'ಯಮ್ಮೊ ಯಮ್ಮೋ ನೋಡ್ದೆ ನೋಡ್ದೆ' ಹಾಡಿನಲ್ಲಿ ಪ್ರಿಯಾಂಕಾ ಧರಿಸಿದ್ದ ಕಾಸ್ಟ್ಯೂಮ್ ಬೆಲೆ ಎಷ್ಟು?
'ಮಲ್ಲ' ರವಿಚಂದ್ರನ್ ನಿರ್ದೇಶಿಸಿ ನಟಿಸಿದ ಸಿನಿಮಾಗಳಲ್ಲಿ ಬ್ಲಾಕ್ಬಸ್ಟರ್ ಹಿಟ್ ಆಗಿದ್ದ ಕೊನೆಯ ಸಿನಿಮಾ. ಪ್ರಿಯಾಂಕಾ ಉಪೇಂದ್ರ ಈ ಚಿತ್ರದಲ್ಲಿ ನಾಯಕಿಯಾಗಿ ಮಿಂಚಿದ್ದರು. ಸ್ವತಃ ರವಿಚಂದ್ರನ್ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದರು. ಹಾಡುಗಳಿಗೆ ಸಾಹಿತ್ಯ ಪೋಣಿಸಿದ್ದರು.
ಬರೋಬ್ಬರಿ 8 ಹಾಡುಗಳು 'ಮಲ್ಲ' ಚಿತ್ರದಲ್ಲಿತ್ತು. ಅದರಲ್ಲೂ ಸಿಕ್ಕಾಪಟ್ಟೆ ರೊಮ್ಯಾಂಟಿಕ್ ಆಗಿದ್ದ 'ಯಮ್ಮೊ ಯಮ್ಮೋ ನೋಡ್ದೆ ನೋಡ್ದೆ' ಸೂಪರ್ ಹಿಟ್ ಆಗಿತ್ತು. ಪ್ರಿಯಾಂಕಾ ಮೈಚಳಿ ಬಿಟ್ಟು ಹಾಡಿಗೆ ಹೆಜ್ಜೆ ಹಾಕಿದ್ದರು. ಬಹಳ ವಿಭಿನ್ನವಾಗಿ ದೀಪದ ಕಂಬಗಳನ್ನು ಬಳಸಿ ಕ್ರೇಜಿಸ್ಟಾರ್ ಸಾಂಗ್ ಡಿಸೈನ್ ಮಾಡಿದ್ದರು. ಆ ಸಾಂಗ್ ಮೇಕಿಂಗ್ ಬಗ್ಗೆ 'ಭರ್ಜರಿ ಬ್ಯಾಚುಲರ್ಸ್' ಶೋ ವೇದಿಕೆಯಲ್ಲಿ ರವಿಚಂದ್ರನ್ ಮಾತನಾಡಿದ್ದಾರೆ.

ಶೋನಲ್ಲಿ ಪ್ರವೀಣ್ ಹಾಗೂ ಸುಕೃತಾ ನಾಗ್ 'ಯಮ್ಮೊ ಯಮ್ಮೊ' ಹಾಡಿಗೆ ಬಿಂಗಾಸ್ ಆಗಿ ಹೆಜ್ಜೆ ಹಾಕಿದ್ದರು. ಅದಕ್ಕೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿತ್ತು. ಇದೇ ವೇಳೆ ಕ್ರೇಜಿಸ್ಟಾರ್ ಆ ದಿನಗಳನ್ನು ನೆನಪಿಸಿಕೊಂಡಿದ್ದಾರೆ. ಒಂದ್ಕಾಲದಲ್ಲಿ ರವಿಚಂದ್ರನ್ ಹಾಗೂ ಹಂಸಲೇಖ ಕಾಂಬಿನೇಷನ್ ಸೂಪರ್ ಹಿಟ್ ಆಗಿತ್ತು. ಕ್ರೇಜಿಸ್ಟಾರ್ ಚಿತ್ರಕ್ಕೆ ಹಂಸಲೇಖ ಸಂಗೀತ, ಸಾಹಿತ್ಯ ನೀಡಿದರೆ ಆಲ್ಬಮ್ ಹಿಟ್ ಎನ್ನುವಂತಾಗಿತ್ತು. ಕೆಲ ಭಿನ್ನಾಭಿಪ್ರಾಯಗಳಿಂದ ಇಬ್ಬರೂ ದೂರಾಗಿದ್ದರು. ಹಾಗಾಗಿ ಸ್ವತಃ ರವಿಚಂದ್ರನ್ ತಮ್ಮ ಸಿನಿಮಾಗಳಿಗೆ ಸಂಗೀತ, ಸಾಹಿತ್ಯ ಜವಾಬ್ದಾರಿ ವಹಿಸಿಕೊಳ್ಳುವಂತಾಗಿತ್ತು.
'ಮಲ್ಲ' ಚಿತ್ರದ 'ಕರುನಾಡೇ', 'ಈ ಪ್ರೀತಿಯ ಮರೆತು', 'ಮಸ್ತು ನೀ ಮಸ್ತು', 'ಒಳಗಿರೋದು ಒಳಗಿದ್ರೆ' ಹೀಗೆ ಎಲ್ಲಾ ಹಾಡುಗಳು ಸೂಪರ್ ಹಿಟ್ ಆಗಿತ್ತು. ರಾಮು ನಿರ್ಮಾಣದ ಈ ಸಿನಿಮಾ ಕೂಡ ಪ್ರೇಕ್ಷಕರ ಮನಗೆದ್ದು ಬಾಕ್ಸಾಫೀಸ್ನಲ್ಲಿ ಸದ್ದು ಮಾಡಿತ್ತು. ಆದರೆ 'ಏಕಾಂಗಿ' ಸಿನಿಮಾ ಸೋಲಿನ ಬಳಿಕ ಯಾವುದೇ ಸಿನಿಮಾ ಮಾಡೋದು ಬೇಡ ಎಂದು 6 ತಿಂಗಳು ರವಿಚಂದ್ರನ್ ಸುಮ್ಮನಾಗಿಬಿಟ್ಟಿದ್ದರು. ಬಳಿಕ 'ಮಲ್ಲ' ಚಿತ್ರ ಕೈಗೆತ್ತಿಕೊಂಡಿದನ್ನು ನೆನಪಿಸಿಕೊಂಡಿದ್ದಾರೆ.
"ಏಕಾಂಗಿ ಸಿನಿಮಾ ಅಂದುಕೊಂಡಂಗೆ ಆಗದೇ ಇದ್ದಾಗ 6 ತಿಂಗಳು ಸಿನಿಮಾ ಮಾಡಲ್ಲ ಎಂದು ಮನೆಯಲ್ಲಿ ಕೂತಿದ್ದೆ. ಒಂದು ದಿನ ನಮ್ಮ ಸ್ನೇಹಿತರೆಲ್ಲಾ ಸೇರಿ ನನ್ನ, ನನ್ನ ಪತ್ನಿಯನ್ನು ಕರೆದು ಒಂದು ಪಾರ್ಟಿ ಕೊಟ್ಟರು. ನೀವು ಸಿನಿಮಾ ಮಾಡಬೇಕು ಎಂದು ಸ್ನೇಹಿತರು ಆಗ ಮನವಿ ಮಾಡಿದ್ದರು. ನಾನು ಆಗಲ್ಲ ಎಂದು ಹಠ ಹಿಡಿದರು ಬಿಡಲಿಲ್ಲ. ಆಗ ವೇದಿಕೆಯಲ್ಲಿ ಹೇಳಿದ್ದೆ. ಈಗ ಒಂದು ಸಿನಿಮಾ ಮಾಡ್ತೀನಿ, ಅದು ನಿಮಗೆ ಇಷ್ಟವಾಗುತ್ತದೆ ಎಂದು ಹೇಳಿ ಮಾಡಿದ ಸಿನಿಮಾ 'ಮಲ್ಲ' ಎಂದು ರವಿಚಂದ್ರನ್ ನೆನಪಿಸಿಕೊಂಡಿದ್ದಾರೆ.

ಸಾಂಗ್ ಶೂಟಿಂಗ್ ಬಗ್ಗೆಯೂ ಕ್ರೇಜಿಸ್ಟಾರ್ ಮಾತನಾಡಿದ್ದಾರೆ. 'ಯಮ್ಮೋ ಯಮ್ಮೋ' ಹಾಡಿನ ಸಾಹಿತ್ಯ ಬರೆಯುವಾಗ ಪಕ್ಕ ಕೂತಿದ್ದವರು ನಕ್ಕಿದ್ದರು. ಏನ್ ಸಾಹಿತ್ಯ ಇದು ಎಂದು ಆಡಿಕೊಂಡಿದ್ದು ಉಂಟು. ಈ ಸಾಂಗ್ ಹಿಟ್ ಆಗುತ್ತದೆ ಎಂದು ಅವತ್ತೇ ಅವರಿಗೆಲ್ಲಾ ಹೇಳಿದ್ದೆ. ಈ ಸಿನಿಮಾ ಮಾಡುವಾಗ ನನ್ನ ಬಳಿ ಹಣ ಇರಲಿಲ್ಲ. 4 ಕಂಚಿನ ದೀಪದ ಕಂಬಗಳನ್ನು ತರಿಸಿದ್ದೆ. ಅದನ್ನು ಬಳಸಿ ಸಾಂಗ್ ಶೂಟ್ ಶುರು ಮಾಡಿದ್ದು. ಹೆಣ್ಣು ಮಕ್ಕಳಿಗೆ ಕಾಸ್ಟ್ಯೂಮ್, ಮೇಕಪ್ ಯಾವತ್ತೂ ನಾನು ಕಮ್ಮಿ ಮಾಡಲ್ಲ, ಸೆಟ್ ಕಮ್ಮಿ ಆಗಬಹುದು, ಹೆಣ್ಣುಮಕ್ಕಳ ಶೃಂಗಾರ ಕಮ್ಮಿ ಮಾಡಲ್ಲ, 2 ಲಕ್ಷ ರೂ. ಕಾಸ್ಟ್ಯೂಮ್ ಬಾಂಬೆ ಇಂದ ತರಿಸಿ ಹಾಕಿಸಿದ್ದು" ಎಂದು ಕ್ರೇಜಿಸ್ಟಾರ್ ಹೇಳಿದ್ದಾರೆ.
'ಮಲ್ಲ' ಸಿನಿಮಾ ಮಾಡುವಾಗ ರಜನಿಕಾಂತ್ ಮನೆಗೆ ಬಂದು ಮ್ಯೂಸಿಕ್ ಮಾಡಬೇಡ, ನಿನ್ನ ಹೆಸರು ಹಾಳು ಮಾಡಿಕೊಳ್ಳುತ್ತಿದ್ದೀಯಾ. ಜನ ಬೈತಾ ಇದ್ದಾರೆ. ಯಾಕೆ ಮ್ಯೂಸಿಕ್ ಮಾಡ್ತೀಯಾ ಅಂದ್ರು. ಸರ್, ನಾನು ಯಾವುದೇ ಕಾರಣಕ್ಕೂ ಮ್ಯೂಸಿಕ್ ಬಿಡಲ್ಲ, ಪ್ರಾಣ ಬೇಕಾದರೂ ಬಿಡ್ತೀನಿ ಎಂದು ರಜನಿಕಾಂತ್ ಅವರಿಗೆ ಅಂದು ಹೇಳಿದ್ದಾಗಿ ರವಿಚಂದ್ರನ್ ವಿವರಿಸಿದ್ದಾರೆ.


Click it and Unblock the Notifications











