'ರಾಜ್ ಲೀಲಾ ವಿನೋದ' ಪುಸ್ತಕದ ಬಗ್ಗೆ ಭಾವನಾ ಬೆಳಗೆರೆ ಬಳಿ ಶಿವಣ್ಣ ಹೇಳಿದ್ದೇನು?
ಪತ್ರಕರ್ತ ರವಿ ಬೆಳಗೆರೆ ಬರೆದ 'ರಾಜ್ ಲೀಲಾ ವಿನೋದ' ಪುಸ್ತಕ ಕೆಲ ವರ್ಷಗಳ ಹಿಂದೆ ಭಾರೀ ಸದ್ದು ಮಾಡಿತ್ತು. ಇದರಲ್ಲಿ ಡಾ. ರಾಜ್ಕುಮಾರ್ ಹಾಗೂ ನಟಿ ಲೀಲಾವತಿ ಅವರ ಅವರ ನಡುವಿನ ಸಂಬಂಧದ ಬರೆಯಲಾಗಿದೆ. ಸ್ವತಃ ಲೀಲಾವತಿ ಅವರು ಹೇಳಿದ ವಿಚಾರಗಳನ್ನು ದಾಖಲಿಸಲಾಗಿತ್ತು.
'ರಾಜ್ ಲೀಲಾ ವಿನೋದ' ಪುಸ್ತಕ ಬಿಡುಗಡೆ ಬಳಿಕ ತಾವು ಶಿವಣ್ಣ ಅವರನ್ನು ಭೇಟಿ ಮಾಡಿದ ಘಟನೆಯನ್ನು ರವಿ ಬೆಳಗೆರೆ ಪುತ್ರಿ ಭಾವನಾ ಬೆಳಗೆರೆ ಹಂಚಿಕೊಂಡಿದ್ದಾರೆ. ಡೈಲಿ ಮಾಧ್ಯಮ ಯೂಟ್ಯೂಬ್ ಸಂದರ್ಶನದಲ್ಲಿ ಅವರು ಮಾತನಾಡಿದ್ದಾರೆ. ಆ ಪುಸ್ತಕ ಬಿಡುಗಡೆ ಸಮಯದಲ್ಲಿ ಶಿವಣ್ಣ 'ಮಾಸ್ ಲೀಡರ್' ಚಿತ್ರದಲ್ಲಿ ನಟಿಸುತ್ತಿದ್ದರು. ಚಿತ್ರದಲ್ಲಿ ಭಾವನಾ ಬೆಳಗೆರೆಯವರ ಮಗಳು ಬಣ್ಣ ಹಚ್ಚಿದ್ದರು.

ಭಾವನಾ ಮಾತನಾಡಿ "ಕೆಲ ದಿನಗಳ ಚಿತ್ರೀಕರಣ ಬಳಿಕ ಬ್ರೇಕ್ ಇತ್ತು. ಬಳಿಕ 'ರಾಜ್ ಲೀಲಾ ವಿನೋದ' ಪುಸ್ತಕ ಬಿಡುಗಡೆ ಆಗಿತ್ತು. ಅವತ್ತು ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕೆ ಪೊಲೀಸರು ಭದ್ರತೆ ಒದಗಿಸಿದ್ದರು. ಆದರೆ ಏನು ಆಗಲಿಲ್ಲ. ಅದಕ್ಕಿಂತ ಎರಡು ದಿನ ಮುನ್ನ ನಾವು ಚಿತ್ರೀಕರಣಕ್ಕಾಗಿ ಕಾಶ್ಮೀರದ ವಿಮಾನ ಹತ್ತಬೇಕಿತ್ತು. ಅಂದು ಶಿವಣ್ಣ ಅವರನ್ನು ಭೇಟಿ ಮಾಡುವುದು ಹೇಗೆ? ಎಂದು ಬಹಳ ಚಿಂತಿಸಿದ್ದೆ" ಎಂದು ಹೇಳಿದ್ದಾರೆ.
ಅಪ್ಪನಿಗೆ ಪುಸ್ತಕ ಬಿಡುಗಡೆ ಮಾಡಬೇಡಿ ಎಂದು ಹೇಳವುದಕ್ಕೂ ಆಗಲ್ಲ, ಶಿವಣ್ಣನ್ನು ಮುಖಾಮುಖಿ ಆಗುವುದು ಹೇಗೆ? ಅವರ ತಂದೆ ಬಗ್ಗೆ ಬರೆದಿರುವ ಪುಸ್ತಕ. 'ರಾಜ್ ಲೀಲಾ ವಿನೋದ' ಎನ್ನುವ ಹೆಸರಿನಲ್ಲೇ ಗೊತ್ತಾಗುತ್ತದೆ. ಮೂವರ ಫೋಟೊ ಕೂಡ ಹಾಕಿದ್ದರು. ನನಗೆ ಅವತ್ತು ಶಿವಣ್ಣನ್ನು ಭೇಟಿ ಮಾಡಲು ಮುಜಗರ ಆಗುತ್ತಿತ್ತು. ಅರ್ಧ ಚಿತ್ರೀಕರಣ ಆಗಿದ್ದರಿಂದ ಹೋಗಲೇಬೇಕಿತ್ತು. ಅದಕ್ಕಿಂತ ಮುನ್ನ ಚಿತ್ರೀಕರಣದಲ್ಲಿ ಶಿವಣ್ಣನ ಜೊತೆ ಚೆನ್ನಾಗಿ ಮಾತನಾಡಿದ್ದೆ, ಒಳ್ಳೆ ಒಡನಾಟ ಇತ್ತು. ವಿಮಾನ ನಿಲ್ದಾಣದಲ್ಲಿ ಸಿಕ್ಕಾಗಲೂ ಶಿವಣ್ಣ ನಾರ್ಮಲ್ ಆಗಿಯೇ ಇದ್ದರು" ಎಂದು ಭಾವನಾ ತಿಳಿಸಿದ್ದಾರೆ.
ಕಾಶ್ಮೀರಕ್ಕೆ ಹೋದ ಬಳಿಕ ನಿರ್ಮಾಪಕರ ಮೂಲಕ ನನ್ನ ಮನಸ್ಸಿನಲ್ಲಿದ್ದ ವಿಚಾರವನ್ನು ಶಿವಣ್ಣನಿಗೆ ತಿಳಿಸಲು ಹೇಳಿದ್ದೆ. ಅವರು ಹೋಗಿ ತಿಳಿಸಿದ್ದಾರೆ. ಮರುದಿನ ಶಿವಣ್ಣ ಮಾತನಾಡಿದರು. "ನೋಡಿ ಭಾವನಾ ಅವರೇ ನೀವು ಶ್ರೀನಗರ ಕಿಟ್ಟಿ, ಮಡದಿ. ಇವಳು ನಿಮ್ಮ ಮಗಳು. ನನಗೆ ರವಿ ಬೆಳಗೆರೆ ಮಗಳು, ಮೊಮ್ಮಗಳು ಎನ್ನುವುದು ಮ್ಯಾಟರ್ ಆಗಲ್ಲ. ನೀವು ಹೇಗೆ ನಿಮ್ಮ ಗಂಡನ ವೃತ್ತಿ ಬೇರೆ, ತಂದೆಯವರ ವೃತ್ತಿ ಬೇರೆ ಎನ್ನುತ್ತೀರಾ, ಅದೇ ರೀತಿ ನಾನು ಇದನ್ನು ಪರಿಗಣಿಸುತ್ತೇನೆ. ಆರಾಮಾಗಿರಿ. ನಮ್ಮ ಬಾಂಧವ್ಯ ಹೀಗೆ ಇರುತ್ತದೆ ಎಂದರು, ಆಗ ನನಗೆ ಅನ್ನಿಸಿತು, ಅವರು ಎಷ್ಟು ದೊಡ್ಡವರು, ನಾನು ಅವರ ಮುಂದೆ ಸಣ್ಣವಳು ಅನ್ನಿಸಿಬಿಡ್ತು" ಎಂದು ಭಾವನಾ ಬೆಳಗೆರೆ ವಿವರಿಸಿದ್ದಾರೆ.
'ಶ್ರೀಕಂಠ' ಸಿನಿಮಾ ಸುದ್ದಿಗೋಷ್ಠಿ ಸಮಯದಲ್ಲಿ 'ರಾಜ್ ಲೀಲಾ ವಿನೋದ' ಪುಸ್ತಕದ ಬಗ್ಗೆ ಶಿವರಾಜ್ಕುಮಾರ್ಗೆ ನೇರ ಪ್ರಶ್ನೆ ಎದುರಾಗಿತ್ತು. CiniAdda.com ವೆಬ್ಸೈಟ್ ವರದಿಗಾರ್ತಿ ಪ್ರಶ್ನೆ ಕೇಳಿದ್ದರು. ಪುಸ್ತಕದ ಬಗೆಗಿನ ಪ್ರಶ್ನೆಗೆ "ಐ ಡೋಂಟ್ ನೋ.. ಗೊತ್ತಿದ್ದರೆ ಮಾತನಾಡಬಹುದು, ಗೊತ್ತಿಲ್ಲದೇ ಇದ್ದರೆ ಹೇಗೆ ಮಾತನಾಡುವುದು" ಎಂದು ಉತ್ತರಿಸಿದ್ದರು.
"ನನಗೆ ಗೊತ್ತಿಲ್ಲ. ಗೊತ್ತಿಲ್ಲದೇ ಏನು ಹೇಳಲಿ, ಲೀಲಾವತಿ ಅವರು ಬಂದಾಗ ನಾವು ಅವರ ಕಾಲು ಮುಗಿಯುತ್ತೇವೆ. ನಾವು ಆ ಗೌರವ ಕೊಡುತ್ತೇವೆ. ಯಾವಾಗಲೂ ಅಷ್ಟೇ, ಅದು ಬಿಟ್ಟು ಬೇರೆ ಏನು ಗೊತ್ತಿಲ್ಲ. ಅಪ್ಪ, ಅಮ್ಮ ಕೂಡ ಆ ಬಗ್ಗೆ ಯಾವತ್ತು ಮಾತನಾಡಿಲ್ಲ" ಎಂದು ಶಿವಣ್ಣ ತಿಳಿಸಿದ್ದರು.


Click it and Unblock the Notifications











