'ಪಡೆಯಪ್ಪಾ' ಪ್ರದರ್ಶನ ವೇಳೆ ರಮ್ಯಾ ಕೃಷ್ಣನ್ ಮೇಲೆ ಚಪ್ಪಲಿ ಎಸೆದಿದ್ದರಂತೆ
ರಮ್ಯಾ ಕೃಷ್ಣನ್ ವೃತ್ತಿ ಜೀವನದಲ್ಲಿ ಅತಿ ಹೆಚ್ಚು ಕಾಡುವ ಹಾಗೂ ಇಷ್ಟವಾಗುವ ಸಿನಿಮಾ ಯಾವುದು ಎಂದು ಹುಡುಕಿದರೆ 'ಪಡೆಯಪ್ಪಾ' ಚಿತ್ರದ 'ನೀಲಾಂಬರಿ' ಪಾತ್ರ ಮೊದಲು ಕಣ್ಣಾಮುಂದೆ ಬರುತ್ತದೆ.
ಈ ಚಿತ್ರದಲ್ಲಿ ಸೂಪರ್ ಸ್ಟಾರ್ ರಜನಿಕಾಂತ್ ಎದುರು ಸರಿಸಮವಾಗಿ ನಟಿಸಿದ್ದ ರಮ್ಯಾಕೃಷ್ಣನ್, ಅಲ್ಲಿಂದ ಹೊಸ ಇಮೇಜ್ ಪಡೆದುಕೊಂಡರು. ಸ್ಟಾರ್ ವಿಲನ್ಗಳನ್ನು ಮೀರಿದ ಬೇಡಿಕೆ ಪಡೆದುಕೊಂಡರು. ರಮ್ಯಾಕೃಷ್ಣನ್ ಅವರಿಗಾಗಿಯೇ ಪಾತ್ರಗಳನ್ನು ಬರೆಯುವ ಮಟ್ಟಕ್ಕೆ ನಿರ್ದೇಶಕರು ಚಿಂತಿಸಿದರು.
90ರ ದಶಕದಲ್ಲಿ ಯಶಸ್ವಿ ನಾಯಕಿ ನಟಿ ಎನಿಸಿಕೊಂಡಿದ್ದ ರಮ್ಯಾಕೃಷ್ಣನ್ ವೃತ್ತಿ ಜೀವನದಲ್ಲಿ ಪಡೆಯಪ್ಪಾ ಮರೆಯಲಾಗದ ಚಿತ್ರ. ಈ ಚಿತ್ರದಲ್ಲಿ ನಟಿಸಿದ ಬಳಿಕ ರಮ್ಯಾಕೃಷ್ಣನ್ ಅವರು ವೈಯಕ್ತಿಕವಾಗಿ ಭಯಗೊಂಡಿದ್ದರಂತೆ. ನನ್ನ ಮೇಲೆ ಹಲ್ಲೆಯಾದರೂ ಆಗಬಹುದು ಎಂದು ಯೋಚಿಸಿದ್ದರಂತೆ. ಕೊನೆಗೂ ಸಿನಿಮಾ ರಿಲೀಸ್ ಆದ್ಮೇಲೆ ಚಿತ್ರಮಂದಿರದಲ್ಲಿ ರಮ್ಯಾಕೃಷ್ಣನ್ ಅವರ ಮೇಲೆ ಚಪ್ಪಲಿ ಎಸೆದಿದ್ದ ಘಟನೆಯೂ ನಡೆದಿತ್ತು ಎಂದು ಖುದ್ದು ರಮ್ಯಾ ಕೃಷ್ಣನ್ ಅವರೇ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು. ಮುಂದೆ ಓದಿ....

ಯಾಕಾದರೂ ಈ ಪಾತ್ರ ಬಂತು
ಪಡೆಯಪ್ಪಾ ಸಿನಿಮಾ ಒಪ್ಪಿಕೊಂಡು ಶೂಟಿಂಗ್ ಮಾಡುವ ವೇಳೆ ರಮ್ಯಾಕೃಷ್ಣನ್ ಅವರಲ್ಲಿ ಭಯ ಹುಟ್ಟಿಕೊಂಡಿತ್ತಂತೆ. ಯಾಕಾದರೂ ಈ ಪಾತ್ರ ಬಂತು ಎಂದು ಮನಸಲ್ಲಿನಲ್ಲಿಯೇ ಭಯಗೊಂಡಿದ್ದರಂತೆ. ಚಿತ್ರೀಕರಣ ಮಾಡುವ ಪ್ರತಿದಿನವೂ ಆತಂಕದಿಂದಲೂ ಕೆಲಸ ಮಾಡ್ತಿದ್ದೆ ಎಂದು ರಮ್ಯಾಕೃಷ್ಣನ್ ಅವರು ಹೇಳಿಕೊಂಡಿದ್ದಾರೆ.

ಮೇಡಂ ಸ್ವಲ್ಪ ದಿನ ಚೆನ್ನೈ ಬಿಟ್ಟು ಹೋಗ್ಬಿಡಿ
ನನ್ನ ಮನೆ ಮೇಲೆ ಯಾರಾದರೂ ಕಲ್ಲು ಹೊಡಿತಾರೋ ಅಥವಾ ನಾನು ಪ್ರಯಾಣ ಮಾಡುವ ವೇಳೆ ನನ್ನ ಕಾರಿನ ಮೇಲೆ ಕಲ್ಲು ಹೊಡಿತಾರೋ ಎಂಬ ಭಯ ಪ್ರತಿದಿನವೂ ಕಾಡ್ತಿತ್ತು. ಸಿನಿಮಾ ಕ್ಲೈಮ್ಯಾಕ್ಸ್ ಮುಗಿದ ವೇಳೆ ಜೂನಿಯರ್ ಕಲಾವಿದರೊಬ್ಬರು ''ಮೇಡಂ ಸ್ವಲ್ಪ ದಿನ ಚೆನ್ನೈ ಬಿಟ್ಟು ಹೋಗ್ಬಿಡಿ'' ಎಂದು ಹೇಳಿದ್ದನ್ನು ಸಹ ರಮ್ಯಾಕೃಷ್ಣನ್ ಅವರು ಸ್ಮರಿಸಿಕೊಂಡರು.

ಆಲ್ಬರ್ಟ್ ಚಿತ್ರಮಂದಿರದಲ್ಲಿ ಘಟನೆ
ಚೆನ್ನೈನ ಆಲ್ಬರ್ಟ್ ಚಿತ್ರಮಂದಿರದಲ್ಲಿ ಪಡೆಯಪ್ಪಾ ಬಿಡುಗಡೆಯಾಗಿತ್ತು. ಸಿನಿಮಾ ನೋಡಲು ನನ್ನ ಸಹೋದರಿ ಹೋಗಿದ್ದಳು. ನನ್ನ ಪಾತ್ರ ಬಂದಾಗ ಕರೆಕ್ಟ್ ಆಗಿ ನನ್ನ ಮುಖಕ್ಕೆ ಬೀಳುವಂತೆ ಅಭಿಮಾನಿಯೊಬ್ಬ ಸ್ಕ್ರೀನ್ ಮೇಲೆ ಚಪ್ಪಲಿ ಎಸೆದರಂತೆ. ಚಪ್ಪಲಿ ಎಸೆದ ಕಾರಣ ಸ್ಕ್ರೀನ್ ಅರಿದು ಹೋದ ಘಟನೆ ನಡೆದಿದ್ದನ್ನು ನನ್ನ ತಂಗಿ ಹೇಳಿದ್ಲು ಎಂದು ರಮ್ಯಾಕೃಷ್ಣನ್ ವಿವರಿಸಿದರು.

ರಜನಿಕಾಂತ್ ಹೊಗಳಿದರು
ಪಡೆಯಪ್ಪಾ ಸಿನಿಮಾ ಬಿಡುಗಡೆಯಾದ ಬಳಿಕ ರಜನಿಕಾಂತ್ ಸಿನಿಮಾ ನೋಡಿದರು. ಆಮೇಲೆ ''ಬಹಳ ಚೆನ್ನಾಗಿ ನಟಿಸಿದ್ದೀರಾ'' ಎಂದು ಹೊಗಳಿದರು. 100ನೇ ದಿನ ಕಾರ್ಯಕ್ರಮದಲ್ಲಿ ಉಡುಗೊರೆ ಸಹ ಕೊಟ್ಟರು ಎಂದು ನೀಲಾಂಬರಿ ಖ್ಯಾತಿಯ ರಮ್ಯಾಕೃಷ್ಣನ್ ಹೇಳಿಕೊಂಡಿದ್ದಾರೆ.
Recommended Video

ರಾಜ್ಯ ಚಲನಚಿತ್ರ ಪ್ರಶಸ್ತಿ ಲಭಿಸಿತು
ಪಡೆಯಪ್ಪಾ ಚಿತ್ರದ ನಟನೆಗಾಗಿ ರಮ್ಯಾಕೃಷ್ಣನ್ ಅವರಿಗೆ ಅತ್ಯುತ್ತಮ ನಟಿ ತಮಿಳುನಾಡು ರಾಜ್ಯ ಚಲನಚಿತ್ರ ಪ್ರಶಸ್ತಿ ದೊರೆಯಿತು. ಕೆಎಸ್ ರವಿಕುಮಾರ್ ನಿರ್ದೇಶಿಸಿದ್ದ ಈ ಚಿತ್ರದಲ್ಲಿ ರಜನಿಕಾಂತ್, ರಮ್ಯಾಕೃಷ್ಣನ್, ಸೌಂದರ್ಯ, ಶಿವಾಜಿ ಗಣೇಶನ್, ಲಕ್ಷ್ಮಿ, ರಾಧರವಿ, ಸಿತಾರ ಸೇರಿದಂತೆ ಹಲವರು ನಟಿಸಿದ್ದರು.


Click it and Unblock the Notifications











