ಶಿವರಾಜ್ ಕುಮಾರ್ ಮಾಡಬೇಕಿದ್ದ ಸಿನಿಮಾ ಅಪ್ಪು ಪಾಲಾಗಿ ಸೂಪರ್ ಹಿಟ್ ಆಯ್ತು
ಬಾಲನಟನಾಗಿ ಬಹುದೊಡ್ಡ ಖ್ಯಾತಿ ಗಳಿಸಿದ್ದ ಪುನೀತ್ ರಾಜ್ಕುಮಾರ್ ನಾಯಕ ನಟನಾಗಿ ಎಂಟ್ರಿ ಕೊಡುವುದು ಸುಲಭವಾಗಿರಲಿಲ್ಲ. ಅಪ್ಪುವನ್ನು ಎಂಥಹಾ ಕತೆಯ ಮೂಲಕ ಚಿತ್ರರಂಗಕ್ಕೆ ಕಳಿಸಬೇಕು ಎಂಬುದು ದೊಡ್ಮನೆಯ ಚಿಂತೆಗೆ ಕಾರಣವಾಗಿತ್ತು.
Recommended Video

ಕಾಲೇಜು ಕತೆಗಳು ಚೆನ್ನಾಗಿ ಓಡುತ್ತಿದ್ದ ಕಾಲವಾದ್ದರಿಂದ ಭಿನ್ನವಾದ ಕಾಲೇಜ್ ಲವ್ ಸ್ಟೋರಿ ಜೊತೆಗೆ ಕೌಟುಂಬಿಕ ಮೌಲ್ಯಗಳು ಇದ್ದಂಥಹಾ ಕತೆಗಾಗಿ ಹುಡುಕಾಟ ಸಾಗಿತ್ತು. ವರದಣ್ಣ, ಅಣ್ಣಾವ್ರು, ಪಾರ್ವತಮ್ಮನವರು ಹಲವು ನಿರ್ದೇಶಕರಿಂದ ಕತೆ ಕೇಳಿದ್ದರಾದರೂ ಯಾವುದೂ ತೃಪ್ತಿ ಎನಿಸಿರಲಿಲ್ಲ.
ಕೊನೆಗೆ ಪುನೀತ್ ರಾಜ್ಕುಮಾರ್ ಅವರಿಗೆ ಸೂಕ್ತ ಕತೆಯನ್ನು ಆಯ್ದು ಕೊಟ್ಟಿದ್ದು ನಟ ಶಿವರಾಜ್ ಕುಮಾರ್. ಅವರಿಗಾಗಿ ನಿರ್ದೇಶಕರೊಬ್ಬರು ಹೇಳಿದ ಕತೆಯನ್ನು ಅವರು ಪುನೀತ್ ರಾಜ್ಕುಮಾರ್ಗೆ ನೀಡಿದರು. ಆ ಕತೆಯೇ 'ಅಪ್ಪು' ಸಿನಿಮಾ ಆಗಿ ಬಹುದೊಡ್ಡ ಹಿಟ್ ಆಯಿತು.

ಮೂರು ಸಿನಿಮಾ ಕತೆ ಹೇಳಿದ್ದ ಪುರಿ ಜಗನ್ನಾಥ್
ಆಗಿದ್ದಿಷ್ಟೆ, ಆಗಷ್ಟೆ ಶಿವರಾಜ್ ಕುಮಾರ್ ನಟನೆಯ 'ಯುವರಾಜ' ಸಿನಿಮಾ ಬಿಡುಗಡೆ ಆಗಿ ದೊಡ್ಡ ಹಿಟ್ ಆಗಿತ್ತು. ತೆಲುಗಿನ 'ತಮ್ಮುಡು' ಸಿನಿಮಾದ ರೀಮೇಕ್ ಅದು. 'ತಮ್ಮುಡು' ಸಿನಿಮಾವನ್ನು ತೆಲುಗಿನಲ್ಲಿ ಪುರಿ ಜಗನ್ನಾಥ್ ನಿರ್ದೇಶನ ಮಾಡಿದ್ದರು. ಅವರು ಶಿವರಾಜ್ ಕುಮಾರ್ಗಾಗಿ ಸಿನಿಮಾ ಮಾಡುವ ಆಸೆಯಿಂದ ಶಿವಣ್ಣನಿಗೆ ಬರೋಬ್ಬರಿ ಮೂರು ಕತೆಗಳನ್ನು ಹೇಳಿದ್ದರು. ಅದರಲ್ಲಿ ಒಂದು 'ಅಪ್ಪು' ಸಿನಿಮಾದ ಕತೆ.

ಪುನೀತ್ಗೆ ಕತೆ ನೀಡಿದ ಶಿವರಾಜ್ ಕುಮಾರ್
ಕತೆ ಕೇಳಿದ ಶಿವರಾಜ್ ಕುಮಾರ್ ''ಸಿನಿಮಾದ ಕತೆ ಚೆನ್ನಾಗಿದೆ ಆದರೆ ಇದು ನನಗೆ ಹೊಂದಿಕೆ ಆಗುವುದಿಲ್ಲ. ನಮ್ಮ ಮನೆಯಲ್ಲಿ ನನ್ನ ತಮ್ಮನನ್ನು ಹಿರೋ ಆಗಿ ಲಾಂಚ್ ಮಾಡಲು ಮಾತುಕತೆ ಮಾಡುತ್ತಿದ್ದಾರೆ. ಅಲ್ಲದೆ ಪುನೀತ್ಗೆ ಈ ಕತೆ ಬಹಳ ಚೆನ್ನಾಗಿ ಹೊಂದಿಕೆ ಆಗುತ್ತದೆ'' ಎಂದರಂತೆ. ಜೊತೆಗೆ ಅವರೇ ಕರೆದುಕೊಂಡು ಹೋಗಿ ಪುರಿ ಜಗನ್ನಾಥ್ ಕೈಲಿ ವರದಣ್ಣ, ಪಾರ್ವತಮ್ಮ, ಅಣ್ಣಾವ್ರಿಗೆ ಕತೆ ಹೇಳಿಸಿದರಂತೆ. ನಂತರ 'ಅಪ್ಪು' ಸಿನಿಮಾ ಸೆಟ್ಟೇರಿತು. ಬಿಡುಗಡೆ ಆಗಿ ಸೂಪರ್ ಡೂಪರ್ ಹಿಟ್ ಆಯಿತು. ಸಿನಿಮಾ ಮೂಲಕ ಬಾಲನಟ ಅಪ್ಪು ನಾಯಕ ನಟನಾಗಿ ಕನ್ನಡ ಸಿನಿಪ್ರೇಕ್ಷಕರ ಮನದಲ್ಲಿ ಮನೆ ಮಾಡಿದರು.

ಫಿಲ್ಮಿಬೀಟ್ ಜೊತೆ ನಿರ್ದೇಶಕ ಮಹೇಶ್ ಬಾಬು ಮಾತುಕತೆ
ಫಿಲ್ಮಿಬೀಟ್ ಕನ್ನಡದ 'ನಾ ಕಂಡ ಅಪ್ಪು' ವಿಶೇಷ ಸರಣಿಗಾಗಿ ನಿರ್ದೇಶಕ ಮಹೇಶ್ ಬಾಬು ಮೇಲಿನ ಮಾಹಿತಿಗಳನ್ನು ನೀಡಿದರು. ಶಿವರಾಜ್ ಕುಮಾರ್ ನಟನೆಯ 'ಎಕೆ 47', 'ಯುವರಾಜ', 'ಭಾವ ಭಾಮೈದ' ಸಿನಿಮಾಗಳಿಗೆ ಸಹಾಯಕ ನಿರ್ದೇಶಕರಾಗಿದ್ದ ಮಹೇಶ್ ಬಾಬು ಪುನೀತ್ ರಾಜ್ಕುಮಾರ್ ನಟನೆಯ ಎರಡನೇ ಸೂಪರ್ ಹಿಟ್ ಸಿನಿಮಾ 'ಆಕಾಶ್' ನಿರ್ದೇಶಕರೂ ಹೌದು. ಪುನೀತ್ರ ಮತ್ತೊಂದು ಬ್ಲಾಕ್ ಬಸ್ಟರ್ ಸಿನಿಮಾ 'ಅರಸು' ನಿರ್ದೇಶಕರೂ ಇವರೇ.

ನಾಳೆ ಬಿಡುಗಡೆ ಆಗುತ್ತಿದೆ 'ಜೇಮ್ಸ್'
ಇದೀಗ ಪುನೀತ್ ರಾಜ್ಕುಮಾರ್ ಅವರು ಪೂರ್ಣ ಪ್ರಮಾಣದ ನಾಯಕ ನಟನಾಗಿ ನಟಿಸಿದ ಕೊನೆಯ ಸಿನಿಮಾ 'ಜೇಮ್ಸ್' ಬಿಡುಗಡೆ ಆಗುತ್ತಿದೆ. ನಾಳೆ (ಮಾರ್ಚ್ 17) ಸಿನಿಮಾ ಬಿಡುಗಡೆ ಆಗುತ್ತಿದ್ದು ಸಿನಿಮಾದ ಸ್ವಾಗತಕ್ಕೆ ಭರ್ಜರಿ ತಯಾರಿಯನ್ನು ಅಪ್ಪು ಅಭಿಮಾನಿಗಳು ಮಾಡಿಕೊಂಡಿದ್ದಾರೆ. ರಾಜ್ಯದಾದ್ಯಂತ ಚಿತ್ರಮಂದಿರಗಳನ್ನು ವಧುವಿನಂತೆ ಸಿಂಗರಿಸಿ ಪುನೀತ್ರ ದೊಡ್ಡ ದೊಡ್ಡ ಕಟೌಟ್ಗಳನ್ನು ನಿಲ್ಲಿಸಿ, ಚಿತ್ರಮಂದಿರಗಳ ಬಳಿ ಅನ್ನಸಂತರ್ಪಣೆ ವ್ಯವಸ್ಥೆ ಮಾಡಿ ಸಿನಿಮಾ ಬಿಡುಗಡೆಗೆ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. 'ಜೇಮ್ಸ್' ಸಿನಿಮಾದಲ್ಲಿ ಪುನೀತ್ ಜೊತೆಗೆ ನಾಯಕಿಯಾಗಿ ಪ್ರಿಯಾ ಆನಂದ್ ನಟಿಸಿದ್ದಾರೆ. ತೆಲುಗಿನ ನಟ ಶ್ರೀಕಾಂತ್, ಆದಿತ್ಯ ಮೆನನ್, ಅನು ಪ್ರಭಾಕರ್, ಶರತ್ ಕುಮಾರ್, ಚಿಕ್ಕಣ್ಣ, ಶೈನ್ ಶೆಟ್ಟಿ ಇನ್ನೂ ಹಲವರು ನಟಿಸಿದ್ದಾರೆ.


Click it and Unblock the Notifications











