'ಕಾಂತಾರ-1' ಚಿತ್ರದಲ್ಲಿ ತೋರಿಸಿದಂತೆ ಬ್ರಹ್ಮ ರಾಕ್ಷಸ ಕೂದಲನ್ನು ಹಿಡಿದು ಏನು ಮಾಡ್ತಿರ್ತಾನೆ, ಆ ದಂತಕಥೆ ಏನು?
3 ವರ್ಷಗಳ ಹಿಂದೆ ಬಂದಿದ್ದ 'ಕಾಂತಾರ' ಅಚ್ಚರಿಯ ಗೆಲುವು ಕಂಡಿತ್ತು. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿನಿಮಾ ಪ್ರೇಕ್ಷಕರನ್ನು ರಂಜಿಸಿತ್ತು. ಮನುಷ್ಯ ಹಾಗೂ ಪ್ರಕೃತಿ ನಡುವಿನ ಸಂಘರ್ಷದ ಕಥೆಯನ್ನು ಆ ಚಿತ್ರದಲ್ಲಿ ರಿಷಬ್ ಶೆಟ್ಟಿ ಹೇಳಿದ್ದರು. ಪ್ರೀಕ್ವೆಲ್ನಲ್ಲಿ ಕೂಡ ಅದೇ ಥೀಮ್ನಲ್ಲಿ ಸಿನಿಮಾ ಮಾಡಿದ್ದರೂ ಮಾಸ್ ಪ್ರೇಕ್ಷಕರನ್ನು ಮನಸ್ಸಿನಲ್ಲಿಟ್ಟುಕೊಂಡು ಒಂದಷ್ಟು ಅಂಶಗಳನ್ನು ಸೇರಿಸಿದ್ದಾರೆ.
ಸಾಕಷ್ಟು ರೀಸರ್ಚ್ ಮಾಡಿ ರಿಷಬ್ ಶೆಟ್ಟಿ 'ಕಾಂತಾರ- 1' ಚಿತ್ರದ ಕಥೆ, ಚಿತ್ರಕಥೆ ಬರೆದಿದ್ದಾರೆ. ಅದಕ್ಕಾಗಿ ಸಾಕಷ್ಟು ಜನ ಹಿರಿಯರ ಮಾರ್ಗದರ್ಶನ ಪಡೆದಿದ್ದಾರೆ. 'ಕಾಂತಾರ' ಚಿತ್ರದಲ್ಲಿ ಪಂಜುರ್ಲಿ ಹಾಗೂ ಗುಳಿಗ ದೈವಗಳನ್ನು ತೋರಿಸಿದ್ದರು. ಚಾಪ್ಟರ್-1ನಲ್ಲಿ ಬೇರೆ ಬೇರೆ ರೂಪದ ಗುಳಿನಗನ್ನು ಜೊತೆಗೆ ಚಾವುಂಡಿಯನ್ನು ತೆರೆಮೇಲೆ ತಂದಿದ್ದಾರೆ. ಜೊತೆಗೆ ಬ್ರಹ್ಮರಾಕ್ಷಸನನ್ನು ತೋರಿಸಿ ಹುಬ್ಬೇರಿಸುವಂತೆ ಮಾಡಿದ್ದಾರೆ.

ಕ್ಲೈಮ್ಯಾಕ್ಸ್ನಲ್ಲಿ ಬ್ರಹ್ಮರಾಕ್ಷಸನ ಜೊತೆ ಬೆರ್ಮೆ(ರಿಷಬ್ ಶೆಟ್ಟಿ) ಕಾದಾಡುವ ದೃಶ್ಯವೂ ಇದೆ. ಅಂದಹಾಗೆ ಸಿಜಿಯಲ್ಲಿ ಬಹಳ ವಿಚಿತ್ರ ಅವತಾರದಲ್ಲಿ ಬ್ರಹ್ಮರಾಕ್ಷಸನ ದರ್ಶನ ಮಾಡಿಸಿದ್ದಾರೆ. ತುಳುನಾಡಿನಲ್ಲಿ ದೈವಗಳ ಜೊತೆ ಪ್ರೇತಾತ್ಮ, ಬ್ರಹ್ಮ ರಾಕ್ಷಸ ಸೇರಿ ನಾನಾ ಶಕ್ತಿಗಳ ಬಗ್ಗೆಯೂ ಜನರಲ್ಲಿ ಈಗಲೂ ನಂಬಿಕೆಗಳಿವೆ. ಉಚ್ಚ ಜನ್ಮದ ಒಬ್ಬ ಮೃತ ವಿದ್ವಾಂಸ ತಮ್ಮ ಜ್ಞಾನವನ್ನು ದುರ್ಬಳಕೆ ಮಾಡಿದರೆ ಸತ್ತ ಬಳಿಕ ಬ್ರಹ್ಮರಾಕ್ಷಸ ಆತ್ಮವಾಗಿ ನೆರಳುತ್ತಾನೆ ಎನ್ನುವ ನಂಬಿಕೆ ಕೆಲವರದ್ದು. ಇನ್ನು ಬ್ರಹ್ಮರಾಕ್ಷಸನ ಬಗ್ಗೆ ನಾನಾ ದಂತಕಥೆಗಳಿವೆ.
ಸದ್ಯ 'ಕಾಂತಾರ- 1' ಚಿತ್ರದಲ್ಲಿ ಮೊದಲ ಫ್ರೇಮ್ನಲ್ಲಿ ಬ್ರಹ್ಮರಾಕ್ಷಸ ಕೈಯಲ್ಲಿ ಕೂದಲು ಹಿಡಿದು ಕಾಣಿಸಿಕೊಳ್ಳುತ್ತಾನೆ. ಅರೇ, ಆತ ಯಾಕೆ ಹೀಗೆ ಕೂದಲು ಹಿಡಿದು ಎಳೆಯುತ್ತಾ ಕೂತಿರುತ್ತಾನೆ ಎನ್ನುವುದು ಬಹಳ ಜನಕ್ಕೆ ಗೊತ್ತಾಗಲಿಲ್ಲ. ಬ್ರಹ್ಮರಾಕ್ಷಸನ ಕುರಿತಾದ ಕಥೆಗಳ ಬಗ್ಗೆ ಅರಿವು ಇರುವವರಿಗೆ ಇದು ಅರ್ಥವಾಗಿರುತ್ತದೆ. ದಂತಕಥೆಗಳ ಪ್ರಕಾರ ಬ್ರಹ್ಮರಾಕ್ಷಸನಿಗೆ ಕೂದಲನ್ನು ನೆಟ್ಟಗೆ ಮಾಡುವ ಕೆಲಸ ಕೊಟ್ಟಿರುತ್ತಾರೆ. ಅದೇ ಪ್ರಯತ್ನದಲ್ಲಿ ಅವನು ಇರ್ತಾನೆ. ಅದನ್ನೇ ಚಿತ್ರದಲ್ಲಿ ತೋರಿಸಿದ್ದಾರೆ.
ಬೆರ್ಮೆ ಕೂಡ ಬ್ರಹ್ಮರಾಕ್ಷಸನ ಕಥೆ ಹೇಳ್ತೀನಿ ಎನ್ನುವ ಸನ್ನಿವೇಶ ಚಿತ್ರದಲ್ಲಿದೆ. ಅಂದಹಾಗೆ ಬ್ರಹ್ಮರಾಕ್ಷಸನ ಬಗ್ಗೆ ಜನಪದದಲ್ಲಿ ನಾನು ಕಥೆಗಳಿವೆ. ಒಂದು ಕಾಲದಲ್ಲಿ ಒಬ್ಬ ರಾಜನಿಗೆ ಕೆಸಲ ಮಾಡಲು ಯಾರು ಸಿಗದೇ ಇದ್ದಾಗ ತಪ್ಪಸ್ಸು ಮಾಡುತ್ತಾನೆ. ತಪಸ್ಸಿಗೆ ಮೆಚ್ಚಿ ಬ್ರಹ್ಮರ್ಷಿ ಒಬ್ಬ ವಿಚಿತ್ರ ಆಕಾರದ ವ್ಯಕ್ತಿಯಲ್ಲಿ ನೇಮಿಸುತ್ತಾನೆ. ಆತ ನೀನು ಹೇಳಿದ ಕೆಲಸ ಎಲ್ಲಾ ಮಾಡ್ತಾನೆ. ಅವನಿಗೆ ಬೇರೆ ಬೇರೆ ಕೆಲಸ ಕೊಡದೇ ಇದ್ದರೆ ನಿನ್ನನ್ನು ತಿಂದುಬಿಡ್ತಾನೆ ಎಂದು ಹೇಳಿರುತ್ತಾನೆ.
ಅದೇ ರೀತಿ ರಾಜನು ಹೇಳಿದ ಕೆಲಸವನ್ನೆಲ್ಲಾ ಬ್ರಹ್ಮರಾಕ್ಷಸ ಮಾಡಿಮುಗಿಸುತ್ತಾನೆ. ಮುಂದೆ ಏನು ಕೆಲಸ ಹೇಳಬೇಕು ಎಂದು ಗೊತ್ತಾಗದೇ ತಲೆಕೆಡಿಸಿಕೊಂಡಾಗ ಆತನ ಪತ್ನಿ ಒಂದು ಉಪಾಯ ಹೇಳುತ್ತಾನೆ. ತನ್ನ ಕೂದಲನ್ನು ಕೊಟ್ಟು ಇದನ್ನು ನೆಟ್ಟಗೆ ಮಾಡಲು ಹೇಳಿ ಎನ್ನುತ್ತಾನೆ. ಅದೇ ಕೆಲಸವನ್ನು ರಾಜ ಬ್ರಹ್ಮರಾಕ್ಷಸನಿಗೆ ಹೇಳಿರುತ್ತಾನೆ. ಅದಕ್ಕೆ ಆ ರೀತಿ ಕೂದಲು ಹಿಡಿದು ನೆಟ್ಟಗೆ ಮಾಡುವ ಪ್ರಯತ್ನದಲ್ಲಿರುವಂತೆ ಬ್ರಹ್ಮರಾಕ್ಷಸ ಕಾಣಿಸಿಕೊಳ್ಳುತ್ತಾನೆ. 'ಕಾಂತಾರ- 1' ಚಿತ್ರದಲ್ಲೂ ಅದೇ ರೀತಿ ಚಿತ್ರಿಸಲಾಗಿದೆ.
ಮತ್ತೊಂದು ಕಥೆಯ ಪ್ರಕಾರ ಒಂದೂರಲ್ಲಿ ಒಬ್ಬ ಕಟ್ಟಿಗೆ ಕಡಿಯುವನು ಇರ್ತಾನೆ. ಒಮ್ಮೆ ಮರ ಕಡಿಯುವಾಗ ಆ ಮರದಿಂದ ಬ್ರಹ್ಮರಾಕ್ಷಸ ಹೊರಬರುತ್ತಾನೆ. ನೀನು ನನ್ನ ಶಾಪ ವಿಮೋಚನೆ ಮಾಡಿದೆ. ಇನ್ನು ಮುಂದೆ ನಾನು ನಿನ್ನ ಸೇವಕ. ನೀವು ಹೇಳಿದ ಕೆಲಸ ಎಲ್ಲಾ ಮಾಡ್ತೀನಿ. ಆದರೆ ಒಂದಾದ ಬಳಿಕ ಒಂದು ಹೇಳಬೇಕು ಇಲ್ಲದಿದ್ದರೆ ನಿನ್ನನ್ನು ತಿಂದುಬಿಡ್ತೀನಿ ಎಂದು ಹೇಳಿರುತ್ತಾನೆ. ಅದೇ ರೀತಿ ಆತ ಹೇಳಿದ ಕೆಲಸ ಎಲ್ಲಾ ಮಾಡಿಮುಗಿಸಿದ ಬಳಿಕ ಪತ್ನಿಯ ಸಲಹೆಯಂತೆ ಆಕೆಯ ಗುಂಗುರು ಕೂದಲನ್ನು ನೆಟ್ಟಗೆ ಮಾಡುವ ಟಾಸ್ಕ್ ಕೊಟ್ಟಿರುತ್ತಾನೆ ಎನ್ನಲಾಗುತ್ತದೆ.
ಸದ್ಯ ದೀಪಾವಳಿ ಸಂಭ್ರಮದಲ್ಲಿ 'ಕಾಂತಾರ -1' ಚಿತ್ರತಂಡ ಹೊಸ ಟೀಸರ್ ರಿಲೀಸ್ ಮಾಡಿದೆ. ಅದರಲ್ಲಿ ಕೂಡ ಬ್ರಹ್ಮರಾಕ್ಷಸ ಕೂದಲು ನೆಟ್ಟಗೆ ಮಾಡಲು ಯತ್ನಿಸುತ್ತಿರುವ ಸನ್ನಿವೇಶ ಫ್ರೇಮ್ ಅನ್ನು ತೋರಿಸಲಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಭಾರೀ ಚರ್ಚೆ ನಡೀತಿದೆ.


Click it and Unblock the Notifications











