ನಟಿ ರಮ್ಯಾ ಫೋಟೊ ಲೈಕ್ ಮಾಡಿ ಪತ್ನಿ ಬಳಿ ತಗ್ಲಾಕಿಕೊಂಡ ತಮಿಳು ಇನ್ಫ್ಲುಯೆನ್ಸರ್
ಇದು ಸೋಶಿಯಲ್ ಮೀಡಿಯಾ ಜಮಾನ. ಜನ ಜೀವನದ ಜಂಜಾಟ ಮರೆತು ಫೇಸ್ಬುಕ್, ಇನ್ಸ್ಟಾಗ್ರಾಮ್ ಓಪನ್ ಮಾಡಿ ಸ್ಕ್ರೋಲ್ ಮಾಡ್ತಾ ಮನರಂಜನೆ ಪಡೆಯುತ್ತಿದ್ದಾರೆ. ಇನ್ಫ್ಲುಯೆನ್ಸರ್ಗಳು ವಿಭಿನ್ನ ರೀತಿಯ ಫನ್ನಿ ವೀಡಿಯೋಗಳನ್ನು ಮಾಡಿ ಜನರನ್ನು ರಂಜಿಸುವ ಪ್ರಯತ್ನ ಮಾಡುತ್ತಿರುತ್ತಾರೆ. ಒಳ್ಳೆ ವೀವ್ಸ್, ಲೈಕ್ಸ್ ಕೂಡ ಸಿಗುತ್ತಿದೆ.
ಇದೇ ರೀತಿಯ ಫನ್ನಿ ವೀಡಿಯೋವೊಂದು ಈಗ ನಟಿ ರಮ್ಯಾ ಕಣ್ಣಿಗೆ ಬಿದ್ದಿದೆ. ತಮ್ಮ ಕುರಿತು ಮಾಡಿರುವ ವೀಡಿಯೋವನ್ನು ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಪೋಸ್ಟ್ ಮಾಡಿ ಬಿದ್ದು ಬಿದ್ದು ನಗುವ ಎಮೋಜಿ ಹಾಕಿದ್ದಾರೆ. ಅಭಿಷೇಕ್ ಚಂದಮರಾಕ್ಷನ್ ಹಾಗೂ ಪತ್ನಿ ಅಮೃತಾ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ರೀಲ್ಸ್ ಮೂಲಕ ಫೇಮಸ್ ಆಗಿದ್ದಾರೆ. ತಮ್ಮ ಫನ್ನಿ ವೀಡಿಯೋಗಳಿಂದ ನೋಡುಗರ ಮನ ಗೆಲ್ಲುತ್ತಿದ್ದಾರೆ.

ಮೈಸೂರು ಹುಡುಗಿ ಅಮೃತಾ ಚೆನ್ನೈ ಮೂಲದ ಅಭಿಷೇಕ್ ಚಂದಮರಾಕ್ಷನ್ ಅವರನ್ನು ವಿವಾಹವಾಗಿದ್ದಾರೆ. ಹಾಗಾಗಿ ದಂಪತಿ ಕನ್ನಡ ಹಾಗೂ ತಮಿಳು ಮಿಶ್ರಿತ ಕಾಮಿಡಿ ವೀಡಿಯೋಗಳಿಂದ ನೆಟ್ಟಿಗರಿಗೆ ಹೆಚ್ಚು ಪರಿಚಿತರಾಗಿದ್ದಾರೆ. ಸದ್ಯ ವೈರಲ್ ವೀಡಿಯೋದಲ್ಲಿ ಅಮೃತಾ ಟಿವಿಯಲ್ಲಿ ನಟ ಸೂರ್ಯ ಅವರನ್ನು ನೋಡಿ ಮೆಚ್ಚಿಕೊಳ್ಳುತ್ತಿರುತ್ತಾರೆ. ಅದನ್ನು ಪತಿ ಅಭಿಷೇಕ್ ಗಮನಿಸಿ ಪ್ರಶ್ನಿಸಿದಾಗ ಆತನ ಫೋನ್ ತೆಗೆದು ನೀನು ನಟಿ ರಮ್ಯಾ ಅವರ ಫೋಟೊಗಳಿಗೆ ಲೈಕ್ ಕೊಟ್ಟಿರುವುದು ಯಾಕೆ ಎಂದು ಕೇಳುತ್ತಾರೆ. ಕೂಡಲೇ ಇಂಗು ತಿಂದ ಮಂಗನಂತಾದ ಅಭಿ "ಅಯ್ಯೋ ಬಿಡು ಸೆಲೆಬ್ರೆಟಿಗಳನ್ನು ನೋಡಿ ಇಷ್ಟಪಡುವುದರಲ್ಲಿ ತಪ್ಪೇನಿಲ್ಲ" ಎಂದು ಹೇಳಿ ಸಮಜಾಯಿಸಿ ಕೊಟ್ಟು ಜಾರಿಕೊಳ್ಳುವುದನ್ನು ನೋಡಬಹುದು.
ಈ ವೀಡಿಯೋ ನಟಿ ರಮ್ಯಾ ಗಮನಕ್ಕೂ ಬಂದಿದೆ. "ಹಃ ಹ ಸ್ವೀಟ್" ಎಂದು ಕಾಮೆಂಟ್ ಮಾಡಿ ಮೆಚ್ಚುಗೆ ಸೂಚಿಸಿದ್ದಾರೆ. ಅದಕ್ಕೆ ಅಭಿಷೇಕ್ ಕೂಡ ಥ್ಯಾಂಕ್ಸ್ ಎಂದು ಪ್ರತಿಕ್ರಿಯಿಸಿದ್ದಾರೆ. 11 ಸಾವಿರಕ್ಕೂ ಅಧಿಕ ಲೈಕ್ಸ್ ಈ ಪೋಸ್ಟ್ಗೆ ಸಿಕ್ಕಿದೆ. ಅಭಿ, ಅಮೃತಾ ಇದೇ ರೀತಿ ಫನ್ನಿ ವೀಡಿಯೋಗಳನ್ನು ಮಾಡುತ್ತಿರುತ್ತಾರೆ. ದಂಪತಿಗೆ ಒಬ್ಬ ಮಗ ಕೂಡ ಇದ್ದು ಆತನನ್ನು ಸೇರಿಸಿಕೊಂಡು ರೀಲ್ಸ್ ಮಾಡುತ್ತಾರೆ.
ಐಪಿಎಲ್ ಸಮಯದಲ್ಲಿ ಆರ್ಸಿಬಿ ಪರ ಅಮೃತಾ ಹಾಗೂ ಸಿಎಸ್ಕೆ ಪರ ಅಭಿಷೇಕ್ ಬೆಂಬಲ ಸೂಚಿಸುತ್ತಾ ಮಾಡಿದ್ದ ಫನ್ನಿ ರೀಲ್ಸ್ ಕೂಡ ಸಖತ್ ವೈರಲ್ ಆಗಿತ್ತು. ಇನ್ಸ್ಟಾಗ್ರಾಮ್ನಲ್ಲಿ ಅಭಿಷೇಕ್ ಚಂದಮರಾಕ್ಷನ್ ಅಕೌಂಟ್ ಅನ್ನು 4 ಲಕ್ಷದ 80 ಸಾವಿರ ಜನ ಫಾಲೋ ಮಾಡುತ್ತಿದ್ದಾರೆ. ಪತ್ನಿ ಅಮೃತಾ ಅಕೌಂಟ್ಗೆ ಕೂಡ ಹೆಚ್ಚು ಕಮ್ಮಿ 4 ಲಕ್ಷ ಮಂದಿ ಫಾಲೋವರ್ಸ್ ಇದ್ದಾರೆ.
ಅಮೃತಾ ತಮಿಳು ಕಲಿಯುವುದು, ಅಭಿಷೇಕ್ ಕನ್ನಡ ಕಲಿಯುವುದರ ಬಗ್ಗೆಯೂ ರೀಲ್ಸ್ ಮಾಡಿ ಪೋಸ್ಟ್ ಮಾಡುತ್ತಿರುತ್ತಾರೆ. ಫನ್ನಿ ವೀಡಿಯೋಗಳನ್ನೇ ದಂಪತಿ ಹೆಚ್ಚು ಶೂಟ್ ಮಾಡುತ್ತಾರೆ. ಅಭಿ ಅವರ ತಾಯಿ, ಅಮೃತಾ ಅವರ ತಾಯಿ, ಸಹೋದರ ಹೀಗೆ ಎಲ್ಲರೂ ಸೇರಿಕೊಂಡು ರೀಲ್ಸ್ ಮಾಡಿ ನೋಡುಗರನ್ನು ರಂಜಿಸುತ್ತಾರೆ. ಇನ್ನು ನಟಿ ರಮ್ಯಾ ಮತ್ತೆ ತೆರೆಮೇಲೆ ಬರಬೇಕು ಎನ್ನುವುದು ಅಭಿಮಾನಿಗಳ ಆಸೆ. ಆದರೆ ಅದು ಯಾಕೋ ಸಾಧ್ಯವಾಗುತ್ತಲೇ ಇದೆ.
'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ' ಚಿತ್ರದ ಸಣ್ಣ ಝಲಕ್ನಲ್ಲಿ ರಮ್ಯಾ ಮಿಂಚಿದ್ದರು. ಆದರೆ ಬಳಿಕ ಆ ದೃಶ್ಯಗಳನ್ನು ಬಳಸಿಕೊಳ್ಳದಂತೆ ಹೇಳಿದ್ದರು. ಈ ವಿಚಾರ ಕೋರ್ಟ್ ಮೆಟ್ಟಿಲು ಏರಿತ್ತು. ಇನ್ನು 'ಸ್ವಾತಿ ಮತ್ತಿನ ಮಳೆ ಹನಿಯೇ' ಸಿನಿಮಾ ನಿರ್ಮಿಸಿ ನಟಿಸುವುದಾಗಿ ರಮ್ಯಾ ಹೇಳಿದ್ದರು. ಬಳಿಕ ಹಿಂದೇಟು ಹಾಕಿದ್ದರು. ಬಳಿಕ ಆ ಪಾತ್ರವನ್ನು ಸಿರಿ ರವಿಕುಮಾರ್ ನಿಭಾಯಿಸಿದ್ದರು. ರಾಜ್ ಬಿ. ಶೆಟ್ಟಿ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿ ನಟಿಸಿದ್ದರು. ಯೋಗರಾಜ್ ಭಟ್ ನಿರ್ದೇಶನದ ಚಿತ್ರದಲ್ಲಿ ರಮ್ಯಾ ನಟಿಸುತ್ತಾರೆ ಎನ್ನಲಾಗ್ತಿದೆ.


Click it and Unblock the Notifications











