Year Ender 2024: ಶುಭಾರಂಭ ಮಾಡಿದ್ದ ದರ್ಶನ್ಗೆ ವರ್ಷವಿಡೀ ನೋವು; ದಾಸನ ಪಾಲಿನ ಕರಾಳ ವರ್ಷ
ನೋಡ್ತಾ ನೋಡ್ತಾ 2024 ವರ್ಷದ ಕೊನೆಗೆ ಬಂದುಬಿಟ್ಟಿದ್ದೇವೆ. ಇನ್ನೊಂದು ತಿಂಗಳು ಕಳೆದರೆ 2025ರ ವರ್ಷ ಶುರುವಾಗುತ್ತದೆ. ಕನ್ನಡ ಚಿತ್ರರಂಗ ಈ ವರ್ಷ ಸಾಕಷ್ಟು ಏಳುಬೀಳು ಕಂಡಿದೆ. ಸಾಕಷ್ಟು ವಿವಾದಗಳು ಸದ್ದು ಮಾಡಿವೆ. ಆದರೆ ಕೊ* ಪ್ರಕರಣದಲ್ಲಿ ದರ್ಶನ್ ಹೆಸರು ಬಂದಿದ್ದೇ ದೊಡ್ಡ ಸುದ್ದಿ.
2023ರ ಕೊನೆಗೆ ದರ್ಶನ್ ನಟಿಸಿದ 'ಕಾಟೇರ' ಸಿನಿಮಾ ಬಿಡುಗಡೆ ಆಗಿತ್ತು. ಸಿನಿಮಾ ಬ್ಲಾಕ್ಬಸ್ಟರ್ ಹಿಟ್ ಆಗಿತ್ತು. ಡಿಸೆಂಬರ್ 29ಕ್ಕೆ ತೆರೆಗಪ್ಪಳಿಸಿದ ಸಿನಿಮಾ ಈ ವರ್ಷ ಜನವರಿಯಲ್ಲಿ ಭರ್ಜರಿ ಸದ್ದು ಮಾಡಿತ್ತು. ತರುಣ್ ನಿರ್ದೇಶನದ ಸಿನಿಮಾ ಭರ್ಜರಿ ಕಲೆಕ್ಷನ್ ಮಾಡಿ ಹುಬ್ಬೇರಿಸಿತ್ತು. ಅಲ್ಲಿಂದ ಮುಂದೆ ದರ್ಶನ್ಗೆ ಎದುರಾದ ಸಂಕಷ್ಟಗಳು ಒಂದೆರಡಲ್ಲ. ಕೇಸ್ಗಳ ಮೇಲೆ ಕೇಸ್ಗಳು ಬಿದ್ದವು. ಹಳೇ ಪ್ರಕರಣಗಳಿಗೆ ಜೀವ ಬಂತು.

ಬರೀ ಆರೋಪಗಳಲ್ಲೇ 2024 ವರ್ಷವನ್ನು ದರ್ಶನ್ ಉಸಿರಾಡಿಬಿಟ್ಟರು. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ವಾಸ ಅನುಭವಿಸುವಂತಾಯಿತು. ಇನ್ನು ಪ್ರಕರಣದಿಂದ ಕಂಪ್ಲೀಟ್ ರಿಲೀಫ್ ಸಿಕ್ಕಿಲ್ಲ. ಸದ್ಯ ಆರೋಗ್ಯ ಸಮಸ್ಯೆ ನೆಪವೊಡ್ಡಿ ಮಧ್ಯಂತರ ಜಾಮೀನು ಮಾತ್ರ ಪಡೆದಿದ್ದಾರೆ. 6 ವಾರಗಳ ಬಳಿಕ ಮತ್ತೆ ಜೈಲಿಗೇ ಹೋಗಬೇಕಾದ ಅನಿವಾರ್ಯತೆ ಕೂಡ ಇದೆ.
1. ಪಬ್ ಪಾರ್ಟಿ ಪ್ರಕರಣ
ವರ್ಷದ ಆರಂಭದಲ್ಲೇ ಜೆಟ್ಲ್ಯಾಗ್ ಪಬ್ನಲ್ಲಿ ನಡೆದ ಪಾರ್ಟಿ ಕಾರಣಕ್ಕೆ ದರ್ಶನ್ ಸಮಸ್ಯೆಗೆ ಸಿಲುಕಿದ್ದರು. ನಿಯಮ ಮೀರಿ ಪಬ್ನಲ್ಲಿ ಪಾರ್ಟಿ ಪ್ರಕರಣ ಸಂಬಂಧ ಪೊಲೀಸ್ ವಿಚಾರಣೆ ಎದುರಿಸುವಂತಾಗಿತ್ತು. ಅಂದು ಒರಾಯನ್ ಮಾಲ್ನಲ್ಲಿ 'ಕಾಟೇರ' ಚಿತ್ರದ ಸೆಲೆಬ್ರೆಟಿ ಶೋ ನಡೀತು. ಬಳಿಕ ಪಕ್ಕದ ಪಬ್ನಲ್ಲಿ ಪಾರ್ಟಿ ಆಯೋಜನೆ ಆಗಿತ್ತು. ಆದರೆ ರಾತ್ರಿ 1 ಗಂಟೆ ಬಳಿಕ ಕೂಡ ಮದ್ಯಸರಬರಾಜು ಮಾಡಿ ಪಾರ್ಟಿ ಮಾಡಿದ್ದಾರೆ ಎನ್ನುವ ಆರೋಪ ಕೇಳಿಬಂದಿತ್ತು.
ದರ್ಶನ್ ಜೊತೆ ಧನಂಜಯ್, ಚಿಕ್ಕಣ್ಣ, ಅಭಿಷೇಕ್ ಸೇರಿ 8 ಜನ ಸುಬ್ರಹ್ಮಣ್ಯ ನಗರ ಪೊಲೀಸ್ ಠಾಣೆಗೆ ವಿಚಾರಣೆಗೆ ಹಾಜರಾದರು. ಬಳಿಕ ಆ ಪಬ್ ಲೈಸೆನ್ಸ್ 25 ದಿನಗಳ ಕಾಲ ಅಮಾನತು ಆಗಿತ್ತು. ಒಟ್ಟಾರೆ ವರ್ಷದ ಆರಂಭದಲ್ಲೇ ದರ್ಶನ್ ಪೊಲೀಸ್ ಠಾಣೆ ಮೆಟ್ಟಿಲೇರುವಂತಾಯಿತು.

2. ದರ್ಶನ್ ಮನೆ ನಾಯಿ ಕಚ್ಚಿದ ಕೇಸ್
ಕಳೆದ ವರ್ಷ ಮತ್ತೊಂದು ಪ್ರಕರಣದಲ್ಲಿ ದರ್ಶನ್ ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು. ಅವರ ಮನೆಯ ನಾಯಿ ಮಹಿಳೆಯೊಬ್ಬರಿಗೆ ಕಚ್ಚಿದ ಪ್ರಕರಣ ದೂರು ದಾಖಲಾಗಿತ್ತು. 2023ರ ಅಕ್ಟೋಬರ್ 28ರಂದು ವಕೀಲೆ ಅಮಿತಾ ಜಿಂದಾಲ್ ಎಂಬುವವರು ನೀಡಿದ ದೂರಿನ ಅನ್ವಯ ಕೇಸ್ ದಾಖಲಾಗಿತ್ತು. ಈ ಬಗ್ಗೆ ಪೊಲೀಸ್ ಠಾಣೆಗೆ ಹಾಜರಾಗಿ ದರ್ಶನ್ ತಮ್ಮ ಹೇಳಿಕೆ ನೀಡಿದ್ದರು. ಈ ವರ್ಷ ಜನವರಿ 20ರಂದು ಈ ಪ್ರಕರಣದ ಚಾರ್ಜ್ಶೀಟ್ ಸಲ್ಲಿಕೆ ಆಗಿತ್ತು. ಆದರೆ ಅದರಲ್ಲಿ ದರ್ಶನ್ ಹೆಸರು ಕೈಬಿಡಲಾಗಿತ್ತು ದರ್ಶನ್ಗೆ ರಿಲೀಫ್ ಸಿಕ್ಕಿತ್ತು.
3. ರೇಣುಕಾಸ್ವಾಮಿ ಪ್ರಕರಣ
ಈ ವರ್ಷ ಕನ್ನಡ ಚಿತ್ರರಂಗ ಮಾತ್ರವಲ್ಲ, ದೇಶಾದ್ಯಂತ ಸದ್ದು ಮಾಡಿದ್ದು ರೇಣುಕಾಸ್ವಾಮಿ ಪ್ರಕರಣ. ಇದೇ ಪ್ರಕರಣದಲ್ಲಿ ಆರೋಪಿ A2 ಆಗಿ ದರ್ಶನ್ ಜೈಲು ಸೇರಿದ್ದರು. ತಮ್ಮ ಪ್ರೇಯಸಿ ಪವಿತ್ರಾ ಗೌಡಗೆ ಕೆಟ್ಟದಾಗಿ ಮೆಸೇಜ್ ಮಾಡಿದ್ದ ಎಂಬ ಕಾರಣಕ್ಕೆ ರೇಣುಕಾಸ್ವಾಮಿ ಎಂಬಾತನನ್ನು ಅಪಹರಿಸಿ ಥಳಿಸಿ ಕೊಂದ ಆರೋಪ ದರ್ಶನ್ ಮೇಲಿದೆ. ಜೂನ್ 11ರಂದು ದರ್ಶನ್ ಸೇರಿ 17 ಜನ ಆರೋಪಿಗಳು ಪ್ರಕರಣದಲ್ಲಿ ಬಂಧನವಾಗಿದ್ದರು.
ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಸೋಶಿಯಲ್ ಮೀಡಿಯಾದಲ್ಲಿ ಪವಿತ್ರಾ ಗೌಡಗೆ ಕೆಟ್ಟದಾಗಿ ಮೆಸೇಜ್ ಕಳುಹಿಸಿದ್ದ. ಆತನಿಗೆ ಬುದ್ದಿ ಕಲಿಸಬೇಕು ಎಂದು ತಮ್ಮ ಆಪ್ತರ ಮೂಲಕ ಅಪಹರಿಸಿ ಬೆಂಗಳೂರಿಗೆ ಕರೆತರುವಂತೆ ಹೇಳಿದ್ದರು. ಬಳಿಕ ಪಟ್ಟಣಗೆರೆ ಶೆಡ್ನಲ್ಲಿ ಕೂಡಿ ಹಾಕಿ ದರ್ಶನ್ & ಗ್ಯಾಂಗ್ ಥಳಿಸಿದ್ದರು. ಈ ವೇಳೆ ಆತನ ಜೀವವೇ ಹೋಗಿತ್ತು. 131 ದಿನಗಳ ಬಳಿಕ ಮಧ್ಯಂತರ ಜಾಮೀನು ಪಡೆದು ದರ್ಶನ್ ಹೊರ ಬಂದರು.
4. ರಾಜಾತಿಥ್ಯ ಸಂಬಂಧ ದೂರು
ರೇಣುಕಾಸ್ವಾಮಿ ಪ್ರಕರಣದಲ್ಲಿ ಆರೋಪಿಯಾಗಿ ದರ್ಶನ್ ಪರಪ್ಪನ ಅಗ್ರಹಾರ ಜೈಲು ಸೇರಿದ್ದರು. ಆದರೆ ಜೈಲಿನ ಒಳಗೆ ರಾಜಾತಿಥ್ಯ ಸಿಕ್ಕಿದೆ ಎಂಬ ಆರೋಪ ಕೇಳಿಬಂದಿತ್ತು. ರೌಡಿ ಶೀಟರ್ಗಳ ಜೊತೆ ದರ್ಶನ್ ಕಾಫಿ ಹೀರುತ್ತಾ ಸಿಗರೇಟ್ ಸೇದುತ್ತಿದ್ದ ಫೋಟೊ ವೈರಲ್ ಆಗಿತ್ತು. ವೀಡಿಯೋ ಕಾಲ್ ಮಾಡಿ ಮಾತನಾಡಿದ್ದು ಬಯಲಾಗಿತ್ತು. ಈ ಸಂಬಂಧ ಕಾರಾಗೃಹ ತಿದ್ದುಪಡಿ ಅಧಿನಿಯಮ 2022 ಕಲಂ 42 ಅಡಿಯಲ್ಲಿ ದರ್ಶನ್ ವಿರುದ್ಧ 2 ಎಫ್ಐಆರ್ ದಾಖಲಾಲಾಗಿತ್ತು.
5. ಬಳ್ಳಾರಿ ಜೈಲಿಗೆ ಶಿಫ್ಟ್
ಜೈಲಿನೊಳಗೆ ರಾಜಾತಿಥ್ಯ ಸಿಕ್ಕ ವಿಚಾರ ಸರ್ಕಾರಕ್ಕೂ ಮುಜುಗರ ತಂದಿತ್ತು. ಹಾಗಾಗಿ ರೇಣುಕಾಸ್ವಾಮಿ ಪ್ರಕರಣದ ಆರೋಪಿಗಳನ್ನು ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಗೆ ಸ್ಥಳಾಂತರಿಸಲಾಗಿತ್ತು. ನಟ ದರ್ಶನ್ ಅವರನ್ನು ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಿದ್ದರು. ಅಲ್ಲಿಗೆ ಹೋದ ಮೇಲೆ ಬಹಳ ಕಷ್ಟ ಎದುರಿಸುವಂತಾಯಿತು. ಬೆನ್ನು ನೋವಿನಿಂದ ಬಳಲಿದ್ದರು. ಶೌಚಕ್ಕೂ ಕಷ್ಟಪಡುವಂತಾಗಿ ಅನುಮತಿ ಪಡೆದು ಸರ್ಜಿಕಲ್ ಚೇರ್ ಪಡೆದಿದ್ದರು. ಇನ್ನು ಪರಪ್ಪನ ಅಗ್ರಹಾರ ಜೈಲಿನಲ್ಲಿ ಇದ್ದಾಗಲೇ ಮನೆ ಊಟ ಕೇಳಿ ಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದರು.
6. ಬೆದರಿಕೆ ಸಂಬಂಧ ದೂರು
ನಟ ದರ್ಶನ್ ಜೈಲು ಸೇರಿದರೂ ಹೊರಗಡೆ ದೂರುಗಳು ದಾಖಲಾಗಿದ್ದು ವಿಪರ್ಯಾಸ. ನಟ ದರ್ಶನ್ ನನಗೆ ಫೋನ್ ಮಾಡಿ ಬೆದರಿಕೆ ಹಾಕಿದ್ದರು ಎಂದು ನಿರ್ಮಾಪಕ ಭರತ್ ಕೆಂಗೇರಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಧ್ರುವನ್ ನಟನೆಯ 'ಭಗವಾನ್ ಶ್ರೀ ಕೃಷ್ಣ ಪರಮಾತ್ಮ' ಚಿತ್ರವನ್ನು ಅವರು ನಿರ್ಮಾಣ ಮಾಡುತ್ತಿದ್ದಾರೆ. ಸಿನಿಮಾ ತಡ ಆಗಿದ್ದಕ್ಕೆ ನಿರ್ಮಾಪಕರಿಗೆ ದರ್ಶನ್ ಬೆದರಿಕೆ ಹಾಕಿದ್ದರು ಎಂದು ಹೇಳಲಾಗಿತ್ತು.
7. ಲಾಯರ್ ಜಗದೀಶ್ ದೂರು
ಇತ್ತೀಚೆಗೆ ಲಾಯರ್ ಜಗದೀಶ್ ಕೂಡ ದರ್ಶನ್ ಹಾಗೂ ಅವರ ಅಭಿಮಾನಿಗಳ ವಿರುದ್ಧ ಕೋರ್ಟ್ ಮೆಟ್ಟಿಲೇರಿದ್ದರು. ನನಗೆ ದರ್ಶನ್ ಅಭಿಮಾನಿಗಳು ಬೆದರಿಕೆ ಹಾಕುತ್ತಿದ್ದಾರೆ. ದರ್ಶನ್ ಸೂಚನೆ ಮೇರೆಗೆ ಆತನ ಅಭಿಮಾನಿಗಳು ಬೆದರಿಸುತ್ತಿದ್ದಾರೆ ಎಂದು ಆರೋಪಿಸಿದ್ದರು.


Click it and Unblock the Notifications











