ಅನಂತ್ ನಾಗ್ ಜೊತೆ ರಿಷಬ್ ನಟಿಸಬೇಕಿದ್ದ 'ರುದ್ರಪ್ರಯಾಗ' ಏನಾಯ್ತು? ರಿಷಬ್ ಹೇಳಿದ್ದೇನು?
ಎಲ್ಲೆಲ್ಲೂ 'ಕಾಂತಾರ'- 1 ಕಿಚ್ಚು ಹೊತ್ತಿಕೊಂಡಿದೆ. ದೇಶವಿದೇಶಗಳಲ್ಲಿ ಸಿನಿಮಾ ಭರ್ಜರಿ ರೆಸ್ಪಾನ್ಸ್ ಪಡೆದುಕೊಳ್ಳುತ್ತಿದೆ. ದೊಡ್ಡಮಟ್ಟದಲ್ಲಿ ಬಾಕ್ಸಾಫೀಸ್ ಶೇಕ್ ಮಾಡುವ ಲೆಕ್ಕಾಚಾರ ಶುರುವಾಗಿದೆ. ರಿಷಬ್ ನಿರ್ದೇಶನ, ನಟನೆ ಬಗ್ಗೆ ಭಾರೀ ಮೆಚ್ಚುಗೆ ವ್ಯಕ್ತವಾಗ್ತಿದೆ. 'ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ' ಬಳಿಕ 'ರುದ್ರಪ್ರಯಾಗ' ಚಿತ್ರವನ್ನು ರಿಷಬ್ ಘೋಷಿಸಿದ್ದರು. ಬಳಿಕ ಅದು ಬಿಟ್ಟು 'ಕಾಂತಾರ' ಚಿತ್ರ ಕೈಗೆತ್ತಿಕೊಂಡಿದ್ದರು.
ಟೈಟಲ್ನಿಂದಲೇ 'ರುದ್ರಪ್ರಯಾಗ' ಸಿನಿಮಾ ಭಾರೀ ಕುತೂಹಲ ಮೂಡಿಸಿತ್ತು. ಹಿರಿಯ ನಟ ಅನಂತ್ ನಾಗ್ ಜೊತೆ ಆ ಚಿತ್ರದಲ್ಲಿ ಗುಲ್ಶನ್ ದೇವಯ್ಯ ನಟಿಸಬೇಕಿತ್ತು. ಆದರೆ ಕೋವಿಡ್ ಸಮಯದಲ್ಲಿ ಅದು ಸಾಧ್ಯವಾಗಿರಲಿಲ್ಲ. ಇದೀಗ ರಿಷಬ್ ನಿರ್ದೇಶನದಲ್ಲೇ 'ಕಾಂತಾರ'- 1 ಚಿತ್ರದಲ್ಲಿ ಗುಲ್ಶನ್ ದೇವಯ್ಯ ನಟಿಸಿದ್ದಾರೆ. ಅವರ ಅಭಿನಯಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇದೆಲ್ಲದರ ನಡುವೆ 'ರುದ್ರಪ್ರಯಾಗ' ಸಿನಿಮಾ ಬಗ್ಗೆ ರಿಷಬ್ ಮಾತನಾಡಿರುವುದು ವೈರಲ್ ಆಗ್ತಿದೆ.

'ಕಾಂತಾರ'- 1 ಚಿತ್ರದ ಪ್ರಚಾರದ ಭಾಗವಾಗಿ ಕೆಲ ಸಂದರ್ಶನಗಳಲ್ಲಿ ರಿಷಬ್ ಶೆಟ್ಟಿ ಭಾಗಿ ಆಗಿದ್ದಾರೆ. ತಮಿಳಿನ 'ಬಿಹೈಂಡ್ವುಡ್ಸ್ ಟಿವಿ' ಯೂಟ್ಯೂಬ್ ಸಂದರ್ಶನದಲ್ಲಿ ಸಾಕಷ್ಟು ಇಂಟ್ರೆಸ್ಟಿಂಗ್ ಸಂಗತಿಗಳನ್ನು ಹಂಚಿಕೊಂಡಿದ್ದರು. ಈ ವೇಳೆ 'ರುದ್ರಪ್ರಯಾಗ' ಚಿತ್ರದ ವಿಚಾರದ ಬಗ್ಗೆಯೂ ಚರ್ಚಿಸಿದ್ದಾರೆ. 'ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ' ಬಳಿಕ ನಿರ್ದೇಕರಾಗಿ 4 ವರ್ಷ ಬ್ರೇಕ್ ಯಾಕಾಯ್ತು ಎನ್ನುವ ಪ್ರಶ್ನೆಗೆ ರಿಷಬ್ ಶೆಟ್ಟಿ ಉತ್ತರಿಸಿದ್ದಾರೆ.
"ನಿರ್ದೇಶಕನಾಗಿ 'ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ' ಬಳಿ ಮತ್ತೊಂದು ಸ್ಕ್ರಿಪ್ಟ್ ಮಾಡಿ ಸಿನಿಮಾ ಅನೌನ್ಸ್ ಮಾಡಿದ್ದೆ. ಅದರಲ್ಲಿ ಹಿರಿಯ ನಟ ಅನಂತ್ ನಾಗ್ ಲೀಡ್ ರೋಲ್ನಲ್ಲಿ ನಟಿಸಬೇಕಿತ್ತು. ಮತ್ತೊಂದು ಪಾತ್ರದಲ್ಲಿ ಗುಲ್ಶನ್ ದೇವಯ್ಯ ಅಂದುಕೊಂಡಿದ್ದೆವು. ಬಳಿಕ ಅವರ ಬದಲು ನಾನೇ ನಟಿಸಬೇಕು ಎಂದು ನಿರ್ಧರಿಸಿದ್ದೆ. ಸ್ಕ್ರಿಪ್ಟ್ ಮುಗಿಸಿ, ಪ್ರೀ ಪ್ರೊಡಕ್ಷನ್ ಮಾಡಿ ಲೊಕೇಶನ್ ಎಲ್ಲಾ ಹುಡುಕಿದ್ದೆವು" ಎಂದು ರಿಷಬ್ ಶೆಟ್ಟಿ 'ರುದ್ರಪ್ರಯಾಗ' ಚಿತ್ರದ ಬಗ್ಗೆ ನೆನಪು ಮಾಡಿಕೊಂಡಿದ್ದಾರೆ. ಈ ಚಿತ್ರಕ್ಕೆ ರಾಜ್. ಬಿ ಶೆಟ್ಟಿ ಕೂಡ ಬರಹಗಾರರಾಗಿ ಕೆಲಸ ಮಾಡಿದ್ದರು.

ಇನ್ನು 15 ದಿನಗಳಲ್ಲಿ ಚಿತ್ರೀಕರಣ ಆರಂಭಿಸಬೇಕು ಎಂದುಕೊಂಡಾಗ ಕೋವಿಡ್ ಸಮಸ್ಯೆ ಎದುರಾಯಿತು. ಹಾಗಾಗಿ ಸಾಧ್ಯವಾಗಲಿಲ್ಲ ಎಂದು ರಿಷಬ್ ಶೆಟ್ಟಿ ಹೇಳಿದ್ದಾರೆ. "2018ರಲ್ಲಿ 'ಬೆಲ್ಬಾಟಂ' ಸಿನಿಮಾ ಬಿಡುಗಡೆಯಾಯಿತು. 2020ರಲ್ಲಿ ಲಾಕ್ಡೌನ್ ಆಯ್ತು. ಅನಂತ್ ಸರ್ನ ಇಟ್ಟುಕೊಂಡು ನಾವು ರಿಸ್ಕ್ ತೆಗೆದುಕೊಳ್ಳಲು ಬಯಸಲಿಲ್ಲ. ಅವರಿಗೆ ವಯಸ್ಸು, ಸಂಪೂರ್ಣ ಚಿತ್ರೀಕರಣ ಕಾಡಿನಲ್ಲಿ ನಡೆಯಬೇಕಿತ್ತು. ಫಾರೆಸ್ಟ್ ಆಫೀಸರ್ ಸುತ್ತಾ ಕಥೆ. ಕೋವಿಡ್ ಸಮಯದಲ್ಲಿ ಅದು ಕಷ್ಟವಾಗುತ್ತದೆ ಎಂದುಕೊಂಡೆವು. ಅದೇ ಸಮಯದಲ್ಲಿ ಊರಿಗೆ ಹೋದೆ" ಎಂದು ರಿಷಬ್ ವಿವರಿಸಿದ್ದಾರೆ.
ಕೋವಿಡ್ ಸಮಯದಲ್ಲಿ ನಮ್ಮ ತಂತ್ರಜ್ಞರ ತಂಡದ ನಮ್ಮ ಹುಡುಗರೆಲ್ಲಾ ಬೆಂಗಳೂರಿನಲ್ಲಿದ್ದರು. ಏನ್ ಮಾಡ್ತಿದ್ದೀರಾ ಎಂದು ಕೇಳಿದ್ರೆ, ಏನಿಲ್ಲ, ಕೋವಿಡ್ ಟೈಮ್ ಮನೆಯಲ್ಲಿದ್ದೀವಿ ಅಂದ್ರು. ಆಗ ಕೂಡಲೇ ಒಂದು ಸಿನಿಮಾ ಮಾಡೋಣ ಅಂದೆ. ಲಾಕ್ಡೌನ್ ಸಮಯದಲ್ಲಿ ಯಾವ್ ಸಿನಿಮಾ ಅಂದ್ರು. ಆಗ ಹೀರೊ ಸಿನಿಮಾ ಕಥೆ, ಐಡಿಯಾ ಕೊಟ್ಟೆ. "30 ಜನರ ತಂಡ ಚಿಕ್ಕಮಗಳೂರಿನ ಎಸ್ಟೇಟ್ಗೆ ಹೋಗಿ ಸೆಟ್ಲ್ ಆಗಿಬಿಟ್ವಿ. ಅಲ್ಲೇ 'ಹೀರೊ' ಸಿನಿಮಾ ಮಾಡಿದ್ವಿ. ಸಿನಿಮಾ ಬಿಡುಗಡೆ ಆಗಿ ಆವರೇಜ್ ಹಿಟ್ ಆಯ್ತು, ಆದ್ರು ನಮ್ಮ ಸಂಸ್ಥೆ ಚಿತ್ರಗಳಲ್ಲಿ ಹೆಚ್ಚು ಲಾಭ ತಂದುಕೊಟ್ಟ ಸಿನಿಮಾ ಅದು" ಎಂದು ರಿಷಬ್ ಶೆಟ್ಟಿ ಮೆಲುಕು ಹಾಕಿದ್ದಾರೆ.
ಮತ್ತೆ ಎರಡನೇ ಬಾರಿ ಲಾಕ್ಡೌನ್ ಆಯ್ತು. ಮತ್ತೆ ಊರಿಗೆ ಹೋದೆ. ನಮ್ಮ ಕಸೀನ್ ಒಬ್ಬ ಒಂದು ಸಿನಿಮಾ ಮಾಡೋಣ ಅಂದ. ಈಗ ಯಾವ ಸಿನಿಮಾ ಅಂದೆ. 'ಹೀರೊ' ತರ ಇನ್ನೊಂದು ಸಿನಿಮಾ ಮಾಡೋಣ ಅಂದ. ಆಗ ಹುಟ್ಟಿಕೊಂಡಿದ್ದು 'ಕಾಂತಾರ' ಸಿನಿಮಾ. ಕೂಡಲೇ ಕಥೆ ಹೊಳಿತು. ನಿರ್ಮಾಪಕ ವಿಜಯ್ ಕಿರಗಂದೂರ್ ಅವರಿಗೆ ಹೇಳ್ದೆ. ಅವ್ರು ಒಪ್ಪಿದ್ರು. ಬೆಂಬಲಕ್ಕೆ ನಿಂತರು. ಸಿನಿಮಾ ತಯಾರಾಯ್ತು ಎಂದು ರಿಷಬ್ ತಿಳಿಸಿದ್ದಾರೆ.


Click it and Unblock the Notifications











