Video: ಅಣ್ಣಾವ್ರ ಅಪರೂಪದ ವಿಡಿಯೋ: 100ನೇ ಚಿತ್ರದ ಸಂಭ್ರಮದ ಝಲಕ್
ಕೇವಲ 14 ವರ್ಷದಲ್ಲಿ ನಟ ರಾಜ್ ಕುಮಾರ್ 100 ಸಿನಿಮಾಗಳಲ್ಲಿ ನಟಿಸಿದ್ದರು. ಬಹುಶಃ ಇಂತಹ ಸಾಧನೆ ಮತ್ತೊಮ್ಮೆ ಕಾಣಲು ಸಾಧ್ಯವಿಲ್ಲ. 1954ರಲ್ಲಿ 'ಬೇಡರ ಕಣ್ಣಪ್ಪ' ಚಿತ್ರದ ಮೂಲಕ ನಾಯಕನಟನಾಗಿ ಬೆಳ್ಳಿತೆರೆ ಪ್ರವೇಶಿಸಿ ರಾಜಕುಮಾರ 1968ರಲ್ಲಿ 100 ಸಿನಿಮಾ ಪೂರೈಸಿದರು.
Recommended Video
1968ರಲ್ಲಿ ತೆರೆಕಂಡಿದ್ದ 'ಭಾಗ್ಯದ ಬಾಗಿಲು' ಅಣ್ಣಾವ್ರು ಅಭಿನಯಿಸಿದ 100ನೇ ಚಿತ್ರ. ವರನಟ ರಾಜ್ ಕುಮಾರ್ ನೂರು ಚಿತ್ರ ಪೂರೈಸಿದ ಹಿನ್ನೆಲೆ ಬಹುದೊಡ್ಡ ಸಮಾರಂಭ ಆಯೋಜಿಸಲಾಗಿತ್ತು. ತೆರೆದ ವಾಹನದಲ್ಲಿ ಅಣ್ಣಾವ್ರ ಸಾರಥ್ಯದಲ್ಲಿ ಮೆರವಣಿಗೆ ಹಾಗೂ ಕಂಠೀರವ ಕ್ರೀಡಾಂಗಣದಲ್ಲಿ ಅದ್ಧೂರಿ ಕಾರ್ಯಕ್ರಮ ನಡೆದಿತ್ತು. ಆ ಕಾರ್ಯಕ್ರಮ ಅಪರೂಪದ ವಿಡಿಯೋವನ್ನು ನಟ ರಾಘವೇಂದ್ರ ರಾಜ್ ಕುಮಾರ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
''ಅಪ್ಪಾಜಿಯವರು 100 ಚಿತ್ರಗಳನ್ನು ಪೂರೈಸಿದಕ್ಕೆ 1968ರಲ್ಲಿ ಬೆಂಗಳೂರಿನಲ್ಲಿ ನಡೆದ ಬೃಹತ್ ಮೆರವಣಿಗೆ ಹಾಗೂ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಸನ್ಮಾನ ಕಾರ್ಯಕ್ರಮ. ಇದೇ ಸಂದರ್ಭದಲ್ಲಿ ಅವರಿಗೆ ಗುಬ್ಬಿ ವೀರಣ್ಣನವರು ಸನ್ಮಾನ ಸಮಿತಿಯ ಪರವಾಗಿ ಸುವರ್ಣ ಪದಕವನ್ನು ನೀಡಿ 'ನಟ ಸಾರ್ವಭೌಮ' ಎಂಬ ಬಿರುದನ್ನು ನೀಡಿದ್ದರು. ವಿಡಿಯೋದಲ್ಲಿರುವ ಪ್ರಮುಖ ಅಂಶಗಳ ವಿವರ ಇಲ್ಲಿ ಪ್ರಸ್ತುತ ಪಡಿಸಲಾಗಿದೆ. ಮುಂದೆ ಓದಿ...

ಆಂಜನೇಯ ದೇವಸ್ಥಾನದಿಂದ ಮೆರವಣಿಗೆ
ಬೆಂಗಳೂರಿನ ಮೈಸೂರು ಬ್ಯಾಂಕ್ ವೃತ್ತದ ಬಳಿಯಿರುವ ಅಂಜನೇಯ ಸ್ವಾಮಿ ದೇವಸ್ಥಾನದಿಂದ ಅವೆನ್ಯೂ ರಸ್ತೆಯ ಮಾರ್ಗವಾಗಿ ಅಣ್ಣಾವ್ರ ಮೆರವಣಿಗೆ ಆರಂಭವಾಗಿತ್ತು. ಡಾ ರಾಜ್ ಕುಮಾರ್ ಬರುವ ದಾರಿಯಲ್ಲಿ ನೂರಾರು ಜನರು ಜಮಾಯಿಸಿದ್ದರು. ಅಣ್ಣಾವ್ರ ನೋಡಲು ರಸ್ತೆಯುದ್ದಕ್ಕೂ ನಿಂತಿದ್ದ ಅಭಿಮಾನಿಗಳು 'ರಾಜಕುಮಾರರಿಗೆ ಜಯವಾಗಲಿ' ಎಂದು ಘೋಷಣೆ ಹಾಕುತ್ತಿದ್ದರು.

ಇಡೀ ಚಿತ್ರರಂಗ ಪಾಲ್ಗೊಂಡಿತ್ತು
ತೆರೆದ ವಾಹನದಲ್ಲಿ ರಾಜ್ ಕುಮಾರ್ ಅವರ ಮೆರವಣಿಗೆ ಸಾಗಿತ್ತು. ಮಂಗಳವಾದ್ಯಗಳೊಂದಿಗೆ ಸ್ವಾಗತ. ಈ ಸಂದರ್ಭದಲ್ಲಿ ಹಾಸ್ಯಚಕ್ರವರ್ತಿ ನರಸಿಂಹ ರಾಜು, ಬಾಲಕೃಷ್ಣರು ರಾಜ್ ಕುಮಾರ್ ಪಕ್ಕದಲ್ಲಿದ್ದರು. ಲೀಲಾವತಿ, ಜಯಂತಿ, ಭಾರತಿ, ಕಲ್ಪನಾ, ಕಲ್ಯಾಣ್ ಕುಮಾರ್ ಸೇರಿದಂತೆ ಅಂದಿನ ಕಲಾವಿದರು ಪಾಲ್ಗೊಂಡಿದ್ದರು. ನಿರ್ಮಾಪಕ, ನಿರ್ದೇಶಕರು ಜೊತೆಯಲ್ಲಿ ಹೆಜ್ಜೆ ಹಾಕಿದ್ದರು.

ಕಂಠೀರವ ಕ್ರೀಡಾಂಗಣದಲ್ಲಿ ಸಮಾರಂಭ
ಅವೆನ್ಯೂ ರಸ್ತೆ ಮಾರ್ಗವಾಗಿ ಕೆಆರ್ ಮಾರುಕಟ್ಟೆ ತಲುಪಿ ಟೌನ್ಹಾಲ್ ಮೂಲಕ ಕಂಠೀರವ ಕ್ರೀಡಾಂಗಣ ತಲುಪಿತು. ಅದಾಗಲೇ ಸಾವಿರಾರು ಜನರು ಅಲ್ಲಿ ಜಮಾಯಿಸಿದ್ದರು. ವೇದಿಕೆ ನಿರ್ಮಾಣವಾಗಿತ್ತು. ವೇದಿಕೆಗೆ ಆಗಮಿಸಿದ ರಾಜ್ ಕುಮಾರ್ ಅವರಿಗೆ ಗಣ್ಯರು ಸ್ವಾಗತಿಸಿದರು. ಶ್ರೀಮಂತಿ ಜಯಮ್ಮ ಅವರಿಂದು ಪ್ರಾರ್ಥನೆ ಗೀತೆ. ಅಂದಿನ ಖ್ಯಾತ ಚಿತ್ರೋಧ್ಯಮಿಗಳಾದ ವೀರಾಸ್ವಾಮಿ, ಬಿಆರ್ ಪಂತುಲು, ಆರ್ ನಾಗೇಂದ್ರರಾಯರು, ರತ್ನಂ ಅಯ್ಯರ್, ವೈವಿ ರಾವ್, ಬಾಲಕೃಷ್ಣ, ನರಸಿಂಹ ರಾಜು, ನಟ ಕಲ್ಯಾಣ್ ಕುಮಾರ್, ನಟಿಯರಾದ ಲೀಲಾವತಿ, ಜಯಂತಿ, ಭಾರತಿ, ಆರತಿ, ಕಲ್ಪನಾ ಹಾರ ಹಾಕಿ ಶುಭಕೋರಿದರು.

ನಟಸಾರ್ವಭೌಮ ಬಿರುದು ನೀಡಿದ್ರು
ಈ ವೇದಿಕೆಯಲ್ಲಿ ನೂರು ಸಿನಿಮಾ ಪೂರೈಸಿದ ಹಿನ್ನೆಲೆ ಗುಬ್ಬಿ ವೀರಣ್ಣನವರು ಸನ್ಮಾನ ಸಮಿತಿಯ ಪರವಾಗಿ ಸುವರ್ಣ ಪದಕವನ್ನು ನೀಡಿ 'ನಟ ಸಾರ್ವಭೌಮ' ಎಂಬ ಬಿರುದನ್ನು ನೀಡಿ ಗೌರವಿಸಿದರು.
ವಿಡಿಯೋ ನೋಡಲು ಈ ಲಿಂಕ್ ಕ್ಲಿಕ್ ಮಾಡಿ


Click it and Unblock the Notifications











