ಸಾಗರದ ರೈಲು ನಿಲ್ದಾಣದಲ್ಲಿ 'ಆಕಸ್ಮಿಕ' ಶೂಟಿಂಗ್: ತಮ್ಮೂರಿನಲ್ಲಿ ಅಣ್ಣಾವ್ರ ನೋಡಿ ಏನಂದ್ರು ಯುವಕರು?
ಅಣ್ಣಾವ್ರನ್ನು ಕನ್ನಡಿಗರು ಸುಮ್ ಸುಮ್ನೆ ವರನಟ ಅಂತ ಕರೆದಿಲ್ಲ. ಸಿನಿಪ್ರಿಯರಿಗೆ ಅವರ ಸಿನಿಮಾಗಳು ಇಂದಿಗೂ ಅಷ್ಟೇ ಕ್ರೇಜ್. ಅದೆಷ್ಟೇ ಹಳೆಯ ಸಿನಿಮಾ ಆಗಿದ್ದರೂ, ಅದನ್ನು ನೋಡಿದರೆ ಇಂದಿಗೂ ಮೈ ಝುಂ ಅನ್ನುತ್ತೆ. ಇಂತಹ ಅದೆಷ್ಟೋ ಸಿನಿಮಾಗಳು ಇಂದಿಗೂ ಡಾ.ರಾಜ್ಕುಮಾರ್ ಅಭಿಮಾನಿಗಳನ್ನು ರಂಜಿಸುತ್ತಲೇ ಇವೆ.
ಇಂದಿನ ಸೋಶಿಯಲ್ ಮೀಡಿಯಾ ಜಮಾನದಲ್ಲಿ ಅಣ್ಣಾವ್ರ ಸಿನಿಮಾಗಳ ದೃಶ್ಯಗಳಿಗೆ ಕ್ರೇಜ್ ಹೆಚ್ಚಾಗಿದೆ. ಡಾ.ರಾಜ್ಕುಮಾರ್ ನಟಿಸಿದ ಕೆಲವು ಸಿನಿಮಾದ ದೃಶ್ಯಗಳು ಒಂದಲ್ಲ ಒಂದು ಕಾರಣಕ್ಕೆ ವೈರಲ್ ಆಗುತ್ತಲೇ ಇರುತ್ತವೆ. ಇಲ್ಲ ಯಾರನ್ನಾದರೂ ಟ್ರೋಲ್ ಮಾಡುವುದಕ್ಕೆ ಅಣ್ಣಾವ್ರ ಸಿನಿಮಾದ ದೃಶ್ಯಗಳನ್ನು ಬಳಸಿಕೊಳ್ಳುತ್ತಲೇ ಇರುತ್ತಾರೆ.

ರಾಜ್ಕುಮಾರ್ ವೃತ್ತಿ ಬದುಕಿನ ಕೊನೆಯ ದಿನಗಳಲ್ಲಿ ಮೆಗಾ ಬ್ಲಾಕ್ಬಸ್ಟರ್ ಸಿನಿಮಾ ಕೊಟ್ಟ 'ಆಕಸ್ಮಿಕ'. ಈ ಸಿನಿಮಾದ ಕೆಲವು ದೃಶ್ಯಗಳನ್ನು ಶಿವಮೊಗ್ಗದಲ್ಲಿ ಚಿತ್ರೀಕರಣ ಮಾಡಲಾಗಿತ್ತು. ಅದರಲ್ಲೂ ಸಾಗರ, ತಾಳುಗುಪ್ಪ ಹಾಗೂ ಜೋಗ ಜಲಪಾತದಲ್ಲಿ ಚಿತ್ರೀಕರಣ ಮಾಡಲಾಗಿತ್ತು. ಆ ದೃಶ್ಯಗಳನ್ನು ಅಲ್ಲಿನ ಯುವಕರು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡುತ್ತಿದ್ದಾರೆ. ಅದಕ್ಕೆ ಮಸ್ತ್ ಕಾಮೆಂಟ್ಗಳು ಕೂಡ ಹರಿದು ಬರುತ್ತಿವೆ.
'ಆಕಸ್ಮಿಕ' ಸಿನಿಮಾ ಶುರುವಾಗಿದ್ದೇ ಒಂದು 'ಆಕಸ್ಮಿಕ'. ಅಣ್ಣಾವ್ರಿಗೆ 64 ವರ್ಷವಿದ್ದಾಗ ಈ ಸಿನಿಮಾದಲ್ಲಿ ಹೀರೋ ಆಗಿ ನಟಿಸಿದ್ದರು. ಟಿ ಎಸ್ ನಾಗಾಭರಣ ನಿರ್ದೇಶಿಸಿದ ಈ ಸಿನಿಮಾ ಬಾಕ್ಸಾಫೀಸ್ ಅನ್ನೇ ಉಡಾಯಿಸಿಬಿಟ್ಟಿತ್ತು. ಬರೋಬ್ಬರು 25 ವಾರ ಚಿತ್ರಮಂದಿರವನ್ನು ಬಿಟ್ಟು ಅಲುಗಾಡಿರಲಿಲ್ಲ. ಪೊಲೀಸ್ ಅಧಿಕಾರಿಯಾಗಿ ಅಣ್ಣಾವ್ರ ನಟನೆಗೆ ಇಡೀ ಕರ್ನಾಟಕವೇ ಮೆಚ್ಚಿಕೊಂಡಾಡಿತ್ತು.
ಅಣ್ಣಾವ್ರ ಜೊತೆ ಸ್ಟಾರ್ ನಟಿಯರಾದ ಗೀತಾ, ಮಾಧವಿ ನಾಯಕಿಯರಾಗಿ ನಟಿಸಿದ್ದರು. ಹಂಸಲೇಖ ಸಂಗೀತ ಕನ್ನಡ ಚಿತ್ರರಂಗದಲ್ಲಿ ಹೊಸ ದಾಖಲೆಯನ್ನೇ ಬರೆದಿತ್ತು. ಅದರಲ್ಲೂ "ಹುಟ್ಟಿದರೆ ಕನ್ನಡ ನಾಡಿನಲ್ಲಿ ಹುಟ್ಟಬೇಕು" ಸಾಂಗ್ ಇಂದಿಗೂ ಕನ್ನಡಿಗರ ಎಮೋಷನ್ ಅನ್ನು ಟಚ್ ಮಾಡುವ ಹಾಡಾಗಿದೆ. ಇದರೊಂದಿಗೆ ಆಗುಂಬೆಯ ಪ್ರೇಮ ಸಂಜೆಯ ಹಾಡು ಕೂಡ ಸೂಪರ್ ಹಿಟ್ ಆಗಿತ್ತು.

ಡಾ.ರಾಜ್ಕುಮಾರ್ ನಟಿಸಿದ 'ಆಕಸ್ಮಿಕ' ಸಿನಿಮಾದ ಕೆಲವು ದೃಶ್ಯಗಳನ್ನು ಸಾಗರ ಹಾಗೂ ತಾಳಗುಪ್ಪದ ರೈಲು ನಿಲ್ದಾಣಗಳಲ್ಲಿ ಚಿತ್ರೀಕರಣ ಮಾಡಲಾಗಿದೆ. ಇದೇ ದೃಶ್ಯಗಳನ್ನು ಅಲ್ಲಿನ ಯುವಕರು ಇನ್ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಅಂದಿನ ಕಾಲದಲ್ಲಿ ರೈಲ್ವೆ ನಿಲ್ದಾಣ ಹೇಗಿತ್ತು ಅಂತ ನೆನಪಿಸಿಕೊಂಡಿದ್ದಾರೆ.
ಅಧ್ಯಕ್ಷ ಸಂದೇಶ್ ಎನ್ನುವವರು ತನ್ನ ಇನ್ಸ್ಟಾಗ್ರಾಂ ಖಾತೆಯಲ್ಲಿ 'ಆಕಸ್ಮಿಕ' ಸಿನಿಮಾದ ದೃಶ್ಯವನ್ನು ಶೇರ್ ಮಾಡಿಕೊಂಡಿದ್ದಾರೆ. "1993 ರ ಡಾ ರಾಜ್ ಕುಮಾರ್ ಅವರ ಆಕಸ್ಮಿಕ ಚಿತ್ರದಲ್ಲಿ ಸಾಗರ ಹಾಗೂ ತಾಳಗುಪ್ಪ ರೈಲ್ವೆ ನಿಲ್ದಾಣದ ದೃಶ್ಯ" ಎಂದು ಅವರು ಶೇರ್ ಮಾಡಿಕೊಂಡಿದ್ದರು. ಅದಕ್ಕೆ ಸಾಗರದ ಮಂದಿ ಶೂಟಿಂಗ್ನ ಆ ಕ್ಷಣಗಳನ್ನು ನೆನಪಿಸಿಕೊಂಡಿದ್ದಾರೆ.
ನೆಟ್ಟಿಗರೊಬ್ಬರು "ನಾನು 5ನೇ ತರಗತಿ ಇದ್ದಾಗ ಈ ಸಿನಿಮಾದ ಶೂಟಿಂಗ್ ನೋಡುವುಕ್ಕೆ ಹೋಗಿದ್ದೆ" ಎಂದು ಆ ದೃಶ್ಯವನ್ನು ನೆನಪಿಸಿಕೊಂಡಿದ್ದಾರೆ. ಇನ್ನೊಬ್ಬರು "ಈ ಫಿಲ್ಮ್ ಶೂಟಿಂಗ್ ಆಗುವಾಗ ನಾನು 3ನೇ ತರಗತಿಗೆ ಹೋಗ್ತಿದ್ದೆ" ಎಂದು ಹೇಳಿಕೊಂಡಿದ್ದಾರೆ. ಮತ್ತೊಬ್ಬರು "ಹೊಸೂರು ಗೇಟ್, ಆನಂದಪುರ, ಕುಂಸಿ, ಅರಸಾಳು ಎಲ್ಲಾ ಇದೆ" ಎಂದು ಕಾಮೆಂಟ್ ಮಾಡಿದ್ದಾರೆ. ಒಟ್ಟಾರೆ, ಈಗ ಮತ್ತೆ ಆಕಸ್ಮಿಕ ಸಿನಿಮಾ ದೃಶ್ಯ ಇನ್ಸ್ಟಾಗ್ರಾಂನಲ್ಲಿ ಹರಿದಾಡುತ್ತಿದೆ.


Click it and Unblock the Notifications











