ಅವತ್ತು ಹುಲಿ ಎತ್ತಿ ಬಿಸಾಕಿತ್ತು.. ನೆನಸ್ಕೊಂಡ್ರೆ ಮೈ ಜುಮ್ ಅನ್ಸುತ್ತೆ; ಮಧುರ ಸಂಜಯ್
ಪ್ರಾಣಿಗಳನ್ನು ಬಳಸಿಕೊಂಡು ಸಿನಿಮಾ ಚಿತ್ರೀಕರಣ ಮಾಡುವುದು ಅಷ್ಟು ಸುಲಭವಲ್ಲ. ಆನೆ, ಹುಲಿ, ಸಿಂಹದ ರೀತಿ ವನ್ಯಮೃಗಗಳನ್ನು ಸಿನಿಮಾಗಳಲ್ಲಿ ನೋಡಿ ಜನ ಪುಳಕಗೊಳ್ಳಬಹುದು. ಆದರೆ ಆ ದೃಶ್ಯಗಳನ್ನು ಸೆರೆಹಿಡಿಯಲು ಚಿತ್ರತಂಡ ಕಸರತ್ತು ಅಷ್ಟಿಷ್ಟಲ್ಲ. ಈಗ ವಿಎಫ್ಎಕ್ಸ್, ಸಿಜಿ ಬಳಸಿ ಅಂತಹ ದೃಶ್ಯಗಳನ್ನು ಕಟ್ಟಿಕೊಡುತ್ತಾರೆ. ದಶಕಗಳ ಹಿಂದೆ ಜೀವಂತ ಪ್ರಾಣಿಗಳನ್ನೇ ಬಳಸಿಕೊಂಡು ಒಂದಷ್ಟು ಟ್ರಿಕ್ಸ್ ಬಳಸಿ ಚಿತ್ರೀಕರಣ ಮಾಡಲಾಗ್ತಿತ್ತು.
'ಶಬರಿಮಲೆ ಸ್ವಾಮಿ ಅಯ್ಯಪ್ಪ' ಕನ್ನಡ ಮಾತ್ರವಲ್ಲ ಭಾರತೀಯ ಚಿತ್ರರಂಗದಲ್ಲೇ ಒಂದು ಅದ್ಭುತ ಪ್ರಯತ್ನ. 1990ರಲ್ಲಿ ತೆರೆಕಂಡಿದ್ದ ಸಿನಿಮಾ ಮುಂದೆ ತಮಿಳು ಹಾಗೂ ಮಲಯಾಳಂ ಭಾಷೆಗಳಿಗೆ ಡಬ್ ಆಗಿತ್ತು. ಕೆ. ವಿ ಮಹದೇವನ್ ಸಂಗೀತದಲ್ಲಿ ಚಿತ್ರಗಳು ಹಾಡುಗಳು ಇವತ್ತಿಗೂ ಜನಜನಿತ. ಶಬರಿಮಲೆ ಮಂಡಲ ಪೂಜೆ ಶುರುವಾಗುತ್ತಿದ್ದಂತೆ ಚಿತ್ರದ ಹಾಡುಗಳು ಮಾರ್ದನಿಸುತ್ತವೆ. ಮಹಿಷಾಸುರನ ಸಹೋದರಿ ಮಹಿಷಿಯನ್ನು ಸಂಹರಿಸಲು ಅಯ್ಯಪ್ಪ ಅವತರಿಸಿದನೆಂದು ನಂಬಲಾಗಿದೆ. ಕೇರಳದ ಶಬರಿಮಲೆಯಲ್ಲಿ ನೆಲೆಸಿರುವ ಮಣಿಕಂಠನ ದರ್ಶನ ಪಡೆಯಲು ಪ್ರತಿವರ್ಷ ಸಾವಿರಾರು ಜನ ಅಲ್ಲಿಗೆ ಭೇಟಿ ನೀಡುತ್ತಾರೆ.

ಅಯ್ಯಪ್ಪನ ಅವತಾರದ ಕಥೆಯನ್ನು ರೇಣುಕಾಶರ್ಮಾ ಈ ಚಿತ್ರದಲ್ಲಿ ಕಟ್ಟಿಕೊಟ್ಟಿದ್ದರು. ಮಧುರ ಸಂಜಯ್ ಚಿತ್ರದಲ್ಲಿ ಅಯ್ಯಪ್ಪನ ಪಾತ್ರದಲ್ಲಿ ನಟಿಸಿದ್ದರು. ಇವತ್ತಿಗೂ ಅಯ್ಯಪ್ಪ ಅಂದಾಕ್ಷಣ ಬಹುತೇಕರಿಗೆ ಸಂಜಯ್ ಮಾಡಿದ್ದ ಪಾತ್ರವೇ ಕಣ್ಮುಂದೆ ಬರುತ್ತದೆ. ಬಾಲನಟನಾಗಿ ಚಿತ್ರರಂಗ ಪ್ರವೇಶಿಸಿದ ಸಂಜಯ್ ಮುಂದೆ 70ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದಾರೆ. INSIGHTRUSH ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ಸಂಜಯ್ ತಮ್ಮ ಸಿನಿಜರ್ನಿ ಮೆಲುಕು ಹಾಕಿದ್ದಾರೆ.
ಸಂಜಯ್ ಹಲವು ಸಿನಿಮಾಗಳಲ್ಲಿ ನಟಿಸಿದ್ರು, 'ಶಬರಿಮಲೆ ಸ್ವಾಮಿ ಅಯ್ಯಪ್ಪ' ಚಿತ್ರದ ಮಣಿಕಂಠನ ಪಾತ್ರದ ಮೂಲಕವೇ ಪ್ರೇಕ್ಷಕರ ಮನಸ್ಸಿನಲ್ಲಿ ಉಳಿದುಬಿಟ್ಟಿದ್ದಾರೆ. ಆ ಚಿತ್ರದ ಬಗ್ಗೆ ಸಾಕಷ್ಟು ಇಂಟ್ರೆಸ್ಟಿಂಗ್ ಸಂಗತಿಯನ್ನು ಅವರು ಮಾತನಾಡಿದ್ದಾರೆ. ಮುಖ್ಯವಾಗಿ ಜೀವಂತ ಹುಲಿಯ ಜೊತೆಗೆ ನಟಿಸಿದ ಮೈಜುಮ್ ಎನಿಸಿದ್ದ ಸಂಗತಿಗಳನ್ನು ವಿವರಿಸಿದ್ದಾರೆ. ಎತ್ತರದ ಕಾರಣಕ್ಕೆ ಸಂಜಯ್ ಈ ಪಾತ್ರ ಮಾಡುವುದು ಬೇಡ ಎಂದು ನಿರ್ದೇಶಕರು ಹೇಳಿದ್ದರಂತೆ. ಆದರೆ ಅಂತಿಮವಾಗಿ ಅವರೇ ಮಾಡುವಂತಾಗಿತ್ತು,.

ಸಂಜಯ್ ಮಾತನಾಡಿ "ಆಕಸ್ಮಿಕವಾಗಿ ನನಗೆ 'ಶಬರಿಮಲೆ ಸ್ವಾಮಿ ಅಯ್ಯಪ್ಪ' ಚಿತ್ರದ ಅವಕಾಶ ಸಿಕ್ಕಿತ್ತು. ಅದಕ್ಕೂ ಮುನ್ನ ನಿರ್ದೇಶಕ ರೇಣುಕಾಶರ್ಮಾ ಅವರ ಕೆಲ ಸಿನಿಮಾಗಳಲ್ಲಿ ಬಾಲನಟನಾಗಿ ನಟಿಸಿದ್ದೆ. ಲುಕ್ ಟೆಸ್ಟ್ ಮಾಡಿದ ಮೇಲೆ ನಾನೇ ಚಿತ್ರದಲ್ಲಿ ನಟಿಸಬೇಕು ಎಂದು ನಿರ್ಮಾಪಕರು ಪಟ್ಟು ಹಿಡಿದಿದ್ರು.. ಎತ್ತರ ಜಾಸ್ತಿ ಎನ್ನುವ ಕಾರಣಕ್ಕೆ ನಿರ್ದೇಶಕರು ಬೇರೆಯವರಿಂದ ಮಾಡಿಸೋಣ ಎಂದುಕೊಂಡಿದ್ರು" ಎಂದು ನೆನಪಿಸಿಕೊಂಡಿದ್ದಾರೆ.
ಕ್ಲೈಮ್ಯಾಕ್ಸ್ನಲ್ಲಿ ನಾನು ಹುಲಿಯ ಮೇಲೆ ಕೂತು ಬರುವ ಸನ್ನಿವೇಶ ಇದೆ. ಆಗ ನನ್ನ ಕಾಲುಗಳು ನೆಲಕ್ಕೆ ತಾಕುತ್ತಿರುತ್ತದೆ. ಅಯ್ಯಪ್ಪ ಹುಲಿ ಮೇಲೆ ಕೂತಾಗ ಕಾಲು ನೆಲಕ್ಕೆ ಊರುತ್ತಿರಲಿಲ್ಲ. ಹುಲಿ ಮೇಲೆ ನಾನು ಪೂರ್ತಿ ತೂಕ ಬಿಟ್ಟು ಕೂತಿದ್ರೆ, ಎತ್ತಿ ಬಿಸಾಕಿಬಿಡ್ತಿತ್ತು. ಇನ್ನು ಮೊದಲ ದಿನ ನನ್ನ ನಟನೆ ನೋಡಿ ನಿರ್ದೇಶಕರು ಇಷ್ಟಪಟ್ರು. ಬಳಿಕ ಸಿನಿಮಾ ಚಿತ್ರೀಕರಣ ಚೆನ್ನಾಗಿ ಮುಂದುವರೀತು ಎಂದು ಸಂಜಯ್ ಹೇಳಿದ್ದಾರೆ.
ಸಿನಿಮಾ ಇಷ್ಟು ದೊಡ್ಟಮಟ್ಟಕ್ಕೆ ಹೆಸರು ಮಾಡುತ್ತದೆ ಎನ್ನುವುದು ಗೊತ್ತಿರಲಿಲ್ಲ. ಎರಡು ತಿಂಗಳ ಕಾಲ ಚಿತ್ರೀಕರಣ ನಡೀತು. ಬಹಳ ಶ್ರದ್ಧಾಭಕ್ತಿಯಿಂದ ಸಿನಿಮಾ ಚಿತ್ರೀಕರಣದಲ್ಲಿ ಭಾಗವಹಿಸುತ್ತಿದ್ದೆ. ಆರಂಭದಲ್ಲಿ ನಟಿಸೋಕೆ ಇಷ್ಟವಿಲ್ಲದೇ ಅಮ್ಮನ ಜೊತೆ ಜಗಳ ಮಾಡ್ತಿದ್ದೆ. ಮಾಡ್ತಾ ಮಾಡ್ತಾ ಆ ಪಾತ್ರದೊಳಗೆ ಇಳಿದುಬಿಟ್ಟೆ. ರೇಣುಕಾಶರ್ಮಾ ಸರ್ ನನ್ನಿಂದ ನನ್ನಿಂದ ಬಹಳ ಕೆಲಸ ತೆಗೆದುಕೊಂಡ್ರು.. ಹುಲಿ ಸನ್ನಿವೇಶಕ್ಕೆ ಡ್ಯೂಪ್ ಕೂಡ ಇತ್ತು. ನನ್ನ ರೀತಿಯಲ್ಲೇ ಕಾಣುತ್ತಿದ್ದ ಮತ್ತೊಬ್ಬ ಹುಡುಗ ಕೂಡ ಕಾಣಿಸಿಕೊಂಡಿದ್ದಾನೆ ಎಂದುಸ ಸಂಜಯ್ ಸೀಕ್ರೆಟ್ ಬಿಚ್ಚಿಟ್ಟಿದ್ದಾರೆ.
ಒಮ್ಮೆ ಸರ್ಕಸ್ಗೆ ನನ್ನ ಕರ್ಕೊಂಡ್ ಹೋಗಿದ್ರು. ಬೋನಿನಲ್ಲಿ ಎರಡು ಹುಲಿಗಳು ಜಗಳ ಆಡ್ತಿತ್ತು. ಅದರಲ್ಲಿ ಒಂದು ಹುಲಿ ಮೇಲೆ ನೀನು ಕೂರಬೇಕು ಅಂದ್ರು. ನಾನು ಬೆಚ್ಚಿಬಿದ್ದು ಸಾಧ್ಯವೇ ಇಲ್ಲ ಎಂದುಬಿಟ್ಟಿದ್ದೆ ಎಂದು ಸಂಜಯ್ ಮೆಲುಕು ಹಾಕಿದ್ದಾರೆ. "ಅವತ್ತು ಸೆಟ್ನಲ್ಲಿ ನನ್ನ ರೀತಿಯಲ್ಲೇ ಮತ್ತೊಬ್ಬ ಹುಡುಗನಿಗೆ ಕಾಸ್ಟ್ಯೂಮ್ ಹಾಕಿಸಿ ಸಿದ್ಧಪಡಿಸಿದ್ರು, ನಾನು ಹುಲಿ ಮೇಲೆ ಕೂರಲ್ಲ ಅಂದೆ. ನಿರ್ದೇಶಕರು ಒಂದೇ ಒಂದು ಶಾಟ್ನಲ್ಲಿ ಕೂತ್ಕೊ. ನೀನೆ ಇರಬೇಕು. ಆ ಬಳಿಕ ಬೇರೆಯವರಿಂದ ದೃಶ್ಯಗಳನ್ನು ಶೂಟ್ ಮಾಡೋಣ ಅಂದ್ರು. ಧೈರ್ಯ ಮಾಡಿ ಒಂದು ಶಾಟ್ ಮಾಡೋಣ ಅಂದೆ. ಆದ್ರೆ ಹುಲಿ ಎತ್ತಿ ಬಿಸಾಕಿಬಿಡ್ತು" ಎಂದು ಸಂಜಯ್ ವಿವರಿಸಿದ್ದಾರೆ.
ಬಳಿಕ ಅದೇನು ಧೈರ್ಯ ಬಂತೋ ಗೊತ್ತಿಲ್ಲ.. ಹುಲಿ ಟ್ರೈನರ್ಸ್ ಬಂದ್ರು. ಹುಲಿ ಜೊತೆ ಪಳಗುವಂತೆ ಹೇಳಿದ್ರು.. ಅದಕ್ಕೆ ನೀರು, ಊಟ ಎಲ್ಲಾ ಕೊಟ್ಟು ಇಡೀ ದಿನ ಅದಕ್ಕೆ ಹತ್ತಿರವಾದ. ಬಳಿಕ ಅದು ನಾಯಿಮರಿ ರೀತಿ ಫ್ರೆಂಡ್ ಆಗಿಬಿಡ್ತು ಆಗಿಬಿಡ್ತು.. 3 ದಿನ ಚಿತ್ರೀಕರಣ ಮಾಡಬೇಕಿದ್ದು 9 ದಿನ ಮಾಡುವಂತಾಯಿತು. ನಿಧಾನವಾಗಿ ಆ ದೃಶ್ಯಗಳನ್ನು ಸೆರೆಹಿಡಿದೆವು. ಬೆಂಗಳೂರು ಅರಮನೆ ಮೈದಾನದಲ್ಲಿ ಇಡೀ ಸಿನಿಮಾ ಚಿತ್ರೀಕರಣ ನಡೆಯಿತು ಎಂದು ವಿವರಿಸಿದ್ದಾರೆ.
ಶ್ರೀನಿವಾಸ್ ಮೂರ್ತಿ ಸರ್, ಗೀತಾ ಮೇಡಂ ಯಾರಿಗೂ ನಾನು ಹುಲಿ ಮೇಲೆ ಕೂತು ನಟಿಸುವ ಬಗ್ಗೆ ನಂಬಿಕೆ ಇರಲಿಲ್ಲ. ಕೊನೆ ಶಾಟ್ನಲ್ಲಿ ನಾನು ಹುಲಿಯಿಂದ ಕೆಳಗೆ ಇಳಿದ ಮೇಲೆ ಅದು ಹೊರಗಡೆ ಹೋಗುವ ಸನ್ನಿವೇಶ ಇದೆ. ಶಾಟ್ನಲ್ಲಿ ನಿಜಕ್ಕೂ ಆ ಹುಲಿ ಆ ರೀತಿ ಹೊರಗೆ ಹೋಗಿದ್ದು ನೋಡ ಎಲ್ಲರೂ ಚಪ್ಪಾಳೆ ತಟ್ಟಿದ್ರು.. ಅದು ಚೆನ್ನಾಗಿ ಎಲ್ಲಾ ಚಿತ್ರೀಕರಣ ನಡೀತು ಎಂದು ಸಂಜಯ್ ತಿಳಿಸಿದ್ದಾರೆ.


Click it and Unblock the Notifications











