ಮಂಡಿಪೇಟೆಯಲ್ಲಿ ಮೂಟೆ ಹೊರುತ್ತಿದ್ದ ಶಿವಾಜಿ ಬಸ್ ಕಂಡೆಕ್ಟರ್ ಆಗಿದ್ದೇಗೆ? ಆ ದಿನಗಳನ್ನು ನೆನೆದ ರಜನಿಕಾಂತ್
ಸೂಪರ್ ಸ್ಟಾರ್ ರಜನಿಕಾಂತ್ ನಟನೆಯ 'ಕೂಲಿ' ಸಿನಿಮಾ ಬಿಡುಗಡೆಗೆ ಇನ್ನೆರಡು ದಿನ ಬಾಕಿಯಿದೆ. ಆಗಸ್ಟ್ 14ಕ್ಕೆ ವಿಶ್ವದಾದ್ಯಂತ ಸಿನಿಮಾ ತೆರೆಗಪ್ಪಳಿಸಲಿದೆ. ಇತ್ತೀಚೆಗೆ ಚೆನ್ನೈನಲ್ಲಿ ಚಿತ್ರದ ಆಡಿಯೋ ಲಾಂಚ್ ಕಾರ್ಯಕ್ರಮ ನಡೀತು. 40 ನಿಮಿಷಗಳ ಕಾಲ ತಲೈವಾ ಸಾಕಷ್ಟು ವಿಚಾರಗಳ ಬಗ್ಗೆ ವೇದಿಕೆಯಲ್ಲಿ ಮಾತನಾಡಿದ್ದರು. ಅದರಲ್ಲಿ ಬೆಂಗಳೂರು ದಿನಗಳನ್ನು ಮೆಲುಕು ಹಾಕಿದ್ದಾರೆ.
'ಕೂಲಿ' ಚಿತ್ರದಲ್ಲಿ ನಟಿಸಿರುವ ರಜನಿಕಾಂತ್ ಚಿತ್ರರಂಗ ಸೇರುವ ಮುನ್ನ ನಿಜ ಜೀವನದಲ್ಲಿ ಕೂಲಿಯಾಗಿ ಮೂಟೆ ಹೊತ್ತಿದ್ದರು. ಬೆಂಗಳೂರನ ಮಂಡಿಪೇಟೆಯಲ್ಲಿ 10 ಪೈಸೆಗೂ ಅಕ್ಕಿ ಮೂಟೆಗಳನ್ನು ಹೊತ್ತಿದ್ದರು. ಮೂಟೆಗಳನ್ನು ಗಾಡಿಗೆ ತುಂಬುವುದು, ಇಳಿಸುವುದು ಮಾಡಿದ್ದರು. ಆ ಘಟನೆಯನ್ನು ರಜನಿಕಾಂತ್ ನೆನಪಿಸಿಕೊಂಡಿದ್ದಾರೆ. ಹೀಗೆ ಕೂಲಿಯಾಗಿದ್ದವರು ದಿಢೀರನೆ ಬಿಟಿಎಸ್ ಬಸ್ ಕಂಡೆಕ್ಟರ್ ಆಗಿದ್ದು ಹೇಗೆ ಎನ್ನುವುದನ್ನು ವಿವರಿಸಿದ್ದಾರೆ.

ಬಡಕುಟುಂಬದಲ್ಲಿ ಹುಟ್ಟಿ ಬೆಳೆದವರು ಶಿವಾಜಿರಾವ್ ಗಾಯಕ್ವಾಡ್. ಗವಿಪುರಂ ಸರ್ಕಾರಿ ಶಾಲೆಯಲ್ಲಿ ಓದಿದ್ದರು. "ನಮ್ಮಣ್ಣನಿಗೆ ನನ್ನನ್ನು ಚೆನ್ನಾಗಿ ಓದಿಸುವ ಆಸೆ. ಅವರಿಗೆ 90 ರೂ. ಸಂಬಳ. ಕಷ್ಟಪಟ್ಟು ನಮ್ಮನ್ನೆಲ್ಲಾ ಸಾಕಿ ಸಲಹುತ್ತಿದ್ದರು. ನನ್ನನ್ನು ಖಾಸಗಿ ಶಾಲೆಗೆ ಸೇರಿಸಿದ್ದರು. ನನಗೆ ಓದು ತಲೆಗೆ ಹತ್ತಲಿಲ್ಲ. ಒಮ್ಮೆ ಕಾಲೇಜಿನಲ್ಲಿ ಎಕ್ಸಾಂ ಫೀಸ್ 120 ರೂ. ಕಟ್ಟಬೇಕಿತ್ತು. ನಾನು ಪಾಸ್ ಆಗಲ್ಲ ಎಂದು ಗೊತ್ತಿತ್ತು. ಸುಮ್ನೆ ಹಣ ವ್ಯರ್ಥ ಅಂತ ಚೆನ್ನೈಗೆ ಓಡಿ ಬಂದಿದ್ದೆ. ಚಿತ್ರರಂಗದಲ್ಲಿ ಕೊನೆ ಪಕ್ಷ ಲೈಟ್ಮ್ಯಾನ್ ಆಗಿಬಿಡೋಣ ಅಂದುಕೊಂಡೆ. ಅದು ಆಗಲಿಲ್ಲ, ಸರ್ವರ್ ಕೆಲಸ ಪ್ರಯತ್ನಿಸಿದೆ ಸಿಗಲಿಲ್ಲ. ಕೊನೆಗೆ ಹಣ ಖಾಲಿಯಾಗಿ ಬೇರೆ ವಿಧಿಯಿಲ್ಲದೇ ಮನೆಗೆ ವಾಪಸ್ ಹೋದೆ" ಎಂದು ಆ ದಿನಗಳ ಬಗ್ಗೆ ಮಾತನಾಡಿದ್ದಾರೆ.
ಮನೆಗೆ ಹೋದರೆ ಅಪ್ಪ ಚೆನ್ನಾಗಿ ಹೊಡೆಯುತ್ತಾರೆ ಎಂದುಕೊಂಡೆ. ಆದರೆ ಎಲ್ಲರೂ ಸೈಲೆಂಟ್ ಆಗಿ ಇದ್ದರು. ಅಷ್ಟರಲ್ಲಿ ತಂದೆ ತಮ್ಮ ನಿರ್ಧಾರ ಅಣ್ಣನ ಬಳಿ ಹೇಳಿದ್ದರು. "ಅಪ್ಪ ಹೇಳಿದ್ರು, ಮಂಡಿಪೇಟೆಯಲ್ಲಿ ನೀನು ಕೂಲಿ ಕೆಲಸಕ್ಕೆ ಹೋಗಬೇಕಂತೆ, ಅಲ್ಲಿ ಮೂಟೆ ಹೊರಬೇಕಂತೆ, ಅಪ್ಪ ಖಡಕ್ ಆಗಿ ಹೇಳಿಬಿಟ್ಟಿದ್ರು. ಅಲ್ಲಿ ಮುನಿಸ್ವಾಮಿ, ಗಣೇಶ್, ಶೇಖರ್, ರೆಡ್ಡಿ ಎಂದು ನಾಲ್ವರು ಕೂಲಿಗಳು. ಒಂದು ಲಾರಿ ಅಕ್ಕಿ ಮೂಟೆ ಬಂದರೆ 5 ಜನ ಇಳಿಸಬೇಕು. ಮೂಟಿಗೆ 10 ಪೈಸೆ. 100 ಮೂಟೆಗೆ 10 ರೂ. ಒಬ್ಬೊಬ್ಬರಿಗೆ 2 ರೂ. ಸಿಗುತ್ತಿತ್ತು. ಒಮ್ಮೊಮ್ಮೆ ಎರಡು ಲೋಡ್, ಕೆಲವೊಮ್ಮೆ 3 ಲೋಡ್ ಬರ್ತಿತ್ತು. ಹೀಗೆ ಮೂಟೆ ಹೊರುತ್ತಿದ್ದೆ" ಎಂದು ರಜನಿಕಾಂತ್ ತಮ್ಮ ಕೂಲಿ ದಿನಗಳನ್ನು ನೆನಪಿಸಿಕೊಂಡಿದ್ದಾರೆ.

ಕೂಲಿಯಾಗಿ ಮೂಟೆ ಹೊರುತ್ತಿದ್ದ ಸಮಯದಲ್ಲಿ ಕಾಲೇಜು ಸಹಪಾಠಿ ಒಬ್ಬ ನನ್ನನ್ನು ನೋಡಿ ನಕ್ಕಿದ್ದ. ಆ ದಿನ ನಾನು ಬಹಳ ಅತ್ತುಬಿಟ್ಟಿದ್ದೆ ಎಂದು ರಜನಿಕಾಂತ್ ಭಾವುಕರಾಗಿದ್ದಾರೆ. "ಒಮ್ಮೆ 3 ಮೂಟೆ ಟೆಂಪೋಗೆ ತುಂಬಬೇಕು ಅಂದ್ರು. ತುಂಬಿದ ಬಳಿಕ ಆ ವ್ಯಕ್ತಿ ಟಿಪ್ಸ್ ತಗೋ ಎಂದು 2 ರೂ. ಕೈಗೆ ಕೊಟ್ಟ. ಈ ಧ್ವನಿ ಎಲ್ಲೋ ಕೇಳಿದ್ದೀನಿ ಎಂದುಕೊಂಡೆ. ಅದು ಮರಿಸ್ವಾಮಿ. ನಾನು ಕಾಲೇಜಿನಲ್ಲಿ ಅವನನ್ನು ಬಹಳ ಗೋಳು ಹುಯ್ದುಕೊಂಡಿದ್ದೆ. ಆದರೆ ಅವತ್ತು ನನ್ನನ್ನು ನೋಡಿ ಕಾಲೇಜಿನಲ್ಲಿ ಏನೆಲ್ಲಾ ಆಟ ಆಡಿದ್ದೆ. ನಿನಗೆ ಸರಿಯಾದ ಗತಿ ಬಂದು ಎನ್ನುವಂತೆ ನೋಡಿದ್ದ. ಆ ದಿನ ಬಹಳ ಅತ್ತಿದ್ದೆ" ಎಂದು ರಜನಿಕಾಂತ್ ವಿವರಿಸಿದ್ದಾರೆ.
ನಮ್ಮ ತಂದೆ ನನ್ನ ಬಗ್ಗೆ ಊರೆಲ್ಲಾ ಹೇಳಿಕೊಂಡು ಬರ್ತಿದ್ರು, ಇವನು ಹಣ ತಗೊಂಡು ಮದ್ರಾಸ್ಗೆ ಓಡಿ ಹೋಗಿದ್ದ. ಈಗ ಕೂಲಿ ಕೆಲಸ ಮಾಡುತ್ತಿದ್ದಾನೆ ಎನ್ನುತ್ತಿದ್ದರು. ನಮ್ಮ 2ನೇ ಅಣ್ಣನ ಮದುವೆ ನಡೀತು. ಅವರ ಮಾವ ಬಿಟಿಎಸ್ ಬಸ್ ಕಂಡೆಕ್ಟರ್ ಆಗಿದ್ದರು. ಆ ಮದುವೆ ಸಮಯದಲ್ಲಿ ನಾನು ಕೂಲಿ ಕೆಲಸ ಮಾಡುತ್ತಿರುವ ವಿಚಾರ ಗೊತ್ತಾಗಿ ನಮ್ಮ ಅಣ್ಣನ ಮಾವ "ಅವನು ಎಸ್ಎಸ್ಎಲ್ಸಿ ಓದಿದ್ದಾನೆ. ಕೂಲಿ ಕೆಲಸ ಬೇಡ. ಕಂಡೆಕ್ಟರ್ ಲೈಸೆನ್ಸ್ ಮಾಡಿಕ್ಕೊಳ್ಳಲಿ ಅಂದ್ರು. ಆಗ ಬಿಟಿಎಸ್ ಬಸ್ ಕಂಡೆಕ್ಟರ್ ಕೆಲಸ ಸಿಕ್ತು. ಅಲ್ಲಿ ರಾಜ್ಬಹದ್ದೂರ್ ಸಹಾಯದಿಂದ ಚೆನ್ನೈಗೆ ಬಂದು ಆಕ್ಟಿಂಗ್ ಕಲಿತೆ. ಮುಂದೆ ಕೆ. ಬಾಲಚಂದರ್ ಕಣ್ಣಿಗೆ ಬಿದ್ದು ಚಿತ್ರರಂಗಕ್ಕೆ ಬಂದೆ" ಎಂದು ರಜನಿಕಾಂತ್ ವಿವರಿಸಿದ್ದಾರೆ.


Click it and Unblock the Notifications











