ಈ ಜನಪ್ರಿಯ ಕಾದಂಬರಿ ಆಧಾರಿತ ಚಿತ್ರದಲ್ಲಿ ಅಪ್ಪು ನಟಿಸಲೇ ಇಲ್ಲ, ಪಾರ್ವತಮ್ಮ ಆಸೆ ಈಡೇರಲಿಲ್ಲ!
ಪುನೀತ್ ರಾಜ್ಕುಮಾರ್ ಹಠಾತ್ ನಿಧನದ ಸುದ್ದಿಯನ್ನು ಅಭಿಮಾನಿಗಳು ಇಂದಿಗೂ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಎಲ್ಲಾ ಕೆಲಸಗಳನ್ನು ಅರ್ಧಕ್ಕೆ ಬಿಟ್ಟು 46ರ ಹರೆಯದ ಅಪ್ಪು ದಿಢೀರ್ ಎದ್ದು ಹೊರಟು ಹೋಗಿದ್ದು ನಿಜಕ್ಕೂ ಬೇಸರದ ಸಂಗತಿ. ಪುನೀತ್ ರಾಜ್ಕುಮಾರ್ ಇಹಲೋಕ ತ್ಯಜಿಸಿ ಎರಡೂವರೆ ವರ್ಷವಾಯಿತು.
ಇದೇ ಭಾನುವಾರ(ಮಾರ್ಚ್ 17) ಪುನೀತ್ ರಾಜ್ಕುಮಾರ್ ಹುಟ್ಟುಹಬ್ಬ ಆಚರಿಸಲು ಅಭಿಮಾನಿಗಳು ಸಜ್ಜಾಗುತ್ತಿದ್ದಾರೆ. ಈ ಸಂಭ್ರಮ ಹೆಚ್ಚು ಮಾಡಲು ಸೂಪರ್ ಹಿಟ್ 'ಜಾಕಿ' ಸಿನಿಮಾ ರೀ ರಿಲೀಸ್ ಆಗುತ್ತಿದೆ. 4K ವರ್ಷನ್ನಲ್ಲಿ ಹೊಸ ರೂಪದಲ್ಲಿ ಸಿನಿಮಾ ಮತ್ತೆ ಪ್ರೇಕ್ಷಕರ ಮುಂದೆ ಬರುತ್ತದೆ. ಬಹಳ ದೊಡ್ಡಮಟ್ಟದಲ್ಲಿ ಸಿನಿಮಾ ರಿಲೀಸ್ ಪ್ರಯತ್ನ ನಡೆಯುತ್ತಿದೆ. ಶುಕ್ರವಾರವೇ ಸಿನಿಮಾ ತೆರೆಗೆ ಬರಲಿದೆ.

'ದುನಿಯಾ' ಸಿನಿಮಾ ನೋಡಿ ನಿರ್ದೇಶಕ ಸೂರಿ ಜೊತೆಗೆ ಸಿನಿಮಾ ಮಾಡಲು ಪುನೀತ್ ರಾಜ್ಕುಮಾರ್ ಬಯಸಿದರು. ಆಗ ಶುರುವಾಗಿದ್ದೇ 'ಜಾಕಿ'. ಪೂರ್ಣಿಮಾ ಎಂಟರ್ಪ್ರೈಸಸರ್ ಬ್ಯಾನರ್ನಲ್ಲಿ ಪಾರ್ವತಮ್ಮ ರಾಜ್ಕುಮಾರ್ ಸಿನಿಮಾ ನಿರ್ಮಿಸಿದ್ದರು. ಆದರೆ ಅದೇ ಸಮಯದಲ್ಲಿ ಒಂದು ಕಾದಂಬರಿಯನ್ನು ಸಿನಿಮಾ ಮಾಡಲು ಪಾರ್ವತಮ್ಮ ಮನಸ್ಸು ಮಾಡಿದ್ದರು. ಅದನ್ನು ಸೂರಿ ಅವರಿಗೂ ಹೇಳಿದ್ದರು. ಎಲ್ಲಾ ಅಂದುಕೊಂಡಂತೆ ಆಗಿದ್ದರೆ 'ಜಾಕಿ' ಬದಲು ಇವರಿಬ್ಬರ ಕಾಂಬಿನೇಷನ್ನಲ್ಲಿ ಆ ಕಾದಂಬರಿ ಸಿನಿಮಾ ಆಗಬೇಕಿತ್ತು.
ಸಾಕಷ್ಟು ಕಾದಂಬರಿಗಳನ್ನು ಪಾರ್ವತಮ್ಮ ತಮ್ಮ ಬ್ಯಾನರ್ನಲ್ಲಿ ಸಿನಿಮಾ ಮಾಡಿದ್ದರು. ಸಾಕಷ್ಟು ಓದುವ ಹವ್ಯಾಸ ಬೆಳೆಸಿಕೊಂಡಿದ್ದ ಅವರು ಕುಂ. ವೀರಭದ್ರಪ್ಪ ಅವರ 'ಕನಕಾಂಗಿ ಕಲ್ಯಾಣ' ಕಾದಂಬರಿಯನ್ನು ತೆರೆಗೆ ತರಬೇಕು ಎಂದುಕೊಂಡಿದ್ದರು. ಪುನೀತ್ ರಾಜ್ಕುಮಾರ್ ಚಿತ್ರದಲ್ಲಿ ನಟಿಸಿದರೆ ಹೀರೊ ಆಗಿ ನಟಿಸಿದರೆ ಚೆನ್ನಾಗಿರುತ್ತದೆ ಅಂದುಕೊಂಡಿದ್ದರು. ಈ ಬಗ್ಗೆ ಕುಂ. ವೀರಭದ್ರಪ್ಪ ಪಾರ್ವತಮ್ಮ ಚರ್ಚಿಸಿದ್ದರು. ಆದರೆ ಅದು ಸಾಧ್ಯವಾಗಲೇಯಿಲ್ಲ.

ಮೊದಲಿಗೆ ಅಪ್ಪು ಜೊತೆ ಸಿನಿಮಾ ಮಾಡಬೇಕು ಎಂದು ಸೂರಿ ಒಂದು ಲವ್ ಸ್ಟೋರಿ ಸಿದ್ಧಪಡಿಸಿದ್ದರಂತೆ. ಬಳಿಕ 'ಕನಕಾಂಗಿ ಕಲ್ಯಾಣ' ಕಾದಂಬರಿ ಚರ್ಚೆಗೆ ಬಂತಂತೆ. ಆದರೆ ಬಜೆಟ್ ಜಾಸ್ತಿ ಆಗುತ್ತದೆ ಎಂದು ಪಕ್ಕಕಿಟ್ಟರು. ಎರಡನ್ನೂ ಬಿಟ್ಟು ಕೊನೆಗೆ ಸೂರಿ 'ಜಾಕಿ' ಸಿನಿಮಾ ಕಥೆ, ಟೈಟಲ್ ಅನ್ನು ಪಾರ್ವತಮ್ಮಗೆ ಹೇಳಿ ಒಪ್ಪಿಸಿದರು. ಆ ಬಳಿಕ ಇದೇ ಕಾಂಬಿನೇಷನ್ನಲ್ಲಿ 'ಅಣ್ಣಾಬಾಂಡ್' ಸಿನಿಮಾ ಕೂಡ ಬಂತು. ಆದರೆ 'ಕನಕಾಂಗಿ ಕಲ್ಯಾಣ' ಎಲ್ಲರೂ ಮರೆತುಬಿಟ್ಟರು.
ಪಾರ್ವತಮ್ಮ ಅಗಲಿಕೆಯ ಬಳಿಕ 'ಕನಕಾಂಗಿ ಕಲ್ಯಾಣ' ಕಾದಂಬರಿ ಸಿನಿಮಾ ಆಗುವುದು ಬಹುತೇಕ ಸಾಧ್ಯವಿಲ್ಲ ಎನ್ನವಂತಾಗಿತ್ತು. ಆದರೂ 'ಯುವರತ್ನ' ಬಳಿಕ 'ಕನಕಾಂಗಿ ಕಲ್ಯಾಣ' ಸಿನಿಮಾ ಸೆಟ್ಟೇರುತ್ತದೆ ಎನ್ನುವ ಮಾತುಗಳು ಕೇಳಿಬಂದಿತ್ತು. 'ಪಾಪ್ಕಾರ್ನ್ ಮಂಕಿಟೈಗರ್' ಬಳಿಕ ಸೂರಿ ಇದೇ ಕಾದಂಬರಿ ಕೈಗೆತ್ತುಕೊಳ್ಳುತ್ತಾರೆ ಎನ್ನುವ ಗುಸುಗುಸು ಕೇಳಿಬಂದಿತ್ತು. ಪಾರ್ವತಮ್ಮ ಕನಸು ನನಸಾಗುತ್ತದೇ ಎಂದೇ ಎಲ್ಲರೂ ಅಂದುಕೊಂಡಿದ್ದರು.
ಸೂರಿ 'ಕನಕಾಂಗಿ ಕಲ್ಯಾಣ' ಕಥೆ ಸಿನಿಮಾ ಮಾಡಲು ಹಿಂದೇಟು ಹಾಕಲು ಆರಂಭಿಸಿದಾಗ ನಿರ್ದೇಶಕ 'ಹೆಬ್ಬುಲಿ' ಕೃಷ್ಣ ಹೆಸರು ಚಾಲ್ತಿಗೆ ಬಂದಿತ್ತು. 'ಜೇಮ್ಸ್' ಬಳಿಕ ಪುನೀತ್ ರಾಜ್ಕುಮಾರ್ ಎರಡ್ಮೂರು ಸಿನಿಮಾಗಳಲ್ಲಿ ನಟಿಸಲು ಗ್ರೀನ್ ಸಿಗ್ನಲ್ ಕೊಟ್ಟಿದ್ದರು. ದಿನಕರ್ ತೂಗುದೀಪ, ಸಂತೋಷ್ ಆನಂದ್ರಾಮ್ ಹಾಗೂ 'ಹೆಬ್ಬುಲಿ' ಕೃಷ್ಣ ಜೊತೆ ಒಂದೊಂದು ಸಿನಿಮಾ ಮಾಡುವ ಬಗ್ಗೆ ಮಾತುಕತೆ ಆಗಿತ್ತು. 'ಕನಕಾಂಗಿ ಕಲ್ಯಾಣ' ಕಾದಂಬರಿಯನ್ನೇ ಕೃಷ್ಣ ಸಿನಿಮಾ ಮಾಡಲು ಹೊರಟ್ಟಿದ್ದರಾ? ಎನ್ನುವುದು ಗೊತ್ತಿಲ್ಲ. ಆದರೆ ಆ ಕಾದಂಬರಿ ಸಿನಿಮಾ ಆಗುವ ಮುನ್ನವೇ ಅಪ್ಪು ಬಾರದ ಲೋಕಕ್ಕೆ ಹೊರಟುಬಿಟ್ಟರು.


Click it and Unblock the Notifications











