ಹಣ ಬರ್ತಿದೆ, ನೆಮ್ಮದಿ ಇಲ್ಲ.. ಆರೋಗ್ಯ ಸಮಸ್ಯೆ.. ಡಿಪ್ರೆಶನ್ಗೆ ಹೋಗಿದ್ದೆ- Rekha Aduge ಯೂಟ್ಯೂಬರ್ ಕಣ್ಣೀರು
ಸೋಶಿಯಲ್ ಮೀಡಿಯಾ ಈಗ ಸಾವಿರಾರು ಜನರಿಗೆ ಆದಾಯದ ಮೂಲವಾಗಿದೆ. ಕೆಲಸ ಬಿಟ್ಟು ಯೂಟ್ಯೂಬರ್ಗಳಾಗಿ ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ಗಳಾಗಿ ಕೆಲವರು ಬದುಕು ಕಟ್ಟಿಕೊಂಡಿದ್ದಾರೆ. ಅಚ್ಚರಿ ಎನ್ನುವಂತೆ ಕೆಲವರು ತಮ್ಮ ವಿಭಿನ್ನ ಕಂಟೆಂಟ್ಗಳ ಮೂಲಕ ಮನೆ ಮಾತಾಗಿದ್ದಾರೆ. ಕನ್ನಡದ ಜನಪ್ರಿಯ ಯೂಟ್ಯೂಬರ್ಗಳಲ್ಲಿ ರೇಖಾ ಕೂಡ ಒಬ್ಬರು.
ರೇಖಾ ಅಡುಗೆ ಎನ್ನುವ ಯೂಟ್ಯೂಬ್ ಚಾನಲ್ ಮೂಲಕ ಆಕೆ ಜನರಿಗೆ ಚಿರಪರಿಚಿತ. Rekha Aduge ಎಂಬ ಯೂಟ್ಯೂಬ್ ಚಾನಲ್ ಮೂಲಕ ಸಾವಿರಾರು ರೆಸೆಪಿಗಳನ್ನು ಜನರ ಮುಂದಿಟ್ಟಿದ್ದಾರೆ. ಬಹಳ ಸರಳವಾದ ಅಡುಗೆ ರೆಸಿಪಿಗಳ ಮೂಲಕ ನೆಟ್ಟಿಗರ ಗಮನ ಸೆಳೆಯುತ್ತಿದ್ದಾರೆ. 10 ವರ್ಷಗಳ ಹಿಂದೆ ಯೂಟ್ಯೂಬ್ಗೆ ಆಕೆ ಪ್ರವೇಶಿಸಿದ್ದರು. ಸದ್ಯ ರೇಖಾ ಅಡುಗೆ ಚಾನಲ್ಗೆ 2.91 ಲಕ್ಷ ಚಂದಾದಾರರಿದ್ದಾರೆ. ಒಳ್ಳೆ ಆದಾಯ ಕೂಡ ಬರ್ತಿದೆ. ಹಣ ಬರಲು ಆರಂಭವಾದ ಬಳಿಕ ನೆಮ್ಮದಿ ಇಲ್ಲದಂತಾಯಿತು ಎಂದು ಆಕೆ ಹೇಳಿದ್ದಾರೆ.

ಹಣವಿಲ್ಲದೆ ನೆಮ್ಮದಿ ಎಂದು ಕೆಲವರು ಹೇಳುತ್ತಾರೆ. ಹಣದಿಂದ ನೆಮ್ಮದಿ ಕಳೆದುಕೊಂಡೆವು ಎನ್ನುವವರು ಇದ್ದಾರೆ. ರ್ಯಾಪಿಡ್ ರಶ್ಮಿಕಾ ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ರೇಖಾ ಮಾತನಾಡಿದ್ದಾರೆ. ತಮ್ಮ ಜೀವನದ ಏಳುಬೀಳುಗಳ ಬಗ್ಗೆ ವಿವರಿಸಿದ್ದಾರೆ. ತಮ್ಮ ಆರೋಗ್ಯ ಸಮಸ್ಯೆ, ಆಪ್ತರು ತಮ್ಮಿಂದ ದೂರಾಗಿದ್ದು ಹೀಗೆ ಸಾಕಷ್ಟು ಸಂಗತಿಗಳನ್ನು ಬಿಚ್ಚಿಟ್ಟಿದ್ದಾರೆ. ಒಂದು ಹಂತಕ್ಕೆ ಡಿಪ್ರೆಶನ್ಗೆ ಹೋಗಿಬಿಟ್ಟಿದ್ದೆ ಎಂದು ಕಣ್ಣೀರಾಗಿದ್ದಾರೆ.
ಎಸ್ಎಸ್ಎಲ್ಸಿಯಲ್ಲಿ ಫೇಲ್ ಆಗಿದ್ದ ರೇಖಾಗೆ ಅಡುಗೆ ಮಾಡುವುದು ಹವ್ಯಾಸವಾಗಿತ್ತು. ಗಾರ್ಮೆಂಟ್ಸ್ನಲ್ಲಿ ಕೆಲಸ ಮಾಡುತ್ತಿದ್ದ ರೇಖಾ ಬಳಿಕ ಸಹೋದರನ ಸಹಾಯದಿಂದ 2016ರಲ್ಲಿ 'ರೇಖಾ ಅಡುಗೆ' ಯೂಟ್ಯೂಬ್ ಚಾನಲ್ ಆರಂಭಿಸಿದ್ದರು. ಆರಂಭದಲ್ಲಿ ಅಷ್ಟು ಸುಲಭವಾಗಿ ವೀವ್ಸ್, ಚಂದಾದಾರರು ಸಿಗಲಿಲ್ಲ. ಆದರೆ ಪ್ರಯತ್ನ ಬಿಡದೇ ಗಾರ್ಮೆಂಟ್ಸ್ನಲ್ಲಿ ಕೆಲಸ ಮಾಡುತ್ತಲೇ ಯೂಟ್ಯೂಬ್ ವೀಡಿಯೋಗಳನ್ನು ಮಾಡುತ್ತಿದ್ದರು. ದಿನದಿಂದ ದಿನಕ್ಕೆ ತಮ್ಮ ಸರಳ, ಅಷ್ಟೆ ರುಚಿಕರ ರೆಸಿಪಿಗಳ ಮೂಲಕ ರೇಖಾ ಅಡುಗೆ ಯೂಟ್ಯೂಬ್ ಚಾನಲ್ ಹಿಟ್ ಆಯಿತು.
ಯೂಟ್ಯೂಬ್ ಆದಾಯದ ಬಗ್ಗೆ ಮಾತನಾಡಿರುವ ರೇಖಾ "ಯೂಟ್ಯೂಬ್ ಆರಂಭಿಸಿದಾಗ ಚೆನ್ನಾಗಿತ್ತು. ದೇವರ ಆಶೀರ್ವಾದದಿಂದ ಒಳ್ಳೆ ಹೆಸರು, ಸಂಪಾದನೆ ಆಯ್ತು.. ಎಲ್ಲಾ ಚೆನ್ನಾಗಿ ನಡೀತಿದೆ ಎಂದಾಗಲೇ ಸಹೋದರಿ ಮದುವೆ ಮಾಡಿದೆ. ಯುಟ್ಯೂಬ್ನಿಂದ ಗಳಿಸಿದ ಹಣದಲ್ಲೇ ಮದುವೆ ಮಾಡಿದ್ವಿ.. ಕಂಟೆಂಟ್ಗೆ ತಕ್ಕಂತೆ, ಚಂದಾದಾರರಿಗೆ ತಕ್ಕಂತೆ ಆದಾಯ ಬರುತ್ತದೆ. ನನಗೆ ಒಳ್ಳೆ ಆದಾಯವೇ ಬರ್ತಿದೆ.. ಅತಿಯಾಸೆ ನನಗಿಲ್ಲ. ಬರುವುದರಲ್ಲೇ ಖುಷಿಯಿದೆ" ಎಂದಿದ್ದಾರೆ.
ಹಣ ಬಂದ ಮಾತ್ರಕ್ಕೆ ಅಹಂಕಾರ ಮೈಗೂಡಿಸಿಕೊಳ್ಳಬಾರದು. ನಾನು ಯಾವತ್ತಿಗೂ ಬದಲಾಗಿಲ್ಲ. ಯೂಟ್ಯೂಬ್ ಆದಾಯದಿಂದ ನನ್ನ ಆಸೆಗಳೆಲ್ಲಾ ಈಡೇರಿದೆ. ಎಲ್ಲೆಲ್ಲಿ ಹೋಗಬೇಕೊ ಅಲ್ಲಿಗೆ ಹೋಗಿದ್ದೀನಿ, ಬೇಕಾಗಿದ್ದನ್ನು ತಗೊಂಡಿದ್ದೀನಿ. ಆದರೆ ನಾನು ಬೆಳೆದುಬಿಟ್ಟಿದ್ದೀನಿ ಎಂದು ಆಪ್ತರೆಲ್ಲಾ ದೂರಾಗಿಬಿಟ್ರು ಎಂದು ರೇಖಾ ಬೇಸರ ವ್ಯಕ್ತಪಡಿಸಿದ್ದಾರೆ. ಒಂದು ಹಂತಕ್ಕೆ ಡಿಪ್ರೆಶನ್ಗೆ ಹೋಗಿಬಿಟ್ಟಿದ್ದೆ. ನೋವಿನಲ್ಲಿ ಇದ್ದಾಗ ಯಾರ ಸಪೋರ್ಟ್ ಸಿಗಲಿಲ್ಲ ಎಂದು ಕಣ್ಣೀರಾಗಿದ್ದಾರೆ.
ನಾನು, ನಮ್ಮ ಅಮ್ಮ, ತಮ್ಮ ಎನ್ನುವಂತೆ ಇದ್ದೆವು. ಸತ್ತು ಹೋಗೋಣ ಈ ಜೀವನವೇ ಬೇಡ ಎನಿಸಿಬಿಟ್ಟಿತ್ತು.. ನಾಲ್ಕೈದು ತಿಂಗಳ ಹಿಂದೆ ಆ ರೀತಿ ಕುಗ್ಗಿ ಹೋಗಿದ್ದೆವು. ನನ್ನ ತಮ್ಮ ಇನ್ನು ಅದೇ ನೋವಿನಲ್ಲಿದ್ದಾನೆ. ನಾನು ಚೇತರಿಸಿಕೊಂಡೆ. ಆರೋಗ್ಯ ಸಮಸ್ಯೆ ಆದಾಗ ಯಾರು ಬರಲಿಲ್ಲ ಎಂದು ರೇಖಾ ತಿಳಿಸಿದ್ದಾರೆ. "ಕೆಲಸಕ್ಕೆ ಹೋಗುವಾಗ ಚೆನ್ನಾಗಿದ್ದೆ. ಆದರೆ ಯೂಟ್ಯೂಬ್ ಚಾನಲ್ ಶುರು ಮಾಡಿದ ಬಳಿಕ ಥೈರಾಯ್ಡ್, ಬಿಪಿ, ಶುಗರ್ ಬಂತು.. ಜೀವನಶೈಲಿ ಬದಲಾದಂತೆ ಆರೋಗ್ಯ ಸಮಸ್ಯೆ ಸಹಜ ಎನ್ನುವಂತಾಯಿತು.. ಚೆನ್ನಾಗಿದ್ದಾಗ ಎಲ್ಲರೂ ಜೊತೆಗಿದ್ದರು. ಒಮ್ಮೆಲೆ ದೂರಾದಾಗ ಯೋಚನೆ ಹೆಚ್ಚಾಗುತ್ತದೆ" ಎಂದಿದ್ದಾರೆ.
ನಾನು ಹೆಚ್ಚು ಯೋಚಿಸುತ್ತೇನೆ. ಅದರಿಂದಲೇ ಆರೋಗ್ಯ ಸಮಸ್ಯೆ ಹೆಚ್ಚಾಗಿತು. ಜೀವನಕ್ಕೆ ಏನು ಬೇಕೋ ಎಲ್ಲವನ್ನು ದೇವರು ಕೊಟ್ಟಿದ್ದಾನೆ. ಆದರೆ ನೆಮ್ಮದಿ ಇಲ್ಲದಂತಾಗಿದೆ. ಏನು ಇಲ್ಲದೇ ಇದ್ದ ನಮಗೆ ಇಷ್ಟೆಲ್ಲಾ ಬಂತು ಎಂದು ಅಸೂಯೆಪಡುವವರು ಜಾಸ್ತಿ.. ಯಾರು ಹೆಚ್ಚು ಸಂಪರ್ಕದಲ್ಲಿಲ್ಲ.. ಸ್ನೇಹಿತರು ಯಾರು ಇಲ್ಲ. ಸಂಬಂಧಿಕರು ದೂರಾಗಿದ್ದಾರೆ ಎಂದು ರೇಖಾ ವಿವರಿಸಿದ್ದಾರೆ.


Click it and Unblock the Notifications











