ದಾನ..ಧರ್ಮ ; ಅಗಲುವ ಒಂದು ವರ್ಷದ ಮುಂಚೆ ಈ ಸರ್ಕಾರಿ ಶಾಲೆಗೆ ಸದ್ದಿಲ್ಲದೇ ಸಹಾಯದ ಹಸ್ತ ಚಾಚಿದ್ದರು ಅಪ್ಪು
ಅಕ್ಟೋಬರ್ 29-2021.. ಕನ್ನಡಿಗರ ಪಾಲಿನ ಕರಾಳ ದಿನ. ಆ ದಿನ ಇಡೀ ಕನ್ನಡ ಚಿತ್ರರಂಗ ಮಾತ್ರ ಅಲ್ಲ ಭಾರತೀಯ ಚಿತ್ರರಂಗ ಕಣ್ಣೀರಾಗಿತ್ತು. ಯಾರೆಂದರೆ ಯಾರು ಊಹಿಸದ ಸುದ್ದಿ ಬರಸಿಡಿಲಿನಂತೆ ಬಂದೇರಗಿತ್ತು. ಕರುನಾಡು ಪುನೀತ್ ರಾಜ್ ಕುಮಾರ್ ಅವರನ್ನು ಕಳೆದುಕೊಂಡಿತ್ತು. ಅಪ್ಪು ನಮ್ಮನ್ನೆಲ್ಲಾ ಅಗಲಿ ನಾಲ್ಕು ವರ್ಷಗಳಾಗಿವೆ. ಆದರೆ.. ಈಗಲೂ ಕೂಡ ಪುನೀತ್ ರಾಜ್ ಕುಮಾರ್ ದೈಹಿಕವಾಗಿ...
ನಮ್ಮ ನಡುವೆ ಇಲ್ಲ ಎನ್ನುವ ಕಹಿ ಸತ್ಯವನ್ನು ಹಲವರು ಒಪ್ಪುವುದಿಲ್ಲ. ಯಾಕೆಂದರೆ ಅವರು ಗಳಿಸಿದ ಸಂಪಾದನೆಯೇ ಅಂತಹದ್ದು. ನಯ..ವಿನಯದ ಪ್ರತಿರೂಪವಾಗಿ.. ಕಿರಿಯರು.. ಹಿರಿಯರು ಎನ್ನದೇ ಎಲ್ಲರಗೂ ತಲೆ ಬಾಗಿ.. ಬದುಕಿದ್ದಷ್ಟು ದಿನ ಪ್ರೀತಿ ಹಂಚಿ.. ಎಲ್ರನ್ನೂ ಪ್ರೀತಿಸಿ. ಆ ದಿವ್ಯ ನಗುವನ್ನ ಜನಮಾನಸದಲ್ಲಿ ಬಿತ್ತಿ ಹೋದ ಕನ್ನಡಿಗರ ಈ ಪ್ರೀತಿಯ ರಾಜಕುಮಾರ ಕೇವಲ ಜನ ಮೆಚ್ಚಿದ ನಾಯಕನಾಗಿರಲಿಲ್ಲ. ಗಾಯಕ-ನಿರ್ಮಾಪಕ ಕೂಡ ಆಗಿರಲಿಲ್ಲ. ಬದಲಿಗೆ ಸಮಾಜ ಸೇವಕ ಕೂಡ ಆಗಿದ್ದರು ಅಪ್ಪು.

ಹೌದು, ಅಸಲಿಗೆ ಹಲವರು ಯಾರದ್ದೋ ದುಡ್ಡಿನಲ್ಲಿ ಸಮಾಜ ಸೇವೆ ಮಾಡಿ ಸ್ವಯಂ ಸೇವಕ ಎಂದು ಕರೆಸಿಕೊಳ್ಳುತ್ತಾರೆ. ಇನ್ನೂ ಕೆಲವರು ತಮ್ಮಲ್ಲಿರುವ ಕಪ್ಪು ಹಣ ಕರಗಿಸಲು ಕೆರೆಗೆ ನೀರು ತುಂಬಿಸುತ್ತಾರೆ. ತಾವು ಮಾಡುವ ಈ ಕೆಲಸಕ್ಕೆ ಲಕ್ಷ ಖರ್ಚು ಮಾಡಿ ಅದಕ್ಕೆ ಪ್ರಚಾರವನ್ನು ಕೂಡ ಪಡೆಯುತ್ತಾರೆ.
ಇವರ ನಡುವೆ ಮತ್ತೂ ಕೆಲವರು ಗಿಡ ನೆಡುವ ಕಾರ್ಯಕ್ರಮಕ್ಕೆ ಬರಲು ಕೂಡ ಸದ್ದಿಲ್ಲದೇ ದುಡ್ಡು ತಗೊಂಡು ಸಮಾಜಕ್ಕೆ ಉಪಕಾರ ಮಾಡಿದವರಂತೆ ಫೋಸ್ ಕೊಡುತ್ತಾರೆ. ರಕ್ತದಾನ ಶಿಬಿರದ ರಿಬ್ಬನ್ ಕಟ್ ಮಾಡಲು ಕೂಡ ದುಡ್ಡು ಕೇಳುತ್ತಾರೆ.
ಆದರೆ.. ಪುನೀತ್ ರಾಜ್ ಕುಮಾರ್ ಇದಕ್ಕೆ ತದ್ವಿರುದ್ಧರಾಗಿದ್ದರು. ಈ ಕೈಲಿ ಕೊಟ್ಟಿದ್ದು, ಆ ಕೈಗೂ ಗೊತ್ತಾಗಬಾರದು ಅಂತಾ ಬಯಸೋ ವ್ಯಕ್ತಿಯಾಗಿದ್ದರು. ತಮ್ಮ ತಂದೆ ತಾಯಿ ಹೆಸರಲ್ಲಿ ಸ್ಥಾಪಿಸಿರುವ ಟ್ರಸ್ಟ್ ಮೂಲಕ ಪುನೀತ್ ಸಾಕಷ್ಟು ಸಮಾಜ ಸೇವಾ ಕೈಂಕರ್ಯಗಳನ್ನು ಮಾಡುತ್ತಲೇ ಬಂದಿದ್ದರು . ಸಿನಿಮಾಗಳಿಗೆ ಪುನೀತ್ ಹಾಡು ಹಾಡುತ್ತಿದ್ದರಲ್ಲಾ? ಅದಕ್ಕೆಂದು ಬರುವ ಸಂಭಾವನೆಯನ್ನು ಡೈರೆಕ್ಟಾಗಿ ಟ್ರಸ್ಟ್'ಗೆ ಸಲ್ಲಿಸಿ, ಅದನ್ನು ಪರೋಪಕಾರಕ್ಕಾಗಿ ವಿನಿಯೋಗಿಸುತ್ತಿದ್ದರು.
ಸಿನೆಮಾ ನಟನೆಯ ಜೊತೆಜೊತೆಗೆ ಒಂದಷ್ಟು ಸಾಮಾಜಿಕ ಕೆಲಸ ಕಾರ್ಯಗಳಲ್ಲಿ ತೋಡಗಿಸಿಕೊಳ್ಳುತ್ತಿದ್ದ ಪುನೀತ್ ರಾಜ್ ಕುಮಾರ್ ಅವರಷ್ಟು ಹೆಚ್ಚು ಸಂಖ್ಯೆಯಲ್ಲಿ ಸರ್ಕಾರಿ ಜಾಹೀರಾತುಗಳಲ್ಲಿ ಕಾಣಿಸಿಕೊಂಡ ಮತ್ತೊಬ್ಬ ಕರ್ನಾಟಕದ ನಟ ಇಲ್ಲ. ಆದರೆ ಯಾವುದೇ ಸರ್ಕಾರಿ ಜಾಹೀರಾತಿಗೆ ಪುನೀತ್ ರಾಜ್ಕುಮಾರ್ ಒಂದು ಬಿಡಿಗಾಸೂ ಹಣ ಪಡೆಯುತ್ತಿರಲಿಲ್ಲ ಎಂಬುದು ವಿಶೇಷ.

ಇಂಥಾ ಪುನೀತ್ ರಾಜ್ ಕುಮಾರ್ ಇಹಲೋಕ ತ್ಯಜಿಸುವ ಒಂದು ವರ್ಷದ ಮುಂಚೆ ಅಂದರೆ 2020ರಲ್ಲಿ ಸದ್ದಿಲ್ಲದೇ ಗಂಗಾವತಿಯ ಮಲ್ಲಾಪುರ ಗ್ರಾಮದ ಸರ್ಕಾರಿ ಶಾಲೆಗೆ ಸಹಾಯದ ಹಸ್ತ ಚಾಚಿದ್ದರು. ತಮ್ಮ ಕೊನೆಯ ಚಿತ್ರ ''ಜೇಮ್ಸ್'' ಚಿತ್ರದ ಚಿತ್ರೀಕರಣಕ್ಕೆ ತೆರಳಿದ್ದ ಸಂದರ್ಭದಲ್ಲಿ 21-10-2020ರಂದು ಒಂದು ಲಕ್ಷ ರೂಪಾಯಿಯ ಪ್ರೋತ್ಸಾಹ ಧನವನ್ನು ಕೂಡ ನೀಡಿದ್ದರು. ಶಾಲೆಯ ಆಡಳಿತ ಮಂಡಳಿ ಅಪ್ಪು ಮಾಡಿದ್ದ ಈ ಸಹಾಯಕ್ಕೆ ಅಭಿನಂದನಾ ಪತ್ರವನ್ನು ಬರೆಯದಿದ್ದರೆ ಅಪ್ಪು ಮಾಡಿದ್ದ ಈ ಸಹಾಯ ಕೂಡ ಬೆಳಕಿಗೆ ಬರುತ್ತಿರಲಿಲ್ಲ.
ಸದ್ಯ ಮಲ್ಲಾಪುರ ಸರ್ಕಾರಿ ಶಾಲೆ ಪುನೀತ್ ರಾಜ್ ಕುಮಾರ್ ಅವರಿಗೆ ನೀಡಿದ್ದ ಅಭಿನಂದನಾ ಪತ್ರವನ್ನು ದೊಡ್ಮನೆಯ ಅಪ್ಪಟ ಅಭಿಮಾನಿಗಳಲ್ಲಿ ಒಬ್ಬರಾದ ''ಮಲ್ಲಿಕಾರ್ಜುನ ಮೇಟಿ'' ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು ''ಜೇಮ್ಸ್ ಚಿತ್ರೀಕರಣಕ್ಕೆ ಪುನೀತ್ ರಾಜಕುಮಾರ್ ರವರು ಗಂಗಾವತಿಯ ಅನೆಗುಂದಿಗೆ ಬಂದಿದ್ದಾಗ, ತಾಲೂಕಿನ ಮಲ್ಲಾಪುರ ಗ್ರಾಮದ ಸರಕಾರಿ ಪ್ರೌಢಶಾಲೆಗೆ ಶಾಲಾ ವಿದ್ಯಾರ್ಥಿಗಳ ಶೈಕ್ಷಣಿಕ ಬೆಳವಣಿಗೆಗಾಗಿ, ಶಾಲೆಯ ಕಲಿಕಾ ವಾತಾವರಣವನ್ನು ಉತ್ತೇಜಿಸಲು, ವಿದ್ಯಾರ್ಥಿಗಳಿಗೆ ಕಲಿಕಾ ಪ್ರೋತ್ಸಾಹವನ್ನು ನೀಡುವ ಉದ್ದೇಶದಿಂದ ರೂ. 1,00,000 (ಒಂದು ಲಕ್ಷ ರೂ. ಗಳನ್ನು) ಪ್ರೋತ್ಸಾಹ ಧನವಾಗಿ ನೀಡಿರುತ್ತಾರೆ. ಇದು ದಿನಾಂಕಃ 21-10-2020 ರಂದು. ಅಂದರೆ ಅವರು ತೀರಿಕೊಳ್ಳುವ ಒಂದು ವರ್ಷ ಮುಂಚೆ. ಧನ ಸಹಾಯ ಮಾಡಿದ ಬಗ್ಗೆ ಶಾಲೆಯಿಂದ ನೀಡಿದ ಪತ್ರಕ್ಕೆ ಅಪ್ಪು ರವರು ಒಂದು ಪ್ರತಿ ಪಡೆದು ಸಹಿ ಮಾಡಿರುವುದು'' ಎಂದು ಬರೆದುಕೊಂಡಿದ್ದಾರೆ. ಅಭಿನಂದನಾ ಪತ್ರವನ್ನು ಕೂಡ ಹಂಚಿಕೊಂಡಿದ್ಧಾರೆ.
ಸದ್ಯ ಮಲ್ಲಿಕಾರ್ಜುನ ಮೇಟಿ ಅವರು ಹಂಚಿಕೊಂಡ ಈ ಅಭಿನಂದನಾ ಪತ್ರ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಹಲವರು ಅಪ್ಪು ಅವರನ್ನು ನೆನೆದು ಭಾವುಕರಾಗಿದ್ದಾರೆ. ಮಾಹಿತಿ ಹಂಚಿದಕ್ಕೆ ಧನ್ಯವಾದಗಳು ಎಂದು ಕೂಡ ಹೇಳುತ್ತಿದ್ದಾರೆ. ಇನ್ನು ಕೆಲವರು ಅಪ್ಪು ಬೇರೆ ಬೇರೆ ಶಾಲೆಗಳಿಗೆ ಮಾಡಿದ್ದ ಸಹಾಯದ ಕುರಿತು ವರದಿ ಮಾಡಿದ್ದ ಪೇಪರ್ ಕಟಿಂಗ್ ಕೂಡ ಹಂಚಿಕೊಳ್ಳುತ್ತಿದ್ಧಾರೆ.


Click it and Unblock the Notifications











