ಅವರಾಡಿದ ಆ ಮಾತು ಇನ್ನೂ ನೆನಪಿದೆ ; ಅಣ್ಣಾವ್ರು ಹೇಳಿದ್ದ ಆ ಪಾಠ ಇವತ್ತೂ ಮರೆತಿಲ್ಲ ಅಂಬಿಕಾ
ಡಾ.ರಾಜ್ ಕುಮಾರ್.. ಕನ್ನಡ ಚಲನಚಿತ್ರ ರಂಗದ ಶಿಖರ ಪ್ರಾಯ. ಅಭಿಮಾನಿಗಳಲ್ಲಿ ದೇವರನ್ನ ಕಂಡ ದೇವತಾ ಮನುಷ್ಯ.ಗೋಕಾಕ್ ಚಳುವಳಿಯನ್ನು ಒಳಗೊಂಡಂತೆ ಕನ್ನಡನಾಡು-ನುಡಿಗೆ ಧಕ್ಕೆ ಬಂದಾಗ ಬೀದಿಗೆ ಬಂದು ಪ್ರಜಾಸತ್ತಾತ್ಮಕ ಹೋರಾಟಕ್ಕೆ ಬೆಂಬಲವಾಗುತ್ತಲೇ ಕೇಂದ್ರಶಕ್ತಿಯಾದವರು ಡಾ.ರಾಜ್ ಕುಮಾರ್.
ಇನ್ನೂ ಡಾ.ರಾಜ್ಕುಮಾರ್ ಅವರಲ್ಲಿದ್ದ ಸರಳತೆ ಮತ್ತು ನಾಯಕತ್ವದ ಗುಣ ಎಂದೆಂದಿಗೂ ಮರೆಯಲು ಸಾಧ್ಯವಿಲ್ಲ. ಅವರ ನಡೆ, ನುಡಿ ಎಲ್ಲರಿಗೂ ಮಾದರಿ. ತಮ್ಮ ಚಿತ್ರಗಳ ಮೂಲಕ ಮಾನವೀಯ ಮೌಲ್ಯಗಳನ್ನು ಬಿಂಬಿಸುವಲ್ಲಿ ಯಶಸ್ವಿಯಾದ ರಾಜ್ಕುಮಾರ್ ಜನರಲ್ಲಿ ನೈತಿಕತೆ, ಮೌಲ್ಯಗಳ ಬೀಜ ಬಿತ್ತಿದವರು.

ಇನ್ನು ಇವರ ಚಿತ್ರಗಳು ಕೇವಲ ಚಿತ್ರಗಳಾಗಿರಲಿಲ್ಲ. ಬದಲಿಗೆ ಬದುಕನ್ನೇ ಬದಲಾಯಿಸಿದ ಪರಿವರ್ತನೆಯ ಚಿತ್ರಗಳಾಗಿದ್ದವು. ಇವತ್ತು ಡಾ.ರಾಜ್ ಕುಮಾರ್ ದೈಹಿಕವಾಗಿ ನಮ್ಮ ಜೊತೆ ಇಲ್ಲದೇ ಇದ್ದರೂ ಅವರ ನೆನಪುಗಳು ಸದಾ ಜೀವಂತ. ಇಂಥಾ ಡಾ.ರಾಜ್ ಕುಮಾರ್ ಅವರನ್ನು ಅಂಬಿಕಾ ನೆನಪು ಮಾಡಿಕೊಂಡಿದ್ದಾರೆ. ಅಣ್ಣಾವ್ರಿಂದ ಕಲಿತ ಬದುಕಿನ ಪಾಠವೇನು..? ಎನ್ನುವುದನ್ನು ಹೇಳಿದ್ದಾರೆ.
ಹೌದು, ಒಂದ್ಕಾಲದಲ್ಲಿ ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ಟಾಪ್ ನಟಿಯಾಗಿ ಮೆರೆದವರು ಅಂಬಿಕಾ. ತಮಿಳು, ತೆಲುಗು, ಮಲಯಾಳಂ ಮಾತ್ರವಲ್ಲದೇ ಕನ್ನಡದಲ್ಲಿಯೂ ಮಿಂಚಿದ ಅಂಬಿಕಾ ನಾಯಕಿಯಾಗಿ ಆಕ್ಟ್ ಮಾಡಿದ ಚಿತ್ರಗಳ ಪಟ್ಟಿಯೇ 200ಕ್ಕೂ ಮೇಲಿದೆ.
ಕಮಲ್ ಹಾಸನ್.. ರಜನಿಕಾಂತ್.. ವಿಜಯಕಾಂತ್.. ಮಮ್ಮೂಟಿ.. ಮೋಹನ್ಲಾಲ್.. ಎನ್ಟಿ ರಾಮ್ ರಾವ್.. ಕೃಷ್ಣ.. ಕೃಷ್ಣಂ ರಾಜು.. ಚಿರಂಜೀವಿ.. ಹೀಗೆ ಹಲವು ದಿಗ್ಗಜರ ಜೊತೆ ತೆರೆ ಹಂಚಿಕೊಂಡಿರವ ಅಂಬಿಕಾ ಕನ್ನಡದಲ್ಲಿ ಡಾ ರಾಜ್ಕುಮಾರ್ ಅವರ ಆರೇಳು ಸಿನಿಮಾ ಮಾಡಿದ್ದಾರೆ. ಆ ಪೈಕಿ ''ಚಲಿಸುವ ಮೋಡಗಳು''.. ''ಎರಡು ನಕ್ಷತ್ರಗಳು''.. ''ಭಕ್ತ ಪ್ರಹ್ಲಾದ''.. ''ಅಪೂರ್ವ ಸಂಗಮ''.. ಪ್ರಮುಖವಾದವು.
ಮೂಲತಃ ಕೇರಳದವರಾದರೂ ಕನ್ನಡ ಮತ್ತು ಕನ್ನಡ ಚಿತ್ರರಂಗದ ಮೇಲೆ ವಿಶೇಷ ಒಲವು ಹೊಂದಿರುವ, ಕನ್ನಡ್ ಗೊತ್ತಿಲ್ಲ ಎಂದು ಹೇಳುವ ನಟಿಯರ ನಡುವೆ ಸುಲಲಿತವಾಗಿ ಕನ್ನಡ ಮಾತನಾಡುವ ಅಂಬಿಕಾ ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ ಡಾ.ರಾಜ್ ಕುಮಾರ್ ಅವರನ್ನು ನೆನಪು ಮಾಡಿಕೊಂಡಿದ್ದಾರೆ.

ಈ ಕುರಿತು ''ಟೂರಿಂಗ್ ಟಾಕೀಸ್''ಗೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ಅಂಬಿಕಾ, ನಾನು ಕನ್ನಡ ಕಲಿಯಲು ಪ್ರಮುಖ ಕಾರಣ ರಾಜ್ಕುಮಾರ್ ಸರ್ ಎಂದು ಹೇಳಿದ್ದಾರೆ. ಆ ಸಮಯದಲ್ಲಿ ಡಾ ರಾಜ್ಕುಮಾರ್ ಸರ್ ಹೇಳಿದ ಮಾತು ಈಗಲೂ ನನ್ನ ಮನಸ್ಸಿನಲ್ಲಿ ಇದೆ ಎಂದು ಹೇಳಿರುವ ಅಂಬಿಕಾ ಭಾಷೆ ಯಾರು ಬೇಕಾದರೂ ಮಾತನಾಡುತ್ತಾರೆ, ಆದರೆ ಮಾತಾಡುವಾಗ ಅದು ಚೆನ್ನಾಗಿರಬೇಕು, ಮಾತುಗಳಲ್ಲಿ ಮರ್ಯಾದೆ ಇರಬೇಕು ಎಂದು ರಾಜ್ಕುಮಾರ್ ಸರ್ ನನಗೆ ಹೇಳುತ್ತಿದ್ದರು ಎಂದು ನೆನಪು ಮಾಡಿಕೊಂಡಿದ್ದಾರೆ.
ಮುಂದುವರೆದು ಅಂದು ರಾಜ್ಕುಮಾರ್ ಸರ್ ನನಗೆ ಕಲಿಸಿದ ಈ ಪಾಠವನ್ನು ನಾನು ಇಂದು ಕೂಡ ಮರೆತಿಲ್ಲ ಎಂದು ಹೇಳಿರುವ ಅಂಬಿಕಾ, ಅಸಹ್ಯವಾಗಿ, ಅಸಭ್ಯವಾಗಿ, ಏಕವಚನದಲ್ಲಿ ನಾನು ಇವತ್ತು ಕೂಡ ಯಾರ ಜೊತೆಯೂ ಮಾತನಾಡುವುದಿಲ್ಲ, ಅದಕ್ಕೆ ಕಾರಣ ಅಂದು ರಾಜ್ ಕುಮಾರ್ ಸರ್ ಹೇಳಿದ ಆ ಮಾತು ಎಂದು ಹೇಳಿದ್ದಾರೆ.
ಇನ್ನೂ ಇದೇ ಸಂದರ್ಶನದಲ್ಲಿ ರವಿಚಂದ್ರನ್ ಅವರ ಮೊದಲ ಸಿನಿಮಾದ ಹೀರೋಯಿನ್ ನಾನೇ. ರಾಜ್ಕುಮಾರ್ ಸರ್, ಅಂಬರೀಶ್, ವಿಷ್ಣುವರ್ಧನ್, ಅನಂತ್ ನಾಗ್, ಶಂಕರ್ ನಾಗ್, ಶ್ರೀನಾಥ್, ಪ್ರಭಾಕರ್, ರವಿಚಂದ್ರನ್, ಜಗ್ಗೇಶ್, ಹೀಗೆ ಕನ್ನಡದ ಹಲವು ನಟರ ಜೊತೆ ನಾನು ತೆರೆ ಹಂಚಿಕೊಂಡಿದ್ದೇನೆ ಎಂದು ಕೂಡ ಅಂಬಿಕಾ ಹೇಳಿದ್ದಾರೆ.
ಇನ್ನುಳಿದಂತೆ ಕನ್ನಡದಲ್ಲಿ ''ಪ್ರೀತಿಯಿಂದ'' ಎಂಬ ಧಾರಾವಾಹಿಯನ್ನು ಕೂಡ ಮಾಡಿರುವ ಅಂಬಿಕಾ, ಜಗ್ಗೇಶ್ ಅಭಿನಯದ ''ಕಾಳಿದಾಸ ಕನ್ನಡ ಮೇಷ್ಟ್ರು'' ಚಿತ್ರದಲ್ಲಿ ಶಾಲೆಯ ಪ್ರಿನ್ಸಿಪಾಲ್ ಪಾತ್ರದಲ್ಲಿ ನಟಿಸಿದ್ದರು. ನಾಯಕಿ ಮತ್ತು ಪೋಷಕ ಪಾತ್ರಗಳು ಸೇರಿ ಕನ್ನಡದಲ್ಲಿ 40ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಂಬಿಕಾ ಅಭಿನಯಿಸಿದ್ದಾರೆ.


Click it and Unblock the Notifications