ರಾಜಮೌಳಿ ತಂದೆ ಬರೆದ ಕಥೆಯಲ್ಲಿ ಅಣ್ಣಾವ್ರು- ಶಿವಣ್ಣ ಯಾಕೆ ನಟಿಸೋಕೆ ಸಾಧ್ಯವಾಗಲಿಲ್ಲ?
ಖ್ಯಾತ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಹಲವು ಹಿಟ್ ಸಿನಿಮಾಗಳನ್ನು ಕಟ್ಟಿಕೊಟ್ಟಿದ್ದಾರೆ. ಕನ್ನಡ ಮಾತ್ರವಲ್ಲದೇ ಬಾಲಿವುಡ್ ಅಂಗಳದಲ್ಲಿ ಕೂಡ ಸದ್ದು ಮಾಡಿ ಬಂದವರು. ಕನ್ನಡದಲ್ಲಿ ವಿಷ್ಣುವರ್ಧನ್, ಅಂಬರೀಶ್ ಜೊತೆ ಸಿನಿಮಾ ಮಾಡಿ ಗೆದ್ದಿದ್ದರು. 'ಬಂಧನ', 'ಅಂತ', 'ಸಿಂಹದ ಮರಿಸೈನ್ಯ', 'ಮುತ್ತಿನಹಾರ', 'ಭೂಮಿ ತಾಯಿಯ ಚೊಚ್ಚಲ ಮಗ' ರೀತಿಯ ಅದ್ಭುತ ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ. ಆದರೆ ಅಣ್ಣಾವ್ರ ಜೊತೆ ಸಿನಿಮಾ ಮಾಡುವ ಕನಸು ಕೈಗೂಡಲೇ ಇಲ್ಲ.
ಇವತ್ತಿಗೂ ಡಾ. ರಾಜ್ಕುಮಾರ್(ಎಐ ತಂತ್ರಜ್ಞಾನ ಬಳಸಿ) ಜೊತೆ ಸಿನಿಮಾ ಮಾಡುವ ಆಸೆ ಸಿಂಗ್ ಬಾಬು ಅವರಿಗಿದೆ. ಚಿಕ್ಕಂದಿನಿಂದ ಅಣ್ಣಾವ್ರನ್ನು ರಾಜೇಂದ್ರಸಿಂಗ್ ಬಾಬು ನೋಡಿ ಬೆಳೆದಿದ್ದರು. ಶಂಕರ್ ಸಿಂಗ್ ಹಾಗೂ ದೊಡ್ಮನೆ ನಡುವೆ ಉತ್ತಮ ಒಡನಾಟ ಇತ್ತು. ಡಾ. ರಾಜ್ ಜೊತೆ ಮೂರ್ನಾಲ್ಕು ಸಿನಿಮಾಗಳನ್ನು ಮಾಡಲು ಮಾತುಕತೆ ನಡೆದಿತ್ತು. ಅವರು ಕೂಡ ನಟಿಸೋಕೆ ಒಪ್ಪಿದ್ದರು. ಒಂದೆರಡು ಕಥೆ ಕೂಡ ಕೇಳಿದ್ದರು. ಆದರೂ ಯಾಕೋ ಆ ಅವಕಾಶ ಸಿಗಲೇ ಇಲ್ಲ ಎಂದು ವಿಶ್ವವಾಣಿ ಟಿವಿ ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ರಾಜೇಂದ್ರ ಸಿಂಗ್ ಬಾಬು ಹೇಳಿದ್ದಾರೆ.

ವಿಜಯ್ ಸಾಸನೂರು ಬರೆದ 'ಯುದ್ಧ' ಕಾದಂಬರಿ ಆಧರಿಸಿ ಸಿನಿಮಾ ಮಾಡಲು ರಾಜೇಂದ್ರ ಸಿಂಗ್ ಬಾಬು ಮನಸ್ಸು ಮಾಡಿದ್ದರು. ಆ ಚಿತ್ರದಲ್ಲಿ ಡಾ. ರಾಜ್ಕುಮಾರ್, ಅಂಬರೀಶ್, ವಿಷ್ಣುವರ್ಧನ್, ಶಂಕರ್ ನಾಗ್ ಹೀಗೆ ನಾಲ್ಕು ಜನ ನಟಿಸಬೇಕಿತ್ತು. "ಸ್ಕ್ರಿಪ್ಟ್ ಕೂಡ ಸಿದ್ಧವಾಗಿ ಅಣ್ಣಾವ್ರಿಗೆ ಕಥೆ ಹೇಳಿದ್ದೆ. ಆದರೆ ಕಾರಣಾಂತರಗಳಿಂದ ಸಿನಿಮಾ ಮಾಡೋಕೆ ಸಾಧ್ಯವಾಗಲಿಲ್ಲ. ಒಬ್ಬ ಸ್ಕೂಲ್ ಟೀಚರ್, ಒಬ್ಬ ಇನ್ಸ್ಪೆಕ್ಟರ್, ಒಬ್ಬ ಲೇಬರ್ ಹಾಗೂ ವೀರಭದ್ರ ಎನ್ನುವ ಮತ್ತೊಂದು ಪಾತ್ರ ಇತ್ತು. ಎಲ್ಲರೂ ನಟಿಸೋಕೆ ಒಪ್ಪಿದ್ದರು. ಆದರೆ ಕೈಗೂಡಲಿಲ್ಲ. ಬಳಿಕ ಮತ್ತೊಂದು ಕಥೆ ಮಾಡಿದ್ದೆ. ಅದನ್ನು ಒಪ್ಪಿದ್ದರು. ಸ್ವಲ್ಪ ದಿನ ಬಿಟ್ಟು ಮಾಡೋಣ ಅಂದ್ರು. ಅದೇ ಕಥೆಯನ್ನು ದಿಲೀಪ್ ಕುಮಾರ್ ಅವರಿಗೆ ಹೇಳಿ ಸಿನಿಮಾ ಮಾಡಿದೆ" ಎಂದು ನೆನಪಿಸಿಕೊಂಡಿದ್ದಾರೆ.
ನಾಲ್ಕೈದು ಬಾರಿ ಅಣ್ಣಾವ್ರ ಜೊತೆ ಸಿನಿಮಾ ಮಾಡುವ ಪ್ರಯತ್ನ ಮಾಡಿದ್ದಾಗಿ ರಾಜೇಂದ್ರ ಸಿಂಗ್ ಬಾಬು ಹೇಳಿದ್ದಾರೆ. "ರಾಜಮೌಳಿ ತಂದೆ ವಿಜಯೇಂದ್ರ ಪ್ರಸಾದ್ ಒಂದು ಕಥೆ ಬರೆದಿದ್ದರು. ಆ ಚಿತ್ರದಲ್ಲಿ ರಾಜ್ಕುಮಾರ್, ಶಿವಣ್ಣ ಇಬ್ಬರೂ ನಟಿಸಬೇಕಿತ್ತು. ಮಾತುಕತೆ ನಡೆದಿತ್ತು. ಅಷ್ಟರಲ್ಲಿ ಅಣ್ಣಾವ್ರ ಕಿಡ್ನ್ಯಾಪ್ ಆಗಿತ್ತು. ಬಳಿಕ ಅವರು ಬಿಡುಗಡೆ ಆಗಿ ಬಂದರೂ ಬಹಳ ದಣಿದಿದ್ದರು. ಅದು ಆರ್ಮಿ ಆಫೀಸರ್ ಪಾತ್ರ. ಹಾಗಾಗಿ ಸಾಧ್ಯ ಆಗಲ್ಲ ಎಂದು ಕೈಬಿಟ್ಟೆವು" ಎಂದಿದ್ದಾರೆ.

ಅಣ್ಣಾವ್ರು ಹಾಗೂ ಶಿವಣ್ಣ ಕಾಂಬಿನೇಷನ್ ಮಾತ್ರವಲ್ಲ, ಅಣ್ಣಾವ್ರು- ಅಪ್ಪು ಕಾಂಬಿನೇಷನ್ ಸಿನಿಮಾ ಮಾಡಲು ಸಿಂಗ್ ಬಾಬು ಪ್ರಯತ್ನಿಸಿದ್ದರಂತೆ. "ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಬರೆದ ನಾಟಕ ಆಧರಿಸಿ ಆ ಸಿನಿಮಾ ಮಾಡಬೇಕಿತ್ತು. ಕಥೆ ಹೇಳಿ ಪುನೀತ್ ರಾಜ್ಕುಮಾರ್ ಕಾಸ್ಟ್ಯೂಮ್ ಡಿಸೈನ್ ಕೂಡ ಮಾಡಿಸಿಬಿಟ್ಟಿದ್ದೆವು. ಅಷ್ಟರಲ್ಲೇ ಅಣ್ಣಾವ್ರಿಗೆ ಹಾರ್ಟ್ ಸರ್ಜರಿ ಆಯಿತು. ಹೀಗೆ ಆ ಪ್ರಯತ್ನ ಕೂಡ ಕೈಗೂಡಲಿಲ್ಲ ಎಂದು ಸಿಂಗ್ ಬಾಬು ಮೆಲುಕು ಹಾಕಿದ್ದಾರೆ.
ಕರ್ನಾಟಕ ಮಾತ್ರವಲ್ಲ, ಪ್ರಪಂಚದಲ್ಲೇ ಅದ್ಭುತ ನಟ ಡಾ. ರಾಜ್ಕುಮಾರ್. ಹಾಗಾಗಿ ಅಂತವರ ಜೊತೆ ಕೆಲಸ ಮಾಡಲು ಸಾಧ್ಯವಾಗಲಿಲ್ಲ ಎನ್ನುವ ಬೇಸರ ಇವತ್ತಿಗೂ ಇದೆ. ನವರಸಗಳನ್ನು 100ಕ್ಕೆ 100ರಷ್ಟು ಅವರ ಅಭಿನಯದಲ್ಲಿ ನೋಡಬಹುದು. ಐತಿಹಾಸಿಕ, ಪೌರಾಣಿಕ, ಸಾಮಾಜಿಕ, ಕಾಮಿಡಿ ಸಿನಿಮಾಗಳಲ್ಲಿ ಅವರ ನಟನೆ ಮರೆಯೋಕೆ ಸಾಧ್ಯವಿಲ್ಲ.


Click it and Unblock the Notifications











