ತಿರುಪತಿಯಲ್ಲಿ ನೇರ ದರ್ಶನಕ್ಕೆ ಎನ್ಟಿಆರ್ ಅವಕಾಶ ಮಾಡಿಕೊಟ್ಟರೂ ಅಣ್ಣಾವ್ರು ಬೇಡ ಎಂದಿದ್ದೇಕೆ?
ನಟಸಾರ್ವಭೌಮ ಡಾ. ರಾಜ್ಕುಮಾರ್ ಹಾಗೂ ತೆಲುಗು ನಟ ಎನ್ಟಿಆರ್ ಆತ್ಮೀಯ ಸ್ನೇಹಿತರಾಗಿದ್ದರು. ಕನ್ನಡ ಕಣ್ಮಣಿಯನ್ನು ನಂದಮೂರಿ ತಾರಕರಾಮರಾವ್ ತಮ್ಮಡು(ತಮ್ಮ) ಎಂದು ಕರೆಯುತ್ತಿದ್ದರು. ಇಬ್ಬರ ನಡುವಿನ ಸ್ನೇಹ ಸಾಕಷ್ಟು ಸಂದರ್ಭಗಳಲ್ಲಿ ಜಗಜ್ಜಾಹೀರಾಗಿತ್ತು. ಆರಂಭದಲ್ಲಿ ಇಬ್ಬರೂ ಒಟ್ಟೊಟ್ಟಿಗೆ ಸಿನಿಮಾಗಳಲ್ಲಿ ನಟಿಸಿದ್ದರು.
ಏಕಕಾಲದಲ್ಲಿ ಕನ್ನಡ ಹಾಗೂ ತೆಲುಗಿನಲ್ಲಿ ನಿರ್ಮಾಣವಾಗುತ್ತಿದ್ದ ಸಿನಿಮಾಗಳಲ್ಲಿ ಅಣ್ಣಾವ್ರು ಹಾಗೂ ಎನ್ಟಿಆರ್ ನಟಿಸುತ್ತಿದ್ದರು. 'ಸತ್ಯ ಹರಿಶ್ಚಂದ್ರ' ಚಿತ್ರ ಕನ್ನಡದಲ್ಲಿ ಗೆದ್ದು ತೆಲುಗಿನಲ್ಲಿ ಅಷ್ಟಾಗಿ ಸದ್ದು ಮಾಡದೇ ಇದ್ದಾಗ ಇನ್ನು ಮುಂದೆ ನಾವಿಬ್ಬರೂ ಹೀಗೆ ಒಟ್ಟಿಗೆ ನಟಿಸುವುದು ಬೇಡ ಎಂದು ಎನ್ಟಿಆರ್ ಹೇಳಿದ್ದರು. ಆ ಬಳಿಕ ಇಬ್ಬರೂ ಹೀಗೆ ನಟಿಸಲಿಲ್ಲ.

ಡಾ. ರಾಜ್ಕುಮಾರ್ ಹಾಗೂ ಎನ್ಟಿಆರ್ ಸ್ನೇಹ ಸಂಬಂಧ ಎಂಥದ್ದು ಎನ್ನುವುದಕ್ಕೆ ಸಾಕಷ್ಟು ಉದಾಹರಣೆಗಳಿವೆ. 'ಸಾಕು ಮಗಳು' ಚಿತ್ರ ಏಕಕಾಲಕ್ಕೆ ಕನ್ನಡ ಹಾಗೂ ತೆಲುಗಿನಲ್ಲಿ ನಿರ್ಮಾಣವಾಗಿತ್ತು. ಕನ್ನಡದಲ್ಲಿ ಅಣ್ಣಾವ್ರು ಕಿರಿಯ ನಟಿಯ ಕಾಲಿಗೆ ನಮಸ್ಕರಿಸುವ ಸನ್ನಿವೇಶ ಇತ್ತು. ಮರು ಮಾತನಾಡದೇ ಅಣ್ಣಾವ್ರು ಅದನ್ನು ಮಾಡಿದ್ದರು. ಇದೇ ಸನ್ನಿವೇಶದಲ್ಲಿ ನಟಿಸಲು ಹೇಳಿದಾಗ ಎನ್ಟಿಆರ್ ಒಪ್ಪಿರಲಿಲ್ಲ. 'ರಾಜ್ಕುಮಾರ್ ಗ್ರೇಟ್ ಅವ್ರು ಮಾಡ್ತಾರೆ, ನಾನು ಮಾಡಲ್ಲ' ಎಂದುಬಿಟ್ಟಿದ್ದರಂತೆ.
ಅಣ್ಣಾವ್ರು ಹಾಗೂ ಎನ್ಟಿಆರ್ ಬಗ್ಗೆ ಹಾಲು ಜೇನು ರಾಮ್ಕುಮಾರ್ ಇಂಟ್ರೆಸ್ಟಿಂಗ್ ಸಂಗತಿಗಳನ್ನು ಹಂಚಿಕೊಂಡಿದ್ದಾರೆ. "ಎನ್ಟಿಆರ್ ಆಂಧ್ರದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದಾಗ ಡಾ. ರಾಜ್ಕುಮಾರ್ ಅವರನ್ನು ಟಿಟಿಡಿ ಸದಸ್ಯರನ್ನಾಗಿ ನೇಮಕ ಮಾಡಿದ್ದರು. ಹಾಗಾಗಿ ಅಣ್ಣಾವ್ರಿಗೆ ನೇರ ದರ್ಶನಕ್ಕೆ ಕೂಡ ಅವಕಾಶ ಸಿಕ್ಕಿತ್ತು. ಟಿಟಿಡಿ ಸದಸ್ಯತ್ವ ಒಪ್ಪಿಕೊಂಡರೂ ಉಚಿತ ನೇರ ದರ್ಶನಕ್ಕೆ ನಿರಾಕರಿಸಿದ್ದರು. ಒಮ್ಮೆ ಅಣ್ಣಾವ್ರು ನಾಲ್ಕೈದು ಗಂಟೆ ಕ್ಯೂನಲ್ಲಿ ದರ್ಶನಕ್ಕೆ ನಿಂತಿದ್ದರು. ಭಕ್ತರು ಅಣ್ಣಾವ್ರನ್ನು ನೋಡಿ ನಿಮ್ಮನ್ನು ನೋಡಿದರೆ ತಿಮ್ಮಪ್ಪನನ್ನೇ ನೋಡಿದಂತಾಗುತ್ತದೆ, 'ಶ್ರೀನಿವಾಸ ಕಲ್ಯಾಣ' ಚಿತ್ರದಲ್ಲಿ ನಿಮ್ಮ ಅಭಿನಯ ಮರೆಯಲು ಸಾಧ್ಯವಿಲ್ಲ ಎಂದಿದ್ದರಂತೆ. ಆಗ ಅಣ್ಣಾವ್ರು, ನಾನಲ್ಲ ದೇವರು, ನೀವು ನಮ್ಮ ಅಭಿಮಾನಿ ದೇವರುಗಳು ಅಂತ ಕರೆದಿದ್ದರು" ಎಂದು ನೆನಪಿಸಿಕೊಂಡಿದ್ದಾರೆ.
"ಎಸ್. ಎಸ್ ಸುಬ್ಬಲಕ್ಷ್ಮಿ ಅವರನ್ನು ಬಿಟ್ಟರೆ ತಿರುಪತಿ ದೇವಸ್ಥಾನದ ಒಳಗೆ ಹಾಡು ಹಾಡುವ ಅವಕಾಶ ಅಣ್ಣಾವ್ರಿಗೆ ಮಾತ್ರ ಸಿಕ್ಕಿತ್ತು. ಇದಕ್ಕೂ ಕಾರಣ ಎನ್ಟಿಆರ್" ಎಂದು ಹಾಲು ಜೇನು ರಾಮ್ಕುಮಾರ್ ಇಂಟ್ರೆಸ್ಟಿಂಗ್ ಸಂಗತಿಯನ್ನು ಬಿಚ್ಚಿಟ್ಟಿದ್ದಾರೆ.
'ಭೂಕೈಲಾಸ' ಚಿತ್ರ ಕನ್ನಡ ಹಾಗೂ ತೆಲುಗಿನಲ್ಲಿ ಏಕಕಾಲಕ್ಕೆ ನಿರ್ಮಾಣವಾಗಿತ್ತು. ಕನ್ನಡದಲ್ಲಿ ರಾವಣನಾಗಿ ಅಣ್ಣಾವ್ರು ಅದೇ ರೀತಿ ತೆಲುಗಿನಲ್ಲಿ ರಾವಣನಾಗಿ ಎನ್ಟಿಆರ್ ನಟಿಸಿದ್ದರು. ಹಾಲು ಜೇನು ರಾಮ್ಕುಮಾರ್ ಮಾತನಾಡಿ "ಸಾಮಾನ್ಯವಾಗಿ ಮೊದಲು ತೆಲುಗು ಸಿನಿಮಾ ಸನ್ನಿವೇಶಗಳನ್ನು ಚಿತ್ರೀಕರಿಸಿದ ಬಳಿಕ ಕನ್ನಡದ ಸನ್ನಿವೇಶಗಳನ್ನು ಸೆರೆ ಹಿಡಿಯುತ್ತಿದ್ದರು. ಆದರೆ ಒಮ್ಮೆ ಕಾರಣಾಂತರಗಳಿಂದ ಮೊದಲು ಅಣ್ಣಾವ್ರು ನಟಿಸುವಂತಾಯಿತು. ಅವರ ಅಭಿನಯ ನೋಡಿ ಎನ್ಟಿಆರ್ ಅಚ್ಚರಿಗೊಂಡಿದ್ದರು. ಇನ್ನು ಮುಂದೆ ಮೊದಲು ರಾಜ್ಕುಮಾರ್ ಮಾಡಲಿ, ಅದರಿಂದ ಪ್ರೇರಣೆಗೊಂಡು ನಾನು ನಟಿಸುತ್ತೇನೆ ಎಂದು ಹೇಳಿ ಒಪ್ಪಿಸಿದ್ದರಂತೆ" ಎಂದು ಮೆಲುಕು ಹಾಕಿದ್ದಾರೆ.
'ಸಾಕು ಮಗಳು', 'ಗಾಳಿ ಗೋಪುರ' ಹೀಗೆ ಮೂರ್ನಾಲ್ಕು ಸಿನಿಮಾಗಳು ಇದೇ ರೀತಿ ಕನ್ನಡ ಹಾಗೂ ತೆಲುಗಿನಲ್ಲಿ ತಯಾರಾಗಿತ್ತು. ಆದರೆ 'ಸತ್ಯ ಹರಿಶ್ಚಂದ್ರ' ಚಿತ್ರದಲ್ಲಿ ಎನ್ಟಿಆರ್ ನಟನೆಗಿಂತ ಅಣ್ಣಾವ್ರ ನಟನೆ ಬಗ್ಗೆ ಹೆಚ್ಚು ಮೆಚ್ಚುಗೆ ವ್ಯಕ್ತವಾಗಿತ್ತು. ತೆಲುಗು ಪತ್ರಿಕೆಗಳಲ್ಲಿ ಕೂಡ ಈ ಬಗ್ಗೆ ಕೆಲವರು ಬರೆದಿದ್ದರು. ಅದನ್ನೆಲ್ಲಾ ನೋಡಿ ಎನ್ನು ಮುಂದೆ ಹೀಗೆ ಒಟ್ಟಿಗೆ ನಿರ್ಮಾಣವಾಗುವ ಸಿನಿಮಾಗಳಲ್ಲಿ ನಾನು ನಟಿಸುವುದಿಲ್ಲ ಎಂದು ಎನ್ಟಿಆರ್ ನಿರ್ಧರಿಸಿದ್ದರು ಎಂದು ರಾಮ್ಕುಮಾರ್ ವಿವರಿಸಿದ್ದಾರೆ.
ಎನ್ಟಿಆರ್ ಜೊತೆಗೆ ಮಾತ್ರವಲ್ಲ ಎಎನ್ಆರ್, ಎಂಜಿಆರ್ ಜೊತೆಗೂ ಅಣ್ಣಾವ್ರು ಉತ್ತಮ ಬಾಂಧವ್ಯ ಹೊಂದಿದ್ದರು. ಶಿವಣ್ಣನ ಮದುವೆಗೆ ಎಂಜಿಆರ್ ಬೆಂಗಳೂರಿಗೆ ಬಂದು ಶುಭ ಹಾರೈಸಿದ್ದರು. ಎನ್ಟಿಆರ್ ಆಂಧ್ರ ಮುಖ್ಯಮಂತ್ರಿ ಗೆದ್ದಿದ್ದರು. ಎಂಜಿಆರ್ ತಮಿಳುನಾಡು ಸರ್ಕಾರದ ಚುಕ್ಕಾಣಿ ಹಿಡಿದಿದ್ದರು. ಡಾ. ರಾಜ್ಕುಮಾರ್ ಮನಸ್ಸು ಮಾಡಿದ್ದರೆ ರಾಜಕೀಯರಂಗ ಪ್ರವೇಶಿಸಿ ಗೆಲ್ಲಬಹುದಿತ್ತು. ಆದರೆ ಅವರು ಎಂದಿಗೂ ಅದನ್ನು ಒಪ್ಪಲಿಲ್ಲ.
ಭಾರತೀಯ ಚಿತ್ರರಂಗಕ್ಕೆ ಎನ್ಟಿಆರ್ ಕೊಡುಗೆಯನ್ನು ಕೂಡ ಮರೆಯೋಕೆ ಸಾಧ್ಯವಿಲ್ಲ. 300ಕ್ಕೂ ಅಧಿಕ ಸಿನಿಮಾಗಳಲ್ಲಿ ಅವರು ನಟಿಸಿ ಗೆದ್ದಿದ್ದಾರೆ. ನಟರಾಗಿ ಮಾತ್ರವಲ್ಲದೇ ನಿರ್ದೇಶಕ, ನಿರ್ಮಾಪಕರಾಗಿಯೂ ಗೆದ್ದಿದ್ದಾರೆ. ರಂಗಭೂಮಿ ಹಿನ್ನೆಲೆಯಿಂದ ಬಂದಿದ್ದ ರಾಮಾರಾವ್ ಪೌರಾಣಿಕ ಹಾಗೂ ಐತಿಹಾಸಿಕ ಚಿತ್ರಗಳನ್ನು ತಮ್ಮ ಅದ್ಭುತ ನಟನೆಯಿಂದ ಮೋಡಿ ಮಾಡಿದವರು. ಅವರಿಗೆ ಇಂತಹ ಅವಕಾಶಗಳು ಹೆಚ್ಚು ಸಿಕ್ಕಿತ್ತು. ಆದರೆ ಡಾ. ರಾಜ್ಕುಮಾರ್ ಅವರಷ್ಟು ವೈವಿಧ್ಯಮಯ ಪಾತ್ರಗಳಲ್ಲಿ ನಟಿಸಲು ಸಾಧ್ಯವಾಗಲಿಲ್ಲ.
ಚಿತ್ರರಂಗ ಮಾತ್ರವಲ್ಲೇ ರಾಜಕೀಯರಂಗದಲ್ಲಿ ಕೂಡ ರಾಮಾರಾವ್ ಗೆದ್ದಿದ್ದರು. ಟಿಡಿಪಿ ಪಕ್ಷ ಕಟ್ಟಿ ಒಂದೇ ವರ್ಷದಲ್ಲಿ ಪಕ್ಷವನ್ನು ಅಧಿಕಾರಕ್ಕೆ ತಂದಿದ್ದರು. ಎರಡು ಬಾರಿ ಆಂಧ್ರದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸುವ ಅವಕಾಶ ಸಿಕ್ಕಿತ್ತು.


Click it and Unblock the Notifications











