ನುವ ಕಾರಣಕ್ಕೆ 99 ಲಕ್ಷ ರೂ. ಪಡೆದಿದ್ದರು ಎನ್ನಲಾಗುತ್ತದೆ. ಇದೇ ನಿಯಮ ಎಲ್ಲಾ ಸಿನಿಮಾಗಳ ಸಂಭಾವನೆ ಪಡೆಯುವಾಗ ಪಾಲಿಸುತ್ತಿದ್ದರು.
'ಜೇಮ್ಸ್' ಬಳಿಕ ಮೂರ್ನಾಲ್ಕು ಸಿನಿಮಾಗಳಲ್ಲಿ ಪುನೀತ್ ನಟಿಸುವ ಬಗ್ಗೆ ಮಾತುಕತೆ ಆಗಿತ್ತು. ಪವನ್ ಕುಮಾರ್, ಹೊಂಬಾಳೆ ಕಾಂಬಿನೇಷನ್ನಲ್ಲಿ 'ದ್ವಿತ್ವ' ಸಿನಿಮಾ ಘೋಷಣೆ ಆಗಿತ್ತು. ದಿನಕಕರ್ ತೂಗುದೀಪ ನಿರ್ದೇಶನದಲ್ಲಿ ನಟಿಸೋಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದರು. ಜಯಣ್ಣ ಫಿಲ್ಮ್ಸ್ ಬ್ಯಾನರ್ನಲ್ಲಿ ಈ ಸಿನಿಮಾ ಬರಬೇಕಿತ್ತು.
'ಹೆಬ್ಬುಲಿ' ಖ್ಯಾತಿಯ ಕೃಷ್ಣ ನಿರ್ದೇಶನದಲ್ಲಿ ಕೂಡ ಒಂದು ಸಿನಿಮಾ ಬರಬೇಕಿತ್ತು. ಸಂತೋಷ್ ಆನಂದ್ರಾಮ್ ನಿರ್ದೇಶನದಲ್ಲಿ 3ನೇ ಸಿನಿಮಾ ಮಾತುಕತೆ ಆಗಿತ್ತು. ಉಮಾಪತಿ ಶ್ರೀನಿವಾಸ್ ಗೌಡ ಕೂಡ ಪುನೀತ್ ನಿರ್ಮಾಣಕ್ಕೆ ಮನಸ್ಸು ಮಾಡಿದ್ದರು. ಪವನ್ ಒಡೆಯರ್ ಕೂಡ ಮತ್ತೊಂದು ಸಿನಿಮಾ ಮಾಡಲು ಮುಂದಾಗಿದ್ದರು. ಆದರೆ ಅದ್ಯಾವುದೂ ಸಾಧ್ಯವಾಗಲೇಯಿಲ್ಲ.


Click it and Unblock the Notifications











